ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ ಶೇ.50ರಷ್ಟು ಅನುದಾನ: ಸಚಿವ ಪ್ರಿಯಾಂಕ್ ಖರ್ಗೆ

By Kannadaprabha NewsFirst Published Aug 14, 2024, 6:20 PM IST
Highlights

ಜಿಲ್ಲೆಯಲ್ಲಿ ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ ಗೃಹ ಇಲಾಖೆಯಿಂದ ಶೇ.50ರಷ್ಟು ಅನುದಾನ ಕೊಟ್ಟರೆ, ಉಳಿದ ಶೇ.50ರಷ್ಟು ಅನುದಾನವನ್ನು ಕೆಕೆಆರ್‌ಡಿಬಿಯಿಂದ ಒದಗಿಸಲಾಗುವುದು. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಕ್ರಮವಹಿಸಬೇಕಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
 

ಕಲಬುರಗಿ (ಆ.14): ಜಿಲ್ಲೆಯಲ್ಲಿ ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ ಗೃಹ ಇಲಾಖೆಯಿಂದ ಶೇ.50ರಷ್ಟು ಅನುದಾನ ಕೊಟ್ಟರೆ, ಉಳಿದ ಶೇ.50ರಷ್ಟು ಅನುದಾನವನ್ನು ಕೆಕೆಆರ್‌ಡಿಬಿಯಿಂದ ಒದಗಿಸಲಾಗುವುದು. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಕ್ರಮವಹಿಸಬೇಕಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ನಗರದ ಡಿಎಆರ್ ಆವರಣದಲ್ಲಿ ಅಂದಾಜು ರು. 693.67 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ 24 ಪೊಲೀಸ್ ವಸತಿ ಗೃಹಗಳ ಕಾಮಗಾರಿಗೆ ಅಡಿಗಲ್ಲು ಹಾಗೂ ಕಲಬುರಗಿ ದಕ್ಷಿಣ ಮತಕ್ಷೇತ್ರದ ಲಾಯರ್ಸ್ ಕಾಲನಿಯಲ್ಲಿ ರು. 1.05 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬಿಸಿಎಂ ಹಾಸ್ಟೆಲ್ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಚಿತ್ತಾಪುರ ಮತಕ್ಷೇತ್ರದ ಶಹಾಬಾದ್ ಹಾಗೂ ವಾಡಿಯ ಪೊಲೀಸ್ ವಸತಿ ಗೃಹಗಳ ಸ್ಥಿತಿಗತಿ ನೋಡಲು ಹೋದಾಗ ಅಲ್ಲಿನ ನಿವಾಸಿಗಳು ತಾವು ಪಡುತ್ತಿರುವ ಕಷ್ಟ ಹೇಳಿಕೊಂಡಿದ್ದರು. ದುಸ್ಥಿತಿ‌ ತಲುಪಿರುವ ವಸತಿ‌ಗೃಹಗಳಲ್ಲಿ ಯಾವುದೇ ಕೌಟುಂಬಿಕ ಕಾರ್ಯಕ್ರಮ ಮಾಡಲು ಕೂಡಾ ಸಾಧ್ಯವಾಗುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದರು. ಈ ಹಿನ್ನೆಲೆ ಕಲಬುರಗಿ ಜಿಲ್ಲೆಯಲ್ಲಿ ಅನೇಕ ಕಡೆ ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಗೃಹ ಇಲಾಖೆ‌ ಶೇ.50ರಷ್ಟು ಅನುದಾನ ನೀಡಿದರೆ‌ ಉಳಿದ ಶೇ.50ರಷ್ಟು ಅನುದಾನವನ್ನು‌ ಕೆಕೆಆರ್‌ಡಿಬಿ ವತಿಯಿಂದ ಒದಗಿಸಿ ಪೊಲೀಸ್ ವಸತಿ ಗೃಹಗಳನ್ನು‌ ನಿರ್ಮಿಸಲಾಗುವುದು ಸಚಿವರು ಹೇಳಿದರು.

Latest Videos

ಸಮಾಜದಲ್ಲಿ ಮೌಲ್ಯ ಕುಸಿತಗೊಂಡಿದ್ದರಿಂದ ಪೊಲೀಸರಲ್ಲಿ ಕೆಲಸದ‌ ಒತ್ತಡ ಜಾಸ್ತಿಯಾಗಿದೆ. ಆದರೆ ಅಂತಹ ಒತ್ತಡ‌ ನಿಭಾಯಿಸಿಕೊಂಡು ಕೆಲಸ ಮಾಡುವ ಸಿಬ್ಬಂದಿಗೆ ನೆಮ್ಮದಿಯಾಗಿ ಜೀವನ‌‌ ನಡೆಸಲು ಅವರಿಗೊಂದು ಸುಸಜ್ಜಿತ ಮನೆಗಳನ್ನು‌ ನಿರ್ಮಿಸಬೇಕು ಎಂದು ಅಭಿಪ್ರಾಯಪಟ್ಟ ಸಚಿವರು ಪೊಲೀಸ್ ಸಿಬ್ಬಂದಿಗಾಗಿ ವಸತಿ ಗೃಹಗಳ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ‌ ಭರವಸೆ ನೀಡಿದರು. ಪೊಲೀಸರ ಮೇಲೆ ಸಾರ್ವಜನಿಕರ ದೂರು ಆಲಿಸಲು ಜನಸ್ನೇಹಿ ಆ್ಯಪ್ ಜಾರಿಗೊಳಿಸಲಾಗಿದೆ. ಈ ಬಗ್ಗೆ ಸಧ್ಯದಲ್ಲೇ ಪ್ರಗತಿ ಪರಿಶೀಲನೆ ನಡೆಸಲಿದ್ದೇನೆ. 

ಕೆಣಕಿ, ಹಂಗಿಸಿದವರಿಗೆ ಭೀಮ ಚಿತ್ರದ ಯಶಸ್ಸೇ ಉತ್ತರ: ದುನಿಯಾ ವಿಜಯ್

ಪೊಲೀಸ್ ವಸತಿಗೃಹಗಳ‌ ಕಾಮಗಾರಿಯನ್ನು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು. ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಯೂನಿವರ್ಸಿಟಿ ಪೊಲೀಸ್ ಠಾಣೆಯ ವ್ಯಾಪ್ತಿ ಅತ್ಯಂತ ವಿಸ್ತಾರವಾಗಿದ್ದು ಇದೇ ವ್ಯಾಪ್ತಿಯಲ್ಲಿ ಮತ್ತೊಂದು ನೂತನ ಪೊಲೀಸ್ ಠಾಣೆ ಸ್ಥಾಪನೆ ಮಾಡಬೇಕಿದೆ. ಈ ನಿಟ್ಟಿನಲ್ಲಿ‌ ಸಚಿವರು ಗಮನಹರಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಎಂಎಲ್‌ಸಿ ಜಗದೇವ ಗುತ್ತೇದಾರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಖಾನ್, ಐಜಿಪಿ ಅಜಯ್ ಹಿಲೋರಿ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಿಇಒ ಭಂವರ್ ಸಿಂಗ್ ಮೀನಾ, ಎಸ್ ಪಿ ಅಡ್ಡೂರು ಶ್ರೀನಿವಾಸಲು, ನಿಗಮದ ಇಇ ಶ್ರೀದೇವಿ ಪಾಟೀಲ್ ಇದ್ದರು.

click me!