ಚುನಾವಣಾ ಸಮೀಕ್ಷೆಗಳೆಲ್ಲಾ ಸುಳ್ಳು: ಎಚ್‌ಡಿಕೆ

Published : Apr 04, 2023, 09:31 AM IST
ಚುನಾವಣಾ ಸಮೀಕ್ಷೆಗಳೆಲ್ಲಾ ಸುಳ್ಳು: ಎಚ್‌ಡಿಕೆ

ಸಾರಾಂಶ

ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಯಾರೂ ನಂಬಬೇಡಿ. ಅದೆಲ್ಲವೂ ರಾಷ್ಟ್ರೀಯ ಪಕ್ಷಗಳು ದುಡ್ಡು ಕೊಟ್ಟು ಮಾಡಿಸುವ ಸರ್ವೆಗಳು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಗಿಂತ 10 ರಿಂದ 15 ಸ್ಥಾನ ಹೆಚ್ಚು ಜೆಡಿಎಸ್‌ ಗೆಲ್ಲುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸದಿಂದ ನುಡಿದರು.

 ಕೆ.ಆರ್‌.ಪೇಟೆ : ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಯಾರೂ ನಂಬಬೇಡಿ. ಅದೆಲ್ಲವೂ ರಾಷ್ಟ್ರೀಯ ಪಕ್ಷಗಳು ದುಡ್ಡು ಕೊಟ್ಟು ಮಾಡಿಸುವ ಸರ್ವೆಗಳು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಗಿಂತ 10 ರಿಂದ 15 ಸ್ಥಾನ ಹೆಚ್ಚು ಜೆಡಿಎಸ್‌ ಗೆಲ್ಲುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸದಿಂದ ನುಡಿದರು.

ಪಟ್ಟಣದಲ್ಲಿ ಸೋಮವಾರ ಕಾಂಗ್ರೆಸ್‌-ಬಿಜೆಪಿ ತೊರೆದು ಜೆಡಿಎಸ್‌ ಪಕ್ಷ ಸೇರಿದವರನ್ನು ಸೇರ್ಪಡೆ ಮಾಡಿಕೊಂಡು ಮಾತನಾಡಿದರು. ರಾಜ್ಯದಲ್ಲಿ ಜೆಡಿಎಸ್‌ ಪರ ಸುನಾಮಿ ಎದ್ದಿದೆ. ಜೆಡಿಎಸ್‌ ಗೆಲ್ಲಿಸಲು ಕೆಲವರು ಪಣ ತೊಟ್ಟಿದ್ದಾರೆ. ಮೊದಲು ನಮ್ಮ ಮನೆಯಲ್ಲಿದ್ದು ಹೋದವರು ಮತ್ತೆ ಪಕ್ಷ ಸೇರುತ್ತಿದ್ದಾರೆ. ಇದರಿಂದ ನಮ್ಮ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ ಎಂದರು.

2018ರ ಚುನಾವಣೆಯಲ್ಲಿ ನಾನು ಮುಖ್ಯಮಂತ್ರಿಯಾಗಬೇಕೆಂಬ ಕಾರಣಕ್ಕೆ ಜಿಲ್ಲೆಯ ಏಳಕ್ಕೆ ಏಳು ಕ್ಷೇತ್ರಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿರಿ. ಜೆಡಿಎಸ್‌ಗೆ ಸಂಪೂರ್ಣ ಬಹುಮತ ಬಾರದಿದ್ದರೂ ಮುಖ್ಯಮಂತ್ರಿಯಾಗಿ ರೈತರ ಸಾಲಮನ್ನಾ ಮಾಡಿದೆ.

ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಮನೆಗೆ ಭೇಟಿಕೊಟ್ಟು ಪರಿಹಾರ ಕೊಟ್ಟೆಎಂದ ಕುಮಾರಸ್ವಾಮಿ, ಮುಖ್ಯಮಂತ್ರಿಯಾಗಿದ್ದ ವೇಳೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್‌ನಲ್ಲಿ 8 ಸಾವಿರ ಕೋಟಿ ರು. ಹಣ ಬಿಡುಗಡೆ ಮಾಡಿಸಿದೆ. ನಂತರ ಬಂದ ಸರ್ಕಾರ ಜಿಲ್ಲೆಯ ಅಭಿವೃದ್ಧಿಯನ್ನು ಮಣ್ಣುಪಾಲು ಮಾಡಿತು ಎಂದು ವಿಷಾದಿಸಿದರು.

