
ದುಬೈ(ಆ.29): 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಕೊರೋನಾ ಹೆಮ್ಮಾರಿ ಟೂರ್ನಿಯ ಮೇಲೆ ತನ್ನ ವಕ್ರದೃಷ್ಠಿ ಬೀರಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ವೇಗಿ ದೀಪಕ್ ಚಹಾರ್ ಹಾಗೂ ಯುವ ಬ್ಯಾಟ್ಸ್ಮನ್ ಋತುರಾಜ್ ಗಾಯಕ್ವಾಡ್ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಇದುವರೆಗೂ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.
ಸದ್ಯ ಈ ಇಬ್ಬರು ಆಟಗಾರರು ಐಸೋಲೇಷನ್ಗೆ ಒಳಗಾಗಿದ್ದಾರೆ. ಇನ್ನೂ ಇವರ ಜತೆಗಿದ್ದ 10 ಆಟಗಾರರು ಕೂಡಾ ಕ್ವಾರಂಟೈನ್ಗೆ ಒಳಗಾಗಿದ್ದಾರೆ ಎಂದು ದ ಟೈಮ್ಸ್ ಆಫ್ ಇಂಡಿಯಾ ವೆಬ್ಸೈಟ್ ವರದಿ ಮಾಡಿದೆ. ಶುಕ್ರವಾರವಷ್ಟೇ ಖ್ಯಾತ ಕ್ರೀಡಾ ವೆಬ್ಸೈಟ್ವೊಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಆಟಗಾರರು ಸೇರಿದಂತೆ 13 ಮಂದಿಗೆ ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿ ಮಾಡಿತ್ತು. ದಿನ ಬೆಳಗಾಗುವುದರೊಳಗಾಗಿ ಈ ಇಬ್ಬರ ಹೆಸರು ಬಹಿರಂಗವಾಗಿದೆ.
ಇದೀಗ ತಂಡದ ಆಟಗಾರರು ಹಾಗೂ ಸಿಬ್ಬಂದಿ ಮತ್ತೊಮ್ಮೆ ಕೊರೋನಾ ಟೆಸ್ಟ್ಗೆ ಒಳಗಾಗಬೇಕಾಗಿದೆ. ವರದಿಗಳು ನೆಗೆಟಿವ್ ಬಂದರೆ ಮಾತ್ರ ಸೆಪ್ಟೆಂಬರ್ 01ರಿಂದ ಅಭ್ಯಾಸ ಮಾಡಲು ಮೈದಾನಕ್ಕಿಳಿಯಬಹುದಾಗಿದೆ. ಒಟ್ಟಿನಲ್ಲಿ ಆಟಗಾರರು ಹಾಗೂ ಸಿಬ್ಬಂದಿಗಳು ಕೊರೋನಾ ಟೆಸ್ಟ್ ನೆಗೆಟಿವ್ ಬಂದರೆ ಮಾತ್ರ ಹೋಟೆಲ್ ಕೊಠಡಿಯಿಂದ ಹೊರಬರಬಹುದಾಗಿದೆ.
CSK ಗೆ ಬಿಗ್ ಶಾಕ್: IPL 2020 ಸಂಪೂರ್ಣ ಟೂರ್ನಿಯಿಂದ ಸುರೇಶ್ ರೈನಾ ಔಟ್..!
ಇದಿಷ್ಟು ಒಂದು ಕಡೆಯಾದರೆ ಸಿಎಸ್ಕೆ ತಂಡದ ಉಪನಾಯಕ ಸುರೇಶ್ ರೈನಾ ವೈಯುಕ್ತಿಕ ಕಾರಣಗಳಿಂದಾಗಿ 13ನೇ ಆವೃತ್ತಿಯಿಂದ ಹಿಂದೆ ಸರಿದಿದ್ದಾರೆ. ಇದು ತಂಡದ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಸುರೇಶ್ ರೈನಾ ಸಿಎಸ್ಕೆ ತಂಡದ ಪರ ತನ್ನದೇ ಛಾಪು ಮೂಡಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.