Grama Vastavya: ಶೀಘ್ರ ಭೂ ಪರಿವರ್ತನೆ ಕಾಯ್ದೆ ತಿದ್ದುಪಡಿ: ಸಚಿವ ಅಶೋಕ್‌

By Kannadaprabha NewsFirst Published May 28, 2022, 5:25 AM IST
Highlights

*  ಬೀದರ್‌ನ ವಡಗಾಂವ್‌(ಡಿ) ಗ್ರಾಮದಲ್ಲಿ ಕಂದಾಯ ಸಚಿವರ ಗ್ರಾಮ ವಾಸ್ತವ್ಯ
*  ದಳ್ಳಾಳಿ ಮುಕ್ತವಾಗಿಸಲು ರಾಜ್ಯದಲ್ಲಿ ಜನಸ್ನೇಹಿ ವ್ಯವಸ್ಥೆ ಜಾರಿ
*  ಕಂದಾಯ ಇಲಾಖೆಯ ಕಾಯ್ದೆ ಇನ್ನಷ್ಟು ಸರಳೀಕರಣಗೊಳಿಸ್ತೇವೆ
 

ವಡಗಾಂವ(ಮೇ.28): ಮುಂಬರುವ ದಿನಗಳಲ್ಲಿ ಭೂ ಪರಿವರ್ತನೆ ಕಾಯ್ದೆ (ಎನ್‌ಎ) ತಿದ್ದುಪಡಿ ಮಾಡಿ ಜನಸ್ನೇಹಿಯಾಗಿಸಿ ದಲ್ಲಾಳಿ ಮುಕ್ತವಾಗಿಸುವ ಸ್ವಯಂ ಘೋಷಣಾ ಕಾನೂನು ಜಾರಿಗೆ ಜಾರಿಗೆ ತರುತ್ತೇವೆ ಎಂದು ಕಂದಾಯ ಸಚಿವ ಆರ್‌.ಅಶೋಕ ಘೋಷಿಸಿದ್ದಾರೆ.

ಆಡಳಿತ ಯಂತ್ರವನ್ನು ಜನರ ಬಳಿಗೆ ಕೊಂಡೊಯ್ಯುವ ಸಲುವಾಗಿ ತಾವೇ ಪ್ರಾರಂಭಿಸಿರುವ ಮಹತ್ವಾಕಾಂಕ್ಷಿ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆಗೆ’ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಬೀದರ್‌ ಜಿಲ್ಲೆಯ ವಡಗಾಂವ ದೇಶಮುಖ ಗ್ರಾಮದಲ್ಲಿ ಚಾಲನೆ ನೀಡಿದ ಅವರು ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

Bidar: ಟೆಂಡರ್​ ಮುಗಿದಿದೆ ಎಂದು ಬ್ರಿಮ್ಸ್​ ಆಸ್ಪತ್ರೆಯ 96 ಡಿ ಗ್ರೂಪ್ ಮಹಿಳಾ​ ನೌಕರರ ವಜಾ: ಅಹೋರಾತ್ರಿ ಧರಣಿ!

ಕಂದಾಯ ಇಲಾಖೆಯ ಕಾಯ್ದೆಗಳನ್ನು ಸರಳೀಕರಣಗೊಳಿಸುವ ಪ್ರಕ್ರಿಯೆ ನಡೆಸುತ್ತಿದ್ದು, ಈಗಾಗಲೇ ಜನರ ಮನೆ ಬಾಗಿಲಿಗೆ ಸರ್ಕಾರದ ಯೋಜನೆ ನೀಡುತ್ತಿದೆ. ಹಾಗೇ ಸ್ವಯಂ ಪೋಡಿ (11ಇ ಸ್ಕೆಚ್‌) ಕಾನೂನು ಸರಳೀಕರಣ ಮಾಡಿದಂತೆ ಕೃಷಿಯೇತರ ಜಮೀನಿಗೆ ಅರ್ಜಿ ಸಲ್ಲಿಸುವವರು ಅಧಿಕಾರಿಗಳ ಅನುಮೋದನೆಗಾಗಿ ವರ್ಷಗಟ್ಟಲೆ ಕಾಯುವ ವ್ಯವಸ್ಥೆಯಿಂದ ಮುಕ್ತಗೊಳಿಸಲು ಯೋಜಿಸಿದ್ದೇವೆ ಎಂದರು.

