
ಬೆಂಗಳೂರು (ಮಾ.15): ಆಧುನಿಕ ಜಗತ್ತಿನಲ್ಲಿ ಎಷ್ಟೇ ಓದಿದರೂ, ಎಂತಹ ದೊಡ್ಡ ಹುದ್ದೆಯಲ್ಲಿದ್ದರೂ ಕೆಲವೊಮ್ಮೆ ಮೂಢನಂಬಿಕೆ ಮತ್ತು ಅತಿಯಾದ ಆಸೆ ಮನುಷ್ಯನನ್ನು ಸಂಕಷ್ಟಕ್ಕೆ ದೂಡುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ವರ್ಗಾವಣೆಯ ಆಸೆಗೆ ಬಿದ್ದು, ಗಿಳಿಶಾಸ್ತ್ರದವನ ಮಾತನ್ನು ನಂಬಿದ ಆದಾಯ ತೆರಿಗೆ ಇಲಾಖೆಯ (IT) ಅಧಿಕಾರಿಯೊಬ್ಬರು ಬರೋಬ್ಬರಿ 35 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ಸಂಬಂಧ ತನಿಖೆ ನಡೆಸಿದ ಬೆಂಗಳೂರಿನ ಭಾರತಿನಗರ ಪೊಲೀಸರು, ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಶೇಖರ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಕೋರಮಂಗಲದ ಐಟಿ ಕಚೇರಿಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಸತ್ಯನಾರಾಯಣ ಎಂಬುವವರೇ ವಂಚನೆಗೆ ಒಳಗಾದವರು. ಕಳೆದ ಡಿಸೆಂಬರ್ನಲ್ಲಿ ಸತ್ಯನಾರಾಯಣ ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಭಾರತಿನಗರದ ಶ್ರೀ ಸರ್ಕಲ್ ಬಳಿ ಗಿಳಿಶಾಸ್ತ್ರ ಹೇಳುತ್ತಿದ್ದ ಶೇಖರ್ ಎಂಬುವವನ ಪರಿಚಯವಾಗಿತ್ತು. 'ನಿಮ್ಮ ಮುಖ ಲಕ್ಷಣ ನೋಡಿ ಭವಿಷ್ಯ ಹೇಳುತ್ತೇನೆ, ನಿಮಗೆ ಮುಂದೆ ತುಂಬಾ ಒಳ್ಳೆಯದಾಗಲಿದೆ' ಎಂದು ಶೇಖರ್ ಅಧಿಕಾರಿಯನ್ನು ನಂಬಿಸಿದ್ದ. ಜೀವನದಲ್ಲಿ ಇನ್ನಷ್ಟು ಸುಧಾರಣೆ ಕಾಣಬೇಕಾದರೆ ಒಂದು ಪೂಜೆ ಮಾಡಿಸಬೇಕು ಎಂದು ಶೇಖರ್ ಸಲಹೆ ನೀಡಿದ್ದ. ಇದನ್ನು ನಂಬಿದ ಸತ್ಯನಾರಾಯಣ ಅವರು ಆರಂಭದಲ್ಲಿ ಪೂಜೆಗಾಗಿ 50 ಸಾವಿರ ರೂಪಾಯಿ ಹಣ ನೀಡಿದ್ದರು. ಪೂಜೆ ಮುಗಿದ ನಂತರ ಶೇಖರ್ ಪದೇ ಪದೇ ಸತ್ಯನಾರಾಯಣ ಅವರಿಗೆ ಕರೆ ಮಾಡಿ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದ.
