
ಬೆಂಗಳೂರು: ರಾಜಧಾನಿ ಬೆಂಗಳೂರಿನ ಯಲಹಂಕ ಪ್ರದೇಶದಲ್ಲಿ ನಡೆದ ಭಾರಿ ಮನೆಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಸುಮಾರು 3 ಕೋಟಿ ರೂಪಾಯಿ ಮೌಲ್ಯದ ವಜ್ರ ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ ಆರೋಪದ ಮೇಲೆ ರಾಜಸ್ಥಾನ ಮೂಲದ 19 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವಲ್ಲರಾಮ್ ಮೀನಾ ಅಲಿಯಾಸ್ ಸುನಿಲ್ ಎಂದು ಗುರುತಿಸಲಾಗಿದೆ. ಇವನು ರಾಜಸ್ಥಾನದ ಸಾಲುಂಬರ್ ಜಿಲ್ಲೆಯ ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಟೈಲ್ಸ್ ಹಾಗೂ ಗ್ರಾನೈಟ್ ಅಳವಡಿಸುವ ಕೆಲಸ ಮಾಡುತ್ತಿದ್ದನು.
ಪೊಲೀಸರ ಮಾಹಿತಿ ಪ್ರಕಾರ, ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಜುಡಿಷಿಯಲ್ ಲೇಔಟ್ನಲ್ಲಿ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಸಾಫ್ಟ್ವೇರ್ ವೃತ್ತಿಪರರೊಬ್ಬರ ಮನೆ ಇದೆ. ಆ ದಂಪತಿ ಸಾಮಾನ್ಯವಾಗಿ ಅಮೆರಿಕದಲ್ಲೇ ವಾಸವಾಗಿದ್ದು, ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಮಾತ್ರ ಬೆಂಗಳೂರಿನ ಮನೆಗೆ ಬಂದು ಹೋಗುತ್ತಿದ್ದರು. ಈ ವಿಚಾರವನ್ನು ಗಮನಿಸಿದ ಆರೋಪಿಯು ಹಲವು ತಿಂಗಳ ಕಾಲ ಮನೆಯ ಮೇಲೆ ನಿಗಾವಹಿಸಿದ್ದಾನೆ.
ಪಕ್ಕದಲ್ಲಿದ್ದ ನಿರ್ಮಾಣ ಹಂತದ ಕಟ್ಟಡದಲ್ಲಿ ಸುಮಾರು ಇಪ್ಪತ್ತು ಮಂದಿ ರಾಜಸ್ಥಾನ ಮೂಲದ ಕಾರ್ಮಿಕರು ಟೈಲ್ಸ್ ಹಾಗೂ ಗ್ರಾನೈಟ್ ಅಳವಡಿಸುವ ಕೆಲಸ ಮಾಡುತ್ತಿದ್ದರು. ಅವರಲ್ಲೊಬ್ಬನಾದ ವಲ್ಲರಾಮ್, ಯಾರಿಗೂ ಅನುಮಾನ ಬರದಂತೆ ಪಕ್ಕದ ಮನೆಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದನು. ಸುಮಾರು ಆರು ತಿಂಗಳ ಕಾಲ ಮನೆಗೆ ಯಾರೂ ಬರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದಾನೆ.
ಆರೋಪಿಯು ಮೂರು ಬಾರಿ ಮನೆಯ ಮೇಲ್ಚಾವಣಿಗೆ ಹೋಗಿ ಸ್ಲೈಡ್ ಡೋರ್ ತೆರೆಯುವ ಮೂಲಕ ರೆಕ್ಕಿ ನಡೆಸಿದ್ದಾನೆ. ನಂತರ ಫೆಬ್ರವರಿ 15ರ ರಾತ್ರಿ ಮನೆಯೊಳಗೆ ನುಗ್ಗಿ ಲಾಕರ್ ತೆರೆಯುವ ಮೂಲಕ ಸುಮಾರು 1.8 ಕೆಜಿ ತೂಕದ ವಜ್ರ ಹಾಗೂ ಚಿನ್ನಾಭರಣಗಳು ಮತ್ತು ನಗದು ಹಣ ಕಳ್ಳತನ ಮಾಡಿದ್ದಾನೆ. ಕಳ್ಳತನ ಮಾಡಿದ ಎಲ್ಲಾ ಆಭರಣಗಳನ್ನು ಬ್ಯಾಗ್ನಲ್ಲಿ ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ನಿರೀಕ್ಷೆಗಿಂತ ಹೆಚ್ಚು ಪ್ರಮಾಣದಲ್ಲಿ ಚಿನ್ನಾಭರಣ ಸಿಕ್ಕಿದ್ದರಿಂದ ತನ್ನ ಸ್ನೇಹಿತರಿಗೂ ಹೇಳದೆ ನೇರವಾಗಿ ರಾಜಸ್ಥಾನಕ್ಕೆ ತೆರಳಿ, ಕದ್ದ ಆಭರಣಗಳನ್ನು ತನ್ನ ಮನೆಯಲ್ಲಿ ಬಚ್ಚಿಟ್ಟಿದ್ದಾನೆ.