ಕೃಷಿಯೇತರ ಜಮೀನಿಗೆ ಅರ್ಜಿ ಸಲ್ಲಿಸುವವರು ಕೇವಲ ಸ್ವಯಂ ಘೋಷಣಾ ಪತ್ರ ನೀಡಬೇಕು. ಅದನ್ನು ಪರಿಶೀಲಿಸುವ ಜಿಲ್ಲಾಧಿಕಾರಿಗಳು ಈ ಜಮೀನು ಸರ್ಕಾರದ ಸ್ವತ್ತಲ್ಲ ಎಂದು ಭೂಪರಿವರ್ತನೆ ಆದೇಶ ನೀಡಬೇಕು. ಒಂದು ವೇಳೆ ಸ್ವಯಂ ಘೋಷಣಾ ಪತ್ರ ಸುಳ್ಳಾಗಿದ್ದು ಕಂಡುಬಂದಲ್ಲಿ ಆದೇಶ ರದ್ದಾಗಿ ಸರ್ಕಾರಕ್ಕೆ ಕಟ್ಟಿರುವ ಶುಲ್ಕ ಮುಟ್ಟುಗೋಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

44247 ಫಲಾನುಭವಿಗಳಿಗೆ ಹಕ್ಕುಪತ್ರ:

ಇದು ನನ್ನ 7ನೇ ಗ್ರಾಮ ವಾಸ್ತವ್ಯ. ಈ ಮೂಲಕ ರಾಜ್ಯದಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡಿದ್ದು, 44247 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಈ ಪೈಕಿ 18063 ಜನರಿಗೆ ಪಿಂಚಣಿ, 4188 ಪಹಣಿ ಪತ್ರಗಳ ವಿತರಣೆ, 5078 ಆಧಾರ ತಿದ್ದುಪಡಿ, 10ಸಾವಿರ ಕೋಟಿ ರು. ಮಾಸಾಶನಕ್ಕೆ ಮೀಸಲು ಹೀಗೆಯೇ ಅನೇಕ ಸೌಲಭ್ಯ ಜನರ ಬಳಿಗೇ ಹೋಗಿ ನೀಡುತ್ತಿದ್ದೇವೆ. ಇದರಿಂದ ಜನರಲ್ಲಿಯೂ ಇದು ನಮ್ಮ ಸರ್ಕಾರ ಎಂಬ ಭಾವನಾತ್ಮಕತೆ ಬೆಳೆಯುತ್ತದೆ ಎಂದರು.

Bidar ದಲಿತರು ಹಿಂದೂಗಳೇ ನಮ್ಮನ್ಯಾಕೆ ನೀವು ಜೊತೆ ಸೇರಿಸಿಕೊಳ್ಳಲ್ಲ; ಖರ್ಗೆ

ಮನೆ ಕಟ್ಟಿ ಕೊಂಡವರಿಗೆ ಅದೇ ಸ್ಥಳದ ಹಕ್ಕುಪತ್ರ:

ಸರ್ಕಾರಿ ಜಮೀನುಗಳಲ್ಲಿ ಮನೆ ಕಟ್ಟಿಕೊಂಡವರಿಗೆ ಅದೇ ಸ್ಥಳದ ಹಕ್ಕುಪತ್ರ ನೀಡಿ ನೋಂದಣಿ ಮಾಡಿಕೊಡುವ ನಿರ್ಧಾರಕ್ಕೆ ಬಂದಿದ್ದೇವೆ. ಇನಾಮ್‌ ಜಮೀನನ್ನೂ ದಶಕಗಳಿಂದ ಉಳಿಮೆ ಮಾಡಿಕೊಂಡು ಬಂದವರ ಹೆಸರಿಗೆ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ, 800 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದೇವೆ ಹೀಗೆಯೇ ಜನರ ಮನೆ ಬಾಗಿಲಿಗೆ ಕಂದಾಯ ಇಲಾಖೆಯನ್ನು ಕೊಂಡೊಯ್ಯುವ ಯೋಜನೆ ನಮ್ಮದಾಗಿದೆ ಎಂದರು. ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌, ಬಸವಕಲ್ಯಾಣ ಶಾಸಕ ಶರಣು ಸಲಗರ, ಗ್ರಾಪಂ ಅಧ್ಯಕ್ಷೆ ತ್ರೀಶೂಲಬಾಯಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಇದ್ದರು.

ತಾಯಿ ಹೃದಯದ ಪಾಠ ಕಲಿಸುವ ಗ್ರಾಮ ವಾಸ್ತವ್ಯವಿದು

ಶಾಲೆಗಳಲ್ಲಿ ವಾಸ ಮಾಡುವದು ಅಲ್ಲಿನ ಮಕ್ಕಳ, ಜನರ ಸಮಸ್ಯೆಗಳಿಗೆ ಅರಿತುಕೊಂಡು ಪರಿಹಾರವನ್ನು ಸ್ಥಳದಲ್ಲಿಯೇ ನೀಡುವಂತಹ ವ್ಯವಸ್ಥೆ ಜಾರಿಗೊಳಿಸುವ ಮೂಲಕ ತಾಯಿ ಹೃದಯ ಪಾಠ ಕಲಿಸುವ ಗ್ರಾಮವಾಸ್ತವ್ಯ ಇದಾಗಿದೆ ಎಂದು ಸಚಿವ ಅಶೋಕ ಹೇಳಿದರು. ಈ ಹಿಂದೆ ಕೆಲ ಜಿಲ್ಲಾಧಿಕಾರಿಗಳು ಲಘುವಾಗಿ ಪರಿಗಣಿಸಿದ್ದರು ಅವರಿಗೆ ಬಿಸಿ ಮುಟ್ಟಿಸಲಾಗಿದೆ. ಅಷ್ಟಕ್ಕೂ ಇದು ಗ್ರಾಮಕ್ಕೆ ಬಂದು ಹೋಗಿ ಅರ್ಜಿ ಕಡತಕ್ಕೆ ಸೇರಿಸಿಕೊಂಡು ಸುಮ್ಮನಾಗುವ ಗ್ರಾಮ ವಾಸ್ತವ್ಯವಲ್ಲ ಎಂದರು. 70 ವರ್ಷ ಸರ್ಕಾರ ನಡೆಸಿದವರು ಜನರನ್ನು ಸರ್ಕಾರಿ ಕಚೇರಿಗಳಿಗೆ ಅಲೆಯುವಂಥ ಬ್ರಿಟಿಷ್‌ ವ್ಯವಸ್ಥೆ ಮುಂದುವರೆಸಿಕೊಂಡು ಬಂದಿದ್ದರು. ಆದರೆ ನಾನು ಕಂದಾಯ ಇಲಾಖೆ ಸಚಿವನಾದ ನಂತರ, ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡ ನಂತರ ಅಧಿಕಾರಿಗಳೇ ಜನರ ಮನೆಗಳಿಗೆ ತೆರಳಿ ಸೌಲಭ್ಯ ವಿಸ್ತರಿಸುವಂತೆ ಮಾಡಿದ್ದೇನೆ. ಹಲೋ ಕಂದಾಯ ಸಚಿವರೇ ಎಂದು ಫೋನಾಯಿಸಿದರೆ ಸಾಕು ಮಾಹಿತಿ ಪಡೆದು 72 ಗಂಟೆಗಳಲ್ಲಿ ಫಲಾನುಭವಿಗೆ ಅಗತ್ಯ ಸೇವೆ ಸಿಗುತ್ತದೆ ಎಂದು ತಿಳಿಸಿದರು.
 

click me!