ಮೂರು ವರ್ಷದಲ್ಲಿ 49 ಹುಲಿ, 237 ಆನೆಗಳು ಸಾವು: ಸಚಿವ ಈಶ್ವರ ಖಂಡ್ರೆ

By Kannadaprabha NewsFirst Published Dec 13, 2023, 11:30 PM IST
Highlights

ಕಳೆದ ಮೂರು ವರ್ಷಗಳಲ್ಲಿ ಹುಲಿ ದಾಳಿಯಿಂದ ಮೃತಪಟ್ಟ 11 ಮಂದಿಯ ಕುಟುಂಬಕ್ಕೆ 1-5 ಲಕ್ಷ ರು. ಹಾಗೂ ಆನೆ ದಾಳಿಯಿಂದ ಮೃತಪಟ್ಟ 84 ಮಂದಿಯ ಕುಟುಂಬಗಳಿಗೆ 695 ಲಕ್ಷ ರು. ಪರಿಹಾರ ಪಾವತಿಸಲಾಗಿದೆ ಎಂದು ತಿಳಿಸಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ 

ಮಂಡ್ಯ(ಡಿ.13):  ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ೪೯ ಹುಲಿ ಹಾಗೂ ೨೩೭ ಆನೆಗಳು ಮೃತಪಟ್ಟಿವೆ. ಇದೇ ಅವಧಿಯಲ್ಲಿ ಹುಲಿ ದಾಳಿಯಿಂದ ೧೧ ಹಾಗೂ ಆನೆಗಳ ದಾಳಿಯಿಂದ ೮೪ ಜನರು ಜೀವ ಕಳೆದುಕೊಂಡಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಶಾಸಕ ಮಧು ಜಿ.ಮಾದೇಗೌಡ ಅವರ ಚುಕ್ಕೆ ಗುರುತ್ತಿಲ್ಲದ ಪ್ರಶ್ನೆಗೆ ಲಿಖಿತ ನೀಡಿರುವ ಸಚಿವರು, ೨೦೨೦-೨೧ರಲ್ಲಿ ೧೪ ಹುಲಿ, ೭೪ ಆನೆ, ೨೦೨೧-೨೨ರಲ್ಲಿ ೧೯ ಹುಲಿ, ೯೦ ಆನೆ ಹಾಗೂ ೨೦೨೨-೨೩ರಲ್ಲಿ ೧೬ ಹುಲಿ, ೭೩ ಆನೆಗಳು ಮೃತಪಟ್ಟಿವೆ ಎಂದು ವಿವರ ನೀಡಿದ್ದಾರೆ.

BJP-JDS ದೋಸ್ತಿಯಲ್ಲಿ ಟಿಕೆಟ್ ಯಾರಿಗೆ?: ಸುಮಲತಾಗೆ ಮತ್ತೊಮ್ಮೆ ಸಿಗುವುದೇ ಮಂಡ್ಯ ಲೋಕಸಭಾ ಟಿಕೆಟ್

ರಾಷ್ಟ್ರೀಯ ಹುಲಿ ಗಣತಿ ೨೦೨೨ರ ವರದಿ ಪ್ರಕಾರ ರಾಜ್ಯದಲ್ಲಿ ಒಟ್ಟು ೫೬೩ ಹುಲಿಗಳಿವೆ. ೨೦೨೩ನೇ ಸಾಲಿನಲ್ಲಿ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ನೇರ ವೀಕ್ಷಣೆಯಿಂದ ನಡೆದ ಆನೆ ಗಣತಿ ವರದಿಯಂತೆ ರಾಜದಲ್ಲಿ ಅಂದಾಜು ೬೩೯೫ ಆನೆಗಳಿವೆ. ೨೦೨೨-೨೩ನೇ ಸಾಲಿನಲ್ಲಿ ಉತ್ತರ ಪ್ರದೇಶಕ್ಕೆ ೪ ಹಾಗೂ ಮಧ್ಯಪ್ರದೇಶಕ್ಕೆ ೧೪ ಬಂಧಿತ ಆನೆಗಳನ್ನು ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ‘ಪ್ರಾಜೆಕ್ಟ್ ಟೈಗರ್ ಮತ್ತು ಪ್ರಾಜೆಕ್ಟ್ ಎಲಿಫೆಂಟ್’ ಅಡಿಯಲ್ಲಿ ಹುಲಿ ಮತ್ತು ಆನೆಗಳ ಆವಾಸಸ್ಥಾನಗಳ ಸಂರಕ್ಷಣೆಗಾಗಿ ಕ್ರಮವಾಗಿ ೬೭೮೨.೧೪ ಲಕ್ಷ ರು. ಮತ್ತು ೧೩೧೨.೪೧ ಲಕ್ಷ ರು. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಪರಿಹಾರ:

ಕಳೆದ ಮೂರು ವರ್ಷಗಳಲ್ಲಿ ಹುಲಿ ದಾಳಿಯಿಂದ ಮೃತಪಟ್ಟ ೧೧ ಮಂದಿಯ ಕುಟುಂಬಕ್ಕೆ ೧೦೫ ಲಕ್ಷ ರು. ಹಾಗೂ ಆನೆ ದಾಳಿಯಿಂದ ಮೃತಪಟ್ಟ ೮೪ ಮಂದಿಯ ಕುಟುಂಬಗಳಿಗೆ ೬೯೫ ಲಕ್ಷ ರು. ಪರಿಹಾರ ಪಾವತಿಸಲಾಗಿದೆ ಎಂದು ತಿಳಿಸಿದರು.

3 ವರ್ಷದ ಮಗುವಿನ ಮೇಲೆ 55 ವರ್ಷದ ವ್ಯಕ್ತಿಯಿಂದ ಅತ್ಯಾಚಾರಕ್ಕೆ ಯತ್ನ: ಬಂಧನ!

ಅಖಿಲ ಭಾರತ ಕಸಾಪ ಸಮ್ಮೇಳನ ಮುಂದೂಡಿಕೆ

ರಾಜ್ಯದಲ್ಲಿ ಬರಗಾಲ ಆವರಿಸಿರುವುದರಿಂದ ಮಂಡ್ಯದಲ್ಲಿ ನಡೆಸಲು ಉದ್ದೇಶಿಸಿದ್ದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ತು ಸ್ವಯಂಪ್ರೇರಿತವಾಗಿ ತಾತ್ಕಾಲಿಕ ಮುಂದೂಡಿದೆ. ಬರ ಪರಿಸ್ಥಿತಿ ಸುಧಾರಿಸಿದ ನಂತರ ಅತಿ ಶೀಘ್ರವಾಗಿ ಸರ್ಕಾರದೊಂದಿಗೆ ಚರ್ಚಿಸಿ ಸಮ್ಮೇಳನ ನಡೆಸುವ ದಿನಾಂಕಗಳನ್ನು ನಿಗದಿಗೊಳಿಸಿ ಮಂಡ್ಯದಲ್ಲಿಯೇ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಡಿಸೆಂಬರ್ ೦೧ ರಂದು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್.ತಂಗಡಗಿ ತಿಳಿಸಿದ್ದಾರೆ.

ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸುವ ಕುರಿತು ೨೦೨೩-೨೪ನೇ ಆಯವ್ಯಯದಲ್ಲಿ ಪ್ರಸ್ತಾಪಿಸಿರುವುದಿಲ್ಲ ಎಂದು ಮತ್ತೊಂದು ಪ್ರಶ್ನೆಗೆ ಅವರು ತಿಳಿಸಿದ್ದಾರೆ.

click me!