Crop Insurance: ಬೆಳೆಯೇ ಇಲ್ಲದ ಜಮೀನಿಗೆ ವಿಮೆ ಹಣ: ₹38 ಕೋಟಿ ಫಸಲ್ ಭೀಮಾ ಹಗರಣಕ್ಕೆ ಸಿಐಡಿ ಎಂಟ್ರಿ!

Published : Aug 21, 2026, 10:30 PM IST
PMFBY

ಸಾರಾಂಶ

ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾದ ₹38 ಕೋಟಿಗೂ ಅಧಿಕ ಮೊತ್ತದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಕ್ರಮದ ತನಿಖೆಯನ್ನು ಸಿಐಡಿ ಚುರುಕುಗೊಳಿಸಿದೆ. ನಕಲಿ ದಾಖಲೆ ಸೃಷ್ಟಿಸಿ ವಿಮೆ ಹಣ ಪಡೆದ ಆರೋಪದ ಮೇಲೆ, ಅಧಿಕಾರಿಗಳು ಮುಧೋಳದಲ್ಲಿ ರೈತರನ್ನು ವಿಚಾರಣೆ ನಡೆಸುತ್ತಿದ್ದು, ಅಕ್ರಮದ ಹಿಂದಿರುವ ಜಾಲವನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.

ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ತನಿಖಾ ಇಲಾಖೆ (ಸಿಐಡಿ) ತನಿಖೆಯನ್ನು ತೀವ್ರಗೊಳಿಸಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಬರೋಬ್ಬರಿ ₹38,28,51,580 ರೂಪಾಯಿಗಳ ಬೆಳೆ ವಿಮೆ ಹಣ ದುರುಪಯೋಗವಾಗಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ಸಿಐಡಿ ಅಧಿಕಾರಿಗಳ ತಂಡವು ತನಿಖೆಯ ಭಾಗವಾಗಿ ಮುಧೋಳ ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಸಿಐಡಿಯಿಂದ ನೋಟಿಸ್!

ಫಸಲ್ ಭೀಮಾ ಯೋಜನೆಯಡಿ ವಿಮೆ ಪರಿಹಾರ ಹಣ ಪಡೆದಿರುವ ರೈತರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಮುಂಚಿತವಾಗಿ ನೋಟೀಸ್ ಜಾರಿಗೊಳಿಸಿತ್ತು. ನೋಟೀಸ್ ಸ್ವೀಕರಿಸಿದ ರೈತರು ಮುಧೋಳ ನಗರದ ಸರಕಾರಿ ಪ್ರವಾಸಿ ಮಂದಿರದಲ್ಲಿ ವಿಚಾರಣೆಗೆ ಖುದ್ದು ಹಾಜರಾಗಿದ್ದರು. ಸಿಐಡಿ ಅಧಿಕಾರಿಗಳು ವಿಮೆ ಪರಿಹಾರ ಪಡೆದ ಪ್ರತಿಯೊಬ್ಬ ರೈತರನ್ನು ಪ್ರತ್ಯೇಕವಾಗಿ ಕರೆದು, ಅವರ ಬ್ಯಾಂಕ್ ಖಾತೆಗೆ ಜಮೆಯಾದ ಹಣ, ಸಲ್ಲಿಸಲಾದ ದಾಖಲೆಗಳು ಹಾಗೂ ಜಮೀನಿನ ಬೆಳೆ ವಿವರಗಳ ಕುರಿತು ಸುದೀರ್ಘ ಮಾಹಿತಿ ಸಂಗ್ರಹಿಸಿದ್ದಾರೆ.

ಪ್ರಕರಣದ ಹಿನ್ನೆಲೆ ಮತ್ತು ಆರೋಪಗಳು!

ಬಾಗಲಕೋಟೆ ಜಿಲ್ಲೆಯಾದ್ಯಂತ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ವ್ಯಾಪಕ ಗೋಲ್‌ಮಾಲ್ ನಡೆದಿದೆ ಎಂಬ ದೂರುಗಳು ದಾಖಲಾಗಿದ್ದವು. ಜಮೀನಿನಲ್ಲಿ ಯಾವುದೇ ಬೆಳೆ ಇರದಿದ್ದರೂ ಅಥವಾ ಬೆಳೆ ಹಾನಿಯಾಗದಿದ್ದರೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರಕಾರದ ಬೆಳೆ ವಿಮೆ ಹಣವನ್ನು ಅಕ್ರಮವಾಗಿ ಪಡೆಯಲಾಗಿದೆ ಎಂಬುದು ಮುಖ್ಯ ಆರೋಪವಾಗಿದೆ. ತನಿಖಾ ಮೂಲಗಳ ಪ್ರಕಾರ, ಗ್ರಾಮೀಣ ಭಾಗಗಳಲ್ಲಿ ಸಕ್ರಿಯವಾಗಿದ್ದ ಕೆಲವು ಏಜೆಂಟರ ಜಾಲವು ರೈತರ ಹೆಸರು ಮತ್ತು ದಾಖಲೆಗಳನ್ನು ಬಳಸಿಕೊಂಡು ಈ ಅಕ್ರಮ ಎಸಗಿದೆ ಎನ್ನಲಾಗಿದೆ.

ದಾಖಲೆಗಳ ಸಂಗ್ರಹ!

ಗ್ರಾಮ ಮಟ್ಟದಲ್ಲಿದ್ದ ಏಜೆಂಟರು ರೈತರಿಂದ ಪಹಣಿ (RTC), ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಸಂಗ್ರಹಿಸುತ್ತಿದ್ದರು. ಜಮೀನಿನಲ್ಲಿ ಬೆಳೆ ಬೆಳೆಯದೇ ಇದ್ದರೂ ಅಥವಾ ಬೇರೆ ಜಮೀನಿನ ಹಸಿರು ಬೆಳೆಗಳ ನಕಲಿ ಫೋಟೋಗಳನ್ನು ಸಿಸ್ಟಮ್‌ಗೆ ಅಪ್‌ಲೋಡ್ ಮಾಡಲಾಗುತ್ತಿತ್ತು ಎನ್ನಲಾಗಿದೆ. ಇದಲ್ಲದೇ ಬೆಳೆ ನಷ್ಟವಾಗಿದೆ ಎಂದು ಬಿಂಬಿಸಲು ನಕಲಿ ಬೆಳೆ ಸರ್ವೇ ವರದಿಗಳನ್ನು ಸಿದ್ಧಪಡಿಸಿ, ವಿಮೆ ಕಂಪನಿ ಮತ್ತು ಸರಕಾರದಿಂದ ಪರಿಹಾರ ಮೊತ್ತ ಬಿಡುಗಡೆಯಾಗುವಂತೆ ಮಾಡಲಾಗಿತ್ತು ಎಂಬ ಗಂಭೀರ ಆರೋಪಗಳಾಗಿವೆ.

ತನಿಖೆಯ ಉದ್ದೇಶ ಹಾಗೂ ಪ್ರಸ್ತುತ ಸ್ಥಿತಿ!

ಪರಿಹಾರದ ರೂಪದಲ್ಲಿ ಬಿಡುಗಡೆಯಾದ ₹38 ಕೋಟಿಗೂ ಹೆಚ್ಚಿನ ಹಣದಲ್ಲಿ ನೈಜ ಫಲಾನುಭವಿಗಳಿಗೆ ತಲುಪಿದ್ದು ಎಷ್ಟು, ನಕಲಿ ದಾಖಲೆ ಸೃಷ್ಟಿಸಿ ದುರುಪಯೋಗಪಡಿಸಿಕೊಂಡಿದ್ದು ಎಷ್ಟು ಎಂಬ ಬಗ್ಗೆ ಸಿಐಡಿ ಪ್ರಸ್ತುತ ಕೂಲಂಕುಷವಾಗಿ ಪರಿಶೀಲಿಸುತ್ತಿದೆ. ರೈತರ ಹೆಸರಿನಲ್ಲಿ ಹಣವನ್ನು ಪಡೆಯಲಾಗಿದೆಯೇ ಅಥವಾ ರೈತರಿಗೂ ಈ ಅಕ್ರಮಕ್ಕೂ ನೇರ ಸಂಬಂಧವಿದೆಯೇ ಎಂಬುದನ್ನು ಪತ್ತೆಹಚ್ಚುವುದು ಈ ತನಿಖೆಯ ಪ್ರಮುಖ ಭಾಗವಾಗಿದೆ.

ಪ್ರಕರಣ ಸಿಐಡಿಗೆ ಒಪ್ಪಿಸಿದ ಸರ್ಕಾರ!

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ರಾಜ್ಯ ಸರಕಾರವು ಸಂಪೂರ್ಣ ತನಿಖೆಯ ಹೊಣೆಯನ್ನು ಸಿಐಡಿಗೆ ವಹಿಸಿತ್ತು. ತನಿಖಾಧಿಕಾರಿಗಳು ಬ್ಯಾಂಕ್ ದಾಖಲೆಗಳು, ವಿಮೆ ಅರ್ಜಿಗಳು ಮತ್ತು ಬೆಳೆ ಸರ್ವೇ ದತ್ತಾಂಶಗಳನ್ನು ತಾಳೆ ನೋಡಿ ಪರಿಶೀಲಿಸುತ್ತಿದ್ದಾರೆ. ಈ ಹಗರಣದ ಹಿಂದೆ ಯಾರ್ಯಾರ ಪಾತ್ರವಿದೆ, ಅಧಿಕಾರಿಗಳು ಅಥವಾ ಮಧ್ಯವರ್ತಿಗಳ ಕುಮ್ಮಕ್ಕು ಇದೆಯೇ ಎಂಬ ವಿವರಗಳು ಸಿಐಡಿ ತನಿಖೆಯ ಅಂತಿಮ ವರದಿ ಸಲ್ಲಿಕೆಯಾದ ಬಳಿಕವಷ್ಟೇ ಸ್ಪಷ್ಟವಾಗಲಿವೆ. ಪ್ರಸ್ತುತ ಸಿಐಡಿ ಅಧಿಕಾರಿಗಳು ಸಂಗ್ರಹಿಸಿರುವ ದಾಖಲೆಗಳು ಹಾಗೂ ರೈತರ ಹೇಳಿಕೆಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಿದ್ದಾರೆ.

PREV
Read more Articles on
click me!

Recommended Stories

‘ಜೈಲಿಗೆ ಕಳಿಸ್ತೇನೆ’: ದೇವಸ್ಥಾನ ಅನುದಾನ ದುರ್ಬಳಕೆ ಆರೋಪಕ್ಕೆ ಜನಾರ್ದನ ರೆಡ್ಡಿ ಖಡಕ್ ವಾರ್ನಿಂಗ್!
ವರಮಹಾಲಕ್ಷ್ಮಿ ಸಂಭ್ರಮ: ₹3 ಲಕ್ಷ ಮೌಲ್ಯದ ನೋಟುಗಳ ಅಲಂಕಾರದಲ್ಲಿ ಕಂಗೊಳಿಸಿದ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಿ!