
ರಾಯಚೂರು: ಮದುವೆಗೆ ಒಂದು ತಿಂಗಳು ಇರುವಾಗಲೇ ಯುವಕನೋರ್ವ ನಾಪತ್ತೆಯಾಗಿದ್ದು, ಕಳೆದ 20 ದಿನಗಳಿಂದ ಹುಡುಕಾಟ ನಡೆಸಿದ್ರೂ ಪತ್ತೆಯಾಗಿಲ್ಲ. ಈ ಸಂಬಂಧ ಯುವಕನ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಾಯಚೂರು ಜಿಲ್ಲೆ ಮಾನ್ವಿ ತಾ. ಬೆಟ್ಟದೂರು ಗ್ರಾಮದ ನಿವಾಸಿ 25 ವರ್ಷದ ಮುದ್ದುರಂಗಪ್ಪ ಕಾಣೆಯಾಗಿದ್ದಾನೆ. ಜನವರಿ 28ರಿಂದ ಮುದ್ದುರಂಗಪ್ಪನಿಗಾಗಿ ಪೋಷಕರು ಹುಡುಕಾಟ ನಡೆಸಿದ್ದಾರೆ.
ಬಾಲ್ಯದಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡ ಮುದುರಂಗಪ್ಪನನ್ನು ಅಜ್ಜಿ ನಾಗಮ್ಮ ಬೆಳೆಸಿದ್ದರು. ಇದೀಗ ಮೊಮ್ಮಗನಿಗೆ ಹೆಣ್ಣು ಹುಡುಕಿ ಮದುವೆಗೂ ಸಿದ್ಧತೆ ಮಾಡಿಕೊಂಡಿದ್ದರು. ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಅಜ್ಜಿ ನಾಗಮ್ಮ, ಮೊಮ್ಮಗ ಬರಲಿ ಎಂದು ಗ್ರಾಮದೇವತೆಗೆ ಹರಕೆ ಕಟ್ಟಿಕೊಂಡಿದ್ದೇನೆ. ಹರಕೆ ಹಿನ್ನೆಲೆ ಮೊಮ್ಮಗ ಸಿಗೋವರೆಗೂ ಉಪವಾಸ ಮಾಡುತ್ತಿದ್ದೇನೆ ಎಂದು ಕಣ್ಣೀರು ಹಾಕಿದ್ದಾರೆ.
ಮದುವೆ ಪೂರ್ವ ತಯಾರಿ ಹಿನ್ನೆಲೆ ಮನೆದೇವರಿಗೆ ತೆರಳಿ ಪೂಜೆ ಸಲ್ಲಿಸಿ ಗ್ರಾಮದಲ್ಲಿ ಬಾಡೂಟ ಸಹ ಹಾಕಿಸಲಾಗಿತ್ತು. ಬಾಡೂಟ ಹಾಕಿಸಿದ ಮರುದಿನವೇ ಮುದ್ದುರಂಗಪ್ಪ ಕಾಣೆಯಾಗಿದ್ದಾನೆ. ಅಪ್ಪ-ಅಮ್ಮನಿಲ್ಲದ ಮೊಮ್ಮಗನನ್ನು ಜೋಪಾನ ಮಾಡಿದ್ದ ಅಜ್ಜಿ ಕಳೆದ 20 ದಿನಗಳಿಂದ ಕಣ್ಣೀರು ಹಾಕುತ್ತಿದ್ದಾರೆ. ಮಂತ್ರಾಲಯ,ಆಂಧ್ರ-ತೆಲಂಗಾಣ,ಯಾದಗಿರಿ,ಕಲಬುರ್ಗಿ,ಕೊಪ್ಪಳ,ಬಳ್ಳಾರಿ ಸೇರಿ ಹಲವೆಡೆ ಹುಡುಕಾಟ ನಡೆಸಲಾಗಿದೆ.
ಇದನ್ನೂ ಓದಿ: ತಂಗಿಗೆ ಕೇಳಿದೆಲ್ಲಾ ಕೊಡ್ತೀರಿ, ನನಗೆ ಏನೂ ಇಲ್ಲ: ಬೊಮ್ಮಾಯಿ ಆಪ್ತ ಕಾರ್ಯದರ್ಶಿ ಮಗನ ಸಾವಿಗೆ ಕಾರಣ ಏನು?
ಕಾಣೆಯಾಗಿರುವ ಮುದ್ದುರಂಗಪ್ಪನನ್ನು ಹುಡುಕಿಕೊಡುವಂತೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮುದ್ದುರಂಗಪ್ಪನ ಸಂಬಂಧಿಕರು, ಗೆಳೆಯರು ಸೋಶಿಯಲ್ ಮೀಡಿಯಾದಲ್ಲಿ ಕಾಣೆಯಾಗಿರುವ ಕುರಿತು ಪೋಸ್ಟರ್ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ವಾಲ್ಮೀಕಿ ಶ್ರೀಗಳಿಗೆ ಲಘು ಹೃದಯಾಘಾತ, ಇಲ್ಲಿದೆ ಈಗಿನ ಹೆಲ್ತ್ ಅಪ್ಡೇಟ್; ಫೋನಲ್ಲಿ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ!