
ನವದೆಹಲಿ(ಜೂ.21) ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ರಾಷ್ಟ್ರಪತಿ ಚುನಾವಣಾ ಲೆಕ್ಕಾಚಾರ ಇದೀಗ ತೀವ್ರಗೊಳ್ಳುತ್ತಿದೆ. ಇದರ ನಡುವೆ ವಿಪಕ್ಷಗಳು ಕರೆದ ಸಭೆಯಲ್ಲಿ ಒಮ್ಮತ ಅಭ್ಯರ್ಥಿಯಾಗಿ ಟಿಎಂಸಿ ನಾಯಕ ಯಶವಂತ್ ಸಿನ್ಹ ಅವರನ್ನು ನಾಮನಿರ್ದೇಶನ ಮಾಡಿದೆ. ಇದೀಗ ರಾಷ್ಟ್ರಪತಿ ಚುನಾವಣೆಯಲ್ಲಿ ಯಶವಂತ್ ಸಿನ್ಹ ಅಧಿಕೃತ ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿಯಾಗಿ ವಿರೋಧ ಪಕ್ಷಗಳು ಘೋಷಿಸಿದೆ.
ಚುನಾವಣೆಗೆ ಸ್ಪರ್ಧಿಸಲು ಶರದ್ ಪವಾರ್, ಫಾರೂಖ್ ಅಬ್ದುಲ್ಲಾ ಹಾಗೂ ಮಹಾತ್ಮಾ ಗಾಂಧೀಜಿ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ನಿರಾಕರಿಸಿದ್ದರು. ವಿಪಕ್ಷಗಳ ಸಭೆಯಲ್ಲಿ ತೀವ್ರ ಚರ್ಚೆ ಬಳಿಕ ಮಾಜಿ ಬಿಜೆಪಿ ನಾಯಕ, ಹಾಲಿ ಟಿಎಂಸಿ ಪಕ್ಷದ ಹಿರಿಯ ನಾಯಕರಾಗಿರುವ ಯಶವಂತ್ ಸಿನ್ಹ ಹೆಸರು ಪ್ರಸ್ತಾಪವಾಗಿದೆ. ಇದಕ್ಕೆ ವಿಪಕ್ಷಗಳು ಒಪ್ಪಿಗೆ ಸೂಚಿಸಿದೆ. ಇತ್ತ ಯಶವಂತ್ ಸಿನ್ಹ ಕೂಡ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಒಪ್ಪಿಕೊಂಡಿದ್ದಾರೆ.
ಶರದ್ ಪವಾರ್ ಅಧ್ಯಕ್ಷತೆಯಲ್ಲಿ 17 ವಿಪಕ್ಷಗಳ ಸಭೆ ರಾಷ್ಟ್ರಪತಿ ಚುನಾವಣೆ ಬಗ್ಗೆ ಇಂದು ದೆಹಲಿಯಲ್ಲಿ ನಡೆಯುತ್ತಿದೆ. ಈ ಸಭೆಯಲ್ಲಿ ರಾಷ್ಟ್ರಪತಿ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲಾಗಿದೆ. ಸದ್ಯ ರಾಷ್ಟ್ರಪತಿ ಚುನಾವಣಾ ಲೆಕ್ಕಾಚಾರ, ಮತ ಹಾಗೂ ಬೆಂಬಲದ ಕುರಿತು ಚರ್ಚೆ ನಡೆಯುತ್ತಿದೆ.
ನನಗೂ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿ: ಸುಪ್ರೀಂ ಮೊರೆ ಹೋದ ಎಂಜಿನಿಯರ್..!
ವಿಪಕ್ಷಗಳು ಮಾಜಿ ಬಿಜೆಪಿ ನಾಯಕ ಯಶವಂತ್ ಸಿನ್ಹ ಹೆಸರನ್ನು ಅಂತಿಮಗೊಳಿಸುತ್ತಿದ್ದಂತೆ, ಇತ್ತ ಬಿಜೆಪಿಯಲ್ಲಿ ಆಯ್ಕೆ ಪ್ರಕ್ರಿಯೆ ಚುರುಕುಗೊಂಡಿದೆ. ಇಂದು ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಎನ್ಡಿಎ ಕೂಟದ ಅಭ್ಯರ್ಥಿ ಹೆಸರು ಪ್ರಕಟಗೊಳ್ಳಲಿದೆ.
