ಅತ್ತೆ ಕಿರುಕುಳಕ್ಕೆ 3 ಮುದ್ದಾದ ಮಕ್ಕಳನ್ನು ನೇಣಿಗೇರಿಸಿ ಕೊಲೆಗೈದ ತಾಯಿ; ಹೊಟ್ಟೆತುಂಬಾ ಡೀಸೆಲ್ ಕುಡಿದ ಮಲಗಿದಳು!

Published : Feb 01, 2026, 05:21 PM IST
Bagalkote mother kills 3 children

ಸಾರಾಂಶ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ, ಅತ್ತೆಯ ಕಿರುಕುಳದಿಂದ ಬೇಸತ್ತ ತಾಯಿಯೊಬ್ಬಳು ತನ್ನ ಮೂವರು ಮುಗ್ಧ ಮಕ್ಕಳನ್ನು ನೇಣು ಬಿಗಿದು ಕೊಲೆ ಮಾಡಿದ್ದಾಳೆ. ನಂತರ ತಾನೂ ಡೀಸೆಲ್ ಕುಡಿದು ಆತ್ಮ*ಹತ್ಯೆಗೆ ಯತ್ನಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಬಾಗಲಕೋಟೆ (ಫೆ.01): ಕೌಟುಂಬಿಕ ಕಲಹ ಮತ್ತು ಅತ್ತೆ-ಸೊಸೆಯ ಜಗಳವು ಹಸುಳೆಗಳ ಪ್ರಾಣಕ್ಕೆ ಕುತ್ತು ತಂದಿದ್ದು, ಮೂರು ಮುಗ್ಧ ಮಕ್ಕಳನ್ನು ಸ್ವತಃ ತಾಯಿಯೇ ನೇಣು ಬಿಗಿದು ಕೊಲೆಗೈದು, ತಾನೂ ಆತ್ಮ*ಹತ್ಯೆಗೆ ಯತ್ನಿಸಿದ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ.

ಘಟನೆಯ ವಿವರ

ರೂಪಾ ಹನುಮಂತಗೌಡರ (27) ಎಂಬುವವರೇ ಈ ಕೃತ್ಯ ಎಸಗಿದ ಗೃಹಿಣಿ. ಇವರು ತಮ್ಮ ಮೂರು ಮಕ್ಕಳಾದ ಸಮೃದ್ಧಿ (5), ಪ್ರೀತಮ್ (4) ಮತ್ತು ಸುಕ್ಷಿತ್ (2) ಅವರನ್ನು ಮನೆಯ ಜಂತಿಗೆ ನೇಣು ಹಾಕಿ ಕೊಲೆ ಮಾಡಿದ್ದಾರೆ. ಮಕ್ಕಳ ಪ್ರಾಣ ಹೋದ ನಂತರ ತಾನೂ ಸಾಯಬೇಕೆಂಬ ನಿರ್ಧಾರದಿಂದ ರೂಪಾ ಅವರು ಡೀಸೆಲ್ ಕುಡಿದು ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ರೂಪಾ ಪ್ರಾಣಾಪಾಯದಿಂದ ಪಾರಾಗಿದ್ದು, ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಮೂವರು ಮುಗ್ಧ ಮಕ್ಕಳು ಪ್ರಾಣ ಕಳೆದುಕೊಂಡಿರುವುದು ನೋಡುಗರ ಎದೆಯನ್ನೇ ನಡುಗಿಸುವಂತಿದೆ.

ಅತ್ತೆಯ ಕಿರುಕುಳವೇ ಕಾರಣ?

ಪ್ರಾಥಮಿಕ ಮಾಹಿತಿಯ ಪ್ರಕಾರ, ಅತ್ತೆ ರೇಣವ್ವ ಅವರ ಕಿರುಕುಳವೇ ಈ ದುರಂತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. 2018ರ ಡಿಸೆಂಬರ್ 10ರಂದು ಹನುಮಂತ ಗೌಡರ ಜೊತೆ ರೂಪಾ ಅವರ ವಿವಾಹವಾಗಿತ್ತು. ಹನುಮಂತ ಅವರು ಬಾದಾಮಿಯ ಫೈನಾನ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಸಂಸಾರ ಸಾಗಿಸುತ್ತಿದ್ದರು. ಆದರೆ, ಮದುವೆಯಾದಾಗಿನಿಂದಲೂ ಅತ್ತೆ ರೇಣವ್ವ ಮತ್ತು ಸೊಸೆ ರೂಪಾ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇತ್ತೀಚೆಗೆ ಈ ಜಗಳ ಮಿತಿಮೀರಿತ್ತು. ಅತ್ತೆಯ ನಿತ್ಯದ ಕಿರುಕುಳ ಮತ್ತು ಮಾನಸಿಕ ಹಿಂಸೆಯಿಂದ ಬೇಸತ್ತ ರೂಪಾ, ಜೀವನದಲ್ಲಿ ಜಿಗುಪ್ಸೆಗೊಂಡು ಈ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಗ್ರಾಮಸ್ಥರ ಆಕ್ರೋಶ

ತಾಯಿ ಮತ್ತು ಮಕ್ಕಳ ಮರಣದ ಸುದ್ದಿ ತಿಳಿಯುತ್ತಿದ್ದಂತೆ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ದಾರಿಗಳಿದ್ದರೂ, ಏನೂ ಅರಿಯದ ಪುಟ್ಟ ಮಕ್ಕಳನ್ನು ಬಲಿ ಪಡೆದ ತಾಯಿಯ ನಿರ್ಧಾರಕ್ಕೆ ಮತ್ತು ಇದಕ್ಕೆ ಕಾರಣರಾದವರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ತನಿಖೆ

ಘಟನೆ ನಡೆದ ಸ್ಥಳಕ್ಕೆ ಬಾದಾಮಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿ ರೂಪಾ ಅವರ ಹೇಳಿಕೆಯನ್ನು ಆಧರಿಸಿ ಹಾಗೂ ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ತನಿಖೆಯ ನಂತರವಷ್ಟೇ ಸತ್ಯಾಸತ್ಯತೆ ಸಂಪೂರ್ಣವಾಗಿ ಹೊರಬರಬೇಕಿದೆ. ಒಟ್ಟಾರೆಯಾಗಿ, ಮನೆಯಳಗಿನ ಜಗಳ ಬೀದಿಗೆ ಬರುವ ಮುನ್ನವೇ ಮೂರು ಅಮಾಯಕ ಜೀವಗಳನ್ನು ಬಲಿಪಡೆದಿರುವುದು ವಿಪರ್ಯಾಸವೇ ಸರಿ.

PREV
Read more Articles on
click me!

Recommended Stories

ತಿಂಥಣಿಯಲ್ಲಿ ನುಡಿನಮನ: ಶ್ರೀಗಳ ಗದ್ದುಗೆಗೆ ಸಿಎಂ ಪುಷ್ಪ ನಮನ, ಜಾತಿ ಗಣತಿ ಬಗ್ಗೆ ಬಿಗ್ ಅಪ್‌ಡೇಟ್!
ಕೈ ಬಿಡಿ ಎಂದರೂ ಬಿಡದೆ ಎಳೆದಾಡಿ ಪುಂಡರು, ಲೇಡಿ ಸಿಪಿಐ ಮೇಲೆ ಅಸಭ್ಯವಾಗಿ ವರ್ತಿಸಿದ ಹುಸೇನ್ ಗ್ಯಾಂಗ್ ವಿಡಿಯೋ ವೈರಲ್!