ವಿಜಯಪುರ: ರೈತರಿಗೆ ಹುಳಿಯಾದ ಲಿಂಬೆ ಅಭಿವೃದ್ಧಿ ನಿಗಮ..!

By Kannadaprabha NewsFirst Published Feb 23, 2024, 9:30 PM IST
Highlights

ರಾಜ್ಯದಲ್ಲಿಯೇ ಅತೀ ಹೆಚ್ಚು ಲಿಂಬೆ ಬೆಳೆಯುವ ಪ್ರದೇಶ ಇಂಡಿ ಭಾಗವಾಗಿದ್ದರಿಂದ ಲಿಂಬೆ ಬೆಳೆಗಾರರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಶಾಸಕ ಯಶವಂತರಾಯಗೌಡ ಪಾಟೀಲ ಅವರು ರಾಜ್ಯಮಟ್ಟದ ಲಿಂಬೆ ಅಭಿವೃದ್ಧಿ ನಿಗಮ ಸ್ಥಾಪಿಸಿ, ಅದರ ಕೇಂದ್ರ ಕಚೇರಿ ಇಂಡಿಯಲ್ಲಿಯೇ ಆರಂಭಿಸಲು ಶ್ರಮಿಸಿದ್ದಾರೆ. ಆದರೆ, ಲಿಂಬೆ ಬೆಳೆಗಾರರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವಾಗ ಲಿಂಬೆ ಅಭಿವೃದ್ಧಿ ಮಂಡಳಿ ಲಿಂಬೆ ಬೆಳೆಗಾರರ ಸಹಾಯಕ್ಕೆ ಬಾರದಿದ್ದರೆ ಲಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿದ್ದು ಏತಕ್ಕೆ ಎಂಬ ಪ್ರಶ್ನೆ ಲಿಂಬೆ ಬೆಳೆಗಾರರದ್ದಾಗಿದೆ.

ಖಾಜು ಸಿಂಗೆಗೋಳ

ಇಂಡಿ(ಫೆ.23): ಬರದ ಹಣೆಪಟ್ಟಿ ಕಟ್ಟಿಕೊಂಡಿರುವ ವಿಜಯಪುರದಲ್ಲಿ ಲಿಂಬೆ ಬೆಳೆಗಾರರ ಬದುಕು ಕೂಡ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಲಿಂಬೆ ಬೆಳೆಗಾರರ ನೆರವಿಗೆ ಬರಬೇಕಿದ್ದ ಲಿಂಬೆ ಅಭಿವೃದ್ಧಿ ನಿಗಮಕ್ಕೆ ಅನುದಾನದ ಬರ ಎದುರಾಗಿದ್ದು, ಇದರಿಂದ ಲಿಂಬೆ ಬೆಳೆಗಾರರಿಗೆ ನಿಗಮ ಹುಳಿಯಾಗಿದೆ. ಹೀಗಾಗಿ ರೈತರು ಕೂಡ ಈಗ ಸರ್ಕಾರದ ನೆರವಿನತ್ತ ಗಮನ ಹರಿಸಿದ್ದಾರೆ.

ರಾಜ್ಯದಲ್ಲಿಯೇ ಅತೀ ಹೆಚ್ಚು ಲಿಂಬೆ ಬೆಳೆಯುವ ಪ್ರದೇಶ ಇಂಡಿ ಭಾಗವಾಗಿದ್ದರಿಂದ ಲಿಂಬೆ ಬೆಳೆಗಾರರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಶಾಸಕ ಯಶವಂತರಾಯಗೌಡ ಪಾಟೀಲ ಅವರು ರಾಜ್ಯಮಟ್ಟದ ಲಿಂಬೆ ಅಭಿವೃದ್ಧಿ ನಿಗಮ ಸ್ಥಾಪಿಸಿ, ಅದರ ಕೇಂದ್ರ ಕಚೇರಿ ಇಂಡಿಯಲ್ಲಿಯೇ ಆರಂಭಿಸಲು ಶ್ರಮಿಸಿದ್ದಾರೆ. ಆದರೆ, ಲಿಂಬೆ ಬೆಳೆಗಾರರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವಾಗ ಲಿಂಬೆ ಅಭಿವೃದ್ಧಿ ಮಂಡಳಿ ಲಿಂಬೆ ಬೆಳೆಗಾರರ ಸಹಾಯಕ್ಕೆ ಬಾರದಿದ್ದರೆ ಲಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿದ್ದು ಏತಕ್ಕೆ ಎಂಬ ಪ್ರಶ್ನೆ ಲಿಂಬೆ ಬೆಳೆಗಾರರದ್ದಾಗಿದೆ.

