ಕಾರಿನ ಟೈರು ಸ್ಫೋಟಗೊಂಡಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಐವರು ಮೃತಪಟ್ಟಿದ್ದಾರೆ.
ಧಾರವಾಡ, [ಮೇ.26): ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನವಲಗುಂದ ಬಳಿ ನಡೆದಿದೆ.
ಘಟನೆಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮತ್ತೋರ್ವನ ಸ್ಥಿತಿ ಚಿಂತಾಜನಕವಾಗಿದೆ. ಮೃತರನ್ನು ರವಿ ಹಂಡಿ, ಲೇಖಾಶ್ರೀ ಹಂಡಿ, ಜವೀನ್ ಕುಮಾರ್ ಹಂಡಿ ಹಾಗೂ ಇಬ್ಬರು ಮಕ್ಕಳಾದ ಶರಣ್ ಮತ್ತು ವರ್ಷ ಅಂತ ಗುರುತಿಸಲಾಗಿದೆ.
ಮೃತರು ಬಾಗಲಕೋಟೆಯ ಕಾಂಗ್ರೆಸ್ ಮುಖಂಡ ಆನಂದ ಜಿಗಜಿಣಗಿಯವರ ಕುಟುಂಬದವರು ಎಂದು ತಿಳಿದುಬಂದಿದೆ. ಹುಬ್ಬಳ್ಳಿಯಿಂದ ಬಾಗಲಕೋಟೆಯತ್ತ ಹೊರಟಿದ್ದ ಕಾರಿನ ಟೈರು ಸ್ಫೋಟಗೊಂಡು ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.