PM Modi Security Breach: ಎಲ್ಲಾ ದಾಖಲೆ ಸುರಕ್ಷಿತವಾಗಿಡಲು ಸುಪ್ರಿಂ ಆದೇಶ!

By Suvarna NewsFirst Published Jan 7, 2022, 1:23 PM IST
Highlights

* ಪಂಜಾಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಾವಲು ಪಡೆಗೆದುರಾದ ಭದ್ರತಾ ಲೋಪ

* ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ . ವಿ ರಮಣ ನೇತೃತ್ವದ ಪೀಠದಲ್ಲಿ ವಿಚಾರಣೆ

* ಎಲ್ಲಾ ದಾಖಲೆ ಸುರಕ್ಷಿತವಾಗಿಡಲು ಸುಪ್ರಿಂ ಆದೇಶ!

ನವದೆಹಲಿ(ಜ. 05) ಪಂಜಾಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಾವಲು ಪಡೆಗೆದುರಾದ ಭದ್ರತಾ ಲೋಪದ ಪ್ರಕರಣದಲ್ಲಿ, ಸುಪ್ರಿಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ(CJI NV Ramana) ಪ್ರಯಾಣದ ದಾಖಲೆಗಳು ಮತ್ತು ತನಿಖಾ ಸಂಸ್ಥೆಗಳು ಕಂಡುಕೊಂಡ ಸಾಕ್ಷಿಗಳನ್ನು ಸುರಕ್ಷಿತವಾಗಿಡುವಂತೆ ಆದೇಶಿಸಿದ್ದಾರೆ. ಇದಲ್ಲದೆ, ಪಂಜಾಬ್‌ ಪೊಲೀಸರಿಗೆ ಎಸ್‌ಪಿಜಿ ಮತ್ತು ಇತರ ಏಜೆನ್ಸಿಗಳಿಗೆ ಈ ಭದ್ರತಾ ಲೋಪದ ಸಂಪೂರ್ಣ ದಾಖಲೆಯನ್ನು ಸೀಲ್ ಮಾಡುವ ಪ್ರಕ್ರಿಯೆಗೆ ಸಹಕರಿಸಲು ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆಯೂ ನ್ಯಾಯಾಲಯ ಸೂಚಿಸಿದೆ.

ಲಾಯರ್ಸ್‌ ವಾಯ್ಸ್‌ ಸಂಘಟನೆ ಸಲ್ಲಿಸಿದ್ದ ಅರ್ಜಿಯ ಸುಪ್ರೀಂ ಕೋರ್ಟ್‌ ಸಿಜೆಐ ಎನ್‌ವಿ ರಮಣ, ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರ ಪೀಠದ ನೇತೃತ್ವದಲ್ಲಿ ನಡೆಯಿತು. ಅರ್ಜಿದಾರರ ಪರವಾಗಿ ಮಣಿಂದರ್ ಸಿಂಗ್ ವಾದ ಮಂಡಿಸಿ, ಇದು ಗಂಭೀರ ವಿಷಯವಾಗಿದೆ ಎಂದು ಉಲ್ಲೇಖಿಸಿ ನ್ಯಾಯಾಲಯದ ಮುಂದೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು, .

ಸೋಮವಾರದವರೆಗೆ ಕ್ರಮ ಕೈಗೊಳ್ಳದಂತೆ ಕೇಂದ್ರ ಮತ್ತು ಪಂಜಾಬ್ ಸರ್ಕಾರದ ಸಮಿತಿಗಳಿಗೆ ಸುಪ್ರೀಂ ಕೋರ್ಟ್ ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆ ಸೋಮವಾರ, ಜನವರಿ 10 ರಂದು ನಡೆಯಲಿದೆ. ಲೋಪ, ನಿರ್ಲಕ್ಷ್ಯಕ್ಕೆ ಕಾರಣಗಳೇನು ಎಂದು ತನಿಖೆ ನಡೆಸಬೇಕಿದೆ ಎಂದು ಸಿಜೆಐ ಹೇಳಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳು ಸಾಲಿಸಿಟರ್ ಜನರಲ್‌ಗೆ ನಾವು ಕೇವಲ ಲೋಪದೋಷಕ್ಕೆ ಹೋಗುತ್ತಿದ್ದೇವೆಯೇ ಹೊರತು ಯಾರು ಮಾಡಿದರು ಎಂಬಿತ್ಯಾದಿ ವಿಚಾರಗಳಲ್ಲ ಎಂದು ಹೇಳಿದರು. ಈ ವಿಷಯದಲ್ಲಿ ಎನ್‌ಐಎ ಮಹಾನಿರ್ದೇಶಕರನ್ನು ನೋಡಲ್ ಅಧಿಕಾರಿಯನ್ನಾಗಿ ಮಾಡಲು ಕೇಂದ್ರವು ಸೂಚಿಸಿತ್ತು, ಆದರೆ ಸುಪ್ರೀಂ ಕೋರ್ಟ್ ಚಂಡೀಗಢದ ಡಿಜಿ ಮತ್ತು ಎನ್‌ಐಎ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ಮಾಡಿದೆ.

