
ರಾಮನಗರ: ಈಗಲ್ಟನ್ ರೆಸಾರ್ಟ್ನ ವಿಲ್ಲಾದಲ್ಲಿ ನಡೆದಿದ್ದ ವೃದ್ಧ ದಂಪತಿ ರಘುರಾಜನ್ ಹಾಗೂ ಆಶಾ ಅವರ ಭೀಕರ ಕೊಲೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ಬಳಿಕ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಿಡದಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಬಿಹಾರ ರಾಜ್ಯದ ಬಂಕಾ ಜಿಲ್ಲೆಯ ಜಿತ್ತಿಯಜೋರ್ ಗ್ರಾಮದ ರವಿಕುಮಾರ್ ಯಾದವ್ ಅಲಿಯಾಸ್ ರವಿ ಯಾದವ್ (29) ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದ ಜೋಗೀಂದರ್ ಯಾದವ್ ಅನ್ನು ಕೊಲೆ ನಡೆದ ಮರುದಿನವೇ, ಅಂದರೆ 2022ರ ಫೆಬ್ರವರಿ 9ರಂದು ಪೊಲೀಸರು ಬಂಧಿಸಿದ್ದರು.
ಇಂಡಿಯನ್ ಏರ್ ಫೋರ್ಸ್ನ ವಿಂಗ್ ಕಮಾಂಡರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ರಘುರಾಜನ್, ಪತ್ನಿ ಆಶಾ ಅವರೊಂದಿಗೆ ಈಗಲ್ಟನ್ ರೆಸಾರ್ಟ್ನ ಸಿ-21 ವಿಲ್ಲಾದಲ್ಲಿ ವಾಸವಿದ್ದರು. ಅವರು ಹೊಸ ಮನೆಯನ್ನು ನಿರ್ಮಿಸುತ್ತಿದ್ದರೂ, ಮಕ್ಕಳಿಬ್ಬರೂ ದೆಹಲಿಯಲ್ಲಿ ಉದ್ಯೋಗದಲ್ಲಿದ್ದ ಕಾರಣ ದಂಪತಿ ಇಬ್ಬರೇ ಅಲ್ಲಿದ್ದುಕೊಂಡಿದ್ದರು.
ಮನೆಯ ಕೆಲಸ ಹಾಗೂ ಸಾಕು ನಾಯಿಯ ಆರೈಕೆಗೆ ಬಿಹಾರ ಮೂಲದ ಜೋಗೀಂದರ್ ಯಾದವ್ ಅನ್ನು ಕೆಲಸಕ್ಕೆ ನೇಮಿಸಲಾಗಿತ್ತು. ಜೋಗೀಂದರ್ ತನ್ನ ಪತ್ನಿ ಮತ್ತು ಮಗುವಿನೊಂದಿಗೆ ಸಿಬ್ಬಂದಿಗಾಗಿ ನೀಡಲಾಗಿದ್ದ ವಸತಿಗೃಹದಲ್ಲಿ ವಾಸವಿದ್ದನು. ಅವನ ತಂದೆ-ತಾಯಿ ಕೂಡ ಇದೇ ರೆಸಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದರಿಂದ, ಆ ಪರಿಚಯದ ಆಧಾರದ ಮೇಲೆ ಅವನಿಗೆ ಈ ಕೆಲಸ ದೊರಕಿತ್ತು.
ಒಮ್ಮೆ ಜೋಗೀಂದರ್ ತನ್ನ ಸಾಲ ತೀರಿಸಲು ರಘುರಾಜನ್ ಅವರ ಮೊಬೈಲ್ ನೆಟ್ ಬ್ಯಾಂಕಿಂಗ್ ಮೂಲಕ ಸುಮಾರು ₹70 ಸಾವಿರ ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದನು. ನಂತರ, ಅವರ ಗಮನಕ್ಕೆ ಬಾರದೇ ಇನ್ನೂ ಕೆಲವು ಹಣ ವರ್ಗಾವಣೆ ಮಾಡಲು ಯತ್ನಿಸಿದ್ದಾನೆ. ಬ್ಯಾಂಕ್ ಖಾತೆಯಿಂದ ಹಣ ಕಡಿಮೆಯಾಗಿರುವುದು ತಿಳಿದಿದ್ದರೂ, ರಘುರಾಜನ್ ಹೆಚ್ಚಿನ ಕ್ರಮ ಕೈಗೊಂಡಿರಲಿಲ್ಲ.
ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಜೋಗೀಂದರ್, ದಂಪತಿಯ ಬಳಿ ಹೆಚ್ಚಿನ ಹಣವಿದೆ ಎಂಬ ಭ್ರಮೆಯಿಂದ ಅದನ್ನು ಕಳವು ಮಾಡಲು ಯೋಜನೆ ರೂಪಿಸಿದ್ದಾನೆ. ಈ ಕೃತ್ಯಕ್ಕೆ ತನ್ನ ಸಂಬಂಧಿ ರವಿಕುಮಾರ್ ಯಾದವ್ನನ್ನು ಸಹಚರನಾಗಿ ಸೇರಿಸಿಕೊಂಡು ಕೊಲೆಗೆ ಸ್ಕೆಚ್ ಹಾಕಿದ್ದಾನೆ.
2022ರ ಫೆಬ್ರವರಿ 7ರಂದು ರಾತ್ರಿ ಸುಮಾರು 7 ಗಂಟೆಗೆ, ಮನೆಯ ಮೇಲ್ಮಹಡಿಯ ಬಾಗಿಲನ್ನು ತೆರೆಯಿಟ್ಟು ನಾಯಿಗೆ ಆಹಾರ ನೀಡುತ್ತೇನೆ ಎಂದು ಹೇಳಿ ಹೊರಟ ಜೋಗೀಂದರ್, ಮನೆಯ ಹಿಂದಿನ ಮೆಟ್ಟಿಲುಗಳ ಮೂಲಕ ಮತ್ತೆ ಒಳನುಗ್ಗಿದ್ದಾನೆ. ಬಳಿಕ ತನ್ನ ಸಂಬಂಧಿ ರವಿಕುಮಾರ್ ಯಾದವ್ನನ್ನು ಮನೆಗೆ ಕರೆಸಿಕೊಂಡಿದ್ದಾನೆ.
ರಾತ್ರಿ 1 ಗಂಟೆ ಸುಮಾರಿಗೆ, ರಘುರಾಜನ್ ಮಲಗಿದ್ದ ವೇಳೆ ಇಬ್ಬರೂ ಆರೋಪಿಗಳು ಅವರ ಬಾಯಿಗೆ ಬೆಡ್ಶೀಟ್ ತುರುಕಿ, ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ. ನಂತರ ಪಕ್ಕದ ಕೊಠಡಿಯಲ್ಲಿ ಮಲಗಿದ್ದ ಆಶಾ ಅವರನ್ನೂ ಇದೇ ರೀತಿ ಹತ್ಯೆಗೈದಿದ್ದಾರೆ.
ಕೊಲೆಗೈದ ಬಳಿಕ ಆರೋಪಿಗಳು ಮನೆಯಲ್ಲಿದ್ದ ₹56 ಸಾವಿರ ನಗದು ಕದ್ದುಕೊಂಡು, ಬೆಳಗ್ಗೆ 6 ಗಂಟೆಯವರೆಗೆ ಮನೆಯಲ್ಲೇ ಉಳಿದಿದ್ದರು. ಬಳಿಕ ಬೆಳಗ್ಗೆ 8 ಗಂಟೆಗೆ ಜೋಗೀಂದರ್ ತನ್ನ ವಸತಿಗೃಹಕ್ಕೆ ತೆರಳಿ ಉಪಾಹಾರ ಸೇವಿಸಿ ಮತ್ತೆ ಮನೆಗೆ ಬಂದಿದ್ದಾನೆ.
ಆ ಸಮಯದಲ್ಲಿ ಮತ್ತೊಮ್ಮೆ ನೆಟ್ ಬ್ಯಾಂಕಿಂಗ್ ಮೂಲಕ ಹಣ ವರ್ಗಾವಣೆ ಮಾಡಲು ಪ್ರಯತ್ನಿಸಿದ್ದರೂ, ಅದು ಯಶಸ್ವಿಯಾಗಲಿಲ್ಲ.
