ಬಿಕಾಂ ಪದವಿಯಲ್ಲಿ ಪ್ರಥಮ ರ‌್ಯಾಂಕ್ ಪಡೆದ ಬಿಬಿಎಂಪಿ ಕಾಲೇಜು ವಿದ್ಯಾರ್ಥಿನಿ!

By Kannadaprabha NewsFirst Published Jan 4, 2020, 8:49 AM IST
Highlights

ಬಿಬಿಎಂಪಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2016-19ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿನಿ ರಹಮತುನ್ನಿಸಾ ಬೆಂಗಳೂರು ವಿಶ್ವವಿದ್ಯಾಲಯ 55ನೇ ಘಟಿಕೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

ಬೆಂಗಳೂರು [ಜ.04]:  ನಗರದ ಕ್ಲೇವ್‌ಲ್ಯಾಂಡ್‌ಟೌನ್‌ ಬಿಬಿಎಂಪಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2016-19ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿನಿ ರಹಮತುನ್ನಿಸಾ ಬೆಂಗಳೂರು ವಿಶ್ವವಿದ್ಯಾಲಯ 55ನೇ ಘಟಿಕೋತ್ಸವ ಅಂಗವಾಗಿ ಸಿದ್ಧಪಡಿಸಿರುವ ಬಿ.ಕಾಂ ಪದವಿ ಕೋರ್ಸ್‌ನ ತಾತ್ಕಾಲಿಕ ಶ್ರೇಣಿ ಪಟ್ಟಿಯಲ್ಲಿ ಪ್ರಥಮ ರ‌್ಯಾಂಕ್ ಪಡೆದಿದ್ದಾರೆ.

ಇದೇ ಮೊದಲ ಬಾರಿಗೆ ಬಿಬಿಎಂಪಿ ಕಾಲೇಜಿನಲ್ಲಿ ವಿಶ್ವವಿದ್ಯಾಲಯ ರ‌್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ವಿಶೇಷವಾಗಿದೆ. ಒಟ್ಟಾರೆ ಆರು ಸೆಮಿಸ್ಟರ್‌ಗಳಿಂದ 4600 ಅಂಕಗಳಿಗೆ 4226 ಅಂಕ (ಶೇ.91.87) ಪಡೆದಿದ್ದಾರೆ.

ಈ ಕುರಿತು ಮಾತನಾಡಿದ ವಿದ್ಯಾರ್ಥಿನಿ ರಹಮತ್ತುನ್ನಿಸಾ, ಮೊದಲ ರ‌್ಯಾಂಕ್ ಪಡೆಯಲು ಸಹಕರಿಸಿದ ನನ್ನ ತಾಯಿ, ಪ್ರಾಂಶುಪಾಲರಾದ ಆನಂದ್‌ ಹಾಗೂ ಪ್ರಾಧ್ಯಾಪಕರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಯಾವುದೇ ಟ್ಯೂಷನ್‌ಗೆ ಹೋಗದೆ ಕಾಲೇಜಿನಲ್ಲಿ ಮಾಡಿದ ಪಾಠದಿಂದಲೇ ಪ್ರಥಮ ರ‌್ಯಾಂಕ್ ಪಡೆದಿರುವುದರಿಂದ ತುಂಬಾ ಖುಷಿಯಾಗುತ್ತಿದೆ. ಪಿಯುಸಿ ಕೂಡ ಇದೇ ಕಾಲೇಜಿನಲ್ಲಿ ಓದಿದ್ದು ಶೇ.96ರಷ್ಟುಅಂಕ ಗಳಿಸಿದ್ದೆ ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ನಮ್ಮ ಮನೆಯಲ್ಲಿ ನಾಲ್ಕು ಮಕ್ಕಳ ಪೈಕಿ ಅಣ್ಣಂದಿರು ಹಾಗೂ ಅಕ್ಕ ಪಿಯುಸಿ ಅಷ್ಟೇ ಓದಿದ್ದಾರೆ. ತಾಯಿ ಬಹಳ ಕಷ್ಟಪಟ್ಟು ಓದಿಸಿದ್ದಾರೆ. ಸದ್ಯ ಸೆಂಟ್ರಲ್‌ ಕಾಲೇಜಿನಲ್ಲಿ ಎಂ.ಕಾಂ ವ್ಯಾಸಂಗ ಮಾಡುತ್ತಿದ್ದೇನೆ. ಲೆಕ್ಕಾಧಿಕಾರಿ (ಸಿಎ) ಮಾಡಬೇಕೆಂಬ ಗುರಿ ಹೊಂದಿದ್ದೆ. ಈಗ ಐಎಎಸ್‌ ಬರೆಯಬೇಕೆಂದು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.

