
ಕೊಪ್ಪಳ (ಏ.12) ರಾಜ್ಯದಲ್ಲಿ ಮುಸ್ಲಿಂ ಯುವಕರಿಂದ ಲವ್ ಜಿಹಾದ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಸರ್ಕಾರ ಮತ್ತು ವಿಪಕ್ಷ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಹುಬ್ಬಳ್ಳಿಯಲ್ಲಿ ಎರಡ್ಮೂರು ಲವ್ ಜಿಹಾದ್ ಕೇಸ್ಗಳು ವರದಿಯಾಗಿರುವ ಬೆನ್ನಲ್ಲೇ ಕೊಪ್ಪಳದಲ್ಲಿಯೂ ಶನಿವಾರ ಲವ್ ಜಿಹಾದ್ ಆರೋಪ ಕೇಳಿಬಂದಿದೆ.
ಹೌದು, ಪ್ರೀತಿಯ ನಾಟಕವಾಡಿ ಹಿಂದೂ ವಿದ್ಯಾರ್ಥಿಯನ್ನು ಮುಸ್ಲಿಂ ಯುವಕನೋರ್ವ ಪುಸಲಾಯಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದ್ದು, ಇದರ ಹಿಂದೆ ಲವ್ ಜಿಹಾದ್ ಉದ್ದೇಶವಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಆ ಆರೋಪಿಯನ್ನು ಯುವಕರ ಗುಂಪೊಂದು ಪೊಲೀಸರ ವಶಕ್ಕೆ ಒಪ್ಪಿಸಿದೆ.
ಕೊಪ್ಪಳ ತಾಲೂಕಿನ ಕಂಪ್ಲಿ ಗ್ರಾಮದ ಮುಸ್ತಾಫ್ ಎನ್ನುವಾತ ಕುಷ್ಟಗಿ ತಾಲೂಕಿನ ಗ್ರಾಮವೊಂದರಲ್ಲಿ ವಿದ್ಯಾರ್ಥಿನಿಯ ಜತೆಗಿದ್ದ ವೇಳೆ ಕೆಲ ಹಿಂದೂ ಯುವಕರ ಕೈಗೆ ಸಿಕ್ಕಿಕೊಂಡಿದ್ದಾನೆ. ಈ ವೇಳೆ ಯುವಕರು ಆತನ ಮೊಬೈಲ್ ಪರಿಶೀಲಿಸಿದಾಗ ಹಿಂದೂ ಯುವತಿಯರ ಪೋಟೋ, ವಿಡಿಯೋ ಪತ್ತೆಯಾಗಿವೆ. ಅಲ್ಲದೇ ಈತ ಜೂಜಾಟ, ಮಟ್ಕಾ ದಂಧೆ ನಡೆಸುತ್ತಿದ್ದ ಎಂಬ ಮಾಹಿತಿ ದೊರಕಿದೆ. ಮುಸ್ತಾಫ್ ತನ್ನ ಮೊಬೈಲ್ನಲ್ಲಿ ಹಿಂದೂ ಯುವತಿಯರ ಜತೆಗೆ ಇರುವ ಅಶ್ಲೀಲ ವಿಡಿಯೋ, ನಗ್ನ ಫೋಟೋ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.
ಯುವಕರು ನಗರ ಪೊಲೀಸ್ ಠಾಣೆಗೆ ಮುಸ್ತಾಫ್ನನ್ನು ಒಪ್ಪಿಸಿದ್ದಾರೆ. ಈ ವೇಳೆ ಆತ ಹಿಂದೂ ಯುವತಿಯನ್ನು ಮದುವೆ ಆಗುವುದಾಗಿ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಯ ಮುಖಂಡರು ಎಸ್ಪಿಗೆ ಮನವಿ ಸಲ್ಲಿಸಿ ಕೂಡಲೇ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ.ಸಂಗಮೇಶ ಹಿರೇಮಠ ಜಿಲ್ಲೆಯಲ್ಲಿ ಇಂತಹ ಕೃತ್ಯ ನಡೆಯುತ್ತಿದ್ದು, ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ವೇಳೆ ಮನವಿ ಸ್ವೀಕರಿಸಿದ ಎಸ್ಪಿ ಡಾ.ರಾಮ ಅರಸಿದ್ದಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಒಂದೇ ವಾರದಲ್ಲಿ ಹುಬ್ಬಳ್ಳಿಯಲ್ಲಿ 3 ಲವ್ ಜಿಹಾದ್ ಪ್ರಕರಣಗಳು ದಾಖಲಾಗಿವೆ. ಸಮೀರ್ ಮುಲ್ಲಾ ಎಂಬ ಜಿಮ್ ಟ್ರೈನರ್ ಹಿಂದೂ ಯುವತಿಯನ್ನು ಗುರಿಯಾಗಿಸಿಕೊಂಡು ಲವ್ ಮಾಡಿ ದೈಹಿಕ ಸಂಪರ್ಕ ಬೆಳೆಸುತ್ತಿದ್ದ. ಆ ಬಳಿಕ ಹಣ ವಸೂಲಿ ಮಾಡಿ ಗರ್ಭನಿರೋಧಕ ಔಷಧಿ ತೆಗೆದುಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದ. ಈ ರೀತಿ ಹಲವು ಯುವತಿಯರಿಗೆ ಆತ ವಂಚಿಸಿದ ಆರೋಪಗಳೂ ಕೇಳಿಬಂದಿವೆ. ಅಲ್ಲದೇ, ಶುಕ್ರವಾರ ಗಾಂಜಾ ವ್ಯಸನಿಯಾಗಿರುವ ಸಮೀರ್ ಬೂದಿಹಾಳ ಎಂಬಾತ ಹಿಂದೂ ಯುವತಿಯರಿಗೆ ಡ್ರಗ್ಸ್ ನೀಡಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಹಿಂದೂ ಸಂಘಟನೆಗಳು ಆಪಾದಿಸಿದ್ದು, ಆತನ ಫೋನ್ನಲ್ಲಿ ಮಾದಕ ವಸ್ತು ಸೇವನೆ ದೃಶ್ಯಗಳು ಲಭ್ಯವಾಗಿವೆ ಎನ್ನಲಾಗಿದೆ.-
ಇದೊಂದು ಜಾಲ
ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೊಂದು ಜಾಲ ಇದೆ. ಬಹಳಷ್ಟು ಕಡೆ ಲವ್ ಜಿಹಾದ್ಗಳು ನಡೆಯುತ್ತಿವೆ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಜನರು ಬೀದಿಗೆ ಇಳಿಯುವಂತಹ ಸ್ಥಿತಿಯನ್ನು ಸರ್ಕಾರ ತರಬಾರದು.
-ಪ್ರಹ್ಲಾದ ಜೋಶಿ, ಕೇಂದ್ರ ಸಚಿವ.