ಕೂಲಿ ಕಾರ್ಮಿಕರ ಕೈಗೆ ಸಿಕ್ತು ಲಕ್ಷಾಂತರ ಮೌಲ್ಯದ ಚಿನ್ನದ ನಿಧಿ: ಮುಂದೇನಾಯ್ತು ಗೊತ್ತಾ?

Published : Sep 04, 2026, 10:28 PM IST
Belagavi Gold Treasure

ಸಾರಾಂಶ

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಕೂಲಿ ಕಾರ್ಮಿಕರಿಗೆ ಗಡಿಗೆಯೊಳಗೆ 14 ಚಿನ್ನದ ನಾಣ್ಯಗಳು ಪತ್ತೆಯಾಗಿವೆ. 54.8 ಗ್ರಾಂ ತೂಕದ ಈ ನಾಣ್ಯಗಳ ಮೌಲ್ಯ ಸುಮಾರು 8.27 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಬೆಳಗಾವಿ (ಸೆ.04): ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಕೂಲಿ ಕಾರ್ಮಿಕರಿಗೆ ಗಂಗರ ಕಾಲಕ್ಕೆ ಸೇರಿವೆ ಎನ್ನಲಾದ 14 ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಬಿಸಿಎಂ ಹಾಸ್ಟೆಲ್ ಸಮೀಪ ಕೆಲಸ ಮಾಡುತ್ತಿದ್ದ ವೇಳೆ ಗಡಿಗೆಯಲ್ಲಿ ಈ ನಾಣ್ಯಗಳು ದೊರೆತಿದ್ದು, ಇದೀಗ ತಾಲೂಕಿನಲ್ಲಿ ಕುತೂಹಲ ಮೂಡಿಸಿದೆ.

ಗಡಿಗೆಯಲ್ಲಿ ಪತ್ತೆಯಾದ 14 ಚಿನ್ನದ ನಾಣ್ಯಗಳು

ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಗಡಿಗೆಯೊಂದು ಸಿಕ್ಕಿದ್ದು, ಪರಿಶೀಲಿಸಿದಾಗ ಅದರೊಳಗೆ 14 ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಒಟ್ಟು 54.8 ಗ್ರಾಂ ತೂಕದ ಈ ನಾಣ್ಯಗಳ ಮೌಲ್ಯ ಸುಮಾರು 8.27 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಅಧಿಕಾರಿಗಳಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಕಾರ್ಮಿಕರು

ನಾಣ್ಯಗಳು ಸಿಕ್ಕ ಕೂಡಲೇ ಕೂಲಿ ಕಾರ್ಮಿಕರು ಅವುಗಳನ್ನು ತಮ್ಮಲ್ಲೇ ಇಟ್ಟುಕೊಳ್ಳದೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಪಿಡಿಒ ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿ ಸಮ್ಮುಖದಲ್ಲಿ ನಾಣ್ಯಗಳನ್ನು ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರಿಗೆ ಹಸ್ತಾಂತರಿಸಲಾಯಿತು. ಬಳಿಕ ತಹಶೀಲ್ದಾರ್ ಅವರು ಎಲ್ಲ ನಾಣ್ಯಗಳನ್ನು ಖಜಾಂಚಿಗೆ ಒಪ್ಪಿಸಿದ್ದಾರೆ.

ನಾಣ್ಯಗಳ ಮೇಲೆ ಆನೆಯ ಚಿತ್ರ!

ಪತ್ತೆಯಾಗಿರುವ ಚಿನ್ನದ ನಾಣ್ಯಗಳ ಮೇಲ್ಭಾಗದಲ್ಲಿ ಆನೆಯ ಚಿತ್ರ ಇರುವುದಾಗಿ ತಿಳಿದುಬಂದಿದೆ. ಇತಿಹಾಸದ ಪ್ರಕಾರ ತಲಕಾಡಿನ ಗಂಗರ ರಾಜಲಾಂಛನ ಆನೆಯಾಗಿತ್ತು. ಹೀಗಾಗಿ ಪತ್ತೆಯಾಗಿರುವ ನಾಣ್ಯಗಳು ಗಂಗರ ಕಾಲಕ್ಕೆ ಸಂಬಂಧಿಸಿದ್ದಾಗಿರಬಹುದು ಎಂಬ ಕುತೂಹಲ ಮೂಡಿದೆ.

10ರಿಂದ 15ನೇ ಶತಮಾನದ ನಾಣ್ಯಗಳೇ?

ಪತ್ತೆಯಾದ ಚಿನ್ನದ ನಾಣ್ಯಗಳು ಕ್ರಿ.ಶ. 10ರಿಂದ 15ನೇ ಶತಮಾನದ ಅವಧಿಗೆ ಸೇರಿವೆ ಎಂಬ ಮಾಹಿತಿ ಲಭ್ಯವಾಗಿದೆ. ನಾಣ್ಯಗಳ ನಿಖರ ಕಾಲಘಟ್ಟ ಹಾಗೂ ಐತಿಹಾಸಿಕ ಹಿನ್ನೆಲೆ ಕುರಿತು ಅಧಿಕಾರಿಗಳ ಮಟ್ಟದಲ್ಲಿ ಹೆಚ್ಚಿನ ಪರಿಶೀಲನೆ ನಡೆಯಬೇಕಿದೆ.

ಪ್ರಾಮಾಣಿಕತೆಗೆ ತಾಲೂಕಾಡಳಿತದ ಮೆಚ್ಚುಗೆ

ಕೈಗೆ ಸಿಕ್ಕ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ನಾಣ್ಯಗಳನ್ನು ತಮ್ಮದಾಗಿಸಿಕೊಳ್ಳದೆ ಅಧಿಕಾರಿಗಳಿಗೆ ಒಪ್ಪಿಸಿದ ಕೂಲಿ ಕಾರ್ಮಿಕರ ಪ್ರಾಮಾಣಿಕತೆಗೆ ಸವದತ್ತಿ ತಾಲೂಕಾಡಳಿತ ಪ್ರಶಂಸೆ ವ್ಯಕ್ತಪಡಿಸಿದೆ. ಈ ಘಟನೆ ಇದೀಗ ಇಂಚಲ ಗ್ರಾಮ ಮಾತ್ರವಲ್ಲದೆ ಬೆಳಗಾವಿ ಜಿಲ್ಲೆಯಲ್ಲೂ ಗಮನ ಸೆಳೆದಿದೆ.

PREV
Read more Articles on
click me!

Recommended Stories

ಸರ್ಕಾರಿ ಶಾಲೆಯಲ್ಲೇ ಸ್ಪೋಕನ್‌ ಇಂಗ್ಲಿಷ್‌ ಕ್ರಾಂತಿ: ಕವನ್ ಮೇಷ್ಟ್ರು ಕಲಿಸಿದ ಪಾಠಕ್ಕೆ ಮಕ್ಕಳೇ ಸಾಕ್ಷಿ!
ಕರ್ನಾಟಕ ಜನತೆಗೆ ಬಸ್ ದರ ಏರಿಕೆ ಶಾಕ್? ಶೀಘ್ರದಲ್ಲೇ ಟಿಕೆಟ್ ಬೆಲೆ ಹೆಚ್ಚಳ ಸೂಚಿಸಿದ ಸಚಿವ