ಜಿ-23 ನಾಯಕರ ಜೊತೆ ಹೈಕಮಾಂಡ್‌ ಸಂಧಾನ, ಪ್ರಿಯಾಂಕಾಗೆ ಹೊಣೆ!

By Suvarna NewsFirst Published Oct 11, 2021, 8:27 AM IST
Highlights

* ಅ.16ರ ಸಿಡಬ್ಲುಸಿ ಸಭೆಗೂ ಮುನ್ನ ಸಂಧಾನಕ್ಕೆ ಯತ್ನ

* ಜಿ-23 ನಾಯಕರ ಕೆಲ ಬೇಡಿಕೆಗಳಿಗೆ ಅನುಮೋದನೆ

* ಸಂಧಾನದ ಹೊಣೆ ಹೊತ್ತಿರುವ ಪ್ರಿಯಾಂಕಾ ವಾದ್ರಾ

* ಜಿ-23 ನಾಯಕರ ಜೊತೆ ಹೈಕಮಾಂಡ್‌ ಸಂಧಾನ

ನವದೆಹಲಿ(ಅ.11): ಪಕ್ಷದ ಕೆಲ ಬೆಳವಣಿಗೆಗಳ ಬಗ್ಗೆ ಅಸಮಾಧಾನಗೊಂಡಿರುವ ಜಿ-23 ನಾಯಕರ ಜೊತೆ ಸಂಧಾನ ಮಾಡಿಕೊಳ್ಳಲು ಕಾಂಗ್ರೆಸ್‌ ಹೈಕಮಾಂಡ್‌(Congress High Command) ಮುಂದಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಮಾತುಕತೆ ನಡೆದಿವೆ ಎಂದು ಮೂಲಗಳು ತಿಳಿಸಿವೆ. ಇಂಥದ್ದೊಂದು ಸಂಧಾನ ಮಾತುಕತೆ ಮೂಲಕ ಅ.16ರಂದು ನಿಗದಿಯಾಗಿರುವ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (CWC) ಸಭೆಗೂ ಮುನ್ನ ಎಲ್ಲರನ್ನೂ ಮತ್ತೆ ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನ ಮಾಡಿದೆ.

ಪಕ್ಷದಲ್ಲಿನ ಅಧ್ಯಕ್ಷ ಹುದ್ದೆ ಸೇರಿದಂತೆ ಎಲ್ಲಾ ಹುದ್ದೆಗಳಿಗೂ ಚುನಾವಣೆ ಮೂಲಕ ನೇಮಕ ಆಗಬೇಕು ಎಂಬ ಜಿ-23 ನಾಯಕರ ಬೇಡಿಕೆಗೆ ಪಕ್ಷದ ಹೈಕಮಾಂಡ್‌ ಒಪ್ಪಿದ್ದು, ಈ ಕುರಿತು ಅ.16ರಂದು ನಡೆಯಲಿರುವ ಸಭೆಯಲ್ಲಿ ಘೋಷಣೆ ಮಾಡುವ ಭರವಸೆಯನ್ನು ಬಂಡಾಯ ನಾಯಕರಿಗೆ ರವಾನಿಸಲಾಗಿದೆ.

ವಿಶೇಷವೆಂದರೆ ಈ ಬಾರಿಯ ಸಂಧಾನ ಸಭೆಯ ನೇತೃತ್ವವನ್ನು ಪಕ್ಷದ ಪ್ರದಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ/(Priyanka Gandhi Vadra) ವಹಿಸಿಕೊಂಡಿದ್ದಾರೆ. ಜೊತೆಗೆ ಸೋನಿಯಾ ಗಾಂಧಿ ಕೂಡಾ ತಮ್ಮ ಆಪ್ತರನ್ನು ಈ ಮಾತುಕತೆಗೆ ಮುಂದೆ ಬಿಟ್ಟಿದ್ದಾರೆ ಎನ್ನಲಾಗಿದೆ.

ಹೈಕಮಾಂಡ್‌ ಪರವಾಗಿ ಹಿರಿಯ ನಾಯಕ ಕಮಲ್‌ನಾತ್‌, ಭೂಪಿಂದರ್‌ ಹೂಡಾ, ದಿಪೇಂದರ್‌ ಹೂಡಾ ಅವರು ಬಂಡಾಯ ನಾಯಕರೊಂದಿಗೆ ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆ ಎನ್ನಲಾಗಿದೆ.

ಉತ್ತರಪ್ರದೇಶದ ಲಖೀಂಪುರ ಖೇರಿ ಘಟನೆ ಸಂಬಂಧ ಮನವಿ ಸಲ್ಲಿಸಲು ಕಾಂಗ್ರೆಸ್‌ ಕಾರ‍್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರು ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಭೇಟಿಗಾಗಿ ಸಮಯವನ್ನು ಕೋರಿದ್ದಾರೆ. ಪತ್ರಕ್ಕೆ ರಾಹುಲ್‌ ಗಾಂಧಿ, ಜಿ-23 ಗುಂಪಿನಲ್ಲಿ ಗುರುತಿಸಿಕೊಂಡಿರುವ ಗುಲಾಮ್‌ ನಬಿ ಆಜಾದ್‌ ಕೂಡಾ ಸಹಿ ಹಾಕಿದ್ದಾರೆ. ಹೀಗಾಗಿ ಇದು ಉಭಯ ಬಣಗಳು ಸಂಧಾನದತ್ತ ಹೆಜ್ಜೆ ಇಟ್ಟಿರುವ ಸುಳಿವು ಎಂದು ಬಣ್ಣಿಸಲಾಗಿದೆ.

ಜಿ-23:

ಪಕ್ಷದಲ್ಲಿ ಪರಿಣಾಮಕಾರಿ ನಾಯಕತ್ವದ ಬೇಡಿಕೆ ಇಟ್ಟು ಕಾಂಗ್ರೆಸ್‌ನ 23 ನಾಯಕರು ಬಹಿರಂಗ ಪತ್ರ ಬರೆದ ಬಳಿಕ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು. ಹೈಕಮಾಂಡ್‌ ವಿರುದ್ಧ ಹಲವು ಹಿರಿಯ ನಾಯಕರು ಬಹಿರಂಗವಾಗಿ ಆಸಮಾಧಾನ ವ್ಯಕ್ತಪಡಿಸಿದ್ದರು. ಕಳೆದ ತಿಂಗಳು ಕೂಡಾ ಆಜಾದ್‌ ಅವರು ಕಾರ‍್ಯಕಾರಿ ಸಮಿತಿಯ ಸಭೆ ನಡೆಸುವಂತೆ ಪತ್ರ ಬರೆದಿದ್ದರು. ಇತ್ತೀಚೆಗಷ್ಟೇ ‘ಪಕ್ಷದಲ್ಲಿ ಯಾರೂ ಅಧ್ಯಕ್ಷರಿಲ್ಲ. ಯಾರು ನಿರ್ಧಾರ ಕೈಗೊಳ್ಳುತ್ತಾರೆ ಎಂಬುದೂ ಗೊತ್ತಾಗುವುದಿಲ್ಲ’ ಎಂದು ಪಕ್ಷದ ಹಿರಿಯ ನಾಯಕ ಕಪಿಲ್‌ ಸಿಬಲ್‌ ಎಂದು ಹೇಳಿದ್ದರು.

click me!