ರಾಜಸ್ಥಾನದ ಉದಯಪುರದಲ್ಲಿ ನಡೆದ ಕನ್ಹಯ್ಯ ಲಾಲ್ ಹತ್ಯೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ವಶಕ್ಕೆ ಪಡೆದಿರುವ ರಾಜಸ್ಥಾನ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ. ಇನ್ನೊಂದು ಕಡೆ ರಾಷ್ಟ್ರೀಯ ತನಿಖಾ ದಳವೂ ಕೂಡಾ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಆರೋಪಿಗಳಿಬ್ಬರಿಗೆ ಪಾಕಿಸ್ತಾನದ ನಂಟಿರೋದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಹತ್ಯೆಗೆ ಸಂಬಂಧಸಿದಂತೆ ವಿವಿಧ ಮಾಹಿತಿಗಳು ಹೊರ ಬರುತ್ತಿದ್ದು, ಕನ್ಙಯ್ಯ ಹತ್ಯೆ ಆರೋಪಿ ಬೈಕ್ ನಂಬರ್ ಸಹ ಮುಂಬಾ ದಾಳಿಯ ದಿನಾಂಕವೇ ಆಗಿತ್ತು ಎಂಬುವುದು ವಿಶೇಷ.

04:04 PM (IST) Jun 30
ಧಾರವಾಡ: ಕನಯ್ಯಲಾಲ್ ಕೊಲೆಗಡುಕರನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿ ಧಾರವಾಡ ವಿವೇಕಾನಂದ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಪ್ರತಿಭಟನೆಯಲ್ಲಿ ಮಾಜಿ ಶಾಸಕಿ ಸೀಮಾ ಅಶೋಕ್ ಮಸೂತಿ, ಶಿವಾನಂದ ಸತ್ತಿಗೇರಿ, ಮಹಾದೇವ ಕೋರಿ, ರಾಕೇಶ್ ನಾಜರೇ, ನಾಗರಾಜ ರಾಯ್ಕರ್, ಗುರುಶಾಂತ ಹಿರೇಮಠ, ನಾಗರಾಜ ಬೈಲಗಾಣಗೇರ ಸೇರಿದಂತೆ ಹಲವರು ಇದ್ದರು.
ಉಡುಪಿ: ರಾಜಸ್ತಾನದ ಉದಯಪುರದಲ್ಲಿ ಹಿಂದು ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಉಡುಪಿಯಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಭಟನೆ, ಸಸುರಿವ ಮಳೆಯಲ್ಲಿಯೇ ಅಜ್ಜರಕಾಡು ಹುತಾತ್ಮರ ಸ್ಮಾರಕದ ಬಳಿ ನಡೆದ ಪ್ರತಿಭಟನೆ
01:35 PM (IST) Jun 30
ಉದಯಪುರದಲ್ಲಿ ಕನ್ಹಯ್ಯಲಾಲ್ರನ್ನು ಹತ್ಯೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಉದಯಪುರದಲ್ಲಿ ಸಂಭವಿಸಿರುವ ಘಟನೆ ಅತ್ಯಂತ ಅಮಾನವೀಯ, ಹೇಯ ಕೃತ್ಯ ಇದೊಂದು ಭಯೋತ್ಪಾದಕ ಕೃತ್ಯ ಮತ್ತು ಇದರ ಹಿಂದೆ ಒಂದು ಅಂತರಾಷ್ಟ್ರೀಯ ಷಡ್ಯಂತ್ರ ಇದೆ. ಇದರ ಸೂಕ್ತ ತನಿಖೆಯಾಗಬೇಕು ಮತ್ತು ಅಪರಾಧಿಗಳಿಗೆ ಗಲ್ಲುಶಿಕ್ಷೆ ಆಗಬೇಕು" ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.