ಈ ನಡುವೆ ಅಮೆರಿಕದಲ್ಲಿದ್ದ ಮನೆ ಮಾಲೀಕರು ತಮ್ಮ ಮನೆಯ ಸಿಸಿಟಿವಿ ಕ್ಯಾಮೆರಾಗಳನ್ನು ಮೊಬೈಲ್ ಮೂಲಕ ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಅವರು ತಮ್ಮ ಸಂಬಂಧಿ ಸೇತು ಮಹಾದೇವ ಅವರಿಗೆ ಮಾಹಿತಿ ನೀಡಿ, ಫೆಬ್ರವರಿ 16ರಂದು ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ದೂರು ದಾಖಲಿಸಿಕೊಂಡ ಯಲಹಂಕ ಪೊಲೀಸರು ತಾಂತ್ರಿಕ ಸುಳಿವುಗಳು ಹಾಗೂ ಸ್ಥಳೀಯ ಗುಪ್ತಚರ ಮಾಹಿತಿಯ ಆಧಾರದಲ್ಲಿ ವಿಶೇಷ ತಂಡವನ್ನು ರಚಿಸಿ ತನಿಖೆ ಆರಂಭಿಸಿದರು. ತನಿಖೆಯ ವೇಳೆ ಆರೋಪಿಯ ಸುಳಿವು ದೊರೆತಿದ್ದು, ಫೆಬ್ರವರಿ 18ರಂದು ರಾಜಸ್ಥಾನದ ಮಾನಗಿರಿ ಗ್ರಾಮದಲ್ಲಿ ಅವನನ್ನು ಬಂಧಿಸಲಾಯಿತು. ಬಂಧನದ ಬಳಿಕ ವಿಚಾರಣೆ ನಡೆಸಿದಾಗ ಆರೋಪಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಕದ್ದ ಆಭರಣಗಳನ್ನು ಮನೆಯಲ್ಲೇ ಇರಿಸಿದ ಬಗ್ಗೆ ಬಾಯಿ ಬಿಟ್ಟಿದ್ದಾನೆ.
ಪೊಲೀಸರು ಆರೋಪಿಯ ಮನೆಯಿಂದ ಸುಮಾರು 3 ಕೋಟಿ ರೂಪಾಯಿ ಮೌಲ್ಯದ 1.833 ಕೆಜಿ ತೂಕದ ವಜ್ರ ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಅವನನ್ನು ಸಾಲುಂಬರ್ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಟ್ರಾನ್ಸಿಟ್ ವಾರಂಟ್ ಪಡೆದು ಬೆಂಗಳೂರಿಗೆ ಕರೆತರಲಾಯಿತು. ಬೆಂಗಳೂರಿಗೆ ಕರೆತರಲಾದ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಬಳಿಕ ನ್ಯಾಯಾಲಯವು ಆರೋಪಿಯನ್ನು 15 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿತು. ನಂತರ ಮಾರ್ಚ್ 6ರಂದು ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪೊಲೀಸರ ಪ್ರಕಾರ, ಬಂಧಿತ ಯುವಕನಿಗೆ ಈ ಹಿಂದೆ ಯಾವುದೇ ಕ್ರಿಮಿನಲ್ ದಾಖಲೆಗಳಿಲ್ಲ. ತಾಂತ್ರಿಕ ಮಾಹಿತಿ ಹಾಗೂ ರಾಜ್ಯ ಗಡಿಗಳನ್ನು ದಾಟಿ ನಡೆಸಿದ ಸಮನ್ವಯ ಕಾರ್ಯಾಚರಣೆಯ ಮೂಲಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ, ಯಲಹಂಕ ಪೊಲೀಸರು ತಾಂತ್ರಿಕ ಸುಳಿವುಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಕಾರ್ಯಾಚರಣೆ ನಡೆಸಿ ಭಾರಿ ಮೌಲ್ಯದ ಮನೆಕಳ್ಳತನ ಪ್ರಕರಣವನ್ನು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.