
ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ತನಿಖಾ ಇಲಾಖೆ (ಸಿಐಡಿ) ತನಿಖೆಯನ್ನು ತೀವ್ರಗೊಳಿಸಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಬರೋಬ್ಬರಿ ₹38,28,51,580 ರೂಪಾಯಿಗಳ ಬೆಳೆ ವಿಮೆ ಹಣ ದುರುಪಯೋಗವಾಗಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ಸಿಐಡಿ ಅಧಿಕಾರಿಗಳ ತಂಡವು ತನಿಖೆಯ ಭಾಗವಾಗಿ ಮುಧೋಳ ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಫಸಲ್ ಭೀಮಾ ಯೋಜನೆಯಡಿ ವಿಮೆ ಪರಿಹಾರ ಹಣ ಪಡೆದಿರುವ ರೈತರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಮುಂಚಿತವಾಗಿ ನೋಟೀಸ್ ಜಾರಿಗೊಳಿಸಿತ್ತು. ನೋಟೀಸ್ ಸ್ವೀಕರಿಸಿದ ರೈತರು ಮುಧೋಳ ನಗರದ ಸರಕಾರಿ ಪ್ರವಾಸಿ ಮಂದಿರದಲ್ಲಿ ವಿಚಾರಣೆಗೆ ಖುದ್ದು ಹಾಜರಾಗಿದ್ದರು. ಸಿಐಡಿ ಅಧಿಕಾರಿಗಳು ವಿಮೆ ಪರಿಹಾರ ಪಡೆದ ಪ್ರತಿಯೊಬ್ಬ ರೈತರನ್ನು ಪ್ರತ್ಯೇಕವಾಗಿ ಕರೆದು, ಅವರ ಬ್ಯಾಂಕ್ ಖಾತೆಗೆ ಜಮೆಯಾದ ಹಣ, ಸಲ್ಲಿಸಲಾದ ದಾಖಲೆಗಳು ಹಾಗೂ ಜಮೀನಿನ ಬೆಳೆ ವಿವರಗಳ ಕುರಿತು ಸುದೀರ್ಘ ಮಾಹಿತಿ ಸಂಗ್ರಹಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯಾದ್ಯಂತ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ವ್ಯಾಪಕ ಗೋಲ್ಮಾಲ್ ನಡೆದಿದೆ ಎಂಬ ದೂರುಗಳು ದಾಖಲಾಗಿದ್ದವು. ಜಮೀನಿನಲ್ಲಿ ಯಾವುದೇ ಬೆಳೆ ಇರದಿದ್ದರೂ ಅಥವಾ ಬೆಳೆ ಹಾನಿಯಾಗದಿದ್ದರೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರಕಾರದ ಬೆಳೆ ವಿಮೆ ಹಣವನ್ನು ಅಕ್ರಮವಾಗಿ ಪಡೆಯಲಾಗಿದೆ ಎಂಬುದು ಮುಖ್ಯ ಆರೋಪವಾಗಿದೆ. ತನಿಖಾ ಮೂಲಗಳ ಪ್ರಕಾರ, ಗ್ರಾಮೀಣ ಭಾಗಗಳಲ್ಲಿ ಸಕ್ರಿಯವಾಗಿದ್ದ ಕೆಲವು ಏಜೆಂಟರ ಜಾಲವು ರೈತರ ಹೆಸರು ಮತ್ತು ದಾಖಲೆಗಳನ್ನು ಬಳಸಿಕೊಂಡು ಈ ಅಕ್ರಮ ಎಸಗಿದೆ ಎನ್ನಲಾಗಿದೆ.
