ಒಂದು ಎಕರೆ ಭೂಮಿ ಕೊಟ್ರೆ ರೈತರಿಗೆ 10 ಲಕ್ಷ ರು.

By Kannadaprabha NewsFirst Published Nov 20, 2020, 1:45 PM IST
Highlights

ರೈತರು ಒಂದು ಎಕರೆ ಭೂಮಿ ಕೊಟ್ಟರೆ ಮುಂಗಡವಾಗಿ 10 ಲಕ್ಷ ರು. ಹಣ ನೀಡಲಾಗುತ್ತದೆ. ಈ ಬಗ್ಗೆ ಎಂಡಿಎ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ. 

ಮೈಸೂರು (ನ.20):  ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೂತನ ಬಡಾವಣೆಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, 50:50 ಅನುಪಾತದಂತೆ ರೈತರಿಗೆ ಮುಂಗಡವಾಗಿ  10 ಲಕ್ಷ ನೀಡಿ ಭೂಮಿ ಪಡೆಯಲು ಉದ್ದೇಶಿಸಲಾಗಿದೆ ಎಂದು ಎಂಡಿಎ ಅಧ್ಯಕ್ಷ ಎಚ್‌.ವಿ. ರಾಜೀವ್‌ ತಿಳಿಸಿದರು.

ಮೈಸೂರು ನಗರವು ಇಂದು ಶಿಕ್ಷಣ, ಉದ್ಯೋಗ ಸೇರಿದಂತೆ ಹಲವು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಉದ್ಯೋಗಕ್ಕಾಗಿ, ಶಿಕ್ಷಣಕ್ಕಾಗಿ ಇಲ್ಲಿಗೆ ಬರುವ ಅನೇಕಾರು ಮಂದಿ ಮೈಸೂರಿನಂತಹ ನಗರದಲ್ಲಿ ವಾಸಿಸಲು ಉದ್ದೇಶಿಸಿದ್ದಾರೆ. ನಿವೇಶನ ಮತ್ತು ಗುಣಮಟ್ಟದ ವಿಷಯದಲ್ಲಿ ನಂಬಿಕೆ ಮತ್ತು ವಿಶ್ವಾಸಕ್ಕೆ ಅರ್ಹವಾದ ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ನಿವೇಶನ ಪಡೆಯುವ ಹಂಬಲ ಇರುತ್ತದೆ. ಅದು ಸಹಜ ಕೂಡ. ಅಂತಹವರನ್ನು ಗಮನದಲ್ಲಿಟ್ಟುಕೊಂಡು ಕೈಗೆಟುಕುವ ದರದಲ್ಲಿ ನಿವೇಶನ ನೀಡುವುದು ನಮ್ಮ ಗುರಿ ಎಂದರು.

ಇದಕ್ಕಾಗಿ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಂದ ಜಮೀನು ಪಡೆದು ಅವರಿಗೆ ಮತ್ತು ನಮಗೆ ಲಾಭದಾಯಕವಾಗುವಂತೆ ನೋಡಿಕೊಳ್ಳಲಾಗುತ್ತಿದೆ. ರೈತರಿಗೆ ಮುಂಗಡವಾಗಿ ನೀಡುವ ಮೊತ್ತವನ್ನು  5 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಅವರು ವಿವರಿಸಿದರು.

ಮೈಸೂರು ನಗರ ಈಗ ಎರಡನೇ ಅತಿ ದೊಡ್ಡ ನಗರವಾಗಿ ಬೆಳೆಯುತ್ತಿದೆ. ನಗರದ ಬೆಳವಣಿಗೆ ವೇಗ ಪಡೆಯುತ್ತಿದೆ. ಎಂಡಿಎ ಮತ್ತು ರೈತರ ಜಂಟಿ ಸಹಭಾಗಿತ್ವದಲ್ಲಿ ಬಡಾವಣೆ ಅಭಿವೃದ್ಧಿಪಡಿಸಲು ಅಧಿಸೂಚಿಸಿದ ಜಮೀನುಗಳಿಗೆ ಪರಿಹಾರವಾಗಿ ಯೋಜಿತ ಬಡಾವಣೆ ರಚಿಸಿ ಲಭ್ಯವಾಗುವ ಒಟ್ಟು ನಿವೇಶನಗಳಲ್ಲಿ 50:50 ಅನುಪಾತದಲ್ಲಿ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ನಿಯಮ 2009 ಹಾಗೂ 2015ರ ತಿದ್ದುಪಡಿ ನಿಯಮಗಳ ಅನ್ವಯ ನಿವೇಶನ ರೂಪದಲ್ಲಿ ಸಂಬಂಧಿಸಿದ ಭೂ ಮಾಲೀಕರಿಗೆ ನಿವೇಶನ ನೀಡಲಾಗುವುದು. ಈ ಯೋಜನೆ ಪ್ರಕಾರ ಲಭ್ಯವಾಗುವ ವಸತಿ ವಲಯದ 50:50 ಅನುಪಾತದಡಿ ಪ್ರತಿ ಎಕರೆಗೆ 9 ನಿವೇಶನ ನೀಡಲಾಗುವುದು ಎಂದು ಅವರು ಹೇಳಿದರು.

ಸಂಸದೆ ಸುಮಲತಾಗೆ ತಿಳುವಳಿಕೆ ಇಲ್ಲವೆಂದ ಮುಖಂಡ ..

ಪ್ರತಿ ಅಡಿಗೆ ಮೂಲದರ ನಿಗದಿಪಡಿಸಿದ ನಂತರ ನೀಡಲಾಗುವ ಒಟ್ಟು ವಿಸ್ತೀರ್ಣದಲ್ಲಿ 10 ಲಕ್ಷ ಮೌಲ್ಯದ ನಿವೇಶನವನ್ನು ಪ್ರಾಧಿಕಾರಕ್ಕೆ ಬಿಟ್ಟುಕೊಡಬಹುದು. ನಿವೇಶನಕ್ಕೆ ಪ್ರಾಧಿಕಾರವು ನಿಗದಿಪಡಿಸಿದ ಮೌಲ್ಯದ ಬದಲಾಗಿ ಈ  10 ಲಕ್ಷ ಹಣವನ್ನು ಪ್ರಾಧಿಕಾರಕ್ಕೆ ಪಾವತಿಸಿ ಭೂ ಮಾಲೀಕರಿಗೆ ಲಭ್ಯವಾಗುವ ನಿವೇಶನ ಪಡೆಯಬಹುದು. ಖಾಸಗಿ ಬಡಾವಣೆ ಮಾಡುವಾಗ ರೈತರು ತಮಗೆ ಪ್ರತಿ ಎಕರೆಗೆ ದೊರೆತ ಹಣವನ್ನು ಹೇಗೆ ಬಳಸಿಕೊಳ್ಳಬೇಕು ಎಂದು ತೋಚದೆ, ಕಳೆದುಕೊಳ್ಳುವವರೇ ಹೆಚ್ಚು. ಆದರೆ ನಾವು ನಿವೇಶನವಾಗಿ ಅಭಿವೃದ್ಧಿಪಡಿಸಿ ನೀಡುವುದರಿಂದ ಭವಿಷ್ಯದ ದೃಷ್ಟಿಯಿಂದ ಕಾಪಾಡಿಕೊಳ್ಳುತ್ತಾರೆ. ಅವರ ಮಕ್ಕಳಿಗೆ ಅಥವಾ ಕಷ್ಟಕಾಲದಲ್ಲಿ ನೆರವಾಗುತ್ತದೆ ಎಂದು ಅವರು ತಿಳಿಸಿದರು.

ಎಂಡಿಎ ಅಭಿವೃದ್ಧಿಪಡಿಸಿದ ಬಡಾವಣೆಯಲ್ಲಿ ಭೂ ಮಾಲೀಕರಿಗೆ ಮೂಲೆ ಅಥವಾ ವಾಣಿಜ್ಯ ನಿವೇಶನ ನೀಡುವುದಿಲ್ಲ. ನಿವೇಶನ ಪಡೆದವರು ಅವರ ನಿವೇಶನಗಳನ್ನು ಇತರರಿಗೆ ಮಾರಾಟ ಮಾಡುವ ಹಕ್ಕು ಹೊಂದಿರುತ್ತಾರೆ ಎಂದರು.

click me!