ಕೊರೋನಾ ಆತಂಕ: ಗದಗ ಜಿಲ್ಲೆಗೆ ವಲಸಿಗರದ್ದೇ ಕಾಟ..!

By Kannadaprabha NewsFirst Published May 17, 2020, 9:28 AM IST
Highlights

ಹೈರಿಸ್ಕ್‌ ರಾಜ್ಯಗಳಿಂದ 212 ಜನರ ಆಗಮನ|18 ತಾಂಡಗಳಿಗೆ 2300 ಜನ ವಾಪಸ್‌, ಇನ್ನೂ ಹೆಚ್ಚುತ್ತಿದೆ| ಕೊರೋನಾದಿಂದ ತತ್ತರಿಸಿರುವ ಹೈರಿಸ್ಕ್‌ ರಾಜ್ಯಗಳೆಂದು ಗುರುತಿಸಿರುವ ಮಹಾರಾಷ್ಟ್ರ, ಗುಜರಾತ್‌ ರಾಜ್ಯಗಳಿಂದ 212 ಜನರು ಜಿಲ್ಲೆಗೆ ಬಂದಿದ್ದಾರೆ| 

ಶಿವಕುಮಾರ ಕುಷ್ಟಗಿ

ಗದಗ(ಮೇ.17): ಜಿಲ್ಲೆಯ ಕೊರೋನಾ ಸಂಕಟವನ್ನು ಕಳೆದ ನಾಲ್ಕೈದು ದಿನಗಳಲ್ಲಿ ವಲಸಿಗರು ಇಮ್ಮಡಿಗೊಳಿಸಿದ್ದಾರೆ. ಯಾವ ಕ್ಷಣದಲ್ಲಾದರೂ ಜಿಲ್ಲೆಗೆ ಮತ್ತಷ್ಟು ಜನ ಅನ್ಯ ರಾಜ್ಯಗಳಿಂದ ಬರಬಹುದು, ಬಂದು ಇಲ್ಲಿ ಕೊರೋನಾ ಸಂಕಟವನ್ನು ಹೆಚ್ಚಿಸುವ ಲಕ್ಷಣಗಳಿವೆ. ಅದರಲ್ಲಿಯೂ ಹೈರಿಸ್ಕ್‌ ಇರುವ ರಾಜ್ಯಗಳಿಂದ ಬರುವವರ ಸಂಖ್ಯೆ ಕೂಡ ದಿನೇ ದಿನೇ ಹೆಚ್ಚಾಗುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಕೆಲಸ ಅರಸಿ ಗೋವಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗಿದ್ದರು. ಅವರೆಲ್ಲ ಲಾಕ್‌ಡೌನ್‌ ಸಡಿಲವಾಗುತ್ತಿದ್ದಂತೆ ವಾಪಸ್‌ ಆಗುತ್ತಿದ್ದಾರೆ. ಅದರಲ್ಲಿಯೂ ತಾಂಡಾ ನಿವಾಸಿಗಳೇ ಸಾವಿರ ಸಂಖ್ಯೆಯಲ್ಲಿ ವಾಪಸ್‌ ಬರುತ್ತಿದ್ದಾರೆ. ಅವರೆಲ್ಲರನ್ನು ಕ್ವಾರಂಟೈನ್‌ ಮಾಡುವುದು ಕೂಡ ಕಷ್ಟವಾಗಿದೆ. ಸದ್ಯಕ್ಕೆ ಜಿಲ್ಲಾಡಳಿತಕ್ಕೆ ಲಭ್ಯವಾಗಿರುವ ಮಾಹಿತಿ ಆಧಾರದಲ್ಲಿ ಜಿಲ್ಲೆಯ 18 ತಾಂಡಾಗಳಿಗೆ ಒಟ್ಟು 2300 ಜನ ಮರಳಿದ್ದಾರೆ. ಇವರಿಂದ ಸಮಸ್ಯೆಯಾಗುವುದನ್ನು ಅಲ್ಲಗಳೆಯುವಂತಿಲ್ಲ.

ಲಾಕ್‌ಡೌನ್‌ ಎಫೆಕ್ಟ್‌: ಅನ್ನದಾತರ ನೆರವಿಗೆ ಧಾವಿಸಿದ ರೈತರು!

