ಪೂಜೆಯ ಹೆಸರಲ್ಲಿ ವಂಚನೆ: ಬೆಂಗಳೂರಿನ ಸರಣಿ ವಂಚಕ ಪ್ರವೀಣ್ ಭಟ್ ಬಂಧನ

Published : Mar 20, 2026, 04:11 PM IST
Fraud

ಸಾರಾಂಶ

ಬೆಂಗಳೂರಿನಲ್ಲಿ ಅರ್ಚಕರು ಮತ್ತು ಭಕ್ತರನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ ಪ್ರವೀಣ್ ಭಟ್ ಎಂಬ ಆರೋಪಿಯನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಪೂಜೆಯ ನೆಪದಲ್ಲಿ ಮಹಿಳೆಯರನ್ನು ಕರೆಸಿ, ಅವರ ಚಿನ್ನಾಭರಣಗಳನ್ನು ಪಡೆದು ಈತ ವಂಚಿಸುತ್ತಿದ್ದ. ಆರೋಪಿ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಐದಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಬೆಂಗಳೂರು: ನಗರದ ವಿವಿಧ ಪ್ರದೇಶಗಳಲ್ಲಿ ಅರ್ಚಕರನ್ನು ಮತ್ತು ಭಕ್ತರನ್ನು ಟಾರ್ಗೆಟ್ ಮಾಡಿಕೊಂಡು ವಂಚನೆ ನಡೆಸುತ್ತಿದ್ದ ಆರೋಪಿಯನ್ನು ರಾಜಾಜಿನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಉತ್ತರ ವಿಭಾಗದ ಡಿಸಿಪಿ ನೇಮಗೌಡ ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಯನ್ನು ಪ್ರವೀಣ್ ಭಟ್ ಎಂದು ಗುರುತಿಸಲಾಗಿದೆ. ಈತ ಮೊದಲು ದೇವಸ್ಥಾನಗಳಿಗೆ ತೆರಳಿ, ಹೆಚ್ಚಿನ ಮೊತ್ತದ ದಕ್ಷಿಣೆ ನೀಡಿ ಅರ್ಚಕರ ವಿಶ್ವಾಸ ಗಳಿಸುತ್ತಿದ್ದ. ನಂತರ ಪರಿಚಯ ಬೆಳೆಸಿ, ಮನೆದಲ್ಲಿ ವಿಶೇಷ ಪೂಜೆ ಇದೆ, ಮುತ್ತೈದೆಯರ ಪೂಜೆಗೆ ಮಹಿಳೆಯರನ್ನು ಕಳುಹಿಸಿ ಎಂದು ಮನವೊಲಿಸುತ್ತಿದ್ದನು.

ಚಿನ್ನಾಭರಣಗಳನ್ನು ಪಡೆದು ವಂಚನೆ

ಈ ರೀತಿಯಾಗಿ, ರಾಘವೇಂದ್ರ ಎಂಬವರ ಬಳಿ ಸಂಪರ್ಕ ಸಾಧಿಸಿದ ಆರೋಪಿಯು, ಅವರ ಮನೆಯ ಮಹಿಳೆಯರನ್ನು ಪೂಜೆಯ ಹೆಸರಿನಲ್ಲಿ ಕಳುಹಿಸಲು ಕೇಳಿದ್ದಾನೆ. ಬಳಿಕ ಮಹಿಳೆಯರು ಆಟೋದಲ್ಲಿ ಸೂಚಿಸಿದ ಸ್ಥಳಕ್ಕೆ ತೆರಳಿದಾಗ, ಅವರ ಬಳಿ ಇದ್ದ ಚಿನ್ನಾಭರಣಗಳನ್ನು ಪಡೆದು ವಂಚನೆ ಎಸಗಿದ್ದಾನೆ.

ಐದಕ್ಕೂ ಹೆಚ್ಚು ಪ್ರಕರಣಗಳು ದಾಖಲು

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಇದೇ ರೀತಿಯ ವಂಚನೆ ಪ್ರಕರಣಗಳಲ್ಲಿ ಈತನ ಭಾಗವಹಿಸಿರುವುದು ಬೆಳಕಿಗೆ ಬಂದಿದೆ. ನಗರದ ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ಐದಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ. ಪ್ರಸ್ತುತ, ರಾಜಾಜಿನಗರ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಇನ್ನೂ ಹೆಚ್ಚಿನ ಪ್ರಕರಣಗಳ ಸಂಪರ್ಕವಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ.

ಡಿಸಿಪಿ ನೇಮಗೌಡ ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಾ, ಅಪರಿಚಿತರ ಮಾತುಗಳಿಗೆ ನಂಬಿಕೆ ಇಟ್ಟು ಅಮೂಲ್ಯ ವಸ್ತುಗಳನ್ನು ಒಪ್ಪಿಸಬಾರದು ಎಂದು ಸಲಹೆ ನೀಡಿದ್ದಾರೆ. ಇಂತಹ ಅನುಮಾನಾಸ್ಪದ ಘಟನೆಗಳು ಕಂಡುಬಂದರೆ ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

PREV
Read more Articles on
click me!

Recommended Stories

ಮೂಡಬಿದರೆ ಇನ್ಸ್ಪೆಕ್ಟರ್ ಸಂದೇಶ್ ಕಾಮಕಾಂಡ: 'ಕೇವಲ ಸಸ್ಪೆಂಡ್ ಮಾಡಿದ್ರೆ ಆಗೊಲ್ಲ, FIR ದಾಖಲಿಸಿ' - ಸುಮತಿ ನಾಯಕ್!
ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಗೀತಾ! ಈ ಪ್ರಭೇದದ ಮೊದಲ ಯಶಸ್ವಿ ಸಂತಾನೋತ್ಪತ್ತಿ