ಗ್ರಾಮ ಮಟ್ಟದಲ್ಲಿದ್ದ ಏಜೆಂಟರು ರೈತರಿಂದ ಪಹಣಿ (RTC), ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಸಂಗ್ರಹಿಸುತ್ತಿದ್ದರು. ಜಮೀನಿನಲ್ಲಿ ಬೆಳೆ ಬೆಳೆಯದೇ ಇದ್ದರೂ ಅಥವಾ ಬೇರೆ ಜಮೀನಿನ ಹಸಿರು ಬೆಳೆಗಳ ನಕಲಿ ಫೋಟೋಗಳನ್ನು ಸಿಸ್ಟಮ್ಗೆ ಅಪ್ಲೋಡ್ ಮಾಡಲಾಗುತ್ತಿತ್ತು ಎನ್ನಲಾಗಿದೆ. ಇದಲ್ಲದೇ ಬೆಳೆ ನಷ್ಟವಾಗಿದೆ ಎಂದು ಬಿಂಬಿಸಲು ನಕಲಿ ಬೆಳೆ ಸರ್ವೇ ವರದಿಗಳನ್ನು ಸಿದ್ಧಪಡಿಸಿ, ವಿಮೆ ಕಂಪನಿ ಮತ್ತು ಸರಕಾರದಿಂದ ಪರಿಹಾರ ಮೊತ್ತ ಬಿಡುಗಡೆಯಾಗುವಂತೆ ಮಾಡಲಾಗಿತ್ತು ಎಂಬ ಗಂಭೀರ ಆರೋಪಗಳಾಗಿವೆ.
ಪರಿಹಾರದ ರೂಪದಲ್ಲಿ ಬಿಡುಗಡೆಯಾದ ₹38 ಕೋಟಿಗೂ ಹೆಚ್ಚಿನ ಹಣದಲ್ಲಿ ನೈಜ ಫಲಾನುಭವಿಗಳಿಗೆ ತಲುಪಿದ್ದು ಎಷ್ಟು, ನಕಲಿ ದಾಖಲೆ ಸೃಷ್ಟಿಸಿ ದುರುಪಯೋಗಪಡಿಸಿಕೊಂಡಿದ್ದು ಎಷ್ಟು ಎಂಬ ಬಗ್ಗೆ ಸಿಐಡಿ ಪ್ರಸ್ತುತ ಕೂಲಂಕುಷವಾಗಿ ಪರಿಶೀಲಿಸುತ್ತಿದೆ. ರೈತರ ಹೆಸರಿನಲ್ಲಿ ಹಣವನ್ನು ಪಡೆಯಲಾಗಿದೆಯೇ ಅಥವಾ ರೈತರಿಗೂ ಈ ಅಕ್ರಮಕ್ಕೂ ನೇರ ಸಂಬಂಧವಿದೆಯೇ ಎಂಬುದನ್ನು ಪತ್ತೆಹಚ್ಚುವುದು ಈ ತನಿಖೆಯ ಪ್ರಮುಖ ಭಾಗವಾಗಿದೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ರಾಜ್ಯ ಸರಕಾರವು ಸಂಪೂರ್ಣ ತನಿಖೆಯ ಹೊಣೆಯನ್ನು ಸಿಐಡಿಗೆ ವಹಿಸಿತ್ತು. ತನಿಖಾಧಿಕಾರಿಗಳು ಬ್ಯಾಂಕ್ ದಾಖಲೆಗಳು, ವಿಮೆ ಅರ್ಜಿಗಳು ಮತ್ತು ಬೆಳೆ ಸರ್ವೇ ದತ್ತಾಂಶಗಳನ್ನು ತಾಳೆ ನೋಡಿ ಪರಿಶೀಲಿಸುತ್ತಿದ್ದಾರೆ. ಈ ಹಗರಣದ ಹಿಂದೆ ಯಾರ್ಯಾರ ಪಾತ್ರವಿದೆ, ಅಧಿಕಾರಿಗಳು ಅಥವಾ ಮಧ್ಯವರ್ತಿಗಳ ಕುಮ್ಮಕ್ಕು ಇದೆಯೇ ಎಂಬ ವಿವರಗಳು ಸಿಐಡಿ ತನಿಖೆಯ ಅಂತಿಮ ವರದಿ ಸಲ್ಲಿಕೆಯಾದ ಬಳಿಕವಷ್ಟೇ ಸ್ಪಷ್ಟವಾಗಲಿವೆ. ಪ್ರಸ್ತುತ ಸಿಐಡಿ ಅಧಿಕಾರಿಗಳು ಸಂಗ್ರಹಿಸಿರುವ ದಾಖಲೆಗಳು ಹಾಗೂ ರೈತರ ಹೇಳಿಕೆಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಿದ್ದಾರೆ.