ಕನ್ನಡ ಕಟ್ಟಿದವರು: ಕನ್ನಡಕ್ಕಾಗಿ ಕೈ ಎತ್ತಿದ ಮೈಸೂರಿನ ತ್ಯಾಗರಾಜ!

By Kannadaprabha NewsFirst Published Nov 18, 2019, 12:10 PM IST
Highlights

ತಮಿಳುನಾಡು ಮತ್ತು ಕೇರಳಕ್ಕೆ ಹೋದಾಗ ಕನ್ನಡ ಬಂದರೂ, ಅವರ ಮಾತೃಭಾಷೆ ಮಾತಾಡಿಭಾಷಾಭಿಮಾನ ಮೆರೆಯುತ್ತಾರೆ. ನಾವು ಮಾತ್ರ ಹೊರಗಿನವರೊಂದಿಗೆ ಮತ್ತು ನಮ್ಮ ನಡುವೆ ಕನ್ನಡದಲ್ಲಿ ಮಾತನಾಡದಿರುವುದನ್ನು ಕಂಡು ಖೇದವಾಯ್ತು.ನನ್ನ ಕನ್ನಡಾಭಿಮಾನ ಜಾಗೃತವಾಯ್ತು ಎನ್ನುತ್ತಾರೆ ಮೈಸೂರಿನ ತ್ಯಾಗರಾಜ .

ಮಹೇಂದ್ರ ದೇವನೂರು

ಕನ್ನಡಕ್ಕಾಗಿ ಕೈ ಎತ್ತು
ನಿನ್ನ ಕೈ ಕಲ್ಪವೃಕ್ಷವಾಗುವುದು
ಕನ್ನಡಕ್ಕಾಗಿ ದನಿ ಎತ್ತು
ಅಲ್ಲಿ ಪಾಂಚಜನ್ಯ ಮೊಳಗುವುದು
ಕನ್ನಡಕ್ಕಾಗಿ ಕಿರು ಬೆರಳೆತ್ತಿದರೂ ಸಾಕು
ಅದೇ ಗೋವರ್ಧನಗಿರಿಯಾಗುವುದು

ಕನ್ನಡದ ಬಗೆಗಿನ ಅಭಿಮಾನ ಮೊಳೆಯುವಂತೆ ಮಾಡಲು ರಸಋಷಿ ಕುವೆಂಪು ಅವರು ಆಡಿದ ಮಾತುಗಳಿವು. ಈ ಕವಿ ವಾಣಿಗೆ ಪೂರಕ ಎಂಬಂತೆ, ನಿರ್ವಾಹಕ ತ್ಯಾಗರಾಜ ಅವರು ಕನ್ನಡ ಕೈಂಕರ್ಯದಲ್ಲಿ ತೊಡಗಿದ್ದಾರೆ. ವೃತ್ತಿ ಬದುಕಿಗೆ 1993ರಲ್ಲಿ ಸೇರಿದರೂ ಕನ್ನಡಾಭಿಮಾನ ಮೊಳೆತದ್ದು1999ರಿಂದ ಈಚೆಗೆ.

ಕನ್ನಡ ಕಟ್ಟಿದವರು: ಐಸೆಲ್ ಟೆಕ್ನಾಲಜಿಸ್‌ನಿಂದ ಕನ್ನಡ ಮಕ್ಕಳಿಗೆ ಪಾಠ!

ಮೂಲತಃ ಮೈಸೂರಿನವರಾದ ತ್ಯಾಗರಾಜ ಅವರು ನಗರ ಸಾರಿಗೆ ಬಸ್ನಲ್ಲಿ ನಿರ್ವಹಕರಾಗಿ ಕಳೆದ 26 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. 1993 ಅಕ್ಟೋಬರ್ 23ಕ್ಕೆ ವೃತ್ತಿ ಜೀವನ ಆರಂಭಿಸಿದರು. ಮೊದಲು ನಗರ ಸಾರಿಗೆ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ತ್ಯಾಗರಾಜು ಅವರು ಎರವಲು ಸೇವೆಯ ಮೇಲೆ ಕೆ.ಆರ್. ನಗರ, ಅರಸೀಕೆರೆ, ತುರುವೇಕೆರೆ, ರಾಮನಾಥಪುರ ಘಟಕದಲ್ಲಿ ಕಾರ್ಯ ನಿರ್ವಹಿಸಿ, 1999ರಲ್ಲಿ ಮೈಸೂರು ಗ್ರಾಮಾಂತರ-2ನೇ ಘಟಕಕ್ಕೆ ಬಂದರು.

ಮೈಸೂರಿನ ಗ್ರಾಮಾಂತರ ಘಟಕ- 2 ಹೊರ ರಾಜ್ಯಕ್ಕೆ ಸಾರಿಗೆ ಸೇವೆ ಒದಗಿಸುತ್ತದೆ. ಈ ಘಟಕದಲ್ಲಿ ನಿರ್ವಹಕರಾಗಿ ಕೆಲಸ ಆರಂಭಿಸಿದ ತ್ಯಾಗರಾಜ ಅವರಿಗೆ ತಮಿಳುನಾಡು ಮತ್ತು ಕೇರಳದಲ್ಲಿನ ಜನರಲ್ಲಿ ಇರುವ ಭಾಷಾಭಿ ಮಾನ ಕಂಡು ಬೆರಗಾಗಿ, ಕನ್ನಡಾಭಿಮಾನ ಬೆಳೆಸಿಕೊಂಡರು. ಅವರೇ ನಮ್ಮ ರಾಜ್ಯದಲ್ಲಿ, ಅಂದರೆ ನಮ್ಮ ಮನೆಗೆ ಬಂದು ಜೀವನ ಮಾಡುತ್ತಿರುವಾಗ ನಾವೇಕೆ ಮಾತನಾಡಬಾರದು ಎಂದು ಕನ್ನಡದ ಬಗೆಗಿನ ಆಸಕ್ತಿ ಹೆಚ್ಚಾಯಿತು.

ಕನ್ನಡ ಕಟ್ಟಿದವರು: ಯಕ್ಷ ರಂಗದ ಜನಪ್ರಿಯ ತಾರೆ ಪಟ್ಲ ಸತೀಶ್ ಶೆಟ್ಟಿ!

ತಮಿಳುನಾಡು ಮತ್ತು ಕೇರಳಕ್ಕೆ ಹೋದಾಗ ಅಲ್ಲಿನ ಜನರಿಗೆ ಕನ್ನಡ ಬಂದರೂ, ನಮ್ಮ ಜೊತೆ ಕನ್ನಡದಲ್ಲಿ ವ್ಯವಹರಿಸದೆ, ತಮ್ಮ ಭಾಷೆಯಲ್ಲಿ ಮಾತನಾಡುವ ಮೂಲಕ ಎಷ್ಟು ಭಾಷಾಭಿಮಾನ ಹೊಂದಿದ್ದಾರೆ ಎಂಬುದನ್ನು ನೋಡಿ ಆಶ್ಚರ್ಯವಾಯಿತು. ಹಾಗಿದ್ದೂ ನಾವು ಹೊರಗಿನವರು ಬಂದಾಗ ಮತ್ತು ನಮ್ಮ ನಮ್ಮ ನಡುವೆಯೇ ಕನ್ನಡದಲ್ಲಿ ಮಾತನಾಡದಿರುವುದನ್ನು ಕಂಡು ಮರುಕಪಟ್ಟು ಕನ್ನಡದಲ್ಲಿಯೇ ಮಾತನಾಡಲು ಆರಂಭಿಸಿದೆ ಎನ್ನುತ್ತಾರೆ ತ್ಯಾಗರಾಜ.

ಮೊದಲಿಗೆ ಇವರು ಪದವಿಯಲ್ಲಿ ಓದಿದ್ದು ವಿಜ್ಞಾನ. ಆದರೆ ದ್ವಿತೀಯ ವರ್ಷದ ವೇಳೆಗೆ ಎರಡು ವಿಷಯದಲ್ಲಿ ಫೇಲ್ ಆದ್ದರಿಂದ ಕಲಾ ವಿಭಾಗ ಸೇರಿದರು. ಅಲ್ಲಿಯೂ ಎರಡನೇ ವರ್ಷ ಇಂಗ್ಲಿಷ್ ಫೇಲ್ ಆದ್ದರಿಂದ ಅಷ್ಟಕ್ಕೆ ವ್ಯಾಸಂಗ ಮೊಟಕುಗೊಳಿಸಿ ಕರ್ನಾಟಕ ಬಾಲ್ ಬೇರಿಂಗ್‌ಗೆ ಕೆಲಸಕ್ಕಾಗಿ ಸೇರಿದರು. ಕಂಪನಿಯು ನಷ್ಟದಲ್ಲಿ ಸಿಲುಕಿ ಮುಚ್ಚಿ ಹೋದ ಹಿನ್ನೆಲೆಯಲ್ಲಿ ತ್ಯಾಗರಾಜ ಅವರು ಸಾರಿಗೆ ಸಂಸ್ಥೆಗೆ ಪಾದಾರ್ಪಣೆ ಮಾಡಿದರು. ತಮಿಳು ಮತ್ತು ಕೇರಳ ಭಾಷಿಗರ ಭಾಷಾಭಿಮಾನದಿಂದ ಉತ್ತೇಜಿತರಾದ ತ್ಯಾಗರಾಜ ಅವರು, ಯಾರು ಏನೇ ಕೇಳಿದರೂ ಕನ್ನಡದಲ್ಲಿಯೇ ಉತ್ತರಿಸುತ್ತಾರೆ. ಇದರಿಂದಾಗಿ ಬಹಳಷ್ಟು ಮಂದಿ ಉತ್ತೇಜಿತರಾಗಿದ್ದಾರೆ.