12:49 PM (IST) Jun 30
ಉದಯಪುರದಲ್ಲಿ ಹಿಂದೂ ವ್ಯಕ್ತಿಯ ಕತ್ತು ಕೊಯ್ದು ಹತ್ಯೆ ಪ್ರಕರಣವನ್ನು ವಿರೋಧಿಸಿ, ಕಲಬುರ್ಗಿಯಲ್ಲಿ ಭಜರಂಗ ದಳದಿಂದಲೂ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ಸರ್ಕಲ್ನಲ್ಲಿ ಕನ್ಹಯ್ಯ ಹಂತಕರ ಪ್ರತಿಕೃತಿ ನೇಣಿಗೇರಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಮಾನವ ಸರಪಳಿ ರಚಿಸಿ ಬೃಹತ್ ಪ್ರತಿಭಟನೆ ನಡೆಸಿದ ಧರಣಿ ನಿರತರು, ಸಮಾಜದಲ್ಲಿ ಶಾಂತಿ ಕದಡುವವರನ್ನು ವಿಚಾರಣೆ ಮಾಡದೇ ಗಲ್ಲಿಗೇರಿಸಬೇಕು. ಹಂತಕರೊಂದಿಗೆ ನಂಟು ಹೊಂದಿರುವ ಎಲ್ಲರನ್ನೂ ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸಬೇಕೆಂದು ಪ್ರತಿಭಟನಾ ನಿರತ ಭಜರಂಗ ದಳದ ಕಾರ್ಯಕರ್ತರು ಆಗ್ರಹಿಸಿದ್ದಾರೆ.
12:31 PM (IST) Jun 30
ಕನ್ಹಯ್ಯಲಾಲ್ ತೇಲಿ ಹತ್ಯೆ ಮಾಡಿದ ಆರೋಪಿಗಳಲ್ಲಿ ಒಬ್ಬರಾಗಿರುವ ಗೌಸ್ ರಿಯಾಜ್ನ ಬೈಕ್ ನಂಬರ್ 2611. 2008ರಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿ ನವೆಂಬರ್ 26ರಂದು ನಡೆದಿತ್ತು. ರಿಯಾಜ್ ಅದೇ ದಿನಾಂಕವನ್ನು ಬೈಕ್ ನಂಬರ್ ಆಗಿ ಹೊಂದಿದ್ದ ಎನ್ನುವುದು ಎನ್ಐಎ ತನಿಖೆಯಲ್ಲಿ ಬಹಿರಂಗವಾಗಿದೆ. ಅದಲ್ಲದೆ, ಕನ್ಹಯ್ಯಲಾಲ್ ತೇಲಿಯ ಕತ್ತನ್ನು ಕುಯ್ದ ಕತ್ತಿಯನ್ನು ತನ್ನದೇ ಫ್ಯಾಕ್ಟರಿಯಲ್ಲಿ ಇಬ್ಬರೂ ಆರೋಪಿಗಳು ಸೇರಿ ತಯಾರಿಸಿದ್ದರು. ಕೊನೆಗೆ ಇಬ್ಬರೂ ಸೇರಿ ಮಾಡಿರುವ ಬೆದರಿಕೆಯ ವಿಡಿಯೋವನ್ನು ಅದೇ ಫ್ಯಾಕ್ಟರಿಯಲ್ಲಿಯೇ ಮಾಡಲಾಗಿತ್ತು ಎನ್ನುವ ಮಾಹಿತಿ ಹೊರಬಿದ್ದಿದೆ.
ಮುಂಬೈ ದಾಳಿ ದಿನಾಂಕವೇ ರಿಯಾಜ್ ಬೈಕ್ ನಂಬರ್, ಕನ್ಹಯ್ಯನ ಕತ್ತು ಕುಯ್ದ ಕತ್ತಿಯನ್ನು ತಾನೇ ತಯಾರಿಸಿದ್ದ!
