ಬೆಂಗಳೂರು; ಬಿಂಗಿಪುರ ಕೆರೆಗೆ ಹೊಸ ಚೈತನ್ಯ ನೀಡಿದ ಅಲ್ಲೆರ್ಗನ್ ಸಂಸ್ಥೆ

By Suvarna NewsFirst Published Aug 27, 2021, 9:23 PM IST
Highlights

* ಅಲ್ಲೆರ್ಗನ್ ಸಂಸ್ಥೆಯಿಂದ ಬಿಂಗಿಪುರ ಕೆರೆಗೆ ಕಾಯಕಲ್ಪ
* ಗ್ರೀನ್ ಯಾತ್ರ ಮತ್ತು ಕೆರೆ ಸಂರಕ್ಷಕ ಆನಂದ್ ಮಲ್ಲಿಗವಾಡ್ ಸಹಭಾಗಿತ್ವದಲ್ಲಿ ಕೆರೆಯ ಪುನರುಜ್ಜೀವನ
* ಸುತ್ತಮುತ್ತಲಿನ 4 ಗ್ರಾಮಗಳ 5500 ಜನರಿಗೆ ಉತ್ತಮ ಗುಣಮಟ್ಟದ ಕುಡಿಯುವ ನೀರು ಪೂರೈಕೆಗೆ ಸಹಕಾರಿ
* 4-5 ಕಿಲೋಮೀಟರ್ ವ್ಯಾಪ್ತಿಯ 200-300 ಬೋರ್ ವೆಲ್ ಗಳ ಅಂತರ್ಜಲ ಮಟ್ಟ ಸುಧಾರಣೆ

ಬೆಂಗಳೂರು(ಆ. 27)  AbbVie ಕಂಪನಿಯ ಸಮೂಹ ಸಂಸ್ಥೆಯಾಗಿರುವ ಅಲ್ಲೆರ್ಗನ್ ತನ್ನ ಸಿಎಸ್ಆರ್ ಬದ್ಧತೆಯ ಭಾಗವಾಗಿ ಗ್ರೀನ್ ಯಾತ್ರ ಟ್ರಸ್ಟ್ ಮತ್ತು  ಆನಂದ್ ಮಲ್ಲಿಗವಾಡ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೆಂಗಳೂರಿನ 28.1 ಎಕರೆ ವಿಸ್ತೀರ್ಣದ ಬಿಂಗಿಪುರ ಕೆರೆಯನ್ನು ಪುನರುಜ್ಜೀವನಗೊಳಿಸಿದೆ.

ಈ ಮೂಲಕ ಕೆರೆಯ ನೀರನ್ನು ವರ್ಷವಿಡೀ ಬಹುಪಯೋಗಕ್ಕೆ ಬಳಸಿಕೊಳ್ಳುವುದನ್ನು ಖಾತರಿಪಡಿಸಿದೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಕೃಷ್ಣಪ್ಪ, ಜಿಲ್ಲಾಧಿಕಾರಿ ಜೆ.ಮಂಜುನಾಥ್, ತಹಶೀಲ್ದಾರ್ ಮಲ್ಲೇಶ್, ಗ್ರಾಮಪಂಚಾಯ್ತಿ ಅಧ್ಯಕ್ಷ ದಿನೇಶ್ ಮತ್ತು ಸಾದಿಕ್ ಪಾಶ ಸೇರಿದಂತೆ ಜಯಕರ್ನಾಟಕ ಜನಪರ ವೇದಿಕೆಯ ಪದಾಧಿಕಾರಿಗಳು, ಐಕೇರ್ ಬ್ರಿಗೇಡ್ ತಂಡ ಮತ್ತು ಬಿಂಗಿಪುರ ಗ್ರಾಮಸ್ಥರ ಸಮ್ಮುಖದಲ್ಲಿ ಪುನರುಜ್ಜೀವನಗೊಂಡ ಕೆರೆಯನ್ನು ಉದ್ಘಾಟಿಸಲಾಯಿತು.

