ಭಟ್ಕಳದಲ್ಲಿ ಒಂದೂವರೆ ತಿಂಗಳಲ್ಲಿ 22 ಜನರ ಸಾವು ಎಂದ ಸಂಸದ!

By Kannadaprabha NewsFirst Published May 7, 2020, 12:23 PM IST
Highlights

ಭಟ್ಕಳದಲ್ಲಿ ಒಂದೂವರೆ ತಿಂಗಳಲ್ಲಿ 22 ಜನರು ಮೃತಪಟ್ಟಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ತಿಳಿಸಿ ಕೋವಿಡ್‌-19 ಸೋಂಕಿತರ ವಿವರ ಪಡೆದಿದ್ದಲ್ಲದೇ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಕುರಿತು ಸಲಹೆ ನೀಡಿದ್ದಾರೆ.

ಉತ್ತರ ಕನ್ನಡ(ಮೇ.07): ಭಟ್ಕಳ ತಹಸೀಲ್ದಾರ್‌ ಕಚೇರಿಯಲ್ಲಿ ಬುಧವಾರ ಸಂಸದ ಅನಂತಕುಮಾರ ಹೆಗಡೆ ಅಧಿಕಾರಿಗಳ ಸಭೆ ನಡೆಸಿ ಭಟ್ಕಳದಲ್ಲಿ ಒಂದೂವರೆ ತಿಂಗಳಲ್ಲಿ 22 ಜನರು ಮೃತಪಟ್ಟಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ತಿಳಿಸಿ ಕೋವಿಡ್‌-19 ಸೋಂಕಿತರ ವಿವರ ಪಡೆದಿದ್ದಲ್ಲದೇ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಕುರಿತು ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಹರೀಶಕುಮಾರ, ಎಸ್‌ಪಿ ಶಿವಪ್ರಕಾಶ ದೇವರಾಜು ಜತೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಸಂಸದರು, ಭಟ್ಕಳದಲ್ಲಿ ಕೋವಿಡ್‌-19 ಪ್ರಕರಣ ಏರಿಕೆ ಆಗುತ್ತಿರುವುದರಿಂದ ಸೋಂಕು ತಡೆಗಟ್ಟಲು ಲಾಕ್‌ಡೌನ್‌ ಬಿಗುಗೊಳಿಸಿ ಅನಾವಶ್ಯಕವಾಗಿ ಯಾರೂ ತಿರುಗಾಡದಂತೆ ನಿಗಾ ವಹಿಸಬೇಕು. ಚೆಕ್‌ಪೋಸ್ಟ್‌ಗಳಲ್ಲಿ ಕಡ್ಡಾಯವಾಗಿ ಎಲ್ಲ ವಾಹನಗಳ ತಪಾಸಣೆ ನಡೆಸಬೇಕು. ಭಟ್ಕಳ ಕಂಟೈನಮೆಂಟ್‌ ಜೋನ್‌ ಆಗಿರುವುದರಿಂದ ಪಟ್ಟಣಕ್ಕೆ ಬೇರೆ ಜಿಲ್ಲೆ, ರಾಜ್ಯದಿಂದ ಬಂದವರನ್ನು ಕಡ್ಡಾಯವಾಗಿ ಕ್ವಾರಂಟೈನ್‌ ಮಾಡಬೇಕು ಎಂದು ಸೂಚಿಸಿದರು.

ಜನನಾಂಗ ಕತ್ತರಿಸಿ ಜೈಲಿನ ಶಿವನಿಗೆ ಅರ್ಪಿಸಿದ ಕೈದಿ!

