
ಹೈದರಾಬಾದ್ (ಏ.20): ಹೈದರಾಬಾದ್ನ ಉಪ್ಪಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದ ವಿಚಾರವಾಗಿ ತೆಲಂಗಾಣ ರಾಜಕೀಯದಲ್ಲಿ ಹೊಸ ವಿವಾದವೊಂದು ಭುಗಿಲೆದ್ದಿದೆ. ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರಿಗಾಗಿ ಮೀಸಲಾಗಿದ್ದ ವಿಐಪಿ (VIP) ಟಿಕೆಟ್ಗಳು ತೆಲುಗು ನಟಿ ಕುಶಿತಾ ಕಲ್ಲಪು ಅವರ ಕೈಸೇರಿರುವುದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.
ನಟಿ ಕುಶಿತಾ ಕಲ್ಲಪು ಅವರೇ ಈ ಟಿಕೆಟ್ನ ಚಿತ್ರವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಶನಿವಾರ ನಡೆದ ಸನ್ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ವಿಐಪಿ ಪಾಸ್ಗಳ ಫೋಟೋವನ್ನು ಅವರು ಇನ್ಸ್ಟಾಗ್ರಾಮ್ ಸ್ಟೋರಿಯಾಗಿ ಪೋಸ್ಟ್ ಮಾಡಿದ್ದರು. ವಿಶೇಷವೆಂದರೆ, ಆ ಟಿಕೆಟ್ ಮೇಲೆ "Complimentary Ticket for Telangana CM" (ತೆಲಂಗಾಣ ಮುಖ್ಯಮಂತ್ರಿಗಳಿಗಾಗಿ ಉಚಿತ ಟಿಕೆಟ್) ಎಂದು ಸ್ಪಷ್ಟವಾಗಿ ಬರೆದಿರುವುದು ಕಂಡುಬಂದಿದೆ.
ಸುಮಾರು 40,000 ರೂಪಾಯಿ ಬೆಲೆಬಾಳುವ 'ಸನ್ರೈಸರ್ಸ್ ಎಲೈಟ್ ಲಾಂಜ್' ಪಾಸ್ಗಳು ಇವುಗಳಾಗಿದ್ದವು. ಮುಖ್ಯಮಂತ್ರಿಗಳ ಕಚೇರಿಗೆ ಅಧಿಕೃತವಾಗಿ ನೀಡಲಾದ ಈ ಟಿಕೆಟ್ಗಳು ಒಬ್ಬ ನಟಿಯ ಕೈಗೆ ಹೇಗೆ ಸೇರಿದವು ಎಂಬ ಪ್ರಶ್ನೆ ಈಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.
ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ, ಪ್ರತಿಪಕ್ಷ ಬಿಆರ್ಎಸ್ (BRS) ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. "ಕಾಂಗ್ರೆಸ್ ಹೇಳುವ ಪ್ರಜಾ ಪಾಲನೆ (ಜನರ ಆಡಳಿತ) ಎಂದರೆ ಇದೇನಾ?" ಎಂದು ಪ್ರಶ್ನಿಸಿರುವ ಬಿಆರ್ಎಸ್ ಸೋಷಿಯಲ್ ಮೀಡಿಯಾ ವಿಭಾಗವು ಈ ಚಿತ್ರವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದೆ. ಸರ್ಕಾರಿ ಸೌಲಭ್ಯಗಳನ್ನು ವೈಯಕ್ತಿಕ ಉದ್ದೇಶಗಳಿಗಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದು ಪ್ರತಿಪಕ್ಷಗಳ ಗಂಭೀರ ಆರೋಪವಾಗಿದೆ.
ತೆಲುಗು ಸಿನಿಮಾಗಳು ಮತ್ತು ವೆಬ್ ಸೀರೀಸ್ಗಳ ಮೂಲಕ ಗುರುತಿಸಿಕೊಂಡಿರುವ ನಟಿ ಕುಶಿತಾ ಕಲ್ಲಪು, ಇನ್ಸ್ಟಾಗ್ರಾಮ್ನಲ್ಲಿ 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಈ ಹಿಂದೆಯೂ ಅವರು ಹಲವು ವಿವಾದಗಳಲ್ಲಿ ಸಿಲುಕಿದ್ದರು. ಹೈದರಾಬಾದ್ನ ಪಬ್ ಒಂದರ ಮೇಲೆ ನಡೆದ ಪೊಲೀಸ್ ದಾಳಿಯ ಸಂದರ್ಭದಲ್ಲಿ ಇವರ ಹೆಸರು ಕೇಳಿಬಂದಿತ್ತು.
ವಿವಾದ ದೊಡ್ಡದಾಗುತ್ತಿದ್ದಂತೆಯೇ ನಟಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯನ್ನು ಡಿಲೀಟ್ ಮಾಡಿದ್ದರೂ, ಅಷ್ಟರಲ್ಲಾಗಲೇ ಅದರ ಸ್ಕ್ರೀನ್ಶಾಟ್ಗಳು ವೈರಲ್ ಆಗಿದ್ದವು. ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಮತ್ತು ಸನ್ರೈಸರ್ಸ್ ಮ್ಯಾನೇಜ್ಮೆಂಟ್ ನಡುವೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮೊದಲೇ ಭಿನ್ನಾಭಿಪ್ರಾಯಗಳಿದ್ದವು. ಇದರ ನಡುವೆ ಮುಖ್ಯಮಂತ್ರಿಗಳ ಹೆಸರಿನ ಟಿಕೆಟ್ ಹೊರಗೆ ಹೋಗಿರುವುದು ದೊಡ್ಡ ಭದ್ರತಾ ಲೋಪ ಮತ್ತು ಶಿಷ್ಟಾಚಾರದ (Protocol) ಉಲ್ಲಂಘನೆ ಎಂದು ವಿಶ್ಲೇಷಿಸಲಾಗುತ್ತಿದೆ. ಮುಖ್ಯಮಂತ್ರಿಗಳ ಕಚೇರಿಯಿಂದ ಈ ಟಿಕೆಟ್ ಕೈತಪ್ಪಿದೆಯೇ ಅಥವಾ ಇತರ ಉನ್ನತ ಅಧಿಕಾರಿಗಳ ಮೂಲಕ ನಟಿಗೆ ಸಿಕ್ಕಿದೆಯೇ ಎಂಬ ಬಗ್ಗೆ ಇನ್ನೂ ಅಧಿಕೃತ ಸ್ಪಷ್ಟನೆ ಬಂದಿಲ್ಲ. ಈ ಕುರಿತು ಸಮಗ್ರ ತನಿಖೆ ನಡೆಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