ಮತ್ತೆ ಅಟಾರ್ನಿ ಜನರಲ್‌ ಆಗಲು Mukul Rohatgi ನಕಾರ

By Kannadaprabha NewsFirst Published Sep 26, 2022, 8:34 AM IST
Highlights

2017 ರಲ್ಲಿ ಅಟಾರ್ನಿ ಜನರಲ್‌ ಹುದ್ದೆಗೆ ಮುಕುಲ್‌ ರೋಹಟಗಿ ರಾಜೀನಾಮೆ ನೀಡಿದ್ದರು. ಬಳಿಕ ಕೆ.ಕೆ. ವೇಣುಗೋಪಾಲ್‌ ಅಧಿಕಾರ ವಹಿಸಿಕೊಂಡಿದ್ದರು. 

ನವದೆಹಲಿ: ಭಾರತ ಸರ್ಕಾರದ ಉನ್ನತ ವಕೀಲ ಹುದ್ದೆ ಅಟಾರ್ನಿ ಜನರಲ್‌ (Attorney General) ಆಗಿ ಮತ್ತೊಮ್ಮೆ ಆಯ್ಕೆಯಾಗುವ ಸರ್ಕಾರದ ಪ್ರಸ್ತಾವವನ್ನು ಹಿರಿಯ ನಾಯಕ ಮುಕುಲ್‌ ರೋಹಟಗಿ ಭಾನುವಾರ ತಿರಸ್ಕರಿಸಿದ್ದಾರೆ. 67 ವರ್ಷದ ಮುಕುಲ್‌ 2017ರಲ್ಲಿ ಅಟಾರ್ನಿ ಜನರಲ್‌ ಹುದ್ದೆಯಿಂದ ಕೆಳಗಿಳಿದಿದ್ದರು. ಇವರ ಬಳಿಕ ಕೆ.ಕೆ.ವೇಣುಗೋಪಾಲ್‌ ಅವರು ಅಟಾರ್ನಿ ಜನರಲ್‌ ಆಗಿ ಆಯ್ಕೆಯಾಗಿದ್ದರು. ವೇಣುಗೋಪಾಲ್‌ ಅವರ ಅಧಿಕಾರವಧಿ ಸೆಪ್ಟೆಂಬರ್ 30ಕ್ಕೆ ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಮುಕುಲ್‌ ರೋಹಟಗಿ ಅವರಿಗೆ ಮತ್ತೊಮ್ಮೆ ಅಟಾರ್ನಿ ಜನರಲ್‌ ಆಗುವಂತೆ ಮೋದಿ ಸರ್ಕಾರ ಪ