ಈ ಯೋಜನೆಯಡಿ ಕೆರೆಯ ನೀರಿನಲ್ಲಿರುವ ಮಲಿನವನ್ನು ತೆಗೆದುಹಾಕುವುದು, ಹೂಳು ತೆಗೆಯುವುದು ಮತ್ತು ಸ್ಟ್ರೀಂಗಳನ್ನು ಸ್ವಚ್ಛಗೊಳಿಸುವ ಮೂಲಕ ಕೆರೆಗೆ ಸರಾಗವಾಗಿ ನೀರು ಹರಿಯುವಂತೆ ಮಾಡಲಾಗಿದೆ. ಇದರಿಂದಾಗಿ ಮಳೆನೀರು ಸಮರ್ಪಕವಾಗಿ ಕೆರೆಯಲ್ಲಿ ಸಂಗ್ರಹವಾಗುತ್ತದೆ. ಇದಲ್ಲದೇ, ಹೂಳನ್ನು ಶಕ್ತಿಯುತವಾದ ಬಂಡುಗಳನ್ನು ನಿರ್ಮಾಣ ಮಾಡಲು ಬಳಸಲಾಗಿದ್ದು, ಸುತ್ತಮುತ್ತಲಿನ ನಾಗರಿಕರಿಗೆ ಒಂದು ಉತ್ತಮವಾದ ವಾಕಿಂಗ್ ಪಥ ನಿರ್ಮಾಣವಾಗುವ ಜತೆಗೆ ಒತ್ತುವರಿ ತಪ್ಪಿದಂತಾಗಿದೆ. ಇದೀಗ ಕೆರೆಯು ಅತ್ಯಂತ ಸುರಕ್ಷಿತವಾಗಿದೆ ಮತ್ತು ಮಕ್ಕಳು ಹಾಗೂ ಸಾಕು ಪ್ರಾಣಿಗಳಿಗೆ ಸೂಕ್ತವಾದ ತಾಣವಾಗಿದೆ. ಏಕೆಂದರೆ,  ಇದರ ಆಳವಿಲ್ಲದ ಮಟ್ಟದಿಂದಾಗಿ ಸುತ್ತಮುತ್ತಲಿನ ಸಮುದಾಯದ ದಿನಚರಿಗೆ ಯಾವುದೇ ಅಡ್ಡಿ ಉಂಟಾಗುವುದಿಲ್ಲ.

AbbVie ಕಂಪನಿಯ ಅಲ್ಲರ್ಗನ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಪ್ರಧಾನ ವ್ಯವಸ್ಥಾಪಕ ಸುರೇಶ್ ಪಟ್ಟಥಿಲ್  ಮಾತನಾಡಿ, ಅಲರ್ಗನ್ ನಾವು ಪರಿಸರದ ಸುಸ್ಥಿರತೆ ಮತ್ತು ರಕ್ಷಣೆಗೆ ಬದ್ಧರಾಗಿದ್ದೇವೆ. ನಾವು ಬಿಂಗಿಪುರ ಕೆರೆ ಪುನರುಜ್ಜೀವನ ಉಪಕ್ರಮಕ್ಕಾಗಿ ಗ್ರೀನ್ ಯಾತ್ರ ಟ್ರಸ್ಟ್ ಗೆ ಬೆಂಬಲವಾಗಿ ನಿಂತಿದ್ದೇವೆ ಎಂದರು.

ಕೆರೆಯು 4.5 ಲಕ್ಷದಿಂದ 4.75 ಲಕ್ಷ ಕ್ಯೂಬಿಕ್ ಮೀಟರ್ ನಷ್ಟು ನೀರು ಶೇಖರಣೆ ಸಾಮರ್ಥ್ಯವನ್ನು ಹೊಂದಿದೆ. ಇದರ ಪುನರುಜ್ಜೀವನದ ನಂತರ 4 ರಿಂದ 5 ಕಿಲೋಮೀಟರ್ ಸುತ್ತಮುತ್ತ ಇರುವ 200 ರಿಂದ 300 ಬೋರ್ ವೆಲ್ ಗಳ ಅಂತರ್ಜಲ ಮಟ್ಟ ಸುಧಾರಣೆಯಾಗಲಿದೆ. ನಾಲ್ಕು ಗ್ರಾಮಗಳ 5500 ಕ್ಕೂ ಹೆಚ್ಚು ಜನರಿಗೆ ಪ್ರಯೋಜನವಾಗಲಿದೆ ಮತ್ತು ಅವರಿಗೆ ಉತ್ತಮ ಗುಣಮಟ್ಟದ ಕುಡಿಯುವ ನೀರು ಲಭ್ಯವಾಗಲಿದೆ. ಸಂಸ್ಕರಿತ ತ್ಯಾಜ್ಯ ನೀರನ್ನು ಕೆರೆಯಿಂದ ಹೊರ ಬಿಡಲಿದ್ದು, ಇದರಿಂದ 50 ರಿಂದ 75 ಎಕರೆಯಲ್ಲಿ ಕೃಷಿ ಬಳಕೆ ಮಾಡಿಕೊಳ್ಳಬಹುದಾಗಿದೆ.
 
ವಿಶೇಷವೆಂದರೆ, ಬಿಂಗಿಪುರ ಕೆರೆಯನ್ನು ಸುಸ್ಥಿರವಾದ ತಾಂತ್ರಿಕತೆಗಳನ್ನು ಬಳಸಿಕೊಂಡು ಪರಿಸರಸ್ನೇಹಿಯಾಗಿ ಪುನರುಜ್ಜೀವನಗೊಳಿಸಲಾಗುತ್ತಿದೆ. ಇದರೊಂದಿಗೆ ಅತ್ಯಾಧುನಿಕ ಪ್ರಾಕೃತಿಕ ತ್ಯಾಜ್ಯ ಸಂಸ್ಕರಣೆ ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತಿದೆ. ಇಲ್ಲಿ ಯಾವುದೇ ಕಲ್ಲು ಕಟ್ಟುವುದಾಗಲೀ, ಕಾಂಕ್ರೀಟ್, ಸ್ಟೀಲ್ ಅಥವಾ ಯಾವುದೇ ಆಧುನಿಕ ಉತ್ಪನ್ನಗಳನ್ನು ಬಳಕೆ ಮಾಡಲಾಗುತ್ತಿಲ್ಲ. ಅದೇ ರೀತಿ, ಈ ಕಾಮಗಾರಿಗಾಗಿ ವಿದ್ಯುತ್, ರಾಸಾಯನಿಕಗಳು ಅಥವಾ ಯಂತ್ರೋಪಕರಣಗಳನ್ನು ಬಳಕೆ ಮಾಡುತ್ತಿಲ್ಲ. ಇದರಿಂದ ಕಾರ್ಬನ್ ಪ್ರಮಾಣವು ಕಡಿಮೆಯಾಗಲಿದೆ ಮತ್ತು ಕೆರೆಯನ್ನು ಸಂಪೂರ್ಣವಾಗಿ ಪರಿಸರಸ್ನೇಹಿ ತಂತ್ರಗಳ ಮೂಲಕ ಪುನರುಜ್ಜೀವನಗೊಳಿಸಲಾಗುತ್ತಿದೆ ಹಾಗೂ ಕೆರೆಯ ಮೂಲವನ್ನು ಕಾಪಾಡಿಕೊಳ್ಳಲಾಗುತ್ತಿದೆ.

ಬೆಂಗಳೂರಿನ ಅರ್ಧ ಕೆರೆಗಳ ಪರಿಸ್ಥಿತಿ ಹೇಗಿದೆ?
 
 ಈ ಯೋಜನೆ ಬಗ್ಗೆ ಮಾತನಾಡಿದ ಕೆರೆ ಸಂರಕ್ಷಣಾಗಾರ ಮತ್ತು ಯೋಜನೆ ಉಸ್ತುವಾರಿ ಆನಂದ್ ಮಲ್ಲಿಗವಾಡ್, ಸಂರಕ್ಷಣಾ ಯೋಜನೆಗಳಿಗೆ ಉತ್ಸಾಹ, ಆಸಕ್ತಿ ಮತ್ತು ಬದ್ಧತೆಯ ಅಗತ್ಯವಿರುತ್ತದೆ. ಪ್ರಕೃತಿಯ ಕಡೆಗೆ ನಮ್ಮ ದೊಡ್ಡ ಜವಾಬ್ದಾರಿ ಇದೆ, ನಮಗಾಗಿ ಮಾತ್ರವಲ್ಲದೇ ನಮ್ಮನ್ನು ಅನುಸರಿಸುವ ಮುಂದಿನ ತಲೆಮಾರುಗಳಿಗೆ ಇದು ಮಾರ್ಗದರ್ಶನವಾಗಲಿದೆ. ಇದು ನನ್ನ ಹತ್ತನೇ ಕೆರೆ ಪುನರುಜ್ಜೀವನ ಯೋಜನೆಯಾಗಿದ್ದು, ಈ ಕೆರೆಯನ್ನು ಕೇವಲ 72 ದಿನಗಳಲ್ಲಿ ಪುನರುಜ್ಜೀವನಗೊಳಿಸಲಾಗಿದೆ. ಈ ಯೋಜನೆಯಲ್ಲಿ ನಮ್ಮ ಪಾಲುದಾರರಾದ AbbVie ಕಂಪನಿ ಮತ್ತು ಗ್ರೀನ್ ಯಾತ್ರ ಜತೆಗೆ ಕೈಜೋಡಿಸಿರುವುದಕ್ಕೆ ನನಗೆ ಸಂತಸವೆನಿಸುತ್ತಿದೆ. ನನ್ನ ಈ ಪ್ರಯತ್ನಕ್ಕೆ ಬೆಂಬಲ ನೀಡಿದ ಹುಲಿಮಂಗಲ ಗ್ರಾಮ ಮತ್ತು ಮತ್ತು ಅದರ ಗ್ರಾಮಸ್ಥರಿಗೆ ನಾನು ಅಭಿನಂದನೆ ಹೇಳುತ್ತೇವೆ ಎಂದು ತಿಳಿಸಿದರು.
 
ಗ್ರೀನ್ ಯಾತ್ರದ ಸಂಸ್ಥಾಪಕ ಪ್ರದೀಪ್ ತ್ರಿಪಾಠಿ ಅವರು ಮಾತನಾಡಿ, ವಿಶ್ವಭೂ ದಿನವಾದ 22 ಏಪ್ರಿಲ್ 2021 ರಂದು ಬಿಂಗಿಪುರ ಕೆರೆ ಪುನರುಜ್ಜೀವನ ಯೋಜನೆಗೆ ಚಾಲನೆ ನೀಡಿದೆವು. ಈ ಯೋಜನೆ ಕೈಗೆತ್ತಿಕೊಳ್ಳುವುದು ಅಷ್ಟೊಂದು ಸುಲಭವಾಗಿರಲಿಲ್ಲ ಮತ್ತು ನಾವು ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು’ ಎಂದರು.

ಕೊಳಗಳ ಸೃಷ್ಟಿ ಮತ್ತು ವಿವಿಧ ರೀತಿಯ ಸಸ್ಯಗಳ ಬಳಕೆ ಮತ್ತು ತೇಲುವ ದ್ವೀಪಗಳಂತಹ ನೈಸರ್ಗಿಕ ವಿಧಾನಗಳು ಕೆರೆಗೆ ಸೇರುವ ಮುನ್ನ ಕೊಳಚೆ ಮತ್ತು ಕಲುಷಿತ ನೀರನ್ನು ಸಂಸ್ಕರಿಸಲಾಗುತ್ತದೆ. ಈಗ ಈ ಕೆರೆಯು ಸ್ವಯಂಸ್ವಚ್ಛಗೊಳಿಸುವ ಮತ್ತು ಸ್ವಯಂಸಮರ್ಥನೀಯವಾದ ಕೆರೆಯಾಗಿದೆ ಎಂದು ಹೇಳಿದರು.

ಈ ಕೆರೆಯ ಕಾಯಕಲ್ಪದ ನಂತರ, ಮಳೆನೀರು ಮತ್ತು ಕೊಳಚೆ ನೀರು ಮಿಶ್ರಣವಾಗುವುದಿಲ್ಲ. ಮಳೆಗಾಲದಲ್ಲಿ ತುಂಬುವ ಕೆರೆಯಲ್ಲಿ ಚಳಿಗಾಲದಲ್ಲಿ ಶೇ.70 ರಷ್ಟು ಮತ್ತು ಬೇಸಿಗೆಕಾಲದಲ್ಲಿ ಶೇ.50 ರಷ್ಟು ನೀರು ಸಂಗ್ರಹವಾಗಿರುತ್ತದೆ. ಇದರ ಜತೆಗೆ ಕೆರೆಯ ಸುತ್ತಮುತ್ತ 1000 ಕ್ಕೂ ಅಧಿಕ ವಿವಿಧ ಜಾತಿಯ ಸಸ್ಯಗಳನ್ನು ನೆಡುವ ಮೂಲಕ ಕೆರೆಯ ಸೌಂದರ್ಯ ಹೆಚ್ಚಾಗುವಂತೆ ಮತ್ತು ಅದರ ಮೂಲ ಸ್ವರೂಪವನ್ನು ಕಾಯ್ದುಕೊಳ್ಳುವಂತೆ ಮಾಡಲಾಗಿದೆ.

click me!