ಇದಕ್ಕೂ ಮೊದಲು, ಇದು ರಾಷ್ಟ್ರೀಯ ಭದ್ರತೆಯ ಸಮಸ್ಯೆಯೇ ಹೊರತು ನಿರ್ದಿಷ್ಟ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಲ್ಲ ಎಂದು ಮಣಿಂದರ್ ಸಿಂಗ್ ವಾದಿಸಿದರು. ಇದು ಅತ್ಯಂತ ಗಂಭೀರವಾದ ವಿಚಾರವಾಗಿದ್ದು, ಪ್ರಧಾನಿಯವರು 20 ನಿಮಿಷಗಳ ಕಾಲ ಇಲ್ಲಿ ಸಿಕ್ಕಾಕೊಂಡಿದ್ದರು. ಆದ್ದರಿಂದ ಪ್ರಕರಣದ ತನಿಖೆಯಾಗಬೇಕು ಆದರೆ ಪಂಜಾಬ್ ಸರ್ಕಾರವು ಈ ತನಿಖೆ ಮಾಡಲು ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ.

ಈ ಬಗ್ಗೆ ವಾದ ಮಂಡಿಸಿದ ಮಣಿಂದರ್ ಸಿಂಗ್, "ಪ್ರಧಾನಿ ಭದ್ರತೆಯ ಅತಿದೊಡ್ಡ ಉಲ್ಲಂಘನೆಗೆ ರಸ್ತೆ ಜಾಮಿಂಗ್ ಉದಾಹರಣೆಯಾಗಿದೆ ಮತ್ತು ಇದು ಚುನಾವಣಾ ರಾಜ್ಯದಲ್ಲಿ ಸಂಭವಿಸಿದೆ. ಆದ್ದರಿಂದ, ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಬೇಕು" ಎಂದು ಹೇಳಿದರು. ಘಟನೆಯ ತನಿಖೆಗೆ ಸಮಿತಿಯನ್ನು ನೇಮಿಸಲು ಪಂಜಾಬ್ ಸರ್ಕಾರಕ್ಕೆ ಯಾವುದೇ ವಿಶೇಷ ಹಕ್ಕು ಇಲ್ಲ ಎಂದು ಅವರು ಹೇಳಿದ್ದಾರೆ. 


ರಾಜಕೀಯವನ್ನು ಬದಿಗಿರಿಸಿ, ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಘಟನೆಯ ಬಗ್ಗೆ ವೃತ್ತಿಪರ ತನಿಖೆಯನ್ನು ಪಡೆಯಬೇಕು ಎಂದು ಮಣಿಂದರ್ ಒತ್ತಿ ಹೇಳಿದರು. ಪಂಜಾಬ್ ಸರ್ಕಾರವು ಮಾಜಿ ಹೈಕೋರ್ಟ್ ನ್ಯಾಯಾಧೀಶರನ್ನು ವಿಚಾರಣಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದೆ ಎಂದು ಅವರು ಹೇಳಿದರು, ಅವರ ಬಗ್ಗೆ 2014 ರಲ್ಲಿ ಸುಪ್ರೀಂ ಕೋರ್ಟ್ ಪ್ರತಿಕೂಲ ಹೇಳಿಕೆಗಳನ್ನು ದಾಖಲಿಸಿತ್ತು. ಕೇಂದ್ರ ಸರ್ಕಾರ ಕೂಡ ಈ ಮನವಿಯನ್ನು ಬೆಂಬಲಿಸಿದೆ. ಇದು ಅಪರೂಪದ ಪ್ರಕರಣ ಎಂದು ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ. ಈ ಘಟನೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗರವನ್ನು ಉಂಟುಮಾಡಿದೆ ಮತ್ತು ಪ್ರಧಾನಿಯ ಭದ್ರತೆಗೆ "ಗಂಭೀರವಾದ" ಬೆದರಿಕೆ ಒಡ್ಡಿದಂತಾಗಿದೆ ಎಂದು ಮೆಹ್ತಾ ಹೇಳಿದರು.