ಕನ್ನಡ ಕಟ್ಟಿದವರು: ಉಚಿತವಾಗಿ ಕನ್ನಡ ಸುದ್ದಿ ಪತ್ರಿಕೆ ಹಂಚುವ ಪೇಪರ್ ಆಚಾರ್ಯ!

ಕೆಲವರು ಬಸ್ಸಿನಲ್ಲಿ ಟಿಕೆಟ್ ಕೇಳುವಾಗ ಕೆ.ಜಿ. ಕೊಪ್ಪಲಿಗೆ ಟಿಕೆಟ್ ಕೊಡುವಂತೆ ಕೇಳುತ್ತಾರೆ. ನಾನು ಕನ್ನೇಗೌಡನ ಕೊಪ್ಪಲಿಗಾ ಎಂದು ಕೇಳುತ್ತೇನೆ. ಆಗ ಅವರು ಇಲ್ಲ ಕೆ.ಜಿ. ಕೊಪ್ಪಲಿಗೆ ಎನ್ನುತ್ತಾರೆ. ಮತ್ತೆ ಕೆಲವರು ಬಲ್ಲಾಳ್ ವೃತ್ತಕ್ಕೆ ಟಿಕೆಟ್ ಕೇಳುತ್ತಾರೆ. ನಾನು ಅಶೋಕ ವೃತ್ತವೇ ಎಂದು ಕೇಳಿದಾಗ ಇಲ್ಲಾರೀ ಬಲ್ಲಾಳ್‌ಗೆ ಎನ್ನುತ್ತಾರೆ. ಆಗ ನಾನು ಅಯ್ಯೋ ಅಳಿಯ ಅಲ್ಲ ಮಗಳ ಗಂಡ, ಎರಡೂ ಒಂದೇ ಎಂದು ಉತ್ತರಿಸಿ ಟಿಕೆಟ್ ನೀಡುತ್ತೇನೆ. ಹೀಗಾಗಿ ಅನೇಕರಿಗೆ ಕೆಲವು ಬಡಾವಣೆಗಳ ವಾಸ್ತವ ಹೆಸರು ತಿಳಿಯುವಂತಾಗಿದೆ. ಜೊತೆಗೆ ನನ್ನ ಜೊತೆಯಲ್ಲೂ ಕನ್ನಡದಲ್ಲಿಯೇ
ಮಾತನಾಡಲು ಪ್ರಯತ್ನಿಸುತ್ತಾರೆ. ನಡು ನಡುವೆ ಆಂಗ್ಲ ಪದ ಬಳಸಿ ವಿಫಲರಾಗುತ್ತಾರೆ ಎಂದು ಕೆಲವು ಪ್ರಸಂಗವನ್ನು ತ್ಯಾಗರಾಜ ವಿವರಿಸಿದರು.

ನಾನು ಸಂಪೂರ್ಣವಾಗಿ ಕನ್ನಡದಲ್ಲಿಯೇ ಮಾತನಾಡುವುದನ್ನು ನೋಡಿ ಬಹಳ ಮಂದಿ ಖುಷಿ ಪಡುತ್ತಾರೆ. ಹಸ್ತಲಾಘವ ಮಾಡುತ್ತಾರೆ. ಬೇರೆಯವರಿಗೂ ನನ್ನ ಬಗ್ಗೆ ಪ್ರಯಾಣಿಕರು ಪ್ರಚಾರ ಮಾಡಿದ ಉದಾಹರಣೆಯೂ ಇದೆ. ನನ್ನ ಜೊತೆ ಮಾತನಾಡುವಾಗಲೂ ಕನ್ನಡದಲ್ಲಿ ಮಾತನಾಡಲುಯತ್ನಿಸುತ್ತಾರೆ. ಕೊನೆಯ ಕ್ಷಣದಲ್ಲಿ ವಿಫಲರಾಗುತ್ತಾರೆ ಎಂದರು. ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಬೇರೆಯವರಂತೆ ಆಡಂಬರ ಮಾಡುವುದಿಲ್ಲ. ಕೆಲವರೆಲ್ಲ ಆಶ್ವಯುಜ ಮತ್ತು ಕಾರ್ತಿಕ ಮಾಸದಲ್ಲಿ ಮಾತ್ರ ಕನ್ನಡ ರಾಜ್ಯೋತ್ಸವ ಆಚರಿಸುವುದು ನನಗಿಷ್ಟವಿಲ್ಲ. ಕನ್ನಡ ರಾಜ್ಯೋತ್ಸವವನ್ನು ಅಂತರಾಳದಿಂದ ಮಾಡಬೇಕು. ಇಲ್ಲವಾದರೆ ಅದಕ್ಕೆ ಅರ್ಥ ಬರುವುದಿಲ್ಲ. ಕಾರ್ತಿಕ ಮಾಸದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದರೆ ಪ್ರಯೋಜನವಿಲ್ಲ. ೩೬೫ ದಿನದಲ್ಲಿಯೂ ಆಚರಿಸಬೇಕು. ಯಾರಾದರೂ ಕೇರಳಕ್ಕೆ ಹೋಗಿ ಉರ್ದುವಿನಲ್ಲಿ ಮಾತನಾಡಿದರೆ ಯಾರೊಬ್ಬರು ಪ್ರತಿಕ್ರಿಯಿಸುವುದಿಲ್ಲ. ಬದಲಿಗೆ ಮಲಯಾಳಂನಲ್ಲಿ ಮಾತನಾಡುತ್ತಾರೆ. ತಮಿಳುನಾಡಿಗೆ ಹೋದರೂ ತಮಿಳುನಾಡಿನಲ್ಲಿಯೇ ಮಾತನಾಡಬೇಕು.

