ಎಲಾ ಕಳ್ಳರೇ..ದುರುಳರು ಅಂದುಕೊಂಡಂತಾಗಿದ್ದರೆ ಕಸಬ್ ಹಿಂದೂವಾಗಿ ಸಾಯುತ್ತಿದ!

By Suvarna NewsFirst Published Feb 18, 2020, 9:14 PM IST
Highlights

26/11 ಮುಂಬೈ ದಾಳಿಯ ಸ್ಫೋಟಕ ಮಾಹಿತಿ ಬಹಿರಂಗ| ಮುಂಬೈ ಮಾಜಿ ಪೊಲೀಸ್ ಆಯುಕ್ತ ರಾಕೇಶ್ ಶರ್ಮಾ ಆತ್ಮಕತೆಯಲ್ಲಿ ಸ್ಫೋಟಕ ಮಾಹಿತಿ| ‘ಮುಂಬೈ ದಾಳಿಯನ್ನು ಹಿಂದೂ ಭಯೋತ್ಪಾದನೆ ಎಂದು ಬಿಂಬಿಸಲು ಯತ್ನ’| ‘ಲೆಟ್ ಮಿ ಸೇ ಇಟ್ ನೌ' ಆತ್ಮಕತೆಯಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ರಾಕೇಶ್ ಮರಿಯಾ| ಬೆಂಗಳೂರಿನ ಸಮೀರ್ ಚೌಧರಿ ಹೆಸರಲ್ಲಿ ಕಸಬ್’ಗೆ ಗುರುತು ಪತ್ರ ನೀಡಿದ್ದ ಪಾಕ್| ‘ಜೈಲಲ್ಲೇ ಕಸಬ್ ಸಾಯಿಸಲು ಪಾಕ್ ಹಾಗೂ ISI ಸಂಚು’|

ಮುಂಬೈ(ಫೆ.18):  26/11 ಮುಂಬೈ ದಾಳಿಯಲ್ಲಿ ಸೆರೆಸಿಕ್ಕು ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಭಯೋತ್ಪಾದಕ ಅಜ್ಮಲ್ ಕಸಬ್’ಗೆ ಸಂಬಂಧಿಸಿದಂತೆ ಮುಂಬೈನ ಮಾಜಿ ಪೊಲೀಸ್ ಆಯುಕ್ತ ರಾಕೇಶ್ ಮರಿಯಾ ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ.

ಮುಂಬೈ ದಾಳಿಯನ್ನು ಹಿಂದೂ ಭಯೋತ್ಪಾದನೆ ಎಂದು ಬಿಂಬಿಸಲು ಪಾಕ್ ಹಾಗೂ ISI ಸೇರಿ ಭಾರೀ ಸಂಚು ರೂಪಿಸಿದ್ದರು ಎಂದು ರಾಕೇಶ್ ಮರಿಯಾ ತಮ್ಮ ‘ಲೆಟ್ ಮಿ ಸೇ ಇಟ್ ನೌ' ಎಂಬ ಆತ್ಮಕತೆಯಲ್ಲಿ ಉಲ್ಲೇಖಿಸಿದ್ದಾರೆ. 

ಅಜ್ಮಲ್ ಕಸಬ್ ಬೆಂಗಳೂರಿನ ಸಮೀರ್ ಚೌಧರಿ ಎಂಬಂತೆ ಬಿಂಬಿಸಲು ಪ್ರಯತ್ನ ನಡೆಸಲಾಗಿತ್ತು ಎಂದು ಹೇಳಿರುವ ರಾಕೇಶ್ ಮರಿಯಾ, ಉದ್ದೇಶಪೂರ್ವಕವಾಗಿಯೇ ಆತನ ಕೈಯಲ್ಲಿ ಕೆಂಪು ದಾರವನ್ನು ಕಟ್ಟಲಾಗಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಎಲ್‌ಇಟಿ ಪಾಕ್ ಪ್ರಚೋದಿತ ಭಯೋತ್ಪಾದನೆ ದಾಳಿಯನ್ನು "ಹಿಂದೂ ಭಯೋತ್ಪಾದನೆ" ಎಂದು ಬಿಂಬಿಸುವ ಯತ್ನ ನಡೆಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಪಾಕ್ ಹಾಗೂ ISI ಕೈವಾಡ ಇತ್ತು ಎಂದು ರಾಕೇಶ್ ಮರಿಯಾ ಸ್ಪಷ್ಟಪಡಿಸಿದ್ದಾರೆ.