ಕೆನಡಾದ ಭಯೋತ್ಪಾದಕ ಸಂಘಟನೆ ಸಿಖ್ ಫಾರ್ ಜಸ್ಟಿಸ್ ಬಗ್ಗೆಯೂ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ವೇಳೆ ಚರ್ಚೆ ನಡೆದಿದೆ. ತುಷಾರ್ ಮೆಹ್ತಾ ಅವರು, “ಪ್ರಧಾನಿ ಭದ್ರತೆಯ ಲೋಪ, ಇದರಲ್ಲಿ ರಾಜ್ಯ ಸರ್ಕಾರ ಮತ್ತು ಪೊಲೀಸ್ ಆಡಳಿತ ಎರಡೂ ಹೊಣೆಯಾಗಿದ್ದು, ರಾಜ್ಯ ಸರ್ಕಾರದಿಂದ ತನಿಖೆ ಮಾಡಲು ಸಾಧ್ಯವಿಲ್ಲ,” ಎಂದು ಹೇಳಿದರು. ಈ ತನಿಖೆಯಲ್ಲಿ ಎನ್‌ಐಎ ಅಧಿಕಾರಿಗಳ ಉಪಸ್ಥಿತಿಯೂ ಕಡ್ಡಾಯವಾಗಿದೆ ಎಂದು ಅವರು ಹೇಳಿದರು. ಪಂಜಾಬ್ ಗೃಹ ಕಾರ್ಯದರ್ಶಿ ಅವರೇ ತನಿಖೆಯಲ್ಲಿದ್ದಾರೆ ಮತ್ತು ಶಂಕೆ ಇದೆ ಎಂದ ಅವರು, ತನಿಖಾ ತಂಡದ ಭಾಗವಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. 

ಖಂಡಿತವಾಗಿಯೂ ತನಿಖೆಯಾಗಬೇಕು ಎಂದು ಪಂಜಾಬ್ ಪರವಾಗಿ ಡಿಎಸ್ ಪಟ್ವಾಲಿಯಾ ಹೇಳಿದ್ದಾರೆ. ನ್ಯಾಯಾಲಯವು ಯಾವುದೇ ನಿವೃತ್ತ ನ್ಯಾಯಾಧೀಶರನ್ನು ಅಥವಾ ಇತರ ಅಧಿಕಾರಿಗಳನ್ನು ತನಿಖೆಗೆ ನೇಮಿಸಬಹುದು ಎಂದು ಅವರು ಹೇಳಿದರು. ಪಂಜಾಬ್‌ನ ಸಮಿತಿಗೆ ತನಿಖೆ ಮಾಡಲು ಸಾಧ್ಯವಾಗದಿದ್ದರೆ, ಕೇಂದ್ರದ ಸಮಿತಿಯೂ ತನಿಖೆ ಮಾಡಲು ಸಾಧ್ಯವಿಲ್ಲ ಆದ್ದರಿಂದ ನ್ಯಾಯಾಲಯ ಸ್ವತಂತ್ರ ಸಮಿತಿಯನ್ನು ನೇಮಿಸಬೇಕು  ಎಂದು ಅವರು ಹೇಳಿದರು

ಇದರೊಂದಿಗೆ ನಾವು ಈ ವಿಷಯವನ್ನು ಲಘುವಾಗಿ ಪರಿಗಣಿಸುತ್ತಿಲ್ಲ ಎಂದು ಪಟ್ವಾಲಿಯಾ ಹೇಳಿದ್ದಾರೆ. ನಾವು ವಿಷಯವನ್ನು ತನಿಖೆ ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ನ್ಯಾಯಾಲಯ ತನಗೆ ಯಾವುದು ಸರಿ ಅನ್ನಿಸುತ್ತದೆ ಎಂಬುದನ್ನು ನಿರ್ಧರಿಸಬೇಕು ಎಂದರು.

click me!