ಕಳೆದ ಒಂದೂವರೆ ತಿಂಗಳಿನಿಂದ ಭಟ್ಕಳದಲ್ಲಿ 22 ಜನರು ಮೃತಪಟ್ಟಿರುವ ಬಗ್ಗೆ ಮಾಹಿತಿ ಇದ್ದು, ಇವರು ಯಾವ ಕಾರಣಕ್ಕೆ ಮೃತಪಟ್ಟಿದ್ದಾರೆನ್ನುವ ಬಗ್ಗೆ ವಿವರವಾದ ಮಾಹಿತಿ ಕಲೆ ಹಾಕುವುದರ ಜತೆಗೆ ತನಿಖೆ ನಡೆಸಬೇಕು. ಇನ್ನು ಮುಂದೆ ಯಾವುದೇ ವ್ಯಕ್ತಿ ಮೃತಪಟ್ಟಲ್ಲಿ ಪೊಲೀಸ್‌ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿಯೇ ಅಂತ್ಯಕ್ರಿಯೆ ನಡೆಸುವಂತಾಗಬೇಕು. ಸಾವನ್ನು ಯಾವುದೇ ಕಾರಣಕ್ಕೂ ಮರೆಮಾಚಲು ಕೊಡಬಾರದು. ಪುರಸಭೆ ಮತ್ತು ಪಟ್ಟಣ ಪಂಚಾಯಿತಿಯಲ್ಲಿ ಮರಣ ಪ್ರಮಾಣಪತ್ರ ನೀಡುವುದರ ಮೊದಲು ಕಂದಾಯ ಮತ್ತು ಪೊಲೀಸ್‌ ಇಲಾಖೆಯಿಂದ ಮಾಹಿತಿ ತರಿಸಿಕೊಳ್ಳುವಂತೆ ಸೂಚಿಸಿದರು.

ಭಟ್ಕಳದಲ್ಲಿ ಕಬರಸ್ತಾನ ಮತ್ತು ಸ್ಮಶಾನಕ್ಕೆ ಪೊಲೀಸ್‌ ಕಾವಲು ಹಾಕಬೇಕು. ಸಾಧ್ಯವಾದರೆ ಸಿಸಿ ಕ್ಯಾಮೆರಾ ಕಣ್ಗಾವಲು ಹಾಕಿಸಿ. ಪಟ್ಟಣದಲ್ಲಿ ಏನೇ ಆದರೂ ಪೊಲೀಸ್‌, ಆರೋಗ್ಯ, ಕಂದಾಯ ಇಲಾಖೆಯ ಗಮನಕ್ಕೆ ಇರಬೇಕು. ವಾಹನದಲ್ಲಿ ಬೇಕಾಬಿಟ್ಟಿಅಲೆಯುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜನಜಂಗುಳಿ ಸೇರುವ ಪ್ರದೇಶದಲ್ಲಿ ಪೊಲೀಸರ ಸಂಖ್ಯೆ ಹೆಚ್ಚಿಸಬೇಕು. ಕೋವಿಡ್‌-19 ಸೋಂಕು ನಿಯಂತ್ರಣಕ್ಕೆ ತರಲು ಇದೆಲ್ಲಾ ಕ್ರಮ ಸದ್ಯಕ್ಕೆ ಅನಿವಾರ್ಯವಾಗಿದೆ. ಲಾಕ್‌ಡೌನ್‌ ಸಡಿಲಿಸಿ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟರೆ ತೊಂದರೆ ತಪ್ಪಿದ್ದಲ್ಲ ಎಂದೂ ಅಧಿಕಾರಿಗಳ ಗಮನಕ್ಕೆ ತಂದರು.

ಸಂಸದರ ಸೂಚನೆಯನ್ನು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಪಾಲಿಸುವುದಾಗಿ ತಿಳಿಸಿದೆ. ಶಾಸಕ ಸುನೀಲ ನಾಯ್ಕ, ಎಸಿ ಭರತ್‌ ಎಸ್‌, ತಾಲೂಕಿನ ಹಿರಿಯ ಅಧಿಕಾರಿಗಳು, ನೋಡಲ್‌ ಅಧಿಕಾರಿಗಳು ಇದ್ದರು.

click me!