
ಬೆಂಗಳೂರು (ಫೆ.28): 'ಸಂಕಷ್ಟದಲ್ಲಿರುವವರಿಗೆ ಸಂಜೀವಿನಿ' ಎಂಬ ಮಾತನ್ನು ಬೆಂಗಳೂರು ನಗರ ಪೊಲೀಸರು (Bengaluru City Police) ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ನಗರದ ವಿವಿಧೆಡೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸುವ ಮೂಲಕ ಪೊಲೀಸರು ಕೇವಲ ಕಾನೂನು ಪಾಲಕರಷ್ಟೇ ಅಲ್ಲ, ಜೀವ ರಕ್ಷಕರೂ ಹೌದು ಎಂಬ ಭರವಸೆಯನ್ನು ಸಾರ್ವಜನಿಕರಲ್ಲಿ ಮೂಡಿಸಿದ್ದಾರೆ. ನಮ್ಮ ಮೆಟ್ರೋ ನಗರದ ಪೊಲೀಸರು ಕಳೆದ 24 ಗಂಟೆಗಳಲ್ಲಿ ನಡೆಸಿದ ಮೂರು ಪ್ರತ್ಯೇಕ ಕಾರ್ಯಾಚರಣೆಗಳ ವಿವರ ಇಲ್ಲಿದೆ.
ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೈಯಕ್ತಿಕ ಕಾರಣಗಳಿಂದ ನೊಂದ ಮಹಿಳೆಯೊಬ್ಬರು 'ನೇಲ್ ಪಾಲಿಷ್' (Nail Polish) ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದರು. ವಿಷಯ ತಿಳಿದ ತಕ್ಷಣ ಸಾರ್ವಜನಿಕರು 112 ತುರ್ತು ಸಹಾಯವಾಣಿಗೆ ಕರೆ ಮಾಡಿದರು. ಕರೆ ಬಂದ ಕೇವಲ 2 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ ಹೊಯ್ಸಳ ಸಿಬ್ಬಂದಿ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರು. ಸರಿಯಾದ ಸಮಯಕ್ಕೆ ವೈದ್ಯಕೀಯ ಚಿಕಿತ್ಸೆ ಸಿಕ್ಕಿದ್ದರಿಂದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸರ ಈ ಮಿಂಚಿನ ವೇಗದ ಕಾರ್ಯಾಚರಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ನಡೆಯುವುದರಲ್ಲಿತ್ತು. ಬಿಹಾರ ಮೂಲದ ಮಹಿಳೆಯೊಬ್ಬರು ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗೆ ರೈಲು ಹಳಿಯ ಮೇಲೆ ನಿಂತು ಆತ್ಮಹತ್ಯೆಗೆ ಯತ್ನಿಸುತ್ತಿದ್ದರು. ಗಂಡನ ಅತಿಯಾದ ಕುಡಿತ ಮತ್ತು ನಿರಂತರ ಕೌಟುಂಬಿಕ ಹಿಂಸೆಯಿಂದ ಬೇಸತ್ತು ಅವರು ಈ ನಿರ್ಧಾರ ಕೈಗೊಂಡಿದ್ದರು. ಮಾಹಿತಿ ಸಿಕ್ಕ ಕೇವಲ 4 ನಿಮಿಷಗಳಲ್ಲಿ ಸಂಪಿಗೆಹಳ್ಳಿ ಪೊಲೀಸರು ಸ್ಥಳಕ್ಕೆ ತಲುಪಿ, ತಾಯಿ ಮತ್ತು ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಿದರು. ಬಳಿಕ ಆಕೆಯ ಪತಿಯನ್ನು ಪತ್ತೆಹಚ್ಚಿದ ಪೊಲೀಸರು, ಇನ್ನು ಮುಂದೆ ಪತ್ನಿ ಮತ್ತು ಮಕ್ಕಳಿಗೆ ಹಿಂಸೆ ನೀಡದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ವಿವೇಕನಗರ ಪೊಲೀಸರು ಕೇವಲ ಕಾನೂನು ಸುವ್ಯವಸ್ಥೆಯಷ್ಟೇ ಅಲ್ಲದೆ, ವೃದ್ಧೆಯೊಬ್ಬರ ಬಾಳಲ್ಲಿ ಬೆಳಕಾಗಿದ್ದಾರೆ. ನೀಲಸಂದ್ರದ ಬಳಿ ದಾರಿ ತಪ್ಪಿ ಗಾಬರಿಗೊಂಡ ಸ್ಥಿತಿಯಲ್ಲಿದ್ದ 80 ವರ್ಷದ ಆದಿಲಕ್ಷ್ಮಿ ಎಂಬ ವೃದ್ಧೆಯನ್ನು ಪೊಲೀಸರು ಪತ್ತೆಹಚ್ಚಿದರು. ಆಕೆಗೆ ಕೇವಲ ತೆಲುಗು ಭಾಷೆ ಮಾತ್ರ ತಿಳಿದಿದ್ದರಿಂದ ವಿಳಾಸ ಪತ್ತೆ ಹಚ್ಚುವುದು ಸವಾಲಾಗಿತ್ತು. ಆದರೂ ಧೃತಿಗೆಡದ ಪೊಲೀಸರು ತಾಳ್ಮೆಯಿಂದ ಮಾಹಿತಿ ಕಲೆಹಾಕಿ, ವೃದ್ಧೆಯ ಮಗನನ್ನು ಪತ್ತೆಹಚ್ಚಿದರು. ಅಂತಿಮವಾಗಿ ಆದಿಲಕ್ಷ್ಮಿ ಅವರನ್ನು ಸುರಕ್ಷಿತವಾಗಿ ಅವರ ಮಗನ ಜೊತೆ ಮನೆಗೆ ಕಳುಹಿಸಿಕೊಟ್ಟರು.
ಬೆಂಗಳೂರು ಪೊಲೀಸರ ಈ ಸರಣಿ ಮಾನವೀಯ ಕಾರ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿವೆ. 'ಪೊಲೀಸರು ಮನಸ್ಸು ಮಾಡಿದರೆ ಎಂತಹ ದುರಂತಗಳನ್ನೂ ತಡೆಯಬಹುದು' ಎಂದು ನೆಟ್ಟಿಗರು ಪ್ರಶಂಸಿಸುತ್ತಿದ್ದಾರೆ.