
ವಿಜಯಪುರ (ಏ.21): ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಕಟ್ಟುವ ವಿಚಾರ ಮಾಡುವೆ, ಪ್ರಾದೇಶಿಕ ಪಕ್ಷ ಕಟ್ಟುವ ಚಿಂತನೆ ಆರಂಭವಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ ನಲ್ಲಿ ಒಳ್ಳೆಯ ದಿನದಂದು ಕೆಲಸ ಆರಂಭಿಸಿ, ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಗೆ ಭೇಟಿ ನೀಡುವೆ. ಹಿಂದೂಪರ ಸಂಘಟನೆಗಳ, ನಿರುದ್ಯೋಗಿ ಯುವಕರ ಭೇಟಿ ಮಾಡುವೆ. ಮರಳಿ ಬಿಜೆಪಿಗೆ ಹೋಗುವುದನ್ನ ನೋಡೋಣ ಎಂದು ಹೇಳಿದರು.
ಜಿಲ್ಲಾವಾರು ಎಲ್ಲಾ ಹಿಂದೂಗಳ ಸಭೆ ಮಾಡುತ್ತೇವೆ. ಕೋಲಾರ ಜಿಲ್ಲೆಯ ವಿಘ್ನೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತೇನೆ. ಇಡೀ ರಾಜ್ಯದ ಪ್ರವಾಸ ಮಾಡುತ್ತೇನೆ. ಹಿಂದುತ್ವ, ಉದ್ಯೋಗ ಹಾಗೂ ಅಭಿವೃದ್ಧಿ ಮೂರು ಉದ್ದೇಶಗಳಿವೆ ಎಂದ ಅವರು, ಜೆಸಿಬಿ ಅಥವಾ ಬುಲ್ಡೋಜರ್ ಚಿಹ್ನೆನಾ ಎಂಬ ಪ್ರಶ್ನೆಗೆ, ಚುಣಾವಣಾ ಆಯೋಗ ಏನು ನೀಡುತ್ತೋ ನೋಡೋಣ. ಇಡೀ ರಾಜ್ಯದಲ್ಲಿ ಮೊದಲು ಎಲ್ಲರ ಅಭಿಪ್ರಾಯ ಪಡೆಯುವೆ. ನಂತರ ಏನು ಮಾಡಬೇಕೆಂದು ತೀರ್ಮಾನ ಮಾಡುವೆ ಎಂದು ಯತ್ನಾಳ ಹೇಳಿದರು.
ಕಾಂಗ್ರೆಸ್ ಹೈಕಮಾಂಡ್ನಲ್ಲಿ ಟೆಂಡರ್ ನಡೆದಿದೆ. ಸಿದ್ದರಾಮಯ್ಯನವರು ಎಷ್ಟು ಕೊಡುತ್ತಾರೆ, ಡಿ.ಕೆ.ಶಿವಕುಮಾರ್ ಎಷ್ಟು ಕೊಡುತ್ತಾರೆ ಎಂದು ಟೆಂಡರ್ ನಡೆದಿದೆ. ಟೆಂಡರ್ ಬಿಡ್ ನಡೆದಿದೆ. ಇನ್ನೂ ಫೈನಲ್ ಆಗಿಲ್ಲ. ಫೈನಲ್ ಆದ ಮೇಲೆ ರಾಹುಲ್ ಗಾಂಧಿ ಅವರು ಪ್ರಕಟ ಮಾಡುತ್ತಾರೆ ಎಂದರು. ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ ಎಂಬ ರಾಜಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರು ಹೇಳಿರುವುದು ನೂರಕ್ಕೆ ನೂರು ಸತ್ಯ ಇದೆ.
ನನ್ನ ಹಾಗೆ ಕಾಂಗ್ರೆಸ್ ಪಕ್ಷದಲ್ಲಿ ರಾಜಣ್ಣ ಅವರು ನೇರವಾಗಿ ಮಾತನಾಡುತ್ತಾರೆ. ಸಿದ್ದರಾಮಯ್ಯನವರು ಮೊದಲಿನ ಸಿದ್ದರಾಮಯ್ಯ ಇಲ್ಲ, ತಮ್ಮ ಬೆಂಬಲಿಗರ ರಕ್ಷಣೆ ಮಾಡುತ್ತಿಲ್ಲ. ಜನರ ನಿರೀಕ್ಷೆಗೆ ತಕ್ಕಂತೆ ಸರ್ಕಾರವನ್ನು ಸಿದ್ದರಾಮಯ್ಯನರು ಕೊಡಲಿಲ್ಲ ಎಂದರು. ಬಾಗಲಕೋಟೆ ಹಾಗೂ ದಾವಣಗೆರೆ ಎರಡೂ ಕಡೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಶುಭ ಸೂಚನೆ ಇದೆ. ಅಲ್ಲಿ ಸಾಬರು ಕಾಂಗ್ರೆಸ್ಗೆ ಬುದ್ಧಿ ಕಲಿಸಬೇಕಿದೆ.
ಇದರ ಕ್ರೆಡಿಟ್ ಬಿಜೆಪಿಗೆ ಸಿಗುತ್ತದೆ. ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಸಂಪೂರ್ಣ ವಿಫಲವಾಗಿದೆ ಎಂದ ಅವರು, ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ವಿರೋಧ ಮಾಡುತ್ತಿದೆ ಎಂಬುದು ಜಗತ್ತಿಗೆ ಗೊತ್ತಾಯಿತು. ಮುಂದಿನ ಲೋಕಸಭೆ ಹಾಗೂ ವಿಧಾನ ಸಭೆಯಲ್ಲಿ ಮಹಿಳೆಯರು ತಕ್ಕ ಪಾಠ ಕಲಿಸುತ್ತಾರೆ. ಮಹಿಳಾ ಮೀಸಲಾತಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷದ ಬಣ್ಣ ಬಯಲು ಮಾಡಿದ್ದಾರೆ ಎಂದು ಹೇಳಿದರು.