ವಿಜಯಪುರ: ಬಾರದ ಮಳೆ, ಹಾನಿಯಾದ ಲಿಂಬೆ ಬೆಳೆ..!

ಲಿಂಬೆ ಅಭಿವೃದ್ಧಿ ನಿಗಮಕ್ಕೆ ಜೀವ ತುಂಬಬೇಕು:

ಲಿಂಬೆ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿಯಲ್ಲಿ ನಡೆಯಬೇಕಾಗಿದ್ದ ಲಿಂಬೆ ಅಭಿವೃದ್ಧಿ ಮಂಡಳಿ ಸಭೆ, ತೋಟಗಾರಿಕೆ ಸಚಿವರು ಬೆಂಗಳೂರಿನಲ್ಲಿ ಸಭೆ ಮಾಡಿ ಕೈತೊಳೆದುಕೊಂಡು ಬಿಟ್ಟರೆ, ಇತ್ತ ಬರದಿಂದ ಲಿಂಬೆ ಬೆಳೆ ಕಳೆದುಕೊಂಡು ಬೀದಿಗೆ ಬಿದ್ದಿರುವ ಲಿಂಬೆ ಬೆಳೆಗಾರರ ಸಹಾಯಕ್ಕೆ ಬರಬೇಕಾಗಿದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಲಿಂಬೆ ಬೆಳೆಯುವ, ಲಿಂಬೆ ಅಭಿವೃದ್ಧಿ ನಿಗಮದ ಕೇಂದ್ರ ಸ್ಥಾನ ಹೊಂದಿರುವ ಇಂಡಿಯಲ್ಲಿ ತೋಟಗಾರಿಗೆ ಸಚಿವರು ಸರ್ಕಾರದ ಕಾರ್ಯದರ್ಶಿಯವರೊಳಗೊಂಡು, ಸ್ಥಳೀಯ ಶಾಸಕರ ನೇತೃತ್ವದಲ್ಲಿ ಸಭೆ ಕೆರೆದು ಲಿಂಬೆ ಅಭಿವೃದ್ಧಿ ನಿಗಮಕ್ಕೆ ಜೀವ ತುಂಬಬೇಕಾಗಿದೆ.

ಬರದಲ್ಲಿ ಲಿಂಬೆ ಬೆಳೆ ಸಂರಕ್ಷಿಸಲು ಬೇಕು ಸಹಾಯ:

ಸತತ ಬರಗಾಲಕ್ಕೆ ತುತ್ತಾಗುತ್ತಿರುವ, ನೀರಾವರಿ ಯೋಜನೆಯಿಂದ ವಂಚಿತಗೊಂಡಿರುವ ಲಿಂಬೆ ನಾಡು ಇಂಡಿ ತಾಲೂಕಿನ ಲಿಂಬೆ ಬೆಳೆಗಳನ್ನು ಸಂರಕ್ಷಿಸಲು ಲಿಂಬೆ ಬೆಳೆಗಾರರಿಗೆ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕಾಗಿದೆ. ಟ್ಯಾಂಕರ್‌ ಮೂಲಕ ಲಿಂಬೆ ಬೆಳೆ ರಕ್ಷಿಸಿಕೊಳ್ಳಲು ಹರಸಹಾಸ ಪಡುತ್ತಿರುವ ರೈತರಿಗೆ ಟ್ಯಾಂಕರ್‌ ನೀರಿಗೆ ಖರ್ಚು ಮಾಡಿದ ಅನುದಾನವಾದರೂ ನೀಡಿದರೆ ಅನುಕೂಲವಾಗುತ್ತದೆ ಎಂಬುವುದು ಲಿಂಬೆ ಬೆಳೆಗಾರರ ಆಶಯವಾಗಿದೆ.
ಇಂಡಿ ತಾಲೂಕಿನಲ್ಲಿ ಲಿಂಬೆ ಹಣ್ಣು ಸಂರಕ್ಷಿಸಲು ಕೋಲ್ಡಸ್ಟೋರೇಜ್ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ. ಇಂಡಿಯಲ್ಲಿ ಸ್ಥಾಪನೆ ಮಾಡಿರುವ ರಾಜ್ಯಮಟ್ಟದ ಲಿಂಬೆ ಅಭಿವೃದ್ಧಿ ಮಂಡಳಿಗೆ ಸ್ವಂತ ಕಟ್ಟಡ ಇಲ್ಲದೆ, ತಾಲೂಕು ಆಡಳಿತ ಸೌಧದ ಒಂದು ಕೋಣೆಯಲ್ಲಿ ನಡೆಯುತ್ತಿದ್ದು, ಹೀಗಾಗಿ ಲಿಂಬೆ ಬೆಳೆಗಾರರ ಬಾಳಿಗೆ ಕಾಯಕಲ್ಪ ಕಲ್ಪಿಸಲಿರುವ ಲಿಂಬೆ ಅಭಿವೃದ್ಧಿ ಮಂಡಳಿಗೆ ಸ್ವಂತ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ, ಲಿಂಬೆ ಹಣ್ಣುಗಳ ಸಂರಕ್ಷಣೆಗಾಗಿ ಸಂರಕ್ಷಣಾ ಘಟಕ, ಲಿಂಬೆ ಹಣ್ಣಿನಿಂದ ತಯಾರಿಸುವ ವಿವಿಧ ವಸ್ತುಗಳ ಘಟಕ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂಬುವುದು ಈ ಭಾಗದ ಲಿಂಬೆ ಬೆಳೆಗಾರರ ಆಗ್ರಹವಾಗಿದೆ.

