
ನವದೆಹಲಿ(ಮೇ.31): ಕೊರೋನಾ ವೈರಸ್ ತಡೆಯುವ ಲಸಿಕೆ ಈ ವರ್ಷಾಂತ್ಯಕ್ಕೆ ದೊರಕಬಹುದು ಎಂದು ಈ ಹಿಂದೆ ಹೇಳಿದ್ದ ಬೆಂಗಳೂರಿನ ಔಷಧ ತಯಾರಿಕಾ ಕಂಪನಿ ‘ಬಯೋಕಾನ್’ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ಈಗ ಲಸಿಕೆ ಬೇಗ ಸಿಗುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರೆ. ‘ಕೊರೋನಾ ಲಸಿಕೆ ಸಿದ್ಧವಾಗುವುದಕ್ಕೆ ಸುದೀರ್ಘ ಸಮಯ ಹಿಡಿಯಲಿದೆ. ಹೀಗಾಗಿ ಇನ್ನೂ ಕೆಲವು ವರ್ಷ ನಾವು ಈ ಪಿಡುಗಿನ ವಿರುದ್ಧ ಸೆಣಸಬೇಕು’ ಎಂದಿದ್ದಾರೆ.
ಕೊರೋನಾ ಕುರಿತ ವೆಬ್ ಸಂವಾದದಲ್ಲಿ ಶನಿವಾರ ಮಾತನಾಡಿದ ಅವರು, ‘ಇಡೀ ದೇಶಕ್ಕೆ ಲಭಿಸಬಲ್ಲ ಸುರಕ್ಷಿತ ಲಸಿಕೆ ಲಭಿಸಲು ಬಹಳ ಸಮಯ ಬೇಕಾಗಬಹುದು. ಲಸಿಕೆ ಸಿದ್ಧಪಡಿಸುವಿಕೆಯು ಬಹಳ ಕ್ಲಿಷ್ಟಪ್ರಕ್ರಿಯೆ ಎಂಬುದನ್ನು ನಾವು ಅರಿಯಬೇಕು. ಈವರೆಗೆ 4 ವರ್ಷಕ್ಕೆ ಮುನ್ನ ಯಾವುದೇ ಲಸಿಕೆ ಲಭ್ಯವಾಗಿಲ್ಲ’ ಎಂದು ಹೇಳಿದರು.
ಕೊರೋನಾ ಲಸಿಕೆ ಎಲ್ಲಿಗೆ ಬಂತು?, ಸೆಪ್ಟೆಂಬರ್ನೊಳಗೆ ರೆಡಿಯಾಗುತ್ತಾ?
‘ಒಂದು ವರ್ಷದೊಳಗೆ ಲಸಿಕೆ ಲಭಿಸುವಿಕೆ ಒಂದು ಅಸಾಧ್ಯದ ಗುರಿ. ಲಸಿಕೆ ಸಿದ್ಧವಾಗಲು ಹಲವು ಪ್ರಕ್ರಿಯೆ ನಡೆಯಬೇಕು. ಅದರ ಸುರಕ್ಷತೆ, ಕ್ಷಮತೆ ಸಾಬೀತಾಗಬೇಕು’ ಎಂದರು.
‘ಲಸಿಕೆ ಲಭ್ಯತೆಯವರೆಗೆ ಮುಂದಿನ ಕೆಲವು ವರ್ಷ ಕಾಲ ಕೊರೋನಾ ನಿಭಾಯಿಸಬೇಕು. ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಹಣ ತೊಡಗಿಸಬೇಕು. ಭಾರತವಷ್ಟೇ ಅಲ್ಲ ಇಡೀ ವಿಶ್ವದ ಕಹಿ ಸತ್ಯವೊಂದನ್ನು ಕೊರೋನಾ ಬಯಲಿಗೆಳೆದಿದೆ. ಆರೋಗ್ಯ ಕ್ಷೇತ್ರದ ಭಯಾನಕ ಸ್ಥಿತಿಯನ್ನು ಎತ್ತಿ ತೋರಿಸಿದೆ’ ಎಂದು ಅಭಿಪ್ರಾಯಪಟ್ಟರು.
‘ಆರೋಗ್ಯ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಇದು ಸಕಾಲ. ಇದರಿಂದ ಭಾರತ ಹಾಗೂ ಜಗತ್ತು ಉಳಿಯಲಿದೆ’ ಎಂದರು.
ಅಪೋಲೋ ಆಸ್ಪತ್ರೆ ಮುಖ್ಯಸ್ಥೆ ಸುನೀತಾ ರೆಡ್ಡಿ ಅವರೂ ಶಾ ಅವರ ಮಾತನ್ನು ಅನುಮೋದಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