INDIA
ಉತ್ತರ ಪ್ರದೇಶದ ಗಾಜೀಪುರ್ನ ಹಳ್ಳಿಯೊಂದರಲ್ಲಿ 50ಕ್ಕೂ ಅಧಿಕ ಜನರು ತಾವು ದೃಷ್ಟಿ ಕಳೆದುಕೊಂಡಿರುವುದಾಗಿ ದೂರು ದಾಖಲಿಸಿದ್ದಾರೆ.
ಉತ್ತರ ಪ್ರದೇಶದ ಗಾಜೀಪುರ್ನ ಹಳ್ಳಿಯೊಂದರಲ್ಲಿ 50ಕ್ಕೂ ಅಧಿಕ ಜನರು ತಾವು ದೃಷ್ಟಿ ಕಳೆದುಕೊಂಡಿರುವುದಾಗಿ ದೂರು ದಾಖಲಿಸಿದ್ದಾರೆ. ಇಲ್ಲಿನ ಪಿಪ್ ನಾರ್ ಎಂಬ ಹಳ್ಳಿಯಲ್ಲಿ ಜನರು ತಮಗೆ ಕಣ್ಣು ತೆರೆಯಲು ಸಾಧ್ಯವಾಗುತ್ತಿಲ್ಲ ಹಾಗೂ ಸಹಿಸಲಸಾಧ್ಯವಾದ ನೋವು ಕಾಣಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಈ ವಿಚಾರವು ಹಳ್ಳಿಯ ಜನರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ಆತಂಕಕ್ಕೀಡು ಮಾಡಿದೆ.
ಮಾಹಿತಿ ಲಭಿಸುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಆರೋಗ್ಯ ಇಲಾಖೆ ಸಿಬ್ಬಂದಿಯು ಗ್ರಾಮಸ್ಥರ ಚಿಕಿತ್ಸೆ ಆರಂಭಿಸಿದ್ದಾರೆ. ಇನ್ನು ಕೆಲವರನ್ನು ಈಗಾಗಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಅನ್ವಯ ಇವರೆಲ್ಲರಿಗೂ ಕಣ್ಣಿನ ಸೋಂಕಾಗಿದ್ದು, ಕೆಲ ಸಮಯದ ಬಳಿಕ ಎಲ್ಲವೂ ಸರಿಯಾಗಲಿದೆ ಎಂದಿದ್ದಾರೆ.
ಇನ್ನು ಹಳ್ಳಿಯಲ್ಲಿ ಕಾಳಿ ಮಾತೆಯ ಉತ್ಸವ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ತಡ ರಾತ್ರಿಯವರೆಗೂ ನಡೆದ ಕಾರ್ಯಕ್ರಮವನ್ನು ವೀಕ್ಷಿಸಿದ ಬಳಿಕ ಜನರು ತಮ್ಮ ಮನೆಗೆ ತೆರಳಿದ್ದರು. ಆದರೆ ಶನಿವಾರ ಬೆಳಗ್ಗೆ ಎದ್ದಾಗ ಹಲವಾರು ಮಂದಿಗೆ ಕಣ್ಣು ತೆರೆಯಲು ಸಾಧ್ಯವಾಗಿಲ್ಲ. ನೋಡ ನೋಡುತ್ತಿದ್ದಂತೆಯೇ ಬಹಳಷ್ಟು ಮಂದಿ ಇದೇ ದೂರು ನೀಡಲಾರಂಭಿಸಿದರು. ಕೆಲವರು ನೋವಿನಿಂದ ನರಳುತ್ತಿದ್ದರೆ ಮತ್ತೆ ಕೆಲವರು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದೇವೆಂದು ಅಳುತ್ತಿದ್ದರು. ಈ ಘಟನೆಯಿಂದ ಹಳ್ಳಿಯಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.
ವೈದ್ಯರು ಹೇಳುವುದೇನು?
ಕಣ್ಣಿನ ತಜ್ಞ ಡಾ. ಛಾಂಗುರಾ ಈ ಕುರಿತಾಗಿ ಪ್ರತಿಕ್ರಿಯಿಸಿದ್ದು, ಯಾವ ಹೊಲದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತೋ ಅದನ್ನು ನೀರಿನಿಂದ ತುಂಬಿ, ಹದಗೊಳಿಸಿ ತಯಾರಿಸಲಾಗಿತ್ತು. ಇದಾದ ಬಳಿಕ ಅಲ್ಲಿ ವೇದಿಕೆ ಇಟ್ಟು ಅವದ ಮೇಲೆ ಕಾರ್ಪೆಟ್ ಹಾಸಲಾಗಿತ್ತು. ಆದರೆ ನೆಲ ಮಾತ್ರ ತೇವವಾಗಿತ್ತು. ಇದೇ ಕಾರಣದಿಂದ ಗ್ರಾಮಸ್ಥರ ಕಣ್ಣಿನಲ್ಲಿ ಸೋಂಕಾಗಿರುವ ಸಾಧ್ಯತೆಗಳಿವೆ. ಯಾಕೆಂದರೆ ನೆಲದ ಮೇಲೆ ಕುಳಿತು ಕಾರ್ಯಕ್ರಮ ವೀಕ್ಷಿಸುತ್ತಿದ್ದವರಷ್ಟೇ ಈ ಸೋಂಕಿನಿಂದ ಬಳಲುತ್ತಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಲೇಸರ್ ಲೈಟ್ ಬಳಕೆ ಕೂಡಾ ನಡೆದಿದ್ದು, ಇದರಿಂದಲೂ ಕಣ್ಣಿನ ಸಮಸ್ಯೆ ಉಂಟಾಗಿರಬಹುದೆಂಬ ವಾದವೂ ಕೇಳಿ ಬಂದಿದೆ.
ಸದ್ಯ ಕಣ್ಣು ಕೆಂಪಾಗಿರುವುದು, ತುರಿಕೆ, ಕಣ್ಣಿನಲ್ಲಿ ನೀರು ಬರುತ್ತಿರುವುದು ಹಾಗೂ ಅತೀವ ನೋವಿನಿಂದಾಗಿ ಕಣ್ಣು ತೆರೆಯಲು ಸಾಧ್ಯವಾಗದೇ ಇರುವುದು ಜನರನ್ನು ಚಿಂತೆಗೀಡು ಮಾಡಿದೆ. ವೖದ್ಯರು ತಪಾಸಣೆ ನಡೆಸಿ ಔಷಧ ವಿತರಿಸಿದ್ದು, ಮುಂದೇನಾಗುತ್ತದೋ ಎಂಬುವುದು ಕಾದು ನೋಡಬೇಕು.