5 ವರ್ಷದ ಕಂದಮ್ಮನ ಪ್ರಾಣ ಉಳಿಸಲು ಕಾಂಡಕೋಶ ದಾನಕ್ಕೆ ಭಾರಿ ಮಳೆಯಲ್ಲೇ ಕ್ಯೂ ನಿಂತ 5 ಸಾವಿರ ಮಂದಿ!

By Suchethana DFirst Published Oct 10, 2024, 2:54 PM IST
Highlights

ಕ್ಯಾನ್ಸರ್​ನಿಂದ ಬಳಲುತ್ತಿದ್ದ ಮಗುವಿನ ಪ್ರಾಣ ಉಳಿಸಲು ಕಾಂಡಕೋಶ ದಾನಕ್ಕೆ ಭಾರಿ ಮಳೆಯಲ್ಲಿ ಸುಮಾರು ಐದು ಸಾವಿರ ಮಂದಿ ಕ್ಯೂ ನಿಂತಿರುವ ಫೋಟೋ ಈಗ ವೈರಲ್​ ಆಗುತ್ತಿದೆ. 
 

ರಸ್ತೆಯ ಮೇಲೆ ಅಪಘಾತದಲ್ಲಿ ಯಾರದ್ದಾದರೂ ಪ್ರಾಣ ಹೋಗುತ್ತಿದೆ ಎಂದ ಸಂದರ್ಭದಲ್ಲಿ ಅದರ ವಿಡಿಯೋ ಮಾಡಿ, ಸೋಷಿಯಲ್​ ಮೀಡಿಯಾದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಹವಣಿಸುವ ಹೀನಾಯ ಮನಸ್ಥಿತಿಯವರೇ ಹೆಚ್ಚು. ಪ್ರಾಣ ಉಳಿಸಲು ಯಾವುದೇ ಸಹಾಯಕ್ಕೆ ಬರದೇ, ಎಲ್ಲಿ ತಮ್ಮ ಮೇಲೆ ಕೇಸು ಬರುತ್ತದೆಯೋ ಎನ್ನುವ ಭಯಕ್ಕೆ ಅದನ್ನು ನೋಡುತ್ತಾ ನಿಲ್ಲುವವರೇ ಇನ್ನೊಂದಿಷ್ಟು ಮಂದಿ. ಆದರೆ ಇಲ್ಲೊಂದು ಘಟನೆಯಲ್ಲಿ ಐದು ವರ್ಷದ ಬಾಲಕನಿಗೆ ಕಾಂಡಕೋಶ (stem cell) ಅಗತ್ಯವಿದೆ ಎಂದು ಜಾಹೀರಾತು ಕೊಡುತ್ತಲೇ 4,855 ಜನರು ಮಳೆಯಲ್ಲಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಕಾದಿದ್ದಾರೆ ಎಂದರೆ ನಂಬುವಿರಾ? ಇಂಥ ಜನರೂ ಈ ಭೂಮಿಯ ಮೇಲೆ ಇನ್ನೂ ಇದ್ದಾರೆ ಎನ್ನುವುದಕ್ಕೆ ಸಾಕ್ಷಿಯಾದದ್ದು, ಇಂಗ್ಲೆಂಡ್​ನಲ್ಲಿ.

ಕೆಲ ವರ್ಷಗಳ ಹಿಂದೆ ನಡೆದಿರುವ ಈ ಘಟನೆಯ ವಿಡಿಯೋ, ಫೋಟೋಗಳು ಇದೀಗ ಮತ್ತೊಮ್ಮೆ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಅಪರೂಪದ ಲ್ಯುಕೇಮಿಯಾ ಸಮಸ್ಯೆ ಹೊಂದಿದ್ದ ಅಂದರೆ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಐದು ವರ್ಷದ ಬಾಲಕನಿಗೆ ಕಾಂಡಕೋಶದ ಅಗತ್ಯವಿತ್ತು. ತಮ್ಮ ಕಾಂಡಕೋಶ ಈ ಬಾಲಕನ ಜೀವ ಕಾಪಾಡಬಲ್ಲುದಾ ಎಂದು ತಿಳಿಯುವುದಕ್ಕಾಗಿ, ಪರೀಕ್ಷೆ ಮಾಡಿಸಿಕೊಳ್ಳಲು  ಬರೋಬ್ಬರಿ 4,855 ಜನರು ಮಳೆಯಲ್ಲಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಪ್ರತಿಯೊಬ್ಬರ ಪರೀಕ್ಷೆ ಮಾಡಿ, ಅದು ಆ ಮಗುವಿಗೆ ಮ್ಯಾಚ್​ ಆಗುತ್ತದೆಯೋ ಇಲ್ಲವೋ ಎಂದು ತಿಳಿಯಲು ಒಂದಷ್ಟು ಸಮಯ ಹಿಡಿಯುತ್ತದೆ. ಆದರೆ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ, ಸುರಿಯುತ್ತಿರುವ ಭಾರಿ ಮಳೆಯ ನಡುವೆಯೇ ಜನರು ಕ್ಯೂನಲ್ಲಿ ನಿಂತಿದ್ದಾರೆ. 

Latest Videos

ಆ್ಯಂಕರ್​ ಅಪರ್ಣಾ ಸಾವು, ಶ್ವಾಸಕೋಶದ ಕ್ಯಾನ್ಸರ್ ಭೀತಿ, ಏನು ಹೇಳುತ್ತೆ ಸ್ಟಡೀಸ್?

