PSI ಹಾಗೂ 6 ಪೊಲೀಸರಿಗೆ ಬಿತ್ತು ಭಾರೀ ದಂಡ

By Kannadaprabha NewsFirst Published Sep 12, 2019, 11:50 AM IST
Highlights

ಓರ್ವ PSI ಸೇರಿ 7 ಮಂದಿ ಪೊಲೀಸರಿಗೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸಲಾಗಿದೆ. 7 ಪೊಲೀಸರಿಗೆ 60 ಸಾವಿರ ದಂಡ ವಿಧಿಸಲಾಗಿದೆ. 

ಜಗಳೂರು [ಸೆ.12] : 3 ವರ್ಷಗಳ ಹಿಂದಿನ ಪೊಲೀಸ್‌ ಪ್ರಕರಣದ ತನಿಖೆಯಲ್ಲಿ ಸುಳ್ಳು ದೂರು ದಾಖಲಿಸಿದ ಪಿಎಸ್‌ಐ ಹಾಗೂ 6 ಮಂದಿ ಪೊಲೀಸ್‌ ಪೇದೆಗಳಿಗೆ ರಾಜ್ಯಮಾನವ ಹಕ್ಕುಗಳ ಆಯೋಗ 60 ಸಾವಿರ ರು. ದಂಡ ವಿಧಿಸಿ, ಪ್ರಕರಣವನ್ನು ಸೂಕ್ತ ತನಿಖೆ ನಡೆಸುವಂತೆ ಸೂಚಿಸಿದೆ ಎಂದು ದೂರುದಾರ ವಿನಯ್‌ಕುಮಾರ್‌ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿನಯ್‌ ಅವರು, 2017ರ ಜೂ.15ರಂದು ಜಗಳೂರು ಪೊಲೀಸ್‌ ಠಾಣೆಯ ಪಿಎಸ್‌ಐ ಪ್ರಸಾದ್‌ ನನ್ನ ಮೇಲೆ ಸುಳ್ಳು ಕೇಸು ದಾಖಲು ಮಾಡಿ, ಅಕ್ರಮವಾಗಿ ಬಂಧಿಸಿ ದೈಹಿಕ ಹಲ್ಲೆ ನಡೆಸಿದ್ದರು. ಈ ಹಿನ್ನೆಲೆ ನ್ಯಾಯಾಲಯದಲ್ಲಿ ಜಾಮೀನು ಕೋರಿ ಬಿಡುಗಡೆಗೊಂಡು ಪುನಃ ಆರೋಗ್ಯ ಪರೀಕ್ಷೆ ನಡೆಸಿ ಪಿಎಸ್‌ಐ ಸೇರಿ 7 ಪೊಲೀಸ್‌ ಪೇದೆಗಳ ಮೇಲೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ದಾಖಲಿಸಲಾಗಿತ್ತು. ಆ.30ರಂದು ಮಾನವ ಹಕ್ಕುಗಳ ಸಂರಕ್ಷಣಾ ಅಧಿನಿಯಮ 1993ರ ಕಲಂ 18(ಇ) ಪ್ರಕಾರ ಪಿಎಸ್‌ಐ ಪ್ರಸಾದ್‌ ಅವರಿಗೆ 30 ಸಾವಿರ ರು., ಪೊಲೀಸ್‌ ಪೇದೆಗಳಾದ ಗೋವಿಂದ್‌ರಾಜ್‌, ಪಕ್ಷಣ್ಣ, ಎಸ್‌.ಲಿಂಗೇಶ್‌, ಎ.ರಮೇಶ್‌, ಕೆ.ಬಿ. ಷಂಶುದ್ದೀನ್‌, ಎ.ಎನ್‌.ಕೆ. ಶ್ರೀಧರ್‌ ಅವರಿಗೆ ತಲಾ 5000 ರು. ದಂತೆ ಒಟ್ಟು 60000 ರು. ಮಾನವ ಹಕ್ಕುಗಳ ಆಯೋಗ ಅಧಿನಿಯಮದಲ್ಲಿ ಸದಸ್ಯರಾದ ಕೆ.ಬಿ. ಚಂಗಪ್ಪ ಅವರು ದಂಡ ವಿಧಿಸಿ, ಪೊಲೀಸರ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸುವಂತೆ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನನ್ನಂತೆಯೇ ನ್ಯಾಯಕ್ಕಾಗಿ ಸಮಾಜದ ಮಧ್ಯೆ ಶ್ರಮಿಸುತ್ತಿರುವ ಹಲವು ನಿರುದ್ಯೋಗ ಯುವಕರು ಜೀವಭಯದಲ್ಲಿದ್ದಾರೆ. ನ್ಯಾಯ ಕೋರಿ ಪೊಲೀಸ್‌ ಠಾಣೆಗೆ ಬಂದರೆ ಅವರ ವಿರುದ್ಧವೇ ಸುಳ್ಳು ಕೇಸು ದಾಖಲು ಮಾಡಿ, ದೈಹಿಕೆ ಹಲ್ಲೆ ನಡೆಸುವಂತಹ ವಾತಾವರಣವಿದೆ. ಠಾಣೆಯಲ್ಲಿ ನೊಂದವರಿಗೆ ನೆರವಿಲ್ಲದಂತಾಗಿದೆ. ಈ ಪ್ರಕರಣ ಮಾದರಿಯಾಗಿದ್ದು, ಪ್ರಕರಣದ ಪರಿಹಾರ ಮೊತ್ತ ಯಾವುದಕ್ಕೂ ಸಾಲುವುದಿಲ್ಲ. ಹೆಚ್ಚಿನ ಪರಿಹಾರ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

click me!