7400 ಬೆಡ್.. ಕಾಲ್ ಸೆಂಟರ್ ಇದೆ.. ಡಾ. ಸುಧಾಕರ್ ಕೊಟ್ಟ ಮಹತ್ವದ ಮತ್ತಷ್ಟು ಮಾಹಿತಿ

By Suvarna NewsFirst Published Apr 21, 2021, 8:55 PM IST
Highlights

ಕರ್ನಾಟಕದಲ್ಲಿ ಕೊರೋನಾ ಎರಡನೇ ಅಲೆ/ ಸರ್ಕಾರದಿಂದ ಹೊಸ ಮಾರ್ಗಸೂಚಿ/  ಲಭ್ಯವಿರುವ ಬೆಡ್ ಮಾಹಿತಿ ನೀಡಿದ ಆರೋಗ್ಯ ಸಚಿವ/ ಕಾಲ್ ಸೆಂಟರ್ ತೆರೆಯಲಾಗಿದೆ

ಬೆಂಗಳೂರು(ಏ.  21 )  ಹೊಸ ಮಾರ್ಗಸೂಚಿ ಅನ್ವಯಕ್ಕೂ ಮುನ್ನ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸುದ್ದಿಗೋಷ್ಠಿ ನಡೆಸಿ  ಅನೇಕ ಪ್ರಮುಖ ವಿವರಗಳನ್ನು ನೀಡಿದ್ದಾರೆ.  ಜನರು ಅನಗತ್ಯ ಆತಂಕಕ್ಕೆ ಒಳಗಾಗಬೇಕಿಲ್ಲ.  ಆಕ್ಸಿಜನ್ ಬಗ್ಗೆ ಬೆಂಗಳೂರಿನಲ್ಲಿ ಆತಂಕ‌ಪಡಬೇಕಾಗಿಲ್ಲ.  ಒಂದು ಕಾಲ್ ಸೆಂಟರ್ ಸ್ಥಾಪನೆ ಮಾಡಲಾಗಿದೆ. ಮೂರು ಪಾಳಿಯಲ್ಲಿ ಡ್ರಗ್ ಸೆಂಟರ್ ಅಧಿಕಾರಿಗಳನ್ನು ‌ನೇಮಕ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

8951755722 ಕಾಲ್ ಸೆಂಟರ್ ನಂಬರ್ ಆಗಿದ್ದು ಸಂಕಷ್ಟಕ್ಕೆ ಗುರಿಯಾದರೆ ಕರೆ ಮಾಡಬಹುದು. ಬೆಂಗಳೂರಿನಲ್ಲಿ ಯಾವುದೇ ರೀತಿಯಲ್ಲಿ ಆಕ್ಸಿಜನ್ ಕೊರತೆ ಆಗದಂತೆ ಕ್ರಮ ತೆಗೆದುಕೊಂಡಿದ್ದೇವೆ. ಆಕ್ಸಿಜನ್ ಸರಬರಾಜು ಕೊರತೆ ಇಲ್ಲ. ಐದು ಸಾವಿರ ಸಿಲಿಂಡರ್ ಅಧಿಕವಾಗಿ ಹೆಚ್ಚುವರಿಯಾಗಿ ಸರಬರಾಜು ಆಗ್ತಿದೆ.  ಸಿಎಂ ಯಡಿಯೂರಪ್ಪ ಅವರು ಕೇಂದ್ರ ಆರೋಗ್ಯ ಸಚಿವರು ಮತ್ತು ಕೈಗಾರಿಕಾ ಸಚಿವರಿಗೆ ಮಾತಾಡಿದ್ದಾರೆ ಎಂದು ತಿಳಿಸಿದ್ದಾರೆ.

ನಾನು ಸಹ ಕೇಂದ್ರ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ. ಆಕ್ಸಿಜನ್ ಸರಬರಾಜು ಕುರಿತು ಚರ್ಚೆ ಮಾಡಿದ್ದೇನೆ. ನಮ್ಮ ರಾಜ್ಯಕ್ಕೆ ಆಕ್ಸಿಜನ್ ಕೊರತೆ ಆಗದಂತೆ ಸಹಾಯ ಮಾಡಲು ಮನವಿ ಮಾಡಿದ್ದೇನೆ. ಇದು 24 ಗಂಟೆಗಳ ಕಾಲ ಕೆಲಸ ಮಾಡುತ್ತದೆ. ಆಕ್ಸಿಜನ್ ಸರಬರಾಜು ಬಗ್ಗೆ ಈ ಕಾಲ್ ಸೆಂಟರ್ ಸಹಾಯ ಮಾಡಲಿದೆ  ಎಂದು ತಿಳಿಸಿದ್ದಾರೆ.

