ಚಾಮರಾಜನಗರ ಜಿಲ್ಲೆಯಲ್ಲಿ 117 ಹೆಕ್ಟೇರ್‌ಗೂ ಅಧಿಕ ಬಾಳೆ ನಾಶ

By Kannadaprabha NewsFirst Published Dec 16, 2019, 12:10 PM IST
Highlights

ಚಾಮರಾಜನಗರದಲ್ಲಿ ಬಾಳೆ ಪ್ರಮುಖ ಬೆಳೆಯಾಗಿದ್ದು, ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯಿಂದ ಸುಮಾರು 117 ಹೆಕ್ಟೇರ್‌ಗೂ ಅಧಿಕ ಬಾಳೆ ಬೆಳೆ ನಷ್ಟವಾಗಿದೆ. ರಾಜ್ಯವಲ್ಲದೆ ಹೊರ ರಾಜ್ಯಕ್ಕೂ ಚಾಮರಾಜನಗರದಿಂದ ಬಾಳೆ ಪೂರೈಕೆಯಾಗುತ್ತದೆ. ಬೆಳೆ ನಾಶ ಇಲ್ಲಿನ ರೈತರನ್ನು ತೀವ್ರವಾಗಿ ಬಾಧಿಸುವ ಸಾಧ್ಯತೆ ಇದೆ.

ಚಾಮರಾಜನಗರ (ಡಿ.16): ಜಿಲ್ಲೆಯಲ್ಲಿ ಬಾಳೆ ಪ್ರಮುಖ ಬೆಳೆಯಾಗಿದ್ದು, ರಾಜ್ಯವಲ್ಲದೆ ಹೊರ ರಾಜ್ಯಕ್ಕೂ ಪೂರೈಕೆಯಾಗುತ್ತದೆ. ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯಿಂದ ಸುಮಾರು 117 ಹೆಕ್ಟೇರ್‌ಗೂ ಅಧಿಕ ಬಾಳೆ ಬೆಳೆ ನಷ್ಟವಾಗಿದೆ.

ಮಳೆಯಿಂದ ಅಪಾರ ನಷ್ಟ:

ಜಿಲ್ಲೆಯಲ್ಲಿ 13,993 ಹೆಕ್ಟೇರ್‌ ಪ್ರದೇಶದಲ್ಲಿ ಹಣ್ಣಿನ ಬೆಳೆ ಬೆಳೆಯಲಾಗುತ್ತಿದ್ದು, 10,410 ಹೆಕ್ಟೇರ್‌ ಜಮೀನಿನಲ್ಲಿ ಬಾಳೆ ಬೆಳೆಯಲಾಗಿದೆ. 4,885 ಹೆಕ್ಟೇರ್‌ ಪ್ರದೇಶದಲ್ಲಿ ಪಚ್ಚಬಾಳೆ, 5,525 ಹೆಕ್ಟೇರ್‌ ಪ್ರದೇಶದಲ್ಲಿ ಏಲಕ್ಕಿ, ಇತರೆ ಬಾಳೆ ಬೆಳೆಯಲಾಗಿದೆ. ಇತ್ತೀಚೆಗೆ ಸುರಿದ ಬಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ 117 ಹೆಕ್ಟೇರ್‌ಗೂ ಅಧಿಕ ಬಾಳೆ ಬೆಳೆ ನಾಶವಾಗಿದ್ದು, ಬಾಳೆ ಬೆಳೆದಿದ್ದ ರೈತರು ಮಳೆಯಿಂದಾಗಿ ಸಂಕಷ್ಟಕ್ಕೆ ತುತ್ತಾಗಿದ್ದಾರೆ.

'ರೇಷನ್ ಶಾಪ್‌ನಲ್ಲಿ ಈರುಳ್ಳಿ, ಬೆಳ್ಳುಳ್ಳಿಯನ್ನೂ ಕೊಡಿ'..!

ಜಿಲ್ಲೆಯಲ್ಲಿ ಹೆಚ್ಚಾಗಿ ಬಾಳೆ ಬೆಳೆಯನ್ನು ಬೆಳೆದಿರುವ ಚಾಮರಾಜನಗರ ತಾಲೂಕಿನಲ್ಲೇ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯಿಂದ ಸುಮಾರು 117 ಹೆಕ್ಟೇರ್‌ ಜಮೀನಿನಲ್ಲಿ ಬಾಳೆ ಬೆಳೆ ನಷ್ಟವಾಗಿದ್ದು, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು ತಾಲೂಕಿನಲ್ಲಿ ಬಾಳೆ ಬೆಳೆಯಲಾಗಿದ್ದರೂ ಮಳೆಯಿಂದ ನಷ್ಟವಾಗಿರುವುದು ವರದಿಯಾಗಿಲ್ಲ.

ಇಲಾಖೆ ಪ್ರಕಾರ 117 ಎಕರೆ ನಷ್ಟ:

ಚಾಮರಾಜನಗರ ತಾಲೂಕಿನಲ್ಲಿ 2,310 ಹೆಕ್ಟೇರ್‌ನಲ್ಲಿ ಪಚ್ಚಬಾಳೆ, 1,900 ಹೆಕ್ಟೇರ್‌ನಲ್ಲಿ ಏಲಕ್ಕಿ ಮತ್ತು ಇತರೆ ಬಾಳೆಗಳನ್ನು ಬೆಳೆಯಲಾಗಿದ್ದು, ಒಟ್ಟಾರೆಯಾಗಿ ಚಾಮರಾಜನಗರ ತಾಲೂಕಿನಲ್ಲೇ 4,200 ಹೆಕ್ಟೇರ್‌ನಲ್ಲಿ ಬಾಳೆ ಬೆಳೆಯಲಾಗಿದೆ. ಆದರೆ 4,200 ಹೆಕ್ಟೇರ್‌ನಲ್ಲಿ ಬೆಳೆಯಲಾಗಿದ್ದ ಬಾಳೆ ಬೆಳೆಯಲ್ಲಿ 117 ಹೆಕ್ಟೇರ್‌ ಜಮೀನಿನಲ್ಲಿ ಮಳೆಯಿಂದ ನಾಶವಾಗಿರುವುದು ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ಲೆಕ್ಕಕ್ಕೆ ಸಿಕ್ಕಿದೆ. ಉಳಿದದ್ದು ಲೆಕ್ಕಕ್ಕೆ ಸಿಕ್ಕಿಲ್ಲ.

ಕಾಂಗ್ರೆಸ್‌ನಿಂದ ತಾಲಿಬಾನಿಗಳಿಗೆ ನೆರವು: ಸಿಟಿ ರವಿ

ಗುಂಡ್ಲುಪೇಟೆ ತಾಲೂಕಿನಲ್ಲಿ 800 ಹೆಕ್ಟೇರ್‌ನಲ್ಲಿ ಪಚ್ಚಬಾಳೆ, 2,350 ಹೆಕ್ಟೇರ್‌ ಏಲಕ್ಕಿ ಮತ್ತು ಇತರೆ ಬೆಳೆಯಲಾಗಿದ್ದು, ಒಟ್ಟಾರೆಯಾಗಿ ಗುಂಡ್ಲುಪೇಟೆ ತಾಲೂಕಿನಲ್ಲೇ 3,150 ಹೆಕ್ಟೇರ್‌ನಲ್ಲಿ ಬಾಳೆ ಬೆಳೆಯಲಾಗಿದೆ. ಕೊಳ್ಳೇಗಾಲ ಮತ್ತು ಹನೂರು ತಾಲೂಕಿನಲ್ಲಿ ಒಟ್ಟಾಗಿ 1,600 ಹೆಕ್ಟೇರ್‌ ಜಮೀನಿನಲ್ಲಿ ಪಚ್ಚಬಾಳೆ, 880 ಹೆಕ್ಟೇರ್‌ನಲ್ಲಿ ಏಲಕ್ಕಿ ಮತ್ತು ಇತರೆ ಬಾಳೆಗಳನ್ನು ಬೆಳೆಯಲಾಗಿದ್ದು, ಒಟ್ಟಾರೆಯಾಗಿ ಕೊಳ್ಳೇಗಾಲ ಮತ್ತು ಹನೂರು ತಾಲೂಕಿನಲ್ಲೇ 2,480 ಹೆಕ್ಟೇರ್‌ನಲ್ಲಿ ಬಾಳೆ ಬೆಳೆಯಲಾಗಿದೆ.

ಯಳಂದೂರು ತಾಲೂಕಿನಲ್ಲಿ 175 ಹೆಕ್ಟೇರ್‌ ಜಮೀನಿನಲ್ಲಿ ಪಚ್ಚಬಾಳೆ, 395 ಹೆಕ್ಟೇರ್‌ನಲ್ಲಿ ಏಲಕ್ಕಿ ಹಾಗೂ ಇತರೆ ಬಾಳೆ ಬೆಳೆಯಲಾಗಿದ್ದು, ಒಟ್ಟಾರೆಯಾಗಿ ಯಳಂದೂರು ತಾಲೂಕಿನಲ್ಲೇ 570 ಹೆಕ್ಟೇರ್‌ನಲ್ಲಿ ಬಾಳೆ ಬೆಳೆಯಲಾಗಿದೆ.

4.5 ಕೋಟಿ ನಷ್ಟ:

ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು ಮತ್ತು ಯಳಂದೂರು ತಾಲೂಕಿನಲ್ಲಿ ಬಾಳೆ ಬೆಳೆ ಮಳೆಯಿಂದ ಹಾನಿಯಾಗಿಲ್ಲದಿರುವುದು ಕಂಡು ಬಂದಿದೆ. ಜಿಲ್ಲೆಯಲ್ಲಿ 10,410 ಹೆಕ್ಟೇರ್‌ನಲ್ಲಿ ಬಾಳೆ ಬೆಳೆದಿರುವುದರಿಂದ 2.57 ಲಕ್ಷ ಟನ್‌ ಬಾಳೆ ಉತ್ಪಾದನೆಯಾಗುವ ನಿರೀಕ್ಷೆಯಿದ್ದು, 385 ಕೋಟಿ ರು.ಗಳ ನಿರೀಕ್ಷೆಯಿದೆ. ಮಳೆಯಿಂದ 117 ಹೆಕ್ಟೇರ್‌ ಪ್ರದೇಶದಲ್ಲಿ ಬಾಳೆ ಬೆಳೆ ನಾಶವಾಗಿರುವುದರಿಂದ 4.5ಕೋಟಿ ರು.ನಷ್ಟವಾಗಿದೆ.

ಕೇಂದ್ರದ ನಿಗದಿಯಂತೆ ಪರಿಹಾರ ವಿತರಣೆ

ಮಳೆ ಬೀಳುವ ಸಂದರ್ಭದಲ್ಲಿ ಮಳೆಯ ನೀರು ಬಾಳೆ ತೋಟದಲ್ಲಿ ನಿಲ್ಲದಂತೆ ನೋಡುಕೊಳ್ಳುವುದು ಕಡಿಮೆ. ಮಳೆ ನೀರು ನಿಂತಾಗ ಬಾಳೆ ಗಿಡ ಎತ್ತರಕ್ಕೆ ಬೆಳೆದಿರುವುದರಿಂದ ಬಾಗಿ ಕೆಳಕ್ಕೆ ಬೀಳುತ್ತದೆ. ಇದರಿಂದ ಬಾಳೆ ಬೆಳೆದ ರೈತರಿಗೆ ನಷ್ಟವಾಗಲಿದೆ. ರೈತರು ರೈತ ಸಂಪರ್ಕ ಕೇಂದ್ರಗಳು, ಗ್ರಾಪಂಗಳು ಅಥವಾ ತಹಸೀಲ್ದಾರ್‌ ಕಚೇರಿಯಲ್ಲಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದರೆ ಸರ್ವೆ ಮಾಡಿ ಬಾಳೆ ಬೆಳೆಗೆ 1 ಎಕರೆಗೆ ಕೇಂದ್ರ ಸರ್ಕಾರ ನಿಗದಿಪಡಿಸಿದಂತೆ ಪರಿಹಾರವನ್ನು ವಿತರಣೆ ಮಾಡಲಾಗುತ್ತದೆ. ಈಗಾಗಲೇ 1 ಹೆಕ್ಟೇರ್‌ ಜಮೀನಿಗೆ 6800 ರು.ಗಳಂತೆ 84 ಹೆಕ್ಟೇರ್‌ ಜಮೀನಿಗೆ 5.71 ಲಕ್ಷ ರು. ಪರಿಹಾರವನ್ನು ವಿತರಿಸಲಾಗಿದೆ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ರವಿ ತಿಳಿಸಿದ್ದಾರೆ.

- ಎನ್‌. ರವಿಚಂದ್ರ

click me!