ಈದ್-ಎ-ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸೆಪ್ಟೆಂಬರ್ 5 ರಂದು ಸಂಚಾರ ಬದಲಾವಣೆಗಳನ್ನು ಜಾರಿಗೊಳಿಸಲಾಗಿದೆ. ಕೆ.ಜಿ.ಹಳ್ಳಿ, ಪುಲಿಕೇಶಿನಗರ, ಶಿವಾಜಿನಗರ ಭಾಗಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಪರ್ಯಾಯ ಮಾರ್ಗ ಸೂಚಿಸಲಾಗಿದೆ. ನಿಗದಿತ ಸ್ಥಳಗಳಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ.
ಬೆಂಗಳೂರು (ಸೆ.04): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಸ್ಲಿಂ ಬಾಂಧವರು ಈದ್-ಎ-ಮಿಲಾದ್ ಹಬ್ಬವನ್ನು ಸಡಗರದಿಂದ ಆಚರಣೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆ ನಡೆಯಲಿದ್ದು, ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ಬೆಂಗಳೂರು ನಗರ ಸಂಚಾರ ಪೊಲೀಸ್ ಇಲಾಖೆ ವಿಶೇಷ ಸಂಚಾರ ವ್ಯವಸ್ಥೆ ಹಾಗೂ ಮಾರ್ಗ ಬದಲಾವಣೆಗಳನ್ನು ಕೈಗೊಂಡಿದೆ.
ಸಂಚಾರ ನಿರ್ಬಂಧಗಳು: 2025ರ ಸೆಪ್ಟೆಂಬರ್ 5ರಂದು ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕೆ.ಜಿ.ಹಳ್ಳಿ, ಪುಲಿಕೇಶಿನಗರ ಮತ್ತು ಶಿವಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲವು ಮಾರ್ಗಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ನಾಗವಾರ ಜಂಕ್ಷನ್ನಿಂದ ಪಾಟರಿ ಸರ್ಕಲ್ವರೆಗೆ ಸಂಚಾರ ನಿಲ್ಲಿಸಲಾಗುವುದು.
ನೇತಾಜಿ ಜಂಕ್ಷನ್ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆಗೆ ಹೋಗುವ ಮಾರ್ಗ ಮುಚ್ಚಲಾಗುವುದು.
ಎಂ.ಎಂ. ರಸ್ತೆಯಲ್ಲಿ ಮಾಸ್ಕ್ ಜಂಕ್ಷನ್ನಿಂದ ನೇತಾಜಿ ಜಂಕ್ಷನ್ ಕಡೆಗೆ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೆ ಬರಲಿದೆ.
ನೇತಾಜಿ ಜಂಕ್ಷನ್ನಿಂದ ಹೇನ್ಸ್ ಜಂಕ್ಷನ್ವರೆಗೆ ಹೇನ್ಸ್ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗುತ್ತದೆ.
ಪರ್ಯಾಯ ಮಾರ್ಗಗಳು
ನಾಗವಾರ ಜಂಕ್ಷನ್ನಿಂದ ಶಿವಾಜಿನಗರಕ್ಕೆ: ಹೆಣ್ಣೂರು – ಕಾಚರಕನಹಳ್ಳಿ – ಲಿಂಗರಾಜಪುರಂ ಪ್ರೈಓವರ್ – ರಾಬರ್ಟ್ನ್ ರಸ್ತೆ – ಹೇನ್ಸ್ ರಸ್ತೆ ಮೂಲಕ.
ಶಿವಾಜಿನಗರದಿಂದ ನಾಗವಾರಕ್ಕೆ: ಸ್ಪೆನ್ಸರ್ ರಸ್ತೆ – ಕೋಲ್ಸ್ ರಸ್ತೆ – ವೀಲರ್ಸ್ ರಸ್ತೆ ಮುಖಾಂತರ.
ನೇತಾಜಿ ರಸ್ತೆ, ಹೇನ್ಸ್ ರಸ್ತೆ, ಎಂ.ಎಂ ರಸ್ತೆ, ಮಾಸ್ಕ್ ರಸ್ತೆ, ಕೋಲ್ಸ್ ರಸ್ತೆ, ಸೌಂಡರ್ಸ್ ರಸ್ತೆ, ಸೆಂಟ್ ಜಾನ್ಸ್ ಚರ್ಚ್ ರಸ್ತೆ ಮತ್ತು ಮಿಲ್ಲರ್ಸ್ ರಸ್ತೆಗಳ ಎರಡೂ ಬದಿಗಳಲ್ಲಿ ವಾಹನ ನಿಲ್ಲಿಸುವುದನ್ನು ನಿಷೇಧಿಸಲಾಗಿದೆ.
ಪೊಲೀಸ್ ಮನವಿ
ನಗರ ಸಂಚಾರ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದ್ದು – ಹಬ್ಬದ ಮೆರವಣಿಗೆ ಹಿನ್ನೆಲೆಯಲ್ಲಿ ವಿಧಿಸಿರುವ ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಸಂಚಾರಕ್ಕೆ ಸಹಕರಿಸಬೇಕು, ಎಂದು ತಿಳಿಸಿದೆ.