ಕಳ್ಳನೊಂದಿಗೆ 'ಕಳ್ಳಾಟ' ಆಡಿದ PSI ಸಸ್ಪೆಂಡ್‌: ಹೈಗ್ರೌಂಡ್ಸ್ ಠಾಣೆ ಅಧಿಕಾರಿಯ ನಿರ್ಲಕ್ಷ್ಯಕ್ಕೆ ತೂಗುಗತ್ತಿ!

Published : Sep 28, 2025, 03:44 PM IST
Bengaluru Highgrounds Police Station

ಸಾರಾಂಶ

ಕರ್ತವ್ಯ ಲೋಪ ಮತ್ತು ಗಂಭೀರ ನಿರ್ಲಕ್ಷ್ಯದ ಆರೋಪದ ಮೇಲೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಪಿಎಸ್‌ಐ ಅವರನ್ನು ಅಮಾನತುಗೊಳಿಸಲಾಗಿದೆ. ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಬಂಧಿತನಾದ ಅನುಮಾನಾಸ್ಪದ ವ್ಯಕ್ತಿಯನ್ನು ಪ್ರಕರಣ ದಾಖಲಿಸದೆ ಬಿಟ್ಟು ಕಳುಹಿಸಿದ ಆರೋಪ ಅವರ ಮೇಲಿದೆ.

ಬೆಂಗಳೂರು (ಸೆ.28): ಕರ್ತವ್ಯ ಲೋಪ ಹಾಗೂ ಗಂಭೀರ ನಿರ್ಲಕ್ಷ್ಯದ ಆರೋಪದ ಮೇಲೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಪಿಎಸ್‌ಐ ಉಮಾಶಂಕರ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. 

ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ಸರಿಯಾದ ತನಿಖೆ ನಡೆಸದೆ, ಕೇಸ್ ದಾಖಲಿಸದೆ ರಾತ್ರೋ ರಾತ್ರಿ ಬಿಟ್ಟು ಕಳುಹಿಸಿದ ಪ್ರಕರಣದಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈ ಘಟನೆ ಬೆಂಗಳೂರು ಪೊಲೀಸ್ ಇಲಾಖೆಯ ಕಾರ್ಯವೈಖರಿ ಮತ್ತು ಕೆಲವು ಅಧಿಕಾರಿಗಳ ಜವಾಬ್ದಾರಿಯ ಕೊರತೆಯನ್ನು ಎತ್ತಿ ತೋರಿಸಿದೆ.

ಕಳೆದ ಐದಾರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬರ ಬಗ್ಗೆ ಫ್ರೆಂಚ್ ಎಂಬಸ್ಸಿ (French Embassy) ಅಧಿಕಾರಿಗಳು ಹೈಗ್ರೌಂಡ್ಸ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಮೇರೆಗೆ ಆರೋಪಿಯನ್ನು ಠಾಣೆಗೆ ಕರೆತಂದಿದ್ದ ಪಿಎಸ್‌ಐ ಉಮಾಶಂಕರ್ ಮತ್ತು ಅವರ ತಂಡ, ಗಂಭೀರ ವಿಚಾರಣೆಯ ಬದಲಿಗೆ ಕಳ್ಳನೊಂದಿಗೆ 'ಕಳ್ಳಾಟ' ಆಡಿರುವ ಆರೋಪ ಕೇಳಿಬಂದಿದೆ.

ಪೊಲೀಸರು ಆರೋಪಿಯನ್ನು ಕರೆತಂದಿದ್ದರೂ, ಕಾನೂನು ರೀತಿ ಕ್ರಮ ಕೈಗೊಳ್ಳದೆ, ಆತನ ಮೇಲೆ ಯಾವುದೇ ಕೇಸ್ ದಾಖಲಿಸದೆ ರಾತ್ರೋ ರಾತ್ರಿ ಠಾಣೆಯಿಂದ ಬಿಟ್ಟು ಕಳುಹಿಸಿದ್ದಾರೆ. ಈ ನಿರ್ಲಕ್ಷ್ಯದ ನಡೆ ಹಿರಿಯ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚುವ ಪ್ರಯತ್ನವಾಗಿತ್ತು.