ದೆಹಲಿಯಲ್ಲಿ ಇದ್ದ ದಂಪತಿಯ ಪುತ್ರ-ಪುತ್ರಿಯರು ಪ್ರತಿದಿನ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದರು. ಆದರೆ ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಗ್ಗೆ ಕರೆ ಸ್ವೀಕರಿಸದಿದ್ದರಿಂದ ಅನುಮಾನಗೊಂಡ ಪುತ್ರ, ರೆಸಾರ್ಟ್ನ ಭದ್ರತಾ ಸಿಬ್ಬಂದಿಯನ್ನು ಮನೆಗೆ ಹೋಗಿ ಪರಿಶೀಲಿಸಲು ಸೂಚಿಸಿದ್ದಾನೆ.
ಭದ್ರತಾ ಸಿಬ್ಬಂದಿ ಮನೆಗೆ ಬಂದಾಗ ಜೋಗೀಂದರ್ ದಂಪತಿ ಬೆಂಗಳೂರಿಗೆ ತೆರಳಿದ್ದಾರೆಂದು ಸುಳ್ಳು ಹೇಳಿದ್ದಾನೆ. ಆದರೆ ಮಗನ ಸೂಚನೆಯಂತೆ ಮನೆಯೊಳಗೆ ಪರಿಶೀಲನೆ ನಡೆಸಿದಾಗ, ಬೆಡ್ರೂಮ್ನಲ್ಲಿ ದಂಪತಿಯ ಮೃತದೇಹಗಳು ಪತ್ತೆಯಾಗಿವೆ.
ಈ ವೇಳೆ ಜೋಗೀಂದರ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದರೂ, ಆತ ಸಿಕ್ಕಿಬಿದ್ದಿದ್ದಾನೆ. ಆದರೆ ರವಿಕುಮಾರ್ ಯಾದವ್ ತಪ್ಪಿಸಿಕೊಂಡು ಪರಾರಿಯಾಗಿದ್ದನು.
ಪ್ರಕರಣದ ತನಿಖೆಯನ್ನು ಮುಂದುವರಿಸಿದ ಬಿಡದಿ ಪೊಲೀಸ್ ಠಾಣೆಯ ಪಿಎಸ್ಸೈ ಅಣ್ಣಯ್ಯ ಅವರ ನೇತೃತ್ವದ ತಂಡ, ನಾಲ್ಕು ವರ್ಷಗಳ ಬಳಿಕ ಗುಜರಾತ್ ರಾಜ್ಯದ ಅಹಮದಾಬಾದ್ ಜಿಲ್ಲೆಯಲ್ಲಿ ಅಡಗಿದ್ದ ರವಿಕುಮಾರ್ ಯಾದವ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಅಹಮದಾಬಾದ್ನ ಘಿಕಾಂತ ನ್ಯಾಯಾಲಯದಲ್ಲಿ ಆರೋಪಿಯನ್ನು ಹಾಜರುಪಡಿಸಿ ಟ್ರಾನ್ಸಿಟ್ ವಾರಂಟ್ ಪಡೆದು, ಬಳಿಕ ಬಿಡದಿ ಪೊಲೀಸ್ ಠಾಣೆಗೆ ಕರೆತರಲಾಗಿದೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಎಎಸ್ಸೈ ಏಕಾಂಬರೇಶ್ವರ, ಮುಖ್ಯ ಪೇದೆ ಲಿಂಗರಾಜು, ಪೇದೆ ಕಾಂತರಾಜು ಹಾಗೂ ತನಿಖಾ ಸಹಾಯಕ ಅನ್ವರ್ ಭಾಗವಹಿಸಿದ್ದರು.
ನಾಲ್ಕು ವರ್ಷಗಳ ಕಾಲ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಬಂಧಿಸುವ ಮೂಲಕ ಪೊಲೀಸರು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದ್ದು, ನ್ಯಾಯದ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ಈ ಪ್ರಕರಣವು ಹಣದ ಲಾಲಸೆ ಹೇಗೆ ಭೀಕರ ಅಪರಾಧಕ್ಕೆ ಕಾರಣವಾಗಬಹುದು ಎಂಬುದಕ್ಕೆ ನಿದರ್ಶನವಾಗಿದೆ.