ಮತ್ತೊಬ್ಬರಿಗೆ ಕೊರೋನಾ ಸೋಂಕು ದೃಢ: ಹುಬ್ಬಳ್ಳಿ ಅಕ್ಷರಶಃ ತಲ್ಲಣ

By Kannadaprabha NewsFirst Published May 2, 2020, 7:21 AM IST
Highlights

ಎಲ್ಲೆಡೆ ಖಾಕಿ ಕಾವಲು ಬಿಗಿ - ಬಿಕೋ ಎನ್ನುತ್ತಿರುವ ರಸ್ತೆಗಳು| ಕಳೆದ ನಾಲ್ಕೈದು ದಿನಗಳಿಂದ ಯಾವ ಕೊರೋನಾ ಪ್ರಕರಣಗಳು ದೃಢಪಟ್ಟಿರಲಿಲ್ಲ| ಇದರ ನಡುವೆಯೇ ಮುಲ್ಲಾನ ಓಣಿಯ ಕೊರೋನಾ ಸೋಂಕಿತ ಕೂಡ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದ| ಇದರಿಂದಾಗಿ ನಗರದಲ್ಲಿ ನಿರಾಳತೆ ಮೂಡಿತ್ತು|

ಹುಬ್ಬಳ್ಳಿ(ಮೇ.02): ಮತ್ತೊಂದು ಕೊರೋನಾ ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ವಾಣಿಜ್ಯನಗರಿ ಮತ್ತೆ ತಲ್ಲಣವನ್ನುಂಟು ಮಾಡಿದೆ. ಹಿಂದಿನ ಯಾವ ಪ್ರಕರಣಕ್ಕೂ ಸಂಪರ್ಕ ಹೊಂದದ ಹೊಸ ಪ್ರಕರಣ ಇದಾಗಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಕಾವಲನ್ನು ಮತ್ತಷ್ಟು ಬಿಗಿಗೊಳಿಸಿದರು. ಶಾಂತಿನಗರ ಸುತ್ತಮುತ್ತಲಿನ ಪ್ರದೇಶವನ್ನು ಸೀಲ್‌ಡೌನ್‌ನ್ನಾಗಿ ಜಿಲ್ಲಾಡಳಿತ ಘೋಷಣೆ ಮಾಡಿದೆ.

ಕಳೆದ ನಾಲ್ಕೈದು ದಿನಗಳಿಂದ ಯಾವ ಕೊರೋನಾ ಪ್ರಕರಣಗಳು ದೃಢಪಟ್ಟಿರಲಿಲ್ಲ. ಇದರ ನಡುವೆಯೇ ಮುಲ್ಲಾನ ಓಣಿಯ ಕೊರೋನಾ ಸೋಂಕಿತ ಕೂಡ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದ. ಇದರಿಂದಾಗಿ ನಗರದಲ್ಲಿ ನಿರಾಳತೆ ಮೂಡಿತ್ತು. ಹುಬ್ಬಳ್ಳಿ ನಗರ ತಾಲೂಕನ್ನು ಕೆಂಪು ವಲಯವೆಂದು ಘೋಷಿಸಿದ್ದರೂ ವಾಹನ ಸಂಚಾರ ಜೋರಾಗಿತ್ತು. ಪೊಲೀಸರು ಸಹ ಆಜಾದ ಕಾಲನಿಯ ಪ್ರಕರಣ ಪತ್ತೆಯಾದ ಬಳಿಕ ಮತ್ತೆ ಯಾವ ಪ್ರಕರಣಗಳು ದೃಢಪಟ್ಟಿಲ್ಲವಾದ್ದರಿಂದ ವಾಹನ ಸಂಚಾರಕ್ಕೆ ವಿನಾಯಿತಿ ನೀಡಿದ್ದರು.

ಲಾಕ್‌ಡೌನ್‌ ಮಧ್ಯೆ ವೇತನ ಏರಿಕೆ: ಡಿಪ್ಲೋಮಾ ಕಾಲೇಜು ಬೋಧಕರಿಂದಲೇ ಅಸಮಾಧಾನ!

ಸೀಲ್‌ಡೌನ್‌:

ಇದೀಗ ಕೇಶ್ವಾಪುರದ ಶಾಂತಿನಗರದ ವ್ಯಕ್ತಿಯೊಬ್ಬರಿಗೆ ಕೊರೋನಾ ದೃಢಪಟ್ಟಿದೆ ಎಂಬ ಸುದ್ದಿ ಬಿತ್ತರವಾಗುತ್ತಿದ್ದಂತೆ ನಗರದಲ್ಲಿ ಮತ್ತೆ ಬಿಗಿಗೊಳಿಸಲು ಪೊಲೀಸರು ಶುರು ಮಾಡಿದರು. ಶಾಂತಿನಗರ ಸುತ್ತಮುತ್ತಲಂತೂ ಸಂಜೆ ವೇಳೆಗೆ ಬ್ಯಾರಿಕೇಡ್‌ಗಳನ್ನೆಲ್ಲ ಹಾಕಿ ನಾಕಾಬಂಧಿ ಮಾಡಿದರು. ಸಂಜೆ ವೇಳೆ ಮನೆಯಿಂದ ಹೊರ ಬಂದವರನ್ನು ವಾಪಸ್‌ ಕಳುಹಿಸಿದರು. 100 ಮೀಟರ್‌ ವ್ಯಾಪ್ತಿ ಪ್ರದೇಶದಲ್ಲಿ ಸೀಲ್‌ಡೌನ್‌ನ್ನಾಗಿ ಜಿಲ್ಲಾಡಳಿತ ಈ ಪ್ರದೇಶವನ್ನು ಘೋಷಿಸಿದೆ. ಪೊಲೀಸರು ಬಂದೋಬಸ್ತ್‌ ಹೆಚ್ಚಿಸಿದ್ದಾರೆ. ಈ ಪ್ರದೇಶದಿಂದ ಯಾರು ಹೊರಹೋಗುವಂತಿಲ್ಲ. ಯಾರು ಒಳಬರುವಂತಿಲ್ಲ. ಆ ರೀತಿ ಬಂದೋಬಸ್ತ್‌ ಮಾಡಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ನಿರಾಳವಾಗಿದ್ದ ವಾಣಿಜ್ಯನಗರಿಯಲ್ಲಿ ಶುಕ್ರವಾರ ಸಂಜೆ ಬೆಳಕಿಗೆ ಬಂದ ಮತ್ತೊಂದು ಕೊರೋನಾ ಪ್ರಕರಣದಿಂದ ಆತಂಕವನ್ನುಂಟು ಮಾಡಿದೆ.
 

click me!