10:12 AM (IST) Jun 30
ಕನ್ಹಯ್ಯಲಾಲ್ ಹತ್ಯೆ ಮಾಡಿರುವ ಆರೋಪಿಗಳಿಗೆ ಇಸ್ಲಾಮಿಕ್ ಸ್ಟೇಟ್ ಆಪ್ ಇರಾಕ್ ಅಂಡ್ ಸಿರಿಯಾ (ISIS) ನಂಟಿತ್ತು ಎಂದು ರಾಷ್ಟ್ರೀಯ ತನಿಖಾ ತಂಡದ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ. ಜತೆಗೆ ರಾಜಸ್ತಾನದ ಜೈಪುರದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು ಎಂದೂ ಹೇಳಲಾಗುತ್ತಿದೆ. ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸರು ರಾಷ್ಟ್ರೀಯ ತನಿಖಾ ತಂಡಕ್ಕೆ ಹಸ್ತಾಂತರಿಸಿದ್ದಾರೆ. ಘಟನೆ ನಡೆದ ತಕ್ಷಣ ಕೇಂದ್ರ ಪ್ರಕರಣದ ತನಿಖೆಯನ್ನು ಎನ್ಐಎ ಗೆ ವಹಿಸಿತ್ತು. ಇದೀಗ ಪ್ರಕರಣದ ಆರೋಪಿಗಳ ಕುರಿತಾದ ಸ್ಫೋಟಕ ಮಾಹಿತಿಗಳು ಲಭ್ಯವಾಗುತ್ತಿದೆ. ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಕೆಲವೊಂದು ಊಹಾಪೋಹಗಳೂ ಆಗಿರುವ ಸಾಧ್ಯತೆಯಿದೆ. ತನಿಖಾಧಿಕಾರಿಗಳು ಅಧಿಕೃತ ಮಾಹಿತಿಯನ್ನು ಇದುವರೆಗೂ ಹಂಚಿಕೊಂಡಿಲ್ಲ.
09:18 AM (IST) Jun 30
ಹಿಂದು ಕಾರ್ಯಕರ್ತನ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿಯೂ ಹಿಂದು ಪರ ಸಂಘಟನೆಗಳು ಪ್ರತಿಭಟಿಸಿ, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
09:15 AM (IST) Jun 30
ಗುರ್ಗಾವ್: ರಾಜಸ್ಥಾನದ ಉದಯಪುರ ಕನ್ಹಯ್ಲಾಲ್ ಹತ್ಯೆ ಖಂಡಿಸಿ ವಿಶ್ವ ಹಿಂದು ಪರಿಷದ್ ಮತ್ತು ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೂಲಭೂತವಾದಿಗಳ ಪ್ರತಿಕೃತಿ ದಹಿಸಿ, ಪಾತಕಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
08:51 AM (IST) Jun 30
ಪ್ರಮುಖ ಮುಸ್ಲಿಂ ಸಂಘಟನೆಗಳು ಉದಯಪುರ ದರ್ಜಿಯ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದು, ಇಂತಹ ಕೃತ್ಯಗಳು ‘ಇಸ್ಲಾಂ ವಿರೋಧಿ’ಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಜಮಾಯತ್ ಉಲೇಮಾ-ಇ- ಹಿಂದ್ ಶಿರಚ್ಛೇದದಂತಹ ಇಸ್ಲಾಂ ಧರ್ಮದ ವಿರುದ್ಧವಾಗಿದ್ದು, ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಹೇಳಿದ್ದಾರೆ.
‘ಯಾವುದೇ ಧರ್ಮದ ಪವಿತ್ರ ವ್ಯಕ್ತಿಗಳನ್ನು ಅವಮಾನಿಸುವುದು ಗಂಭೀರವಾದ ಅಪರಾಧವಾಗಿದೆ. ನೂಪುರ್ ಶರ್ಮಾ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳದೇ ಇರುವುದು ಮುಸ್ಲಿಮರ ಗಾಯಕ್ಕೆ ಉಪ್ಪು ಸವರಿದಂತಾಗಿದೆ. ಆದರೂ ಜನರು ಕಾನೂನನ್ನು ತಮ್ಮ ಕೈಗೆತ್ತಿಕೊಳ್ಳುವುದು, ವ್ಯಕ್ತಿಯ ಹತ್ಯೆ ನಡೆಸುವುದು ಖಂಡನೀಯ ಅಪರಾಧವಾಗಿದೆ. ಇಂತಹ ಅಮಾನುಷ ಕೃತ್ಯಗಳಿಗೆ ದೇಶದ ಕಾನೂನು ಮಾತ್ರವಲ್ಲ ಇಸ್ಲಾಮಿಕ್ ಷರಿಯಾ ಕೂಡಾ ಅನುಮತಿ ನೀಡುವುದಿಲ್ಲ’ ಎಂದು ಮುಸ್ಲಿಂ ಸಂಘಟನೆಗಳು ಹೇಳಿಕೆ ನೀಡಿವೆ.