ಬಿಬಿಎಂಪಿ ಕಾಲೇಜು ಆಗಿದ್ದರೂ ಯಾವುದೇ ಖಾಸಗಿ ಕಾಲೇಜುಗಳಿಗಿಂತ ಸೌಲಭ್ಯ ಹಾಗೂ ಬೋಧನೆಯಲ್ಲಿ ಕಡಿಮೆ ಇಲ್ಲ. ಉತ್ತಮವಾದ ಸೌಲಭ್ಯಗಳು ಹಾಗೂ ಬೋಧನಾ ಗುಣಮಟ್ಟಇರುವುದರಿಂದಲೇ ನಾನು ಮೊದಲ ರಾರ‍ಯಂಕ್‌ ಪಡೆದುಕೊಳ್ಳಲು ಸಾಧ್ಯವಾಯಿತು. ಆದ್ದರಿಂದ ಪೋಷಕರು ಸರ್ಕಾರಿ ಶಾಲಾ- ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣವಿಲ್ಲವೆಂದು ಪೂರ್ವಾಗ್ರಹ ಪೀಡಿತರಾಗುವುದನ್ನು ಮೊದಲು ಬಿಡಬೇಕು ಎಂದು ಎಂದು ಹೇಳಿದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಶುಕ್ರವಾರ ಕಾಲೇಜಿಗೆ ಭೇಟಿ ಕಾಲೇಜು ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿನಿಗೆ ಅಭಿನಂದನೆ ಸಲ್ಲಿಸಿದರು.

ರಾರ‍ಯಂಕ್‌ಪಟ್ಟಿ:  ಕೋಲಾರದ ದಾನಮ್ಮ ಚೆನ್ನಬಸವಯ್ಯ ಕಲೆ, ವಿಜ್ಞಾನ, ವಾಣಿಜ್ಯ ನಿರ್ವಹಣಾ ಕಾಲೇಜಿನ ಕೆ.ಚೈತ್ರ ದ್ವೀತಿಯ ರಾರ‍ಯಂಕ್‌ಗಳಿಸಿದ್ದಾರೆ. ಸೆಂಟ್‌ ಆನ್ಸ್‌ ಕಾಲೇಜಿನ ವಿದ್ಯಾರ್ಥಿನಿ ಆರ್‌.ಅರ್ಫಾ ಸೈಯಾದ್‌(3ನೇ ರಾರ‍ಯಂಕ್‌), ಎಂ.ಎನ್‌.ಪದವಿ ಕಾಲೇಜಿನ ವಿದ್ಯಾರ್ಥಿನಿ ಜೆ.ಸಂಗೀತಾ(4ನೇ ರಾರ‍ಯಂಕ್‌), ಶೇಷಾದ್ರಿಪುರ ಕಲೆ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ ರಿತು ನಾಯರ್‌(5ನೇ ರಾರ‍ಯಂಕ್‌) ಪಡೆದಿದ್ದಾರೆ.

ರಹಮತುನ್ನಿಸಾ ಬಿಕಾಂ.ನಲ್ಲಿ ಪ್ರಥಮ ರಾರ‍ಯಂಕ್‌ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇಂತಹ ಪ್ರತಿಭೆಗಳು ಪ್ರಕಾಶಿಸಿದಾಗ ಸರ್ಕಾರಿ ಕಾಲೇಜುಗಳಲ್ಲಿಯೂ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂದು ತಿಳಿಯುವ ಜತೆಗೆ ಸರ್ಕಾರಿ ಕಾಲೇಜುಗಳ ಬಗ್ಗೆ ಪೋಷಕರಲ್ಲಿರುವ ಮನೋಭಾವ ಬದಲಾಗಲಿದೆ.’

-ಆನಂದ್‌, ಪ್ರಾಂಶುಪಾಲರು, ಕ್ಲೇವ್‌ಲ್ಯಾಂಡ್‌ಟೌನ್‌ ಬಿಬಿಎಂಪಿ ಪ್ರಥಮ ದರ್ಜೆ ಕಾಲೇಜು.

click me!