ರೆಮಿಡಿಸಿವಿರ್ ಅಕ್ರಮ ಮಾಡುತ್ತಿದ್ದ ಸಹಾಯಕ ಔಷಧ ನಿಯಂತ್ರಕ ಬಿಆರ್ ವೆಂಕಟೇಶ್ ಸಸ್ಪೆಂಡ್ ಮಾಡಲಾಗಿದೆ. ನಮ್ಮ ರಾಜ್ಯಕ್ಕೆ ಈಗಿರುವ ಆಕ್ಸಿಜನ್ ಪ್ರಮಾಣ ಏರಿಕೆ ಮಾಡುವ ಭರವಸೆಯಿದೆ. ಬೆಂಗಳೂರಿನಲ್ಲಿ ಐಸಿಯು ಬೆಡ್ ಹೆಚ್ಚು ಮಾಡಬೇಕಾಗಿದೆ. ಎರಡು ಸಾವಿರ ಐಸಿಯು ಬೆಡ್ ಬೇಕು. ಬೆಂಗಳೂರಿನ ವಿವಿಧ ಕಡೆ 15  ದಿನಗಳಲ್ಲಿ 2000 ಐಸಿಯು ಬೆಡ್ ಗಳು ಬೇಕಾಗಲಿದೆ. ಈ ಬಗ್ಗೆ ಸಿಎಂ‌ ಯಡಿಯೂರಪ್ಪ ಜೊತೆಗೆ ಚರ್ಚೆ ಮಾಡಿದ್ದೇನೆ  ಎಂದು ತಿಳಿಸಿದರು.

ರಾಜ್ಯದಲ್ಲಿ ಸಾವಿರಾರು ವೆಂಟಲೇಟರ್ ಗಳ ಬಳಕೆ ಆಗದಕ್ಕೆ ಸಂಬಂಧಿಸಿ ಮಾಜಿ‌ ಪ್ರಧಾನಿ ದೇವೆಗೌಡರು ಸರ್ಕಾರಕ್ಕೆ  ಪತ್ರ ಬರೆದಿರುವ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ನಾವು ನಮ್ಮಲ್ಲಿರುವ ವೆಂಟಿಲೇಟರ್ ಗಳನ್ನು ಎಲ್ಲಾ ರೀತಿಯಲ್ಲಿ ಸಮರ್ಪಕ ಬಳಕೆ ಮಾಡಿಕೊಂಡಿದ್ದೇವೆ. ಈ ಕುರಿತು ನಾಳೆ ಅಧಿಕೃತ ಮಾಹಿತಿ ನೀಡುತ್ತೇನೆ. ಅವರು ಮಾಜಿ ಪ್ರಧಾನಿ. ದಾಖಲೆ ಸಹಿತ ವಿವರ ನೀಡುತ್ತೇವೆ. ಸಾವಿರಾರು ವೆಂಟಿಲೇಟರ್ ಗಳು ಬಳಕೆ ಆಗದೇ ಹಾಗೇ ಇದೆ ಅನ್ನೋದು ಸರಿಯಾದ ಮಾಹಿತಿ ಅಲ್ಲ ಎಂದರು.

ರಾಜ್ಯದಲ್ಲಿ ಲಸಿಕೆ ಕೊಡುವ ಕೆಲಸ ಮಾಡುತ್ತೇವೆ. ಸಿಎಂ ಆಸ್ಪತ್ರೆ ಯಿಂದ ಬಂದ ತಕ್ಷಣ ಈ ಬಗ್ಗೆ ಕ್ರಮ ತಗೆದುಕೊಳ್ಳುತ್ತೇವೆ. ಇಲ್ಲಿಯವರೆಗೆ ಬೆಂಗಳೂರು ಖಾಸಗಿ ವೈದ್ಯಕೀಯ ಕಾಲೇಜುಗಳು ನಾಲ್ಕು ಸಾವಿರ ಬೆಡ್ ನೀಡಿವೆ. ಸರ್ಕಾರಿ ಮೆಡಿಕಲ್ ಕಾಲೇಜ್ ಗಳಲ್ಲಿ ಸಾವಿರ ಬೆಡ್ ಸಿಕ್ಕಿವೆ. ಸರ್ಕಾರಿ ಆಸ್ಪತ್ರೆಯಲ್ಲಿ 1400 ಬೆಡ್ ಇವೆ. ಒಟ್ಟಾರೆ  ಒಟ್ಟಾರೆ 7400 ಬೆಡ್ ಗಳು ಸದ್ಯಕ್ಕೆ ನಮ್ಮ ಬಳಿ ಇವೆ ಎಂದು ಮಾಹಿತಿ ನೀಡಿದರು.

 ರಾಜ್ಯದಲ್ಲಿ ಫ್ರೀ ವ್ಯಾಕ್ಸಿನೇಷನ್ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಬೇಕು. ಎರಡು ದಿನದಲ್ಲಿ ಇದರ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಆರೋಗ್ಯ ಸಚಿವರು ತಿಳಿಸಿದರು.

 

 

click me!