ಹೈರಿಸ್ಕ್‌ ರಾಜ್ಯಗಳಿಂದ 212 ಜನ:

ಕೇವಲ ಗೋವಾ ಮಾತ್ರವಲ್ಲ, ಸದ್ಯ ಕೊರೋನಾದಿಂದ ತತ್ತರಿಸಿರುವ ಹೈರಿಸ್ಕ್‌ ರಾಜ್ಯಗಳೆಂದು ಗುರುತಿಸಿರುವ ಮಹಾರಾಷ್ಟ್ರ, ಗುಜರಾತ್‌ ರಾಜ್ಯಗಳಿಂದ 212 ಜನರು ಜಿಲ್ಲೆಗೆ ಬಂದಿದ್ದಾರೆ. ಇದು ಕೂಡಾ ಯಾವುದೇ ಟ್ರ್ಯಾವೆಲ್‌ ಹಿಸ್ಟರಿ ಇಲ್ಲದೇ ಗದಗ ನಗರದ ವೃದ್ಧೆಗೆ ಸೋಂಕು ತಗಲಿ ಮೃತಪಟ್ಟಿದ್ದಲ್ಲದೆ 5 ಜನರು ಸೋಂಕಿತರಾಗಿರುವ ಗದಗ ಜಿಲ್ಲೆಗೀಗ ಮತ್ತೆ ಆತಂಕ ಶುರುವಾಗಿದೆ.

ವಿದೇಶದಿಂದ 32 ಜನ:

ಕೇವಲ ಅನ್ಯ ರಾಜ್ಯಗಳಿಂದ ಮಾತ್ರವಲ್ಲ, ವಿದೇಶದಿಂದಲೂ ಜಿಲ್ಲೆಗೆ ಸದ್ಯದಲ್ಲಿಯೇ 32 ಜನರ ಬರುತ್ತಿದ್ದು, ಅವರು ಕೂಡಾ ಕೊರೋನಾ ಹೆಚ್ಚಾಗಿರುವ ರಾಷ್ಟ್ರಗಳಿಂದ ಎನ್ನುವುದು ಜನತೆಯನ್ನು ಆತಂಕಕ್ಕೆ ದೂಡಿದೆ.

5 ವಲಸಿಗರಿಗೆ ಪಾಸಿಟಿವ್‌:

ಜಿಲ್ಲೆಯಲ್ಲಿ ಒಟ್ಟು 12 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ ವಲಸಿಗರಲ್ಲಿಯೇ 5 ಪ್ರಕರಣ ವರದಿಯಾಗಿದ್ದು ಇನ್ನು ಬರುವವರು, ಈಗಾಗಲೇ ಬಂದಿರುವ ಜನರು ಇನ್ನು 14 ದಿನದ ಕ್ವಾರಂಟೈನ್‌ ಪೂರ್ಣಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ಯಾವಾಗಲಾದರೂ ಪಾಸಿಟಿವ್‌ ಎಂದು ವರದಿಯಾದರೂ ಆಶ್ಚರ್ಯ ಪಡುವಂತಿಲ್ಲ.

ಕೊರೋನಾ ಲಕ್ಷಣಗಳು ಕಂಡು ಬಂದರೆ ಅವರ ಗಂಟಲು ದ್ರವ ಹಾಗೂ ರಕ್ತದ ಮಾದರಿ ಪಡೆದು ಲ್ಯಾಬ್‌ಗೆ ರವಾನೆ ಮಾಡಲಾಗುತ್ತಿದೆ. ರೋಗದ ಲಕ್ಷಣ ಕಂಡು ಬಂದವರನ್ನು ಮತ್ತು ಹೈರಿಸ್ಕ್‌ ರಾಜ್ಯದಿಂದ ಬಂದಿರುವ ಜನರನ್ನು ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್‌ ಮಾಡಲಾಗುತ್ತಿದೆ. ಗೋವಾದಿಂದ ಬಂದಿರುವ ಎಲ್ಲರನ್ನೂ ಹೋಂ ಕ್ವಾರಂಟೈನ್‌ ಮಾಡಲಾಗಿದ್ದು, ಮನೆಯಿಂದ ಆಚೆ ಬರದಂತೆ ಸೂಚನೆ ನೀಡಲಾಗಿದೆ. ಎಲ್ಲರೂ ಸರ್ಕಾರದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಹೇಳಿದ್ದಾರೆ.
 

click me!