ಫ್ರೆಂಚ್ ಎಂಬಸ್ಸಿ ಅಧಿಕಾರಿಗಳಿಂದ ದೂರು:

ಕಳ್ಳನನ್ನು ಬಿಟ್ಟು ಕಳುಹಿಸಿದ ವಿಚಾರ ತಿಳಿದು, ಫ್ರೆಂಚ್ ಎಂಬಸ್ಸಿ ಅಧಿಕಾರಿಗಳು ಈ ಬಗ್ಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಹಿರಿಯ ಅಧಿಕಾರಿಗಳು ಆಂತರಿಕ ವಿಚಾರಣೆ ನಡೆಸಿದಾಗ, ಆರೋಪಿಯನ್ನು ಬಿಟ್ಟು ಕಳುಹಿಸಿರುವ ಕರ್ತವ್ಯ ಲೋಪ ಸ್ಪಷ್ಟವಾಗಿದೆ.

ಇನ್ಸ್‌ಪೆಕ್ಟರ್ ಮೇಲೂ ತನಿಖೆ:

ತಕ್ಷಣವೇ ಕಾರ್ಯಪ್ರವೃತ್ತರಾದ ಹಿರಿಯ ಅಧಿಕಾರಿಗಳು, ತಮ್ಮ ಕರ್ತವ್ಯದಲ್ಲಿ ಲೋಪ ಎಸಗಿದ ಕಾರಣಕ್ಕಾಗಿ ಹೈಗ್ರೌಂಡ್ಸ್ ಠಾಣೆಯ ಪಿಎಸ್‌ಐ ಉಮಾಶಂಕರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಅಷ್ಟೇ ಅಲ್ಲದೆ, ಠಾಣೆಯ ಇನ್ಸ್‌ಪೆಕ್ಟರ್ ಭರತ್ ಅವರ ಲೋಪದ ಬಗ್ಗೆಯೂ ಪ್ರತ್ಯೇಕ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಠಾಣೆಯ ಉಸ್ತುವಾರಿ ಅಧಿಕಾರಿಯಾಗಿರುವ ಇನ್ಸ್‌ಪೆಕ್ಟರ್‌ಗೆ ಈ ಘಟನೆ ಬಗ್ಗೆ ತಿಳಿದಿತ್ತೇ ಅಥವಾ ಅವರು ಕೂಡ ನಿರ್ಲಕ್ಷ್ಯ ತೋರಿದರೇ ಎಂಬ ಕುರಿತು ತನಿಖೆ ನಡೆಯಲಿದೆ.

ಪ್ರಕರಣವು ತನಿಖಾ ಹಂತದಲ್ಲಿದ್ದು, ಈ ಘಟನೆಯು ಪೊಲೀಸ್ ವ್ಯವಸ್ಥೆಯಲ್ಲಿನ ಪಾರದರ್ಶಕತೆ ಮತ್ತು ಜವಾಬ್ದಾರಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಾರ್ವಜನಿಕರ ಮತ್ತು ವಿದೇಶಿ ಸಂಸ್ಥೆಗಳ ದೂರುಗಳನ್ನು ನಿರ್ಲಕ್ಷಿಸಿ, ಆರೋಪಿಯನ್ನು ಬಿಟ್ಟು ಕಳುಹಿಸಿರುವ ಪಿಎಸ್‌ಐ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇಲಾಖೆಯ ಘನತೆಯನ್ನು ಎತ್ತಿ ಹಿಡಿಯಲು ಹಿರಿಯ ಅಧಿಕಾರಿಗಳು ತೆಗೆದುಕೊಂಡಿರುವ ಸಸ್ಪೆನ್ಷನ್ ಕ್ರಮವು, ನಿರ್ಲಕ್ಷ್ಯ ತೋರುವ ಉಳಿದ ಅಧಿಕಾರಿಗಳಿಗೆ ಒಂದು ಎಚ್ಚರಿಕೆಯ ಸಂದೇಶ ನೀಡಿದಂತಾಗಿದೆ.

PREV
Read more Articles on
click me!

Recommended Stories

4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು