ಮಂಗಳೂರು ಕಾಲೇಜಿಗೆ ಹೊರಟಿದ್ದ ಪಿಯುಸಿ ವಿದ್ಯಾರ್ಥಿನಿ ಅಪಹರಣಕ್ಕೆ ಯತ್ನ; ಬಾಲಕಿ ರಕ್ಷಣೆ ಮಾಡಿದ ಅಬ್ಬುಸಾಲಿ!

Published : Feb 09, 2026, 04:10 PM IST
Beltangadi Student Kidnap

ಸಾರಾಂಶ

ಬೆಳ್ತಂಗಡಿಯಲ್ಲಿ ಕಾಲೇಜಿಗೆ ತೆರಳುತ್ತಿದ್ದ ಪಿಯುಸಿ ವಿದ್ಯಾರ್ಥಿನಿಯ ಅಪಹರಣಕ್ಕೆ ದುಷ್ಕರ್ಮಿಗಳು ಯತ್ನಿಸಿದ್ದಾರೆ. ವಿರೋಧಿಸಿದಾಗ ಆಕೆಯ ಕೈಗೆ ಚೂರಿಯಿಂದ ಇರಿದು ಪರಾರಿಯಾಗಿದ್ದು, ಸ್ಥಳೀಯರೊಬ್ಬರು ವಿದ್ಯಾರ್ಥಿನಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ದಕ್ಷಿಣ ಕನ್ನಡ (ಫೆ.09): ಜಿಲ್ಲೆಯ ಶಾಂತಿಯುತ ತಾಲೂಕು ಎಂದು ಕರೆಯಲ್ಪಡುವ ಬೆಳ್ತಂಗಡಿಯಲ್ಲಿ ಇಂದು (ಸೋಮವಾರ) ಬೆಳಿಗ್ಗೆ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಸ್ಕೂಟಿಯಲ್ಲಿ ಕಾಲೇಜಿಗೆ ತೆರಳುತ್ತಿದ್ದ 16 ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡವೊಂದು, ಸಿನಿಮೀಯ ಶೈಲಿಯಲ್ಲಿ ಅಪಹರಣಕ್ಕೆ (Kidnap Attempt) ಯತ್ನಿಸಿದ ಆತಂಕಕಾರಿ ಘಟನೆ ವರದಿಯಾಗಿದೆ. ಅಷ್ಟೇ ಅಲ್ಲದೆ, ಬಲವಂತವಾಗಿ ಕಾರಿಗೆ ಎಳೆದು ಹಾಕಲು ಸಾಧ್ಯವಾಗದಿದ್ದಾಗ ವಿದ್ಯಾರ್ಥಿನಿಯ ಕೈಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ.

ಘಟನೆಯ ವಿವರ:

ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತ ಬಾಲಕಿ ಎಂದಿನಂತೆ ತನ್ನ ಸ್ಕೂಟಿಯಲ್ಲಿ ಕಾಲೇಜಿಗೆ ಹೋಗುತ್ತಿದ್ದರು. ಈ ವೇಳೆ ನಿರ್ಜನ ಪ್ರದೇಶವೊಂದರಲ್ಲಿ ಇಕೋ (ECO) ಕಾರಿನಲ್ಲಿ ಬಂದ ಮೂವರು ಅಪರಿಚಿತರು ಸ್ಕೂಟಿಗೆ ಅಡ್ಡಲಾಗಿ ಕಾರು ನಿಲ್ಲಿಸಿದ್ದಾರೆ. ಕಾರಿನಿಂದ ಇಳಿದು ಬಂದ ಮೂವರು ದುಷ್ಕರ್ಮಿಗಳು ಮುಖಕ್ಕೆ ಮಾಸ್ಕ್ ಧರಿಸಿದ್ದರು ಎನ್ನಲಾಗಿದೆ. ಏಕಾಏಕಿ ಕಾರಿನಿಂದ ಇಳಿದ ಮುಸುಕುಧಾರಿಗಳು, ಬಾಲಕಿಗೆ ಚೂರಿ ತೋರಿಸಿ ಬೆದರಿಸಿದ್ದಾರೆ. ಅಲ್ಲದೆ, ಆಕೆಯನ್ನು ಬಲವಂತವಾಗಿ ಎತ್ತಿಕೊಂಡು ಕಾರಿನೊಳಗೆ ಕೂರಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಧೈರ್ಯಗೆಡದ ವಿದ್ಯಾರ್ಥಿನಿ ಜೋರಾಗಿ ಕಿರುಚಾಡಿದ್ದಾರೆ. ಇದರಿಂದ ವಿಚಲಿತರಾದ ದುಷ್ಕರ್ಮಿಗಳು ಆಕೆಯ ಕೈಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಾರೆ.

ರಕ್ಷಕನಾಗಿ ಬಂದ ಅಬ್ಬುಸಾಲಿ:

ವಿದ್ಯಾರ್ಥಿನಿ ಸಂಕಷ್ಟದಲ್ಲಿದ್ದಾಗಲೇ ಆ ರಸ್ತೆಯಲ್ಲಿ ದೈವದೂತನಂತೆ ಅಬ್ಬುಸಾಲಿ ಎಂಬುವರು ಆಗಮಿಸಿದ್ದಾರೆ. ಹಿಂದಿನಿಂದ ಬರುತ್ತಿದ್ದ ಅಬ್ಬುಸಾಲಿ ಅವರನ್ನು ಕಂಡ ತಕ್ಷಣ, ಸಿಕ್ಕಿಬೀಳುವ ಭಯದಿಂದ ಮೂವರು ಆರೋಪಿಗಳು ಕಾರು ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ. ತಕ್ಷಣವೇ ಸ್ಪಂದಿಸಿದ ಅಬ್ಬುಸಾಲಿ ಅವರು, ಭಯಭೀತಗೊಂಡಿದ್ದ ಮತ್ತು ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ರಕ್ಷಿಸಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಮಯ ಪ್ರಜ್ಞೆ ಮೆರೆದ ಅಬ್ಬುಸಾಲಿ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ತನಿಖೆ ಚುರುಕು:

ವಿಷಯ ತಿಳಿದ ತಕ್ಷಣ ಬೆಳ್ತಂಗಡಿ ಠಾಣಾ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗಿದ್ದು, ಹಲ್ಲೆಕೋರರು ಬಳಸಿದ ಇಕೋ ಕಾರಿನ ಪತ್ತೆಗೆ ಬಲೆ ಬೀಸಿದ್ದಾರೆ. ಆ ಭಾಗದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಇದು ಪೂರ್ವನಿಯೋಜಿತ ಕೃತ್ಯವೇ ಅಥವಾ ದರೋಡೆ ಉದ್ದೇಶವಿತ್ತೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.

ಪಟ್ಟಣದ ಸಮೀಪವೇ ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ ನಡೆದಿರುವುದು ಕಾಲೇಜು ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

PREV
Read more Articles on
click me!

Recommended Stories

ತಮಿಳುನಾಡು ಸಿಎಂ ಸ್ಟಾಲಿನ್ ಮೇಲಿನ ಆರೋಪಕ್ಕೆ ಬೆಂಗಳೂರಲ್ಲಿಯೋ ವಿದೇಶಿ ರಾಯಭಾರಿ ಕಚೇರಿಗೆ ಬಾಂಬ್! ಹೈ ಅಲರ್ಟ್
ದೇವಸ್ಥಾನದ ಹಿಂಭಾಗ ಐದು ಹೆಡೆ ನಾಗಮೂರ್ತಿ, ಶಿವಲಿಂಗ, ಶಾಸನ, ಸರ್ಪ ರೂಪದ ಶಿಲ್ಪ ಪತ್ತೆ