ಅಂತಾರಾಜ್ಯ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುಮತಿ ನೀಡಿ: ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ

By Kannadaprabha NewsFirst Published Feb 23, 2024, 9:45 PM IST
Highlights

ವಿಜಯಪುರ ಜಿಲ್ಲೆಯ ಗಡಿ ಗ್ರಾಮವಾದ ಧೂಳಖೇಡದಿಂದ ಸೋಲಾಪೂರಕ್ಕೆ 25 ಕಿಮೀ ಅಂತರವಿದೆ. ಈ ಭಾಗದ ಪ್ರತಿಯೊಂದು ಬಸ್ಸುಗಳು ಅಂತಾರಾಜ್ಯ ಸಾರಿಗೆ ಬಸ್‌ಗಳಾಗಿರುವುದರಿಂದ ಈ ಭಾಗದ ಮಹಿಳೆಯರು ಹೊರ್ತಿ, ಬಳ್ಳೊಳ್ಳಿ, ಝಳಕಿ, ಬತಗುಣಕಿ ಮತ್ತು ಧೂಳಖೇಡ ಮಾರ್ಗವಾಗಿ ಹೋಗುವ ಬಸ್‌ಗಳಲ್ಲಿ ಶಕ್ತಿ ಯೋಜನೆ ಸೌಲಭ್ಯ ಇರದೇ ಇರುವುದರಿಂದ ಈ ಭಾಗದ ಸಾರ್ವಜನಿಕರು ಆಸ್ಪತ್ರೆಗೆ ಹೋಗಲು ಸೋಲಾಪೂರವನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಮಹಿಳೆಯರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ: ಶಾಸಕ ಯಶವಂತರಾಯಗೌಡ ಪಾಟೀಲ 

ಇಂಡಿ(ಫೆ.23): ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಜಯಪುರ ಹಾಗೂ ಇಂಡಿ ಘಟಕಗಳಿಂದ ಮಹಾರಾಷ್ಟ್ರದ ಸೋಲಾಪೂರಕ್ಕೆ ಹೋಗುವ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಒದಗಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅಧಿವೇಶನದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವರಿಗೆ ನಿಯಮ 351ರ ಅಡಿಯಲ್ಲಿ ಪ್ರಶ್ನಿಸಿ, ಉತ್ತರ ಪಡೆದುಕೊಂಡರು.

ವಿಜಯಪುರ ಜಿಲ್ಲೆಯ ಗಡಿ ಗ್ರಾಮವಾದ ಧೂಳಖೇಡದಿಂದ ಸೋಲಾಪೂರಕ್ಕೆ 25 ಕಿಮೀ ಅಂತರವಿದೆ. ಈ ಭಾಗದ ಪ್ರತಿಯೊಂದು ಬಸ್ಸುಗಳು ಅಂತಾರಾಜ್ಯ ಸಾರಿಗೆ ಬಸ್‌ಗಳಾಗಿರುವುದರಿಂದ ಈ ಭಾಗದ ಮಹಿಳೆಯರು ಹೊರ್ತಿ, ಬಳ್ಳೊಳ್ಳಿ, ಝಳಕಿ, ಬತಗುಣಕಿ ಮತ್ತು ಧೂಳಖೇಡ ಮಾರ್ಗವಾಗಿ ಹೋಗುವ ಬಸ್‌ಗಳಲ್ಲಿ ಶಕ್ತಿ ಯೋಜನೆ ಸೌಲಭ್ಯ ಇರದೇ ಇರುವುದರಿಂದ ಈ ಭಾಗದ ಸಾರ್ವಜನಿಕರು ಆಸ್ಪತ್ರೆಗೆ ಹೋಗಲು ಸೋಲಾಪೂರವನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಮಹಿಳೆಯರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಶಕ್ತಿ ಯೋಜನೆಯ ಸೌಲಭ್ಯವನ್ನು ಅಂತಾರಾಜ್ಯ ಸಾರಿಗೆ ಬಸ್‌ಗಳಲ್ಲಿ ನೀಡಿದರೇ ಬಡ ಹೆಣ್ಣು ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಂಗೆ ಆಗುತ್ತದೆ.

ಬೇರುಮಟ್ಟದಿಂದ ಕಾಂಗ್ರೆಸ್ ಪಕ್ಷ ಬಲಪಡಿಸೋಣ: ವಿಠ್ಠಲ ಕೊಳ್ಳುರ

ಆದರೆ, ಈಗಾಗಲೇ ಚಿಕ್ಕೋಡಿ ವಿಭಾಗದ ಅಥಣಿ ಹಾಗೂ ಬೇರೆ ವಿಭಾಗಗಳ ಬಸ್‌ಗಳಲ್ಲಿ ಮಹಿಳೆಯರಿಗೆ ಮಹಾರಾಷ್ಟ್ರದ ಮಿರಜವರೆಗೆ ಮಹಿಳೆಯರಿಗೆ ಅಂತಾರಾಜ್ಯ ಸಾರಿಗೆ ಸೌಲಭ್ಯ ನೀಡಲಾಗುತ್ತಿದ್ದು, ಹೀಗಾಗಿ ಸೋಲಾಪೂರಕ್ಕೆ ಹೋಗುವ ಅಂತಾರಾಜ್ಯ ಸಾರಿಗೆ ಬಸ್‌ಗಳಲ್ಲಿ ಈ ಭಾಗದ ಮಹಿಳೆಯರಿಗೂ ಪ್ರಯಾಣಿಸಲು ಅನುಕೂಲ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಅಂತಾರಾಜ್ಯ ಸಾರಿಗೆಗಳ ಮೇಲೆ ಸಂಪೂರ್ಣ ಅವಲಂಬಿತವಾಗಿರುವ ಅಂತಾರಾಜ್ಯ ಸಾರಿಗೆಗಳಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಪ್ರಾರಂಭವಾಗಿ ಬೇರೆ ರಾಜ್ಯದಲ್ಲಿ ಅಂದಾಜು 1 ರಿಂದ 16 ಕಿಮೀ ವರೆಗೆ ಕಾರ್ಯಾಚರಿಸಿ ಪುನಃ ಕರ್ನಾಟಕ ರಾಜ್ಯದೊಳಗಿನ ಸ್ಥಳಕ್ಕೆ ಅಂತ್ಯಗೊಳ್ಳುವ ಸಾರಿಗೆಗಳಲ್ಲಿ ಮತ್ತು ಆಯ್ದ ಅಂತಾರಾಜ್ಯ ಸಾರಿಗೆಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ 213 ಅಂತಾರಾಜ್ಯದ ಅನುಸೂಚಿಗಳಲ್ಲಿ ಕರ್ನಾಟಕದ ಗಡಿಯವರೆಗೆ ಮಹಿಳೆಯರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿಜಯಪುರ ಮತ್ತು ಇಂಡಿ ಪಟ್ಟಣಗಳಿಂದ ಸೋಲಾಪೂರಕ್ಕೆ ಕರ್ನಾಟಕ ರಾಜ್ಯದ ಗಡಿಯಿಂದ 34 ಕಿಮೀ ದೂರದಲ್ಲಿ ಬರುತ್ತಿದ್ದು, ಇದಕ್ಕೆ ಶಕ್ತಿ ಯೋಜನೆ ಅನ್ವಯಿಸುವುದಿಲ್ಲ ಎಂದು ಉತ್ತರ ನೀಡಿದ್ದಾರೆ.

click me!