ರಾಷ್ಟ್ರಪತಿ ಹುದ್ದೆಗೆ ಒಮ್ಮತದ ಅಭ್ಯರ್ಥಿ ಆಯ್ಕೆ ಬಗ್ಗೆ ಬಿಜೆಪಿ ಒಲವು ಹೊಂದಿತ್ತು. ಈ ಬಗ್ಗೆ ಅದು ವಿಪಕ್ಷಗಳ ಜೊತೆ ಮಾತುಕತೆ ನಡೆಸಿತ್ತಾದರೂ, ಅತ್ತ ಕಡೆಯಿಂದ ಸೂಕ್ತ ಸ್ಪಂದನೆ ಬರಲಿಲ್ಲ ಎನ್ನಲಾಗಿದೆ. ಹೀಗಾಗಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಪಕ್ಷ ನಿರ್ಧರಿಸಿದೆ ಎನ್ನಲಾಗಿದೆ.
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಕರ್ನಾಟಕದ ಹಾಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಮೊದಲಾದವರ ಹೆಸರು ಬಿಜೆಪಿ ಪಾಳಯದಿಂದ ರಾಷ್ಟ್ರಪತಿ ಹುದ್ದೆಗೆ ಮುಂಚೂಣಿಯಾಗಿ ಕೇಳಿಬಂದಿದೆ. ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಕೆಗೆ ಜೂ.29 ಕಡೆಯ ದಿನ. ಜು.18ರಂದು ಮತದಾನ ನಡೆಯಲಿದೆ.
ಪವಾರ್ ಬೆನ್ನಲ್ಲೇ ರಾಷ್ಟ್ರಪತಿ ಚುನಾವಣಾ ಕಣದಿಂದ ಹಿಂದೆ ಸರಿದ ಫಾರೂಕ್ ಅಬ್ದುಲ್ಲಾ, ಕಾರಣ ಹೀಗಿದೆ
ವಿಪಕ್ಷಕಳಲ್ಲಿ ಮೂಡಿತ್ತು ಅಂತರ
ಶರದ್ ಪವಾರ್, ಫಾರೂಖ್ ಅಬ್ದುಲ್ಲಾ ವಿಪಕ್ಷಗಳ ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿಯಾಗಲು ನಿರಾಕರಿಸಿದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲರಾದ ಗೋಪಾಲಕೃಷ್ಣ ಗಾಂಧಿ ಹೆಸರು ಪ್ರಸ್ತಾಪವಾಗಿತ್ತು. ಈ ಆಫರ್ನ್ನುಗೋಪಾಲಕೃಷ್ಣ ಗಾಂಧಿ ತರಿಸ್ಕರಿಸಿದ್ದರು. ಇದರ ಬೆನ್ನಲ್ಲೇ ವಿಪಕ್ಷಗಳಲ್ಲಿ ಅದರಲ್ಲೂ ಪ್ರಮುಖವಾಗಿ ಟಿಎಂಸಿ ಪಕ್ಷಕ್ಕೂ ಹಾಗೂ ಇತರ ವಿಪಕ್ಷಗಳಲ್ಲಿ ಅಂತರ ಮೂಡಿತ್ತು. ಇದೇ ಕಾರಣಕ್ಕೆ ಇಂದಿನ ವಿರೋಧ ಪಕ್ಷಗಳ ಸಭೆಗೆ ಮಮತಾ ಬ್ಯಾನರ್ಜಿ ಗೈರಾಗಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಮಮತಾ ಬೆಂಬಲ ಪಡೆಯಲು ಹಾಗೂ ವಿಪಕ್ಷದಲ್ಲಿ ಒಮ್ಮತ ಮೂಡಿಸಲು ಇದೀಗ ಯಶವಂತ್ ಸಿನ್ಹ ಹೆಸರನ್ನು ಸೂಚಿಸಲಾಗಿದೆ ಅನ್ನೋ ಮಾತುಗಳು ರಾಜಕೀಯ ಪಡಸಾಲೆಯಿಂದ ಕೇಳಿಬರುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