ಬೆಂಗಳೂರು ಅಂತರ್ಜಲ ಹೆಚ್ಚಳಕ್ಕೆ ಯೋಜನೆ; ಕೆಂಗೇರಿ ಕೆರೆಗೆ ಸಂಸ್ಕರಿತ ನೀರು ತುಂಬಿಸಿದ ಜಲಮಂಡಳಿ

By Sathish Kumar KHFirst Published Mar 24, 2024, 6:27 PM IST
Highlights

ಬೆಂಗಳೂರಿನಲ್ಲಿನ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಮುಂದಾಗಿರುವ BWSSB ವತಿಯಿಂದ ಕೆಂಗೇರಿ ಕೆರೆಗೆ ಸಂಸ್ಕರಿತ ತ್ಯಾಜ್ಯ ನೀರನ್ನು ತುಂಬಿಸುವ ಕಾರ್ಯಕ್ಕೆ ಮುಂದಾಗಿದೆ.

ಬೆಂಗಳೂರು (ಮಾ.24): ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ (BWSSB) ವತಿಯಿಂದ ದಾಖಲೆ ಸಮಯದಲ್ಲಿ ಕಾಮಗಾರಿ ಪೂರೈಸಲಾಗಿದ್ದು, ಕೆಂಗೇರಿ ಕೆರೆಗೆ ಸಂಸ್ಕರಿಸಿದ ನೀರನ್ನ ಹರಿಸುವ ಮೂಲಕ ಕುಸಿದಿರುವ ಅಂತರ್ಜಲವನ್ನು ಮರುಪೂರಣಗೊಳಸಲು ಮುಂದಾಗಿದೆ. 

ವೃಷಭಾವತಿ ವ್ಯಾಲಿಯಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕ, ನಾಯಂಡಹಳ್ಳಿ ಕೆರೆ, ಕೆಂಗೇರಿ ತ್ಯಾಜ್ಯ ನೀರು ಶುದ್ದೀಕರಣ ಘಟಕದಿಂದ ಸಂಸ್ಕರಿಸಿದ ನೀರನ್ನು ಕೆಂಗೇರಿ ಕೆರೆಗೆ ತುಂಬಿಸಲಾಗುತ್ತಿದೆ. ಈ ಮೂಲಕ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಅಂತರ್ಜಲ ಮಟ್ಟವನ್ನು ಮರುಪೂರಣ ಮಾಡಲು ಮುಂದಾಗಿದೆ. ಇನ್ನು ಜಲಮಂಡಳಿಯಿಂದ ಸಂಸ್ಕರಿಸಿದ ನೀರನ್ನು ದುಬಾಸಿಪಾಳ್ಯ ಕೆರೆ, ಹೊಸಕೆರಳ್ಳಿ ಕೆರೆ ಹಾಗೂ ಹಲಗೇವಡೆರಹಳ್ಳಿ ಕೆರೆಗಳಿಗೆ ತುಂಬಿಸುವ ಕಾಮಗಾರಿಯೂ ಚಾಲನೆಯಲ್ಲಿದೆ. 

ಕಾವೇರಿ ಪೈಪ್‌ಲೈನ್ ದುರಸ್ತಿಗೊಳಿಸಿ, ಬೆಂಗಳೂರಿಗೆ 1,000 ಎಂಎಲ್‌ಡಿ ನೀರು ಸರಬರಾಜ ವ್ಯತ್ಯಯ ತಪ್ಪಿಸಿದ ಜಲಮಂಡಳಿ

