ವಿಮಾನ ನಿಲ್ದಾಣದ 6 ಸಿಬ್ಬಂದಿ ಸೇರಿ 24 ಮಂದಿಗೆ ಸೋಂಕು

By Kannadaprabha NewsFirst Published Jun 7, 2020, 7:18 AM IST
Highlights

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ ಬರೋಬ್ಬರಿ 24 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರಲ್ಲಿ 11 ಮಂದಿ ಮುಂಬೈನಿಂದ ಆಗಮಿಸಿದವರಾಗಿದ್ದರೆ, ‘ವಂದೇ ಭಾರತ್‌ ಮಿಷನ್‌’ ವಿಮಾನಯಾನದ ಆರು ಸಿಬ್ಬಂದಿಯೂ ಸೇರಿದ್ದಾರೆ.

ಮಂಗಳೂರು(ಜೂ.07): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ ಬರೋಬ್ಬರಿ 24 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರಲ್ಲಿ 11 ಮಂದಿ ಮುಂಬೈನಿಂದ ಆಗಮಿಸಿದವರಾಗಿದ್ದರೆ, ‘ವಂದೇ ಭಾರತ್‌ ಮಿಷನ್‌’ ವಿಮಾನಯಾನದ ಆರು ಸಿಬ್ಬಂದಿಯೂ ಸೇರಿದ್ದಾರೆ.

ಉಳಿದಂತೆ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದ ಮೂವರು, ಸೌದಿ ಅರೇಬಿಯಾ, ಟರ್ಕಿಯಿಂದ ಆಗಮಿಸಿದ ತಲಾ ಒಬ್ಬರು, ಎನ್‌ಎಂಪಿಟಿಯ ಹಡಗು ನಿರ್ಮಾಣ ಸಿಬ್ಬಂದಿಯೊಬ್ಬರಿಗೂ ಸೋಂಕು ತಗುಲಿದೆ. ಯಾವುದೇ ಪ್ರಯಾಣ ಇತಿಹಾಸ ಇಲ್ಲದ ನಾಲ್ವರಿಗೆ ಸೋಂಕು ಪಸರಿಸಿರುವುದು ಆತಂಕ ಸೃಷ್ಟಿಸಿದೆ. ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 175ಕ್ಕೆ ಏರಿದೆ. ಈ ನಡುವೆ ಮೂವರು ಸೋಂಕಿನಿಂದ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾಜ್‌ ಆಗಿದ್ದಾರೆ.

ಉಡುಪಿಯಲ್ಲಿ 121 ಪಾಸಿಟಿವ್‌, ಒಂದೇ ದಿನ 101 ಜನ ಬಿಡುಗಡೆ

ಮುಂಬೈ ನಂಟು: ಹೊಸ ಸೋಂಕಿತರಲ್ಲಿ 30 ವರ್ಷದ ಯುವಕ ಮೇ 17ರಂದು ಮುಂಬೈನಿಂದ ಆಗಮಿಸಿದ್ದು, ಉಡುಪಿಯಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಕ್ವಾರಂಟೈನ್‌ ಮುಗಿದು ಬಂಟ್ವಾಳಕ್ಕೆ ಆಗಮಿಸಿದ್ದರು. ಮೂಡುಬಿದಿರೆಯ 8 ಮಂದಿ (13,42,38, 32 ವರ್ಷದ ಮಹಿಳೆಯರು, 53,16,15, 29 ವರ್ಷದ ಪುರುಷರು) ಮುಂಬೈನಿಂದ ಉಡುಪಿಯಲ್ಲಿ ಕ್ವಾರಂಟೈನ್‌ ಮುಗಿಸಿ ಮೂಡುಬಿದಿರೆಗೆ ಬಂದಿದ್ದರು. 30,49 ವರ್ಷದ ಪುರುಷರಿಬ್ಬರು ಮುಂಬೈನಿಂದ ಉಡುಪಿಯಲ್ಲಿ ಕ್ವಾರಂಟೈನ್‌ ಆಗಿ ಬೆಳ್ತಂಗಡಿಗೆ ತೆರಳಿದ್ದರು.

ಕುಕ್ಕೆಯಲ್ಲಿ ಭಕ್ತರ ದರ್ಶನಕ್ಕೆ ಸಿದ್ಧತೆ ಹೀಗಿದೆ: ಇಲ್ಲಿವೆ ಫೋಟೋಸ್

ಕೊರೋನಾ ಯೋಧರಿಗೂ ಸೋಂಕು: ಜೂ.6ರಂದು ದುಬೈನಿಂದ ಕೇರಳದ ಕಣ್ಣೂರಿಗೆ ಬಂದ ವಿಮಾನಯಾನದ ಆರು ಮಂದಿ ಸಿಬ್ಬಂದಿಗೂ ಸೋಂಕು ಹರಡಿದೆ. ಇವರಲ್ಲಿ 36, 37, 31, 33, 24 ವರ್ಷದ ಪುರುಷರು ಹಾಗೂ 35 ವರ್ಷದ ಮಹಿಳೆ ಇದ್ದು, ಕಣ್ಣೂರಿನಿಂದ ಮಂಗಳೂರಿಗೆ ಬಂದು ಖಾಸಗಿ ಹೊಟೇಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದರು. ಇದೀಗ ಅವರ ಸ್ಯಾಂಪಲ್‌ ವರದಿ ಪಾಸಿಟಿವ್‌ ಬಂದಿದೆ.

ನಾಲ್ವರ ಸೋಂಕು ಮೂಲ ನಿಗೂಢ: ಪ್ರಯಾಣ ಇತಿಹಾಸ ಇಲ್ಲದೆಯೂ ಐದು ಮಂದಿಗೆ ಕೊರೋನಾ ಪಾಸಿಟಿವ್‌ ಬಂದಿದ್ದಲ್ಲದೆ, ಸೋಂಕು ಮೂಲ ನಿಗೂಢವಾಗಿರುವುದು ಆತಂಕಕ್ಕೆ ಕಾರಣವಾಗಿದೆ. 44 ವರ್ಷದ ಮಹಿಳೆ, 43 ವರ್ಷದ ಪುರುಷ ಅನಾರೋಗ್ಯದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಲು ಆಗಮಿಸಿದ್ದರು. ಈಗ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಅವರನ್ನು ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇನ್ನೊಬ್ಬರು 42 ವರ್ಷದ ಮಹಿಳೆ ಕೂಡ ಕುಂದಾಪುರದಿಂದ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಬಂದಿದ್ದರು. ಇನ್ನೊಂದು ಪ್ರಕರಣದಲ್ಲಿ ಎನ್‌ಎಂಪಿಟಿ ಹಡಗು ನಿರ್ಮಾಣದ 27 ವರ್ಷದ ಯುವಕನಿಗೂ ಪಾಸಿಟಿವ್‌ ಬಂದಿದೆ. ಸೋಂಕು ಮೂಲ ನಿಗೂಢವಾಗಿರುವುದರಿಂದ ಇವರೆಲ್ಲ ಸಂಪರ್ಕಿತರ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್‌ ತಿಳಿಸಿದ್ದಾರೆ.

ಉಳಿದಂತೆ ಗುಜರಾತ್‌ನಿಂದ ಆಗಮಿಸಿದ 38 ವರ್ಷ ಪುರುಷ, ಯುಕ್ರೈನ್‌- ಟರ್ಕಿಯಿಂದ ಬಂದ 24 ವರ್ಷದ ಪುರುಷ, ಸೌದಿ ಅರೇಬಿಯಾದಿಂದ ಬಂದ 30 ವರ್ಷದ ಯುವಕನಿಗೂ ಸೋಂಕು ಬಂದಿದೆ.

ಮೂವರು ಬಿಡುಗಡೆ

ಕೊರೋನಾ ಸೋಂಕಿತರು ನಿತ್ಯವೂ ಗುಣಮುಖರಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಶನಿವಾರ ಮತ್ತೆ ಮೂವರು (30, 46, 36 ವರ್ಷದ ಪುರುಷರು) ಡಿಸ್ಚಾಜ್‌ರ್‍ ಆಗಿದ್ದಾರೆ. ಇದರೊಂದಿಗೆ ಇದುವರೆಗೆ 91 ಮಂದಿ ಗುಣಮುಖರಾದಂತಾಗಿದೆ. ಸದ್ಯ 77 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

click me!