ಒಂದೇ ದಿನ 13 ಮಕ್ಕಳಿಗೆ ಕೊರೋನಾ ವದಂತಿ: ಜನರಲ್ಲಿ ಆತಂಕ

By Kannadaprabha NewsFirst Published Oct 15, 2020, 8:52 AM IST
Highlights

ವಾಟ್ಸಪ್‌ ಸಂದೇಶದಿಂದ ಉಲ್ಲಾಳು ವಾರ್ಡ್‌ನ ಸ್ಥಳೀಯರಲ್ಲಿ ಆತಂಕ| ಬುಧವಾರ ಒಂದು ಮಗುವಿನಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಸಾರ್ವಜನಿಕರು ಈ ರೀತಿ ವದಂತಿಯಿಂದ ಆತಂಕ ಪಡಬೇಕಾಗಿಲ್ಲ: ಆರ್‌.ಆರ್‌.ನಗರ ವಲಯದ ಜಂಟಿ ಆಯುಕ್ತ ನಾಗರಾಜು| 

ಬೆಂಗಳೂರು(ಅ.15): ರಾಜರಾಜೇಶ್ವರಿನಗರ ವಲಯದ ಉಲ್ಲಾಳು ವಾರ್ಡ್‌ನಲ್ಲಿ ಒಂದೇ ದಿನ 13 ಮಕ್ಕಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಎಂಬ ವದಂತಿ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಹರಡಿದ್ದು, ಅದರ ಪರಿಣಾಮ ಸ್ಥಳೀಯರಲ್ಲಿ ತೀವ್ರ ಆತಂಕ ಮನೆ ಮಾಡಿತು.

ಉಲ್ಲಾಳು ವಾರ್ಡ್‌ನ ಮಂಗಳೂರು ಕಾಲೇಜಿನ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಕಳೆದ ಮಂಗಳವಾರ ಒಂದೇ ದಿನ 13 ಮಕ್ಕಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಹೀಗಾಗಿ, ಆ ಭಾಗದ ಜನರು ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವಂತೆ ವಾಟ್ಸ್‌ಆಪ್‌ ಸಂದೇಶ ಹಡಿದಾಡಿತು. ಇದರಿಂದ ಉಲ್ಲಾಳು ಭಾಗದ ಜನರ ಆತಂಕಗೊಂಡಿದ್ದರು.

ಕರ್ನಾಟಕದಲ್ಲಿ ನಿಲ್ಲದ ಕೊರೋನಾ, ಬುಧವಾರ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ

ಈ ಕುರಿತು ಪ್ರತಿಕ್ರಿಯೆ ನೀಡಿದ ಆರ್‌.ಆರ್‌.ನಗರ ವಲಯದ ಜಂಟಿ ಆಯುಕ್ತ ನಾಗರಾಜು, ಉಲ್ಲಾಳು ವಾರ್ಡ್‌ನಲ್ಲಿ ಕಳೆದ ಮಂಗಳವಾರ ಇಬ್ಬರು ಮಕ್ಕಳಲ್ಲಿ, ಬುಧವಾರ ಒಂದು ಮಗುವಿನಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಸಾರ್ವಜನಿಕರು ಈ ರೀತಿ ವದಂತಿಯಿಂದ ಆತಂಕ ಪಡಬೇಕಾಗಿಲ್ಲ. ಆದರೆ, ಮಕ್ಕಳನ್ನು ಈಜುಕೊಳ, ಜನದಟ್ಟಣೆ ಏರ್ಪಡುವ ಮಾರುಕಟ್ಟೆ, ಮಾಲ್‌ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ಕರೆದುಕೊಂಡು ಹೋಗದಿರುವುದು ಒಳ್ಳೆಯದು. ಅನಿವಾರ್ಯವಾಗಿ ಮನೆಯಿಂದ ಹೊರಬೇಕಾದರೆ ಅಗತ್ಯ ಸುರಕ್ಷಿತಾ ಕ್ರಮಗಳಾದ ಮಾಸ್ಕ್‌ ಧರಿಸುವುದು ಹಾಗೂ ಸಾಮಾಜಿಕ ಅಂತರ ನಿಯಮ ಪಾಲಿಸುವಂತೆ ಸಲಹೆ ನೀಡಿದ್ದಾರೆ.
 

click me!