ಈ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷವನ್ನು ಸೋಲಿಸಲು ಎರಡೂ ರಾಷ್ಟ್ರೀಯ ಪಕ್ಷಗಳು ಕುತಂತ್ರದ ರಾಜಕಾರಣ ಮಾಡುತ್ತಿವೆ. ಮೇಲುಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಹಾಕುವುದಿಲ್ಲವಂತೆ. ಇಂತಹ ತಂತ್ರಗಾರಿಕೆ ರಾಜಕಾರಣಗಳಿಗೆ ಜನರು ಮರುಳಾಗೋಲ್ಲ. ಜೆಡಿಎಸ್‌ ಗೆಲುವಿನ ನಾಗಾಲೋಟ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಕೆ.ಆರ್‌.ಪೇಟೆ ಕ್ಷೇತ್ರದಲ್ಲಿರುವವರು ದೇವೇಗೌಡರ ಬಗ್ಗೆ ಅಭಿಮಾನ ಇಟ್ಟಿರುವ ಜನ. ಅವರೆಂದಿಗೂ ಗೌಡರಿಗೆ ಮೋಸ ಮಾಡುವುದಿಲ್ಲ. ಕೆ.ಆರ್‌.ಪೇಟೆ ದೇವೇಗೌಡರ ಮನೆ ಎಂಬ ಮಾತೂ ಇದೆ. ಎಚ್‌.ಟಿ.ಮಂಜು ಅವರನ್ನು ಅಭ್ಯರ್ಥಿ ಮಾಡುವುದಕ್ಕೆ ಎಲ್ಲರನ್ನೂ ಒಟ್ಟಿಗೆ ಸೇರಿಸುವ ಪ್ರಯತ್ನ ಮಾಡಿದ್ದೆ. ಆದರೆ, ನಮ್ಮವರೇ ಕೆಲವರು ಬೆನ್ನಿಗೆ ಚೂರಿ ಹಾಕಲು ಯತ್ನಿಸಿದ್ದಾರೆ. ಅವರಿಗೆ ಯಾರೂ ಮಾರುಹೋಗಬೇಡಿ ಎಂದು ಕಿವಿಮಾತು ಹೇಳಿದರು.

ಬಡ ಕುಟುಂಬಗಳ ಕಣ್ಣೀರು ಒರೆಸುವ ಉದ್ದೇಶದಿಂದ ಪಂಚರತ್ನ ಯೋಜನೆ ಜಾರಿಗೊಳಿಸುತ್ತಿದ್ದೇವೆ. ಯಾತ್ರೆ ವೇಳೆ ಅಭೂತಪೂರ್ವ ಬೆಂಬಲ ಕೊಟ್ಟಿದ್ದೀರಿ. ಯೋಜನೆಗಳಿಂದ ಪ್ರತಿ ಕುಟುಂಬಕ್ಕೂ ಅನುಕೂಲವಾಗಲಿದೆ. ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದು ಭರವಸೆಯ ಮಾತುಗಳನ್ನಾಡಿದರು.