ಭಾನುವಾರ ಕೆಂಗೇರಿ ಕೆರೆಗೆ ನೀರು ತುಂಬಿಸುವ ಕಾರ್ಯವನ್ನು ಪರಿಶೀಲಿಸಿದ ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ ಪ್ರಸಾತ್‌ ಮನೋಹರ್‌ ಮಾತನಾಡಿ, ಎರಡನೇ ಹಂತದಲ್ಲಿ ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ತುಂಬಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿತ್ತು. ಇದರ ಹಿನ್ನಲೆಯಲ್ಲಿ ಕೆಲವು ದಿನಗಳ ಹಿಂದೆ ಕೆಂಗೇರಿ ಕೆರೆಗೆ ಭೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ಚುರುಕುಗೊಳಿಸುವಂತೆ ಸೂಚಿಸಲಾಗಿತ್ತು. ಇಂದು ಕೆರೆಗೆ ನೀರು ಹರಿಸುವ ಪೈಪ್‌ ಲೈನ್‌ ಅಳವಡಿಸಲಾಗಿದ್ದು ನೀರು ಹರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜಲಮಂಡಳಿಯ ವತಿಯಿಂದ ದಾಖಲೆಯ ಸಮಯದಲ್ಲಿ ಅಗತ್ಯ ಕಾಮಗಾರಿಯನ್ನು ಪೂರೈಸಲಾಗಿದ್ದು, ಬತ್ತಿ ಹೋಗಿದ್ದ ಜಲಮೂಲವಾದ ಕೆಂಗೇರಿ ಕೆರೆಗೆ ಮತ್ತೊಮ್ಮೆ ಜೀವ ಜಲ ತುಂಬಿಸಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಕೆರೆ ತುಂಬಲಿದ್ದು ಅಂತರ್ಜಲ ಮರುಪೂರಣ ಪ್ರಾರಂಭವಾಗಲಿರುವುದು ಸಂತಸದ ವಿಷಯವಾಗಿದೆ. ಈಗಾಗಲೇ ನಾಯಂಡಹಳ್ಳಿ ಕೆರೆ ಸೇರಿದಂತೆ 14 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕೆರೆಗಳಿಗೆ  ನೀರನ್ನು ತುಂಬಿಸುವುದು ಜಲಮಂಡಳಿಯ ಗುರಿಯಾಗಿದೆ. ನಗರದಲ್ಲಿ ಅವ್ಯಾಹತವಾಗಿ  ಅಂತರ್ಜಲದ ಬಳಕೆಯಾಗುತ್ತಿದೆ. ಭವಿಷ್ಯದ ನೀರಿನ ಅವಶ್ಯಕತೆ ಪೂರೈಸಲು ಅಂತರ್ಜಲ ಮರುಪೂರಣಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಜಲಮಂಡಳಿಯ ವತಿಯಿಂದ ಕೈಗೊಳ್ಳಲಾಗುತ್ತಿದೆ ಎಂದು ರಾಮ್‌ಪ್ರಸಾತ್ ಮನೋಹರ್ ತಿಳಿಸಿದರು.

ಬಿಬಿಎಂಪಿ ಆಸ್ತಿ ತೆರಿಗೆ ಸದ್ಯಕ್ಕೆ ಹೆಚ್ಚಳವಿಲ್ಲ; ಆತಂಕ ಬೇಡವೆಂದು ಸ್ಪಷ್ಟೀಕರಣ ಕೊಟ್ಟ ಪಾಲಿಕೆ

ಬತ್ತಿದ 6,500 ಕೊಳವೆ ಬಾವಿಗಳು: ಸಿಲಿಕಾನ್ ಸಿಟಿ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರೋಬ್ಬರಿ 14 ಸಾವಿರಕ್ಕೂ ಅಧಿಕ ಸರ್ಕಾರದಿಂದ ನಿರ್ವಹಿಸುವ ಕೊಳವೆ ಬಾವಿಗಳು (ಬೋರ್‌ವೆಲ್‌) ಇವೆ. ಆದರೆ, ಇದರ ಪೈಕಿ ಬರೋಬ್ಬರಿ 6,500ಕ್ಕೂ ಅಧಿಕ ಕೊಳವೆ ಬಾವಿಗಳು ನೀರು ಸಂಪೂರ್ಣವಾಗಿ ಬತ್ತಿ ಹೋಗಿವೆ. ಇದಕ್ಕೆ ಮುಖ್ಯ ಕಾರಣ ಕೆರೆಗಳನ್ನು ಮುಚ್ಚಿರುವುದು ಎಂದು ಪರಿಸರ ಪ್ರೇಮಿಗಳು ಹೇಳುತ್ತಿದ್ದಾರೆ. ಇನ್ನು ಬಿಬಿಎಂಪಿ ಹಾಗೂ ಜಲಮಂಡಳಿ ವತಿಯಿಂದ ಕೆರೆಗಳಿಗೆ ಸಂಸ್ಕರಿತ ತ್ಯಾಜ್ಯ ನೀರನ್ನು ಮರುಪೂರಣ ಮಾಡಲಾಗುತ್ತಿದೆ. ಇದರಿಂದ, ಕೆರೆಗಳಿಂದ ನೀರು ಭೂಮಿಯಲ್ಲಿ ಇಂಗುವ ಮೂಲಕ ಬೋರ್‌ವೆಲ್‌ಗಳಲ್ಲಿಯೂ ಅಂತರ್ಜಲ ಮರುಪೂರಣ ಆಗುವುದು ಎಂದು ನಿರೀಕ್ಷಿಸಲಾಗಿದೆ. 

click me!