 ಆಸ್ಕರ್ ಸ್ಯಾಕ್ಸೆಲ್ಬಿ-ಲೀ ಎಂಬ ಬಾಲಕನ ಜೀವ ಕಾಪಾಡಲು ಈ ದಾನಿಗಳು ಮುಂದೆ ಬಂದಿದ್ದಾರೆ.  ಅಂದಹಾಗೆ ಕಾಂಡಕೋಶದ ಅಗತ್ಯ ಕ್ಯಾನ್ಸರ್​ ಸಮಯದಲ್ಲಿ ಅವಶ್ಯಕತೆ ಬೀಳುತ್ತದೆ. ರಕ್ತದ ಕಾಂಡಕೋಶ ಕಸಿ ರಕ್ತದ ಕ್ಯಾನ್ಸರ್  ಮತ್ತು ರಕ್ತ ಅಸ್ವಸ್ಥತೆಗಳ ರೋಗಿಗಳಿಗೆ ಜೀವ ಉಳಿಸುವ ಚಿಕಿತ್ಸೆಯಾಗಿದೆ. ಭಾರತದ ವಿಷಯ ಹೇಳುವುದಾದರೆ,  ಪ್ರತಿ ವರ್ಷ ಸುಮಾರು ಒಂದು ಲಕ್ಷ  ರಕ್ತ ಕ್ಯಾನ್ಸರ್ ಪ್ರಕರಣಗಳು ಬೆಳಕಿಗೆ ಬರುತ್ತವೆ.  ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ  ರಕ್ತದ ಕಾಂಡಕೋಶ ದಾನಿಗಳು ಸಹಾಯ ಮಾಡಿದರೆ,  ಸಕಾಲಿಕ ಚಿಕಿತ್ಸೆಯಿಂದ ಅಂಥವರು ಬದುಕು ಉಳಿಯಬಹುದು.  

ಭಾರತದಲ್ಲಿ, ಒಟ್ಟು ಜನಸಂಖ್ಯೆಯ 0.04% ಮಾತ್ರ ಸಂಭಾವ್ಯ ರಕ್ತದ ಕಾಂಡಕೋಶ ದಾನಿಯಾಗಿ ನೋಂದಾಯಿಸಲ್ಪಟ್ಟಿದ್ದಾರೆ.  ಅಮೆರಿಕದಲ್ಲಿ 2.7% ಮತ್ತು ಜರ್ಮನಿಯಲ್ಲಿ 10% ಜನಸಂಖ್ಯೆಯು ಸಂಭಾವ್ಯ ದಾನಿಯಾಗಿ ನೋಂದಾಯಿಸಲ್ಪಟ್ಟಿದ್ದಾರೆ. ಇತರದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಗಮನಾರ್ಹವಾಗಿ ಕಡಿಮೆಯಾಗಿದೆ. ಆದ್ದರಿಂದ, ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತೀಯ ರೋಗಿಗಳಿಗೆ ಹೊಂದಾಣಿಕೆಯ ದಾನಿಯನ್ನು ಕಂಡುಹಿಡಿಯುವ ಸಾಧ್ಯತೆಗಳು 10-15% ರಷ್ಟು ಕಡಿಮೆ, ಅಲ್ಲಿ ಸಾಧ್ಯತೆಗಳು 60-70% ರಷ್ಟು ಹೆಚ್ಚು. ಯಾವುದೇ ರಿಸ್ಕ್​ ಇಲ್ಲದ ಈ ದಾನವನ್ನು ಮಾಡುವಂತೆ ವೈದ್ಯರು ಹೇಳುತ್ತಾರೆ.  ಒಮ್ಮೆ ನೀವು ರಕ್ತದ ಕಾಂಡಕೋಶಗಳನ್ನು ದಾನ ಮಾಡಿದರೆ, ನೀವು ಅವುಗಳನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತೀರಿ ಎನ್ನುವ ತಪ್ಪು ಕಲ್ಪನೆ ಇದ್ದು,  ಪ್ರಕ್ರಿಯೆಯ ಸಮಯದಲ್ಲಿ ಒಟ್ಟು ಕಾಂಡಕೋಶಗಳ ಒಂದು ಭಾಗವನ್ನು ಮಾತ್ರ ಹೊರತೆಗೆಯಲಾಗುತ್ತದೆ. ಅಲ್ಲದೆ, ಕೆಲವು ವಾರಗಳಲ್ಲಿ ಎಲ್ಲಾ ಜೀವಕೋಶಗಳು ನೈಸರ್ಗಿಕವಾಗಿ ಮರುಪೂರಣಗೊಳ್ಳುತ್ತವೆ ಎಂದಿದ್ದಾರೆ ವೈದ್ಯರು.  ಕಾಂಡಕೋಶಗಳನ್ನು ದಾನ ಮಾಡುವುದು  ನೋವಿನ ಪ್ರಕ್ರಿಯೆ ಎಂಬುದು ಕೂಡ ಸತ್ಯಕ್ಕೆ ದೂರವಾದದ್ದು ಎನ್ನುತ್ತಾರೆ ಅವರು.

ಸದ್ದಿಲ್ಲದೇ ಬರುವ ತಲೆ, ಕುತ್ತಿಗೆ, ಹೊಟ್ಟೆ ಕ್ಯಾನ್ಸರ್‌: ಬಾಯಿ ಅಶುಚಿಯೇ ಮುಖ್ಯ ಕಾರಣ- ಕಂಡುಹಿಡಿಯೋದು ಹೇಗೆ?

click me!