ಪಾಕ್ ಹಾಗೂ ISI ಕಸಬ್’ನನ್ನು ಜೈಲಿನಲ್ಲಿಯೇ ಮುಗಿಸಲು  ಯತ್ನ ನಡೆಸಿದ್ದವು. ದಾವೂದ್ ಇಬ್ರಾಹಿಂ ನೇತೃತ್ವದ  ‘ಡಿ ಕಂಪನಿ’ಗೆ ಕಸಬ್’ನನ್ನು ಮುಗಿಸುವ ಕೆಲಸವನ್ನು ವಹಿಸಲಾಗಿತ್ತು ಎಂದು ರಾಕೇಶ್ ತಮ್ಮ ಆತ್ಮಕತೆಯಲ್ಲಿ ಬರೆದಿದ್ದಾರೆ.

ಎಲ್ಲವೂ ಯೋಜನೆಯ ಪ್ರಕಾರ ನಡೆದಿದ್ದರೆ, ಕಸಬ್ ಬೆಂಗಳೂರಿನ ಸಮೀರ್ ಚೌಧರಿಯಾಗಿ ಸಾಯುತ್ತಿದ್ದ. ಈ ಮೂಲಕ ಪಾಕ್ ಹಾಗೂ ISI ಹಿಂದೂ ಭಯೋತ್ಪಾದನೆ ಮುಂದು ಮಾಡಿ ಜಾರಿಕೊಳ್ಳುತ್ತಿತ್ತು ಎಂದು ಹೇಳಿದ್ದಾರೆ.

ಛಾಯಾಚಿತ್ರದಲ್ಲಿ  ಕಸಬ್ ತನ್ನ ಬಲ ಮಣಿಕಟ್ಟಿನ ಮೇಲೆ ಕೆಂಪು ದಾರವನ್ನು ಧರಿಸಿರುವುದು ಕಂಡುಬಂದಿದೆ. ಇದು ಪವಿತ್ರ ಹಿಂದೂ ದಾರ ಎಂದು ನಂಬಿಸಲಾಗಿತ್ತು. 26/11 ದಾಳಿಯನ್ನು ಹಿಂದೂ ಭಯೋತ್ಪಾದನೆ ಎಂದು ಬಿಂಬಿಸಲು  ದುಷ್ಕರ್ಮಿಗಳು ಪ್ರಯತ್ನಿಸಿದ್ದಕ್ಕೆ ಇದು ಸಾಕ್ಷಿ ಎಂದು ರಾಕೇಶ್ ಅಭಿಪ್ರಾಯಪಟ್ಟಿದ್ದಾರೆ.

ನವೆಂಬರ್ 26, 2008 ರಂದು ಮುಂಬೈನಲ್ಲಿ ಪಾಕಿಸ್ತಾನದ 10 ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 166 ಜನರು ಸಾವನ್ನಪ್ಪಿದರು ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 

ದಾಳಿಯ ವೇಳೆ ಜೀವಂತವಾಗಿ ಸೆರೆಹಿಡಿಯಲ್ಪಟ್ಟ ಏಕೈಕ ಭಯೋತ್ಪಾದಕ ಕಸಬ್’ನನ್ನು  2012 ರ ನವೆಂಬರ್ 21 ರಂದು ಗಲ್ಲಿಗೇರಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

click me!