ವಿನಯ್ ಗುರೂಜಿ ರಸ್ತೆ ನಾಮ ಫಲಕ ತೆರವುಗೊಳಿಸಿದ ಬಿಬಿಎಂಪಿ!

By Kannadaprabha NewsFirst Published Dec 18, 2019, 8:02 AM IST
Highlights

ವಿನಯ್ ಗುರೂಜಿ ರಸ್ತೆ ನಾಮ ಫಲಕ ತೆರವುಗೊಳಿಸಿದ ಬಿಬಿಎಂಪಿ!| ಅನಧಿಕೃತವಾಗಿ ಹಾಕಲಾಗಿದ್ದ ನಾಮಫಲಕ

ಬೆಂಗಳೂರು[ಡಿ.18]: ನಗರದ ಉತ್ತರಹಳ್ಳಿಯಲ್ಲಿರುವ ವಿನಯ್ ಗುರೂಜಿ ಆಶ್ರಮಕ್ಕೆ ಹೋಗುವ ರಸ್ತೆಗೆ ಅನಧಿಕೃತವಾಗಿ ‘ವಿನಯ್ ಗುರೂಜಿ’ ರಸ್ತೆ ಎಂದು ಹಾಕಲಾಗಿದ್ದ ನಾಮ ಫಲಕವನ್ನು ಬಿಬಿಎಂಪಿ ಅಧಿಕಾರಿಗಳು ಮಂಗಳವಾರ ತೆರವುಗೊಳಿಸಿದರು.

ಉತ್ತರಹಳ್ಳಿಯ ಸ್ಮಶಾನಕ್ಕೆ ಹೋಗವ ರಸ್ತೆ ಯಲ್ಲಿರುವ ವಿನಯ್ ಗುರೂಜಿ ಆಶ್ರಮದ ರಸ್ತೆಯ ಅಗಲೀಕರಣಕ್ಕೆ ವಿನಯ್ ಗುರೂಜಿ ಭಕ್ತ ಹೇಮಂತ್ ಎಂಬುವವರು 20 ಅಡಿ ಅಗಲ, 400 ಅಡಿ ಮೀಟರ್ ಉದ್ದದ ನಿವೇಶನವನ್ನು ಬಿಟ್ಟುಕೊಟ್ಟು ವಿಶಾಲವಾದ ರಸ್ತೆ ನಿರ್ಮಿಸಿದ್ದರು. ಅದಕ್ಕೆ ವಿನಯ್ ಗುರೂಜಿ ರಸ್ತೆ ಎಂದು ನಾಮಫಲಕ ಸಹ ಅಳವಡಿಕೆ ಮಾಡಿದ್ದರು. ನಾಮಫಲಕದಲ್ಲಿ ಉತ್ತರಹಳ್ಳಿ ವಾರ್ಡ್‌ನ ಸ್ಥಳೀಯ ಪಾಲಿಕೆ ಸದಸ್ಯ ಹನುಮಂತಯ್ಯ ಹೆಸರು ಸೇರಿದಂತೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಹೆಸರನ್ನು ಕೆತ್ತನೆ ಮಾಡಿಸಲಾಗಿತ್ತು.

ಬಿಬಿಎಂಪಿ ಮತ್ತು ಸರ್ಕಾರದಿಂದ ಅನುಮೋದನೆ ಪಡೆದುಕೊಳ್ಳಬೇಕು. ಆದರೆ, ಅನುಮೋದನೆ ಪಡೆದುಕೊಳ್ಳದ ಹಿನ್ನೆಲೆಯಲ್ಲಿ ಅಧಿಕಾರಿಗಳು ಫಲಕವನ್ನು ತೆರವುಗೊಳಿಸಿದ್ದಾರೆ.

ಮರುನಾಮಕರಣ: ವಿನಯ್ ಗುರೂಜಿ ರಸ್ತೆ ಎಂದು ನಾಮಕರಣ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಬುಧವಾರ ಶಾಸಕ ಎಂ.ಕೃಷ್ಣಪ್ಪ, ಪಾಲಿಕೆ ಸದಸ್ಯ ಹನುಮಂತಯ್ಯ, ಸ್ಥಳೀಯರು ಸೇರಿ ವಿನಯ್ ಗುರೂಜಿ ಆಶ್ರಮಕ್ಕೆ ಹೋಗುವ ರಸ್ತೆ ಎಂದು ಮರು ನಾಮಕರಣ ಮಾಡುವುದಕ್ಕೆ ಮುಂದಾಗಿದ್ದಾರೆ.

click me!