ಕನ್ನಡ ಕಟ್ಟಿದವರು: ಕ್ಷೌರಿಕ ವೃತ್ತಿ ಮಾಡುತ್ತಲೇ ಕನ್ನಡ ಪರಿಚಾರಕರಾಗಿರುವ ಪವನ್!

ನಮ್ಮವರು ಹೊರ ರಾಜ್ಯದವರಿಗೆ ವಿಳಾಸ ಗೊತ್ತಿಲ್ಲ ಎಂದರೆ ಅವರೇ ಕರೆದುಕೊಂಡು ಹೋಗಿ ಬಿಟ್ಟುಬರುವಂತಹ ಸಹೃದಯರು. ಆದರೆ ಭಾಷೆಯ ವಿಷಯದಲ್ಲಿ ಮಾತ್ರ ಏನೂ ಪ್ರಯೋಜನವಿಲ್ಲ. ಬೇರೆಯವರಿಗೆ ಜಾಗ ಕೊಟ್ಟು ಅಡಿಯಾಳಾಗಿರುತ್ತಾರೆ. ಪೂರ್ಣವಾಗಿ ಕನ್ನಡ ಬರದಿದ್ದರೂ ಶೇ. 70 ಅಥವಾ ೫೦ರಷ್ಟು ಭಾಗ ಕನ್ನಡ ಬಳಸಬೇಕು. ‘ನಾನು ದಿನಪತ್ರಿಕೆಯಲ್ಲಿ ಓದಿದ್ದನ್ನೇ ಮಾತನಾಡುತ್ತೇನೆ. ಕೆಲವೊಂದು ಭಾಷೆಯನ್ನು ಆಂಗ್ಲಭಾಷೆಯಲ್ಲಿಯೇ ಮಾತನಾಡಬೇಕಾಗುತ್ತದೆ. ಉದಾಹರಣೆಗೆ ರಬ್ಬರ್ ಎಂಬುದಕ್ಕೆ ಕನ್ನಡ ಬಳಸಲು ಸಾಧ್ಯವಿಲ್ಲ. ಉಳಿದಂತೆ ಎಲ್ಲವನ್ನೂ ಕನ್ನಡದಲ್ಲಿಯೇ ಮಾತನಾಡಬಹುದು’ ಎಂದು ತ್ಯಾಗರಾಜು ತಮ್ಮ ಭಾಷಾಭಿಮಾನ ತೋರಿಸುತ್ತಾರೆ.

ಕೆಎಸ್‌ಆರ್‌ಟಿಸಿ, ಒಕ್ಕಲಿಗರ ಸಂಘದಿಂದ ಅಭಿನಂದನೆ, ಮೈಸೂರು ಜಿಲ್ಲಾಪ್ರವಾಸಿ ವಾಹನ ಚಾಲಕ ಮತ್ತು ಮಾಲೀಕರ ಸಂಘದಿಂದ ಅಭಿನಂದನಾ ಫಲಕ, ಜಯಚಾಮರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯದ ಬೋಧಕೇತರ ವರ್ಗದವರು ಇವರನ್ನು ಅಭಿನಂದಿಸಿದ್ದಾರೆ.

ಕನ್ನಡ ಕಟ್ಟಿದವರು: ಯೂಟ್ಯೂಬ್ ಚಾನಲ್ ಮೂಲಕ ಕನ್ನಡ ಪಸರಿಸುತ್ತಿರುವ ನಮ್ದು-ಕೆ

click me!