ಬಾಗಲಕೋಟೆ: ಜ. 12ರಿಂದ ಕೂಡಲಸಂಗಮದಲ್ಲಿ 36ನೇ ಶರಣ ಮೇಳ

By Kannadaprabha NewsFirst Published Jan 10, 2023, 2:29 PM IST
Highlights

ಬಸವ ಧರ್ಮ ಪೀಠದಿಂದ ನಡೆಯುವ 36ನೇ ಶರಣ ಮೇಳದ ಉದ್ಘಾಟನೆಯನ್ನು ಜನೆವರಿ 13ರಂದು ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದು, ಬಸವ ವಚನಾಮೃತ ಗ್ರಂಥವನ್ನು ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಬಿಡುಗಡೆ ಮಾಡಲಿದ್ದಾರೆ. 

ಬಾಗಲಕೋಟೆ(ಜ.10):  ಜನೆವರಿ 12ರಿಂದ ಮೂರು ದಿನಗಳ ಕಾಲ ನಡೆಯುವ ಕೂಡಲಸಂಗಮದಲ್ಲಿನ 36ನೇ ಶರಣ ಮೇಳದಲ್ಲಿ ಅಂದಾಜು 5ಲಕ್ಷ ಜನ ಪಾಲ್ಗೊಳ್ಳಲಿದ್ದು, ಕರ್ನಾಟಕ, ಆಂದ್ರ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯದ ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದಾರೆ ಎಂದು ಬಸವ ಧರ್ಮ ಪೀಠದ ಅಧ್ಯಕ್ಷೆ ಜಗದ್ಗುರು ಡಾ.ಮಾತೆ ಗಂಗಾದೇವಿ ತಿಳಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವ ಧರ್ಮ ಪೀಠದಿಂದ ನಡೆಯುವ 36ನೇ ಶರಣ ಮೇಳದ ಉದ್ಘಾಟನೆಯನ್ನು ಜನೆವರಿ 13ರಂದು ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದು, ಬಸವ ವಚನಾಮೃತ ಗ್ರಂಥವನ್ನು ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ಸಾನೇಹಳ್ಳಿಯ ಪಂಡಿತರಾದ್ಯ ಸ್ವಾಮೀಜಿ ಸೇರಿದಂತೆ ಹಲವು ಶ್ರೀಗಳು ಭಾಗವಹಿಸಲಿದ್ದು, ಸಚಿವರಾದ ಸಿ.ಸಿ.ಪಾಟೀಲ, ಶಾಸಕ ದೊಡ್ಡನಗೌಡ ಪಾಟೀಲ, ಚಲನಚಿತ್ರ ನಟ ವಿಜಯ ರಾಘವೇಂದ್ರ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ಮಹಾ ಮಾನವತಾವಾದಿ ಲಿಂಗಾಯತ ಧರ್ಮದ ಸಂಸ್ಥಾಪಕ ವಿಶ್ವ ಗುರು ಬಸವಣ್ಣನವರ ಸಂದೇಶಗಳಲ್ಲಿ ನಂಬಿಕೆ ಇಟ್ಟು ನಡೆಯುವ ಬಸವ ಭಕ್ತರ ಈ ಶರಣ ಮೇಳ ಸಮಾನತ್ವ ಮತ್ತು ಸಹೋದರತ್ವ ಬೆಳೆಸಲು ಸಹಕಾರಿಯಾಗಿದ್ದು, ಐಕ್ಯ ಕ್ಷೇತ್ರ ಕೂಡಲಸಂಗಮದಲ್ಲಿ 1988 ರಿಂದ ಆರಂಭಗೊಂಡ ಶರಣಮೇಳವು ಪ್ರತಿ ವರ್ಷವೂ ಸಹ ಚಾರಿತ್ರಿಕವಾಗಿ ನಡೆದುಕೊಂಡು ಬಂದಿದೆ ಎಂದು ಹೇಳಿದರು.

ಬಾದಾಮಿ: ಬನಶಂಕರಿ ಜಾತ್ರೆಯಲ್ಲಿ ಖರೀದಿ-ಮಾರಾಟ ಭರಾಟೆ

ಶರಣ ಮೇಳದ ಮೊದಲ ದಿನ ನಡೆಯುವ ಜನೆವರಿ 12ರ ಬೆಳಗ್ಗೆ ರಾಷ್ಟ್ರೀಯ ಬಸವದಳದ 32ನೇ ಅಧಿವೇಶನದ ಉದ್ಘಾಟನೆಯನ್ನು ಕೈಗಾರಿಕಾ ಸಚಿವ ಮುರಗೇಶ ನಿರಾಣಿ ನೆರವೇರಿಸಲಿದ್ದು, ಹೇಮರಡ್ಡಿ ಮಲ್ಲಮ್ಮ ಫಾರ್ಮ ಗೌಸ್‌ ಲೋಕಾರ್ಪಣೆಯನ್ನು ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್‌ ಮಾಡಲಿದ್ದು, ಸಂಜೆ ನಡೆಯುವ ಮಹಿಳಾ ಗೋಷ್ಠಿಯನ್ನು ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು ಚಾಲನೆ ನೀಡಲಿದ್ದು, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಸೇರಿದಂತೆ ಮುಂತಾದವರು ಉಪಸ್ಥಿತರಿರುವರು ಎಂದರು.

ಜನೆವರಿ 14ರಂದು ನಡೆಯುವ ಮಹತ್ವದ ಬಸವ ಕ್ರಾಂತಿ ದಿನದಂದು ಧ್ವಜಾರೋಹಣ, ಸಮುದಾಯ ಪ್ರಾರ್ಥನೆ ಮತ್ತು ವಚನ ಪಠಣ ಕಾರ್ಯಕ್ರಮದಲ್ಲಿ ಬಸವ ಕಲ್ಯಾಣ ಅನುಭವ ಮಂಟಪದ ಡಾ.ಬಸವಲಿಂಗ ಪಟ್ಟದೇವರು ಉಪಸ್ಥಿತರಿರಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಡಾ.ಎಂ.ಬಿ.ಪಾಟೀಲ ನೆರವೇರಿಸಲಿದ್ದಾರೆ. ವಚನತರಂಗ ಗ್ರಂಥವನ್ನು ಮಾಜಿ ಸಚಿವ ಎಸ್‌.ಸರ್‌. ಪಾಟೀಲ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.

ತೇಜಸ್ವಿನಿ ಅನಂತಕುಮಾರ ಅವರಿಗೆ ಬಸವಾತ್ಮಾಜೆ ರಾಷ್ಟ್ರೀಯ ಪ್ರಶಸ್ತಿ:

ಶರಣ ಮೇಳದಲ್ಲಿ ಪ್ರಥಮ ಮಹಿಳಾ ಜಗದ್ಗುರು ಡಾ.ಮಾತೆ ಮಹಾದೇವಿ ಸ್ಮರಣಾರ್ಥ ನೀಡುವ ರಾಷ್ಟ್ರಮಟ್ಟದ ಬಸವಾತ್ಮಾಜೆ ಪ್ರಶಸ್ತಿಯನ್ನು ಈ ಬಾರಿ ಅದಮ್ಯ ಚೇತನ ಫೌಂಡೇಷನ್‌ ಅಧ್ಯಕ್ಷರಾದ ತೇಜಸ್ವಿನಿ ಅನಂತಕುಮಾರ ಅವರಿಗೆ ಮಾಡಲಾಗುತ್ತಿದ್ದು, ಪ್ರಶಸ್ತಿಯೊಂದಿಗೆ .51 ಸಾವಿರ ನಗದು ಹಣವನ್ನು ಸಹ ನೀಡಲಾಗುತ್ತಿದೆ. ಶರಣ ಕಾಯಕರ ರತ್ನ ಪ್ರಶಸ್ತಿಯನ್ನು ಜಾಗತಿಕ ಲಿಂಗಾಯತ ಮಹಾ ಸಭಾದ ಬೆಂಗಳೂರು ಘಟಕದ ಅಧ್ಯಕ್ಷರಾದ ಪ್ರೊ.ವೀರಭದ್ರಪ್ಪ ಅವರಿಗೆ ನೀಡಲಾಗುತ್ತಿದೆ. ಶರಣ ರತ್ನ ಪ್ರಶಸ್ತಿಯನ್ನು ಬೀದರ್‌ನ ರಾಷ್ಟ್ರೀಯ ಬಸವದಳದ ಕಂಟೆಪ್ಪ ಗಂದಿಗುಡೆ ಅವರಿಗೆ ಸೇವಾರತ್ನ ಪ್ರಶಸ್ತಿಯನ್ನು ಹುಬ್ಬಳ್ಳಿಯ ಲಿಂಗಾಯತ ಮಹಾಸಭಾದ ಎಂ.ಬಿ.ಜೋಡಳ್ಳಿ ಅವರಿಗೆ ವೈದ್ಯ ರತ್ನ ಪ್ರಶಸ್ತಿಯನ್ನು ಡಾ.ಜಿ.ಆರ್‌.ತಮಗೊಂಡ ಅವರಿಗೆ ನೀಡಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಹಾದೇಶ್ವರ ಸ್ವಾಮೀಜಿ, ಮಾತೆ ದಾನೇಶ್ವರಿ, ಬಸವಯೋಗ ಸ್ವಾಮೀಜಿ ಉಪಸ್ಥಿತರಿದ್ದರು.