ಈಗಾಗಲೇ ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನಾನು ಮಾಜಿ ಸಿಎಂ ಆಗಿದ್ದೇನೆ. ಮೂರನೇ ಬಾರಿ ಸಿಎಂ ಆಗೋ ದುರುದ್ದೇಶ ನನಗಿಲ್ಲ. ಬಡವರ ಸೇವೆಯನ್ನು ಗುರಿಯಾಗಿಸಿಕೊಂಡು ಕೆಲಸ ಮಾಡಲು ಬಂದಿದ್ದೇನೆ. ನನ್ನ ಈ ಹೋರಾಟ ಸ್ವಾರ್ಥಕ್ಕಲ್ಲ. ನನಗೆ ಯಾವುದೇ ಜಾತಿ, ಮತ, ಧರ್ಮ ಮುಖ್ಯವಲ್ಲ. ಯಾರೇ ಬಡವರು ನನ್ನ ಬಳಿ ಬಂದರೂ ನಿಮ್ಮ ಕಷ್ಟಏನೂಂತ ಕೇಳ್ತೀನಿ. ಯಾರೂ ಜಾತಿಯ ವ್ಯಾಮೋಹಕ್ಕೆ ಮಾರು ಹೋಗಬೇಡಿ. ಕೆಲವರು ನಮ್ಮವರೇ ನಮ್ಮ ಅಭ್ಯರ್ಥಿ ಸೋಲಿಸಲು ಕೈ ಜೋಡಿಸುತ್ತಿದ್ದಾರೆ. ನನಗಾಗಿ ಎಚ್‌.ಟಿ.ಮಂಜು ಅವರನ್ನು ನಂಬಿ ಗೆಲ್ಲಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು, ಜೆಡಿಎಸ್‌ ಅಭ್ಯರ್ಥಿ ಎಚ್‌.ಟಿ.ಮಂಜು ಇದ್ದರು.

ಶಿವ ನಿಮ್ಮನ್ನು ಸದ್ಯಕ್ಕೆ ಕರೆದುಕೊಳ್ಳೋಲ್ಲ: ಕುಮಾರಸ್ವಾಮಿ

  ಕೆ.ಆರ್‌.ಪೇಟೆ : ಜೀವನದಲ್ಲಿ ಕೊನೆ ಹಂತಕ್ಕೆ ಬಂದುಬಿಟ್ಟಿದ್ದೇನೆ. ದೇವರು ನನ್ನನ್ನು ಕರೆದುಕೊಂಡು ಬಿಡುತ್ತಾನೆ ಎಂದು ಕೊಂಡಿದ್ದೀರಾ.

ಮನಸ್ಸಿನಲ್ಲಿರುವ ಈ ಯೋಚನೆ ತೆಗೆದು ಹಾಕಿ, ಶಿವ ನಿಮ್ಮನ್ನು ಸದ್ಯಕ್ಕೆ ಕರೆದುಕೊಳ್ಳಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭಾವುಕರಾಗಿ ಮಾತನಾಡಿದರು.

ಬಡವರು, ರೈತರ ಪರ ಕಾರ್ಯಕ್ರಮ ತರುವುದು ದೇವೇಗೌಡರ ಕನಸು. ಅವರ ಕನಸು ನನಸು ಮಾಡುವುದಕ್ಕೆ ನಾನು ಶ್ರಮಿಸುತ್ತಿದ್ದೇನೆ. ನೀವು ಮಾಡಲಿಕ್ಕೆ ಆಗದ ಸಾಧನೆ ನಾನು ಮಾಡುತ್ತೇನೆ. ಅದನ್ನು ನಿಮ್ಮ ಕಣ್ಣಾರೆ ನೀವು ನೋಡಬೇಕು. ನಿಮ್ಮ ಆಸೆಯನ್ನು ಮಗನಾಗಿ ಈಡೇರಿಸುವ ಸವಾಲು ಸ್ವೀಕರಿಸಿದ್ದೇನೆ. ಅಲ್ಲಿವರೆಗೂ ನೀವು ಬದುಕಿರುತ್ತೀರಿ. ಯಾವುದೇ ಕಾರಣಕ್ಕೂ ಮಾನಸಿಕ ಚಿಂತನೆಗೆ ಒಳಗಾಗಬೇಡಿ. ನಿಮ್ಮ ಪ್ರಾಣ ಹೋಗಬಾರದು. ನಮಗಾಗಿ ನೀವು ಬದುಕಿರಬೇಕು ಎಂದು ತಂದೆಯನ್ನು ನೆನೆದು ಮಾತನಾಡಿದರು.

PREV
Read more Articles on
click me!

Recommended Stories

ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