ಇದೇ ಸಮಯದಲ್ಲಿ ಸತ್ಯನಾರಾಯಣ ಅವರು ತಮ್ಮ ವರ್ಗಾವಣೆ (Transfer) ಬಗ್ಗೆ ಚಿಂತಿತರಾಗಿದ್ದರು. ಈ ಬಗ್ಗೆ ಗಿಳಿಶಾಸ್ತ್ರ ಹೇಳುವ ಶೇಖರ್ ಬಳಿ ವಿಚಾರಿಸಿದಾಗ, 'ನಿಮ್ಮ ವರ್ಗಾವಣೆ ಆಗಬೇಕಾದರೆ ದೊಡ್ಡ ಮಟ್ಟದ ಪೂಜೆ ಮಾಡಬೇಕು. ಮನೆಯಲ್ಲಿರುವ ಚಿನ್ನಾಭರಣಗಳನ್ನು ತಂದು ಪೂಜೆಯಲ್ಲಿಟ್ಟರೆ ಶಕ್ತಿ ಬರುತ್ತದೆ' ಎಂದು ಬಣ್ಣದ ಮಾತುಗಳನ್ನು ಆಡಿದ್ದ. ಆರೋಪಿಯ ಮಾತನ್ನು ಕುರುಡಾಗಿ ನಂಬಿದ ಐಟಿ ಅಧಿಕಾರಿ, ತಮ್ಮ ಮನೆಯಲ್ಲಿದ್ದ 35 ಲಕ್ಷ ರೂಪಾಯಿ ಮೌಲ್ಯದ 194 ಗ್ರಾಂ ಚಿನ್ನಾಭರಣಗಳು ಹಾಗೂ 1 ಕೆಜಿ 300 ಗ್ರಾಂ ಬೆಳ್ಳಿಯನ್ನು ಶೇಖರ್ ವಶಕ್ಕೆ ನೀಡಿದ್ದರು.
ಒಂದೇ ದಿನದಲ್ಲಿ ಪೂಜೆ ಮುಗಿಸಿ ಚಿನ್ನಾಭರಣಗಳನ್ನು ವಾಪಸ್ ಕೊಡುವುದಾಗಿ ಶೇಖರ್ ಭರವಸೆ ನೀಡಿದ್ದ. ಆದರೆ ಮಾರನೇ ದಿನ ಸತ್ಯನಾರಾಯಣ ಕರೆ ಮಾಡಿದಾಗ, 'ಇನ್ನೂ ಪೂಜೆ ಮುಗಿದಿಲ್ಲ, ನಾಳೆ ಬಾ, ನಾಡಿದ್ದು ಬಾ' ಎಂದು ಸತಾಯಿಸಿದ್ದಾನೆ. ಹೀಗೆ ಒಂದು ವಾರ ಕಾಲ ಸಬೂಬು ಹೇಳುತ್ತಾ ಕಾಲ ಕಳೆದಿದ್ದಾನೆ. ಸಂಶಯಗೊಂಡ ಸತ್ಯನಾರಾಯಣ ಅವರು ಭಾರತಿನಗರದ ಶ್ರೀ ಸರ್ಕಲ್ ಬಳಿ ಹೋಗಿ ನೋಡಿದಾಗ, ಅಲ್ಲಿ ಶೇಖರ್ ಇರಲಿಲ್ಲ. ಆತ ತನ್ನ ಗಿಳಿ ಮತ್ತು ಪಂಜರದೊಂದಿಗೆ ಪರಾರಿಯಾಗಿದ್ದ. ತಾನು ಮೋಸ ಹೋಗಿರುವುದು ತಡವಾಗಿ ಅರಿವಿಗೆ ಬಂದ ಕೂಡಲೇ ಅಧಿಕಾರಿ ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಯ ಪತ್ತೆಗೆ ಜಾಲ ಬೀಸಿದ್ದರು. ತಾಂತ್ರಿಕ ತನಿಖೆಯ ಆಧಾರದ ಮೇಲೆ ಆರೋಪಿ ತಮಿಳುನಾಡಿನಲ್ಲಿ ಅಡಗಿರುವುದನ್ನು ಪತ್ತೆ ಹಚ್ಚಿದ ಪೊಲೀಸರು, ಅಲ್ಲಿಗೆ ತೆರಳಿ ಶೇಖರ್ನನ್ನು ಬಂಧಿಸಿ ಕರೆತಂದಿದ್ದಾರೆ. ಸದ್ಯ ಆರೋಪಿಯಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಈ ಘಟನೆಯು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸುಶಿಕ್ಷಿತ ಅಧಿಕಾರಿಗಳೇ ಇಂತಹ ಜಾಲಕ್ಕೆ ಬೀಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.