ಬಸವಧರ್ಮ ಪೀಠ ನಿಯಮಗಳಂತೆ ಕಾರ್ಯನಿರ್ವಹಿಸುತ್ತಿದೆ: ಮಾತೆ ಸ್ಪಷ್ಟನೆ

ಬಾಗಲಕೋಟೆ: ಬಸವಧರ್ಮ ಪೀಠದ ನಿಯಮಗಳಂತೆ ಕಾರ್ಯ ನಿರ್ವಹಿಸುತ್ತಿರುವ ಕೂಡಲಸಂಗಮದ ಟ್ರಸ್ಟ್‌ ಯಾವುದೇ ರೀತಿಯಲ್ಲಿಯೂ ನಿಯಮಗಳನ್ನು ಬಿಟ್ಟು ನಿರ್ಧಾರಗಳನ್ನು ಕೈಗೊಂಡಿಲ್ಲ ಎಂದು ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾತೆ ಮಾದೇವಿ ಅವರು ನಿರ್ಧಾರದಂತೆ ಬಸವಧರ್ಮ ಪೀಠದ ಉಸ್ತುವಾರಿಯನ್ನು ತೆಗೆದುಕೊಂಡು ಕೂಡಲಸಂಗಮ ಸೇರಿ ಪೀಠಕ್ಕೆ ಸಂಬಂ​ಧಿಸಿದ ಆಡಳಿತವನ್ನು ನಡೆಸಿಕೊಂಡು ಬರುತ್ತಿದ್ದು, ಕೆಲವರು ಮಾಡುತ್ತಿರುವ ಆರೋಪಗಳಿಗೆ ಅರ್ಥವಿಲ್ಲ ಎಂದು ಹೇಳಿದರು.

ಆಲಮಟ್ಟಿ- ಬಾಗಲಕೋಟೆ ಮಧ್ಯೆ ಜಲಸಾರಿಗೆಗೆ ಅಸ್ತು

ಶರಣಮೇಳಕ್ಕೆ ಪರ್ಯಾಯವಾಗಿ ಮತ್ತೊಂದು ಶರಣಮೇಳವನ್ನು ಆಯೋಜಿಸುವವರು ಆಯೋಜಿಸಲಿ. ಅದಕ್ಕೆ ನಮ್ಮ ತಕರಾರು ಇಲ್ಲ. ಬಸವ ಭಕ್ತರಿಗೆ ನಿಜವಾದ ಶರಣ ಮೇಳ ಯಾವುದು ಎಂಬುದು ಗೊತ್ತಿದೆ ಎಂದು ತಿಳಿಸಿದ ಗಂಗಾದೇವಿ ಅವರು, ಚನ್ನಬಸವಾನಂದ ಶ್ರೀಗಳ ಯಾವ ಬೆದರಿಕೆಗೂ ಅಂಜುವ ಪ್ರಶ್ನೆಯೇ ಇಲ್ಲ ಎಂದರು.

2017ರ ಜನೆವರಿ 13ರಂದು ಮಾತೆ ಮಾದೇವಿ ಅವರು ಬಸವಧರ್ಮ ಪೀಠದ ಜವಾಬ್ದಾರಿಯನ್ನು ವಹಿಸಿದಾಗಿನಿಂದ ವಿಭಿನ್ನ ನಿಲುವು ಹಾಗೂ ವರ್ತನೆಯನ್ನು ಮಾಡಿಕೊಂಡು ಬಂದಿರುವ ಕೆಲವರು ಟ್ರಸ್ಟ್‌ ಕುರಿತು ನ್ಯಾಯಾಲಯಕ್ಕೂ ಹೋಗಿದ್ದರು. ನ್ಯಾಯಾಲಯದ ತೀರ್ಪು ಏನು ಬಂದಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದರು. ಮಹಾದೇಶ್ವರ ಸ್ವಾಮೀಜಿ ಮಾತನಾಡಿ, ಲಿಂಗದೇವ ವಿಷಯದ ನಂತರ ವಿನಾಕಾರಣ ಭಕ್ತರಲ್ಲಿ ಗೊಂದಲ ಮೂಡಿಸಿದವರಿಗೆ ಸಮಯ ಬಂದಾಗ ತಕ್ಕ ಉತ್ತರ ಸಿಗಲಿದೆ ಎಂದರು.

click me!