ಕೊಡಗು-ಕೇರಳ ಸಂಚಾರಕ್ಕೆ ಸೇವಾ ಸಿಂಧು ಪಾಸ್‌ಗೆ ಮಾತ್ರ ಅವಕಾಶ

By Kannadaprabha NewsFirst Published May 7, 2020, 10:56 AM IST
Highlights

ಕೊಡಗು ಜಿಲ್ಲೆಯ ನಿವಾಸಿಗಳೆಂದು ದೃಢೀಕರಿಸುವ ಅಧಿಕೃತ ದಾಖಲೆಗಳನ್ನು ಸಲ್ಲಿಸಿದರೆ ಮಾತ್ರ ಸೇವಾ ಸಿಂಧು ಅರ್ಜಿಯು ಪರಿಗಣಿಸಲ್ಪಡುತ್ತದೆ.

ಮಡಿಕೇರಿ(ಮೇ.07): ಕೋವಿಡ್‌-19ರ ಸಂಬಂಧ ಲಾಕ್‌ಡೌನ್‌ನಿಂದ ಸಿಲುಕಿದ ಅನೇಕ ಜನರು ಕೇರಳದಿಂದ ಕೊಡಗು ಜಿಲ್ಲೆಗೆ ಪ್ರವೇಶಿಸಲು https://covid19jagratha.kerala.nic.in/ ಪೋರ್ಟಲ್‌ ಮೂಲಕ ಪಾಸ್‌ಗಳನ್ನು ಪಡೆದುಕೊಂಡಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಆದ್ದರಿಂದ ಕರ್ನಾಟಕ ರಾಜ್ಯ ಸರ್ಕಾರ, ಕೇರಳ ಸೇರಿದಂತೆ ಇತರೆ ರಾಜ್ಯಗಳಿಂದ ಕರ್ನಾಟಕಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಈ ಮಾರ್ಗಸೂಚಿಗಳು ಇಂತಿವೆ:

ಕರ್ನಾಟಕದ ‘ಸೇವಾ ಸಿಂಧು’ ತಂತ್ರಾಂಶದ ಮೂಲಕ ಪಡೆದ ಅಧಿಕೃತ ಇ-ಪಾಸ್‌ಗಳನ್ನು ಹೊಂದಿರುವವರನ್ನು ಹೊರತುಪಡಿಸಿ, ಬೇರೆ ಯಾವುದೇ ಪಾಸ್‌ ಹೊಂದಿರುವವರಿಗೆ ಕರ್ನಾಟಕ ರಾಜ್ಯಕ್ಕೆ ಪ್ರವೇಶ ನೀಡಲಾಗುವುದಿಲ್ಲ. ಕೊಡಗು ಜಿಲ್ಲೆಯ ನಿವಾಸಿಗಳೆಂದು ದೃಢೀಕರಿಸುವ ಅಧಿಕೃತ ದಾಖಲೆಗಳನ್ನು ಸಲ್ಲಿಸಿದರೆ ಮಾತ್ರ ಸೇವಾ ಸಿಂಧು ಅರ್ಜಿಯು ಪರಿಗಣಿಸಲ್ಪಡುತ್ತದೆ. ಇದುವರೆಗೆ ಕೊಡಗು ಜಿಲ್ಲೆಯಿಂದ ಕೇರಳ ರಾಜ್ಯಕ್ಕೆ ಮತ್ತು ಕೇರಳ ರಾಜ್ಯದಿಂದ ಕೊಡಗು ಜಿಲ್ಲೆಗೆ ನೇರವಾಗಿ ಯಾವುದೇ ಪ್ರವೇಶ/ ನಿರ್ಗಮನ ದ್ವಾರಗಳಿರುವುದಿಲ್ಲ.[

ದೇಶದಲ್ಲಿ 548 ವೈದ್ಯಕೀಯ ಸಿಬ್ಬಂದಿಗೆ ಕೊರೋನಾ!

ಕರ್ನಾಟಕ ರಾಜ್ಯದೊಳಗೆ ಪ್ರವೇಶಿಸುವ ವ್ಯಕ್ತಿಯು ಕರ್ನಾಟಕ ರಾಜ್ಯದ ಚೆಕ್‌ಪೋಸ್ಟ್‌ನಲ್ಲಿ ನಿಯೋಜಿತರಾಗಿರುವ ವೈದ್ಯಕೀಯ ತಪಾಸಣಾ ಸಮಿತಿ ತೆಗೆದುಕೊಳ್ಳುವ ನಿರ್ಧಾರದಂತೆ 14 ದಿನಗಳ ಗೃಹ ಸಂಪರ್ಕ ತಡೆ/ ಸಾಂಸ್ಥಿಕ ಸಂಪರ್ಕ ತಡೆ / ಆಸ್ಪತ್ರೆಯಲ್ಲಿ ಸಂಪರ್ಕ ತಡೆಯಲ್ಲಿರುವುದು ಕಡ್ಡಾಯವಾಗಿದೆ. ಕೊಡಗು ಜಿಲ್ಲೆಗೆ ಕುಶಾಲನಗರದ ಕೊಪ್ಪ ಚೆಕ್‌ಪೋಸ್ಟ್‌ (ಮೈಸೂರು ಜಿಲ್ಲೆಯ ಸರಹದ್ದು) ಮತ್ತು ಸಂಪಾಜೆ ಚೆಕ್‌ಪೋಸ್ಟ್‌ (ದಕ್ಷಿಣ ಕನ್ನಡ ಜಿಲ್ಲೆಯ ಸರಹದ್ದು) ಮುಖಾಂತರ ಮಾತ್ರ ಪ್ರವೇಶಿಸಲು ಅವಕಾಶವಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

click me!