
ಮುನಿರಾಬಾದ್ (ಜು.25): ಪ್ರಸಕ್ತ ಸಾಲಿನಲ್ಲಿ ತುಂಗಭದ್ರಾ ಜಲಾಶಯ(TB Dam)ದಲ್ಲಿ ನೀರಿನ ಶೇಖರಣೆ ಕಡಿಮೆ ಇದೆ ಎಂದು ನೀರಾವರಿ ಇಲಾಖೆಯ ನೂತನ ಮುಖ್ಯ ಅಭಿಯಂತರ ಮನೋಜಕುಮಾರ ತಿಳಿಸಿದ್ದಾರೆ.
ಪ್ರಸಕ್ತ ವರ್ಷ ಜಲಾಶಯದಲ್ಲಿ 29 ಟಿಎಂಸಿ ನೀರು ಮಾತ್ರ ಶೇಖರಣೆಯಾಗಿದೆ. ಕಳೆದ ವರ್ಷ ಇದೇ ದಿನದಂದು 78 ಟಿಎಂಸಿ ನೀರು ಶೇಖರಣೆಯಾಗಿತ್ತು. ಎಲ್ ನಿನೊ ಪರಿಣಾಮ ತುಂಗಭದ್ರಾ ಜಲಾಶಯಕ್ಕೆ ನೀರಿನ ಒಳಹರಿವು ಭಾರಿ ಪ್ರಮಾಣದಲ್ಲಿ ಕುಗ್ಗಿದೆ. ಇದಕ್ಕೆ ಕಾರಣ ಜಲಾಶಯದ ಜಲಾನಯನ ಪ್ರದೇಶಗಳಾದ ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿ ಕಡಿಮೆ ಮಳೆಯಾಗಿರುವುದು. ಜಲಾಶಯದ 75 ವರ್ಷದ ಇತಿಹಾಸದಲ್ಲಿ ಇಂತಹ ಭೀಕರ ಪರಿಸ್ಥಿತಿ ಬಂದಿದ್ದು ಇದೆ ಪ್ರಪ್ರಥಮ ಎಂದರು.
ಆದರೆ ಕೃಷ್ಣನದಿ ಪಾತ್ರದ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಳವಾಗಿದೆ. ಆದರೆ ತುಂಗಭದ್ರಾ ಜಲಾಶಯದ ವಿಷಯದಲ್ಲಿ ಇದು ವಿರುದ್ಧವಾಗಿದೆ ಎಂದರು.
ತುಂಗಭದ್ರಾ ಜಲಾಶಯದ ನೀರನ್ನು ಕುಡಿಯಲು ಮಾತ್ರ ಉಪಯೋಗಿಸಬೇಕೆಂದು ಕಲ್ಬುರ್ಗಿ ವಿಭಾಗೀಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.ಈ ಹಿನ್ನೆಲೆ ಜಲಾಶಯದ ನೀರನ್ನು ಕೊಪ್ಪಳಮ ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಜನರಿಗೆ ಕುಡಿಯಲು ಎಡದಂಡೆ ಮುಖ್ಯ ಕಾಲುವೆ ಹಾಗೂ ಬಲದಂಡೆ ಕೆಳಮಟ್ಟದ ಕಾಲುವೆ ಮೂಲಕ ನೀರನ್ನು ಹರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯಪಾಲಕ ಅಭಿಯಂತರ ನಾಗನಾಥ್, ಸಹಾಯಕ ಕಾರ್ಯಪಾಲಕ ಅಭಿಯಂತರ ಬಸಪ್ಪ ಜಾನ್ಕರ್, ಧರಮ್ ರಾಜ್ ಹಾಗೂ ಇತರರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಮುಖ್ಯ ಅಭಿಯಂತರರಾಗಿ ಅಧಿಕಾರ ವಹಿಸಿಕೊಂಡ ಮನೋಜ್ ಕುಮಾರ್ ಅವರಿಗೆ ಕಾರ್ಯಪಾಲಕ ಅಭಿಯಂತರ ನಾಗನಾಥ್ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.
ಜಲಾಶಯಗಳ ಇಂದಿನ ನೀರಿನ ಮಟ್ಟ (24-7-2026)
ಕಬಿನಿ 69% 2284 2273.14
ಹೇಮಾವತಿ 61% 2922 2904.65
ತುಂಗಭದ್ರಾ 26% 1633 1604.25
ಸೂಪಾ(ಮೀ.) 32% 564 598.90
ಕೆಆರ್ಎಸ್ 35% 124.80 92.05
ಘಟಪ್ರಭಾ 51% 2175 2138.30
ಲಿಂಗನಮಕ್ಕಿ 24% 1819. 1768.20
ಭದ್ರಾ 49% 2158 2122.50
ಹಾರಂಗಿ 96% 2859 2858.10
ಆಲಮಟ್ಟಿ(ಮೀ.) 84% 519.60 518.50
ನಾರಾಯಣಪುರ(ಮೀ.) 72% 492.25 489.55
ಮಲಪ್ರಭಾ 36% 2079.50 2056.10