ನಿರೀಕ್ಷೆ ಹುಸಿ ಮಾಡಿದ ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯನವರು 2013ರಲ್ಲಿ ಮುಖ್ಯಮಂತ್ರಿ ಇದ್ದ ಅವಧಿಯಲ್ಲಿ ಈ ಭಾಗದ ಲಿಂಬೆ ಬೆಳೆಗಾರರು ಅನುಭವಿಸುತ್ತಿರುವ ಸಂಕಷ್ಟವನ್ನು ಅರಿತು,ಶಾಸಕ ಯಶವಂತರಾಯಗೌಡ ಪಾಟೀಲ ಅವರ ಪ್ರಸ್ತಾವನೆಯನ್ನು ಪರಿಶೀಲಿಸಿ ರಾಜ್ಯಮಟ್ಟದ ಲಿಂಬೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು ಈ ಭಾಗದ ಲಿಂಬೆ ಬೆಳೆಗಾರರಿಗೆ ಸಂತಸ ಉಂಟು ಮಾಡಿದರೆ, ಇನ್ನೊಂದು ಕಡೆ ತಾವೇ ಸ್ಥಾಪಿಸಿದ ಲಿಂಬೆ ಅಭಿವೃದ್ಧಿ ಮಂಡಳಿಗೆ ಇಂದು ಅವರೇ ಮುಖ್ಯಮಂತ್ರಿ ಇದ್ದರೂ ಲಿಂಬೆ ಅಭಿವೃದ್ಧಿ ಮಂಡಳಿಗೆ ಬಜೆಟ್‌ನಲ್ಲಿ ಅನುದಾನ ನೀಡದೇ ಇರುವುದು ಈ ಭಾಗದ ಲಿಂಬೆ ಬೆಳೆಗಾರರಿಗೆ ನಿರಾಶೆಯುಂಟು ಮಾಡಿದೆ.

ಜಿಲ್ಲೆಯಲ್ಲಿ 7000 ಹೆಕ್ಟೇರ್‌ ಪ್ರದೇಶದಲ್ಲಿನ ಲಿಂಬೆ ಬೆಳೆ ಮಳೆಯ ಕೊರತೆಯಿಂದ ಹಾನಿಯಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಲಿಂಬೆ ಬೆಳೆ ಹಾನಿಯಾದ ರೈತರಿಗೆ ರಾಜ್ಯ ಸರ್ಕಾರ 2 ಸಾವಿರ ನೇರವಾಗಿ ರೈತರ ಖಾತೆಗೆ ಹಾಕುತ್ತಿದ್ದು, ಲಿಂಬೆ ಬೆಳೆಗಾರರಿಗೆ ಸರ್ಕಾರಿದಂದ ವಿಶೇಷ ಅನುದಾನ ಬಿಡುಗಡೆಯಾಗಿರುವುದಿಲ್ಲ. ಬಿಡುಗಡೆಯಾದ ಕೂಡಲೇ ತಿಳಿಸಲಾಗುತ್ತದೆ ಎಂದು ಇಂಡಿ ರಾಜ್ಯ ಲಿಂಬೆ ಅಭಿವೃದ್ಧಿ ನಿಗಮದ ಎಂಡಿ ರಾಹುಲಕುಮಾರ ಭಾವಿದೊಡ್ಡಿ ತಿಳಿಸಿದ್ದಾರೆ.  

ವಿಜಯಪುರ: ಸಿಂದಗಿ ತಾಲೂಕು ಸೇರ್ಪಡೆಗೆ ಆಗ್ರಹಿಸಿ ಗಬಸಾವಳಗಿ ಗ್ರಾಮಸ್ಥರು ಹೋರಾಟ!

ಮುಂಗಾರು ಮಳೆಯ ಕೊರತೆಯಿಂದ ಇಂಡಿ ಹಾಗೂ ಚಡಚಣ ತಾಲೂಕುಗಳು ಸೇರಿ ಒಟ್ಟು 3560 ಹೆಕ್ಟೇರ್‌ ಪ್ರದೇಶದಲ್ಲಿನ ಲಿಂಬೆ ಬೆಳೆ ನೀರಿನ ಕೊರತೆಯಿಂದ ಒಣಗಿವೆ. ಮುಂಗಾರು ಮಳೆಯೂ ಸರಿಯಾಗಿ ಬಾರದೆ ಇರುವುದರಿಂದ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗಿ ಮತ್ತಷ್ಟು ಬೆಳೆಗಳು ಹಾನಿಯಾಗುವ ಸಾಧ್ಯತೆ ಇದೆ. ಹಿಂಗಾರು ಮಳೆಯಿಂದ ಲಿಂಬೆ ಹಾಗೂ ಇತರೆ ತೋಟಗಾರಿಕೆ ಬೆಳೆಗಳು ಹಾನಿಯಾದ ಬಗ್ಗೆ ಮಾರ್ಚ್‌ ತಿಂಗಳಲ್ಲಿ ಸರ್ವೆ ಮಾಡಿದಾಗ ತಿಳಿದು ಬರುತ್ತದೆ. ಮುಂಗಾರು ಮಳೆ ಬಾರದೆ ಇರುವುದರಿಂದ ಹಾನಿಯಾದ ತೋಟಗಾರಿಕೆ ಬೆಳೆಗಳಿಗೆ ಪರಿಹಾರಕ್ಕಾಗಿ ₹7.41 ಕೋಟಿಗಳ ಪ್ರಸ್ತಾವನೆಯನ್ನು ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಇಂಡಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಚ್‌.ಎಸ್‌.ಪಾಟೀಲ ಹೇಳಿದ್ದಾರೆ.  

ರಾಜ್ಯಮಟ್ಟದ ಲಿಂಬೆ ಅಭಿವೃದ್ಧಿ ನಿಗಮ ಇಂಡಿಯಲ್ಲಿ ಸ್ಥಾಪನೆ ಮಾಡಿದ್ದು ಶ್ಲಾಘನೀಯ. ಆದರೆ ಲಿಂಬೆ ಅಭಿವೃದ್ಧಿ ನಿಗಮ ಲಿಂಬೆ ಬೆಳೆಗಾರರ ಸಹಾಯಕ್ಕೆ ಬಾರದಿದ್ದರೆ, ಲಿಂಬೆ ಅಭಿವೃದ್ಧಿ ಸ್ಥಾಪನೆ ಮಾಡಿದ್ದು ಏನು ಸ್ವಾರ್ಥಕವಾಗುವುದಿಲ್ಲ. ಲಿಂಬೆ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಿ, ಲಿಂಬೆ ಬೆಳೆಗಾರರು ಸಂಕಷ್ಟದಲ್ಲಿ ಇದ್ದಾಗ ಅವರ ಸಹಾಯಕ್ಕೆ ಬರುವಂತೆ ಅಭಿವೃದ್ದಿದ್ಧಿ ನಿಗಮ ಬರಬೇಕು ಎಂದು ನಿಂಬಾಳ ರೈತ ಲಾಯಪ್ಪ ದೊಡ್ಡಮನಿ ತಿಳಿಸಿದ್ದಾರೆ. 

click me!