
ಬೆಂಗಳೂರಿನಲ್ಲಿ ಓಲಾ, ಊಬರ್ ಆಟೋಗಳ ದರ ಹೆಚ್ಚಾಗಿದೆ. ಒಂದು ಕಿಮೀಗೆ 60-90 ರೂಪಾಯಿ ಪಡೆಯುತ್ತಿದ್ದಾರೆ. ಹಗಲು ದರೋಡೆ ಮಾಡುತ್ತಿರುವ ಆಟೋಗಳ ವಿರುದ್ಧ ಜನರು ಈ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ. ಹೀಗಿರುವಾಗ ಕರ್ನಾಟಕ ಸಾರಿಗೆ ಇಲಾಖೆಯು ಸೋಮವಾರ ( ಜುಲೈ 1 ) ಅನುಮತಿಯಿಲ್ಲದೆ ಚಲಿಸುತ್ತಿರುವ ಆಟೋ ರಿಕ್ಷಾಗಳು, ಅಧಿಕ ದರ ವಿಧಿಸುವವರ ವಿರುದ್ಧ ಕಾರ್ಯಾಚರಣೆ ಮಾಡಲಾಗಿದೆ. ಇದರಿಂದ 260 ಕಾನೂನು ಪ್ರಕರಣಗಳು ದಾಖಲಾಗಿವೆ. ಅಷ್ಟೇ ಅಲ್ಲದೆ 98 ಆಟೋಗಳನ್ನು ರಸ್ತೆಗೆ ಬರದಂತೆ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಹಗಲು ದರೋಡೆ!
ರೈಡ್-ಹೇಲಿಂಗ್ ಆಪ್ಗಳೊಂದಿಗೆ ಕಂಬೈನ್ ಆಗಿರೋ ಆಟೋ ಚಾಲಕರ ಮೇಲೆ ಕಡಿವಾಣ ಹಾಕಲು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಆದೇಶಿಸಿದ್ದರು. ಹೀಗಾಗಿ ಈ ಬಗ್ಗೆ ನಿರ್ಣಾಯಕ ಕ್ರಮ ಕೈಗೊಳ್ಳಲಾಗಿದೆ. ಈ ವಿಚಾರವಾಗಿ ಸಾರಿಗೆ ಅಧಿಕಾರಿಗಳಿಗೆ, ವಿಶೇಷವಾಗಿ ಸೂಚನೆ ನೀಡಲಾಗಿತ್ತು. ಜೂನ್ 28 ರಂದು ನೀಡಿದ ಆದೇಶದಲ್ಲಿ, ಸಚಿವರು ಆಟೋಗಳು ಅಧಿಕ ದರ ವಿಧಿಸುವುದನ್ನು "ಬೆಳ್ಳಂಬೆಳಗ್ಗಿನ ದರೋಡೆ" ಎಂದು ವಿವರಿಸಿದ್ದರು. ಅಷ್ಟೇ ಅಲ್ಲದೆ ತಪ್ಪಿತಸ್ಥ ಚಾಲಕರ ಲೈಸೆನ್ಸ್ ರದ್ದು ಮಾಡಿ ಎಂದು ಹೇಳಿದ್ದರು.
ಬೆಳಗ್ಗೆ ಕಾರ್ಯಾಚರಣೆ!
ಜೂನ್ 30 ರಂದು ಬೆಳಗ್ಗೆ ಕಾರ್ಯಾಚರಣೆಯು ಆರಂಭವಾಗಿತ್ತು. ಅಕ್ರಮ ಕಾರ್ಯಾಚರಣೆಗಳು, ದರ ಉಲ್ಲಂಘನೆಗಳ ಮೇಲೆ ಕೇಂದ್ರೀಕರಿಸಲಾಗಿತ್ತು. ಈ ತಪಾಸಣೆಗಾಗಿ, ಅಧಿಕಾರಿಗಳು 22 ಕಾರ್ಯಪಡೆಗಳನ್ನು ರಚಿಸಿದ್ದು, ನಗರದಾದ್ಯಂತ ಪ್ರತಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಎರಡು ತಂಡಗಳನ್ನು ನಿಯೋಜಿಸಲಾಗಿತ್ತು ಎಂದು ಇಲಾಖೆಯ ವಕ್ತಾರರು ತಿಳಿಸಿದ್ದಾರೆ.
ನಿಜಕ್ಕೂ ಎಷ್ಟು ಹಣ ಪಡೆಯಬೇಕು?
ಈ ರೀತಿ ಆಟೋಗಳು, ಕ್ಯಾಬ್ಗಳಿಗೆ ದರ ಹೆಚ್ಚಾಗಿದೆ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಮನಸ್ಸಿಗೆ ಬಂದಂತೆ ಹಣ ಹೇಳುತ್ತಿದ್ದಾರೆ ಎಂದು ಪ್ರಯಾಣಿಕರು ಬೇಸರ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿ ಆಟೋ ರಿಕ್ಷಾಗಳಿಗೆ ಮೊದಲ 1.9 ಕಿಲೋಮೀಟರ್ಗೆ ಕನಿಷ್ಠ ದರ ₹30 ಆಗಿತ್ತು. ಪ್ರತಿ ಹೆಚ್ಚುವರಿ ಕಿಲೋಮೀಟರ್ಗೆ ₹15 ವಿಧಿಸಲಾಗಿತ್ತು. ಇದು 2021ರಲ್ಲಿ ಬಂದ ನಿಯಮವಾಗಿದ್ದು, ಈಗ ಪ್ರಯಾಣಿಕರು ಮೊದಲ 1.9 ಕಿಮೀಗೆ ₹36 ರೂಪಾಯಿ ಕೊಡಬೇಕು, ಆಮೇಲೆ ಪ್ರತಿ ಹೆಚ್ಚುವರಿ ಕಿಲೋಮೀಟರ್ಗೆ ₹18 ಹಣ ಕೊಡಬೇಕು.
ನಿಜಕ್ಕೂ ಏನಾಗ್ತಿದೆ?
ಆಟೋಗಳು ಸರ್ಕಾರ ನಿಗದಿ ಮಾಡಿರುವ ಹಣಕ್ಕಿಂತ ಹೆಚ್ಚು ಹಣ ಪಡೆಯುತ್ತಿವೆ. ಅಂದಹಾಗೆ ಒಲಾ, ಊಬರ್ ಆಪ್ಗಳ ಹಣದಷ್ಟೇ ನಮಗೂ ಹಣ ಕೊಡಿ ಎಂದು ಉಳಿದ ಆಟೋಗಳು ಪ್ರಯಾಣಿಕರ ಬಳಿ ಹೇಳೋದುಂಟು. ಒಟ್ಟಿನಲ್ಲಿ ಆಟೋಗಳು ಹೇಳಿದ್ದೇ ರೇಟ್ ಎನ್ನುವ ಹಾಗೆ ಆಗಿದೆ. ಅಂದಹಾಗೆ ಬೆಂಗಳೂರಿನಲ್ಲಿ ಮಂತ್ರಿ ಸ್ವ್ಯೇರ್ ಮೆಟ್ರೋ ಸ್ಟೇಶನ್ನಿಂದ ಏಷಿಯಾನೆಟ್ ಆಫೀಸ್ಗೆ ಬರಲು ( ಮೆಜೆಸ್ಟಿಕ್ ಬಳಿ ಇರುವ ಶಿವಾನಂದ ಸರ್ಕಲ್ ಬಳಿ ) 1.5 km ಇದೆ. ಇದಕ್ಕೆ 80 ರೂಪಾಯಿ ಕೊಡಬೇಕು, ಇದು ಯಾವ ನ್ಯಾಯ ಗುರು?
ಈಗ ಆಗಿರುವ ನಷ್ಟ ಎಷ್ಟು?
ಕರ್ನಾಟಕ ಹೈಕೋರ್ಟ್ ಮೇ 2024ರಲ್ಲಿ ಆಟೋ ಮೂಲದರ ₹31.60 ಕ್ಕೆ ನಿಗದಿಪಡಿಸಿತ್ತು.
ಆದರೆ...ಆಟೋ ಅಗ್ರಿಗೇಟರ್ ಆ್ಯಪ್ಗಳು ಕ್ಯಾರೇ ಅನ್ನದ ಪಾಲಿಸುತ್ತಿಲ್ಲ. ಬೆಂಗಳೂರಿನಲ್ಲಿ 4.8 ಲಕ್ಷ ಆಟೋಗಳು ಬುಕ್ ಆಗುತ್ತವೆ. ಪ್ರತಿ ರೈಡ್ಗೆ ಕೇವಲ ₹50 ಹೆಚ್ಚುವರಿ ವಿಧಿಸಿದರೆ ದಿನಕ್ಕೆ ₹2.4 ಕೋಟಿ!
ನಷ್ಟ ಆಗುತ್ತದೆ. ಮೇ 2024 ರಿಂದ ಪ್ರಯಾಣಿಕರು ₹1,010 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಬೆಂಗಳೂರು-ಕೇಂದ್ರ ಸಂಸದ ಪಿ.ಸಿ. ಮೋಹನ್ ಪ್ರಶ್ನೆ ಮಾಡಿದ್ದಾರೆ.
ರಾಜ್ಯ ಸರ್ಕಾರವು ಹೈಕೋರ್ಟ್ನ ₹31.60 ದರದ ಮಿತಿಯನ್ನು ಏಕೆ ಜಾರಿಗೊಳಿಸಿಲ್ಲ? ಬೆಂಗಳೂರಿನ ಜನರಿಂದ ದಿನಕ್ಕೆ ₹2.4 ಕೋಟಿ ಲೂಟಿಯಾಗುತ್ತಿರುವಾಗ ಸರ್ಕಾರ ಕ್ರಮ ಕೈಗೊಳ್ಳುವುದೇ? ಮೇ 2024 ರಿಂದ ₹1,010 ಕೋಟಿ ನಷ್ಟಕ್ಕೆ ಪ್ರಯಾಣಿಕರಿಗೆ ಯಾರು ಪರಿಹಾರ ನೀಡುವರು? ರಾಜ್ಯ ಸರ್ಕಾರ ಮೌನ ಮುರಿದು ಕ್ರಮ ಕೈಗೊಳ್ಳುವುದು ಯಾವಾಗ? ಈ ಪ್ರಶ್ನೆಗಳಿಗೆ ಸರ್ಕಾರಿದಿಂದ ಉತ್ತರ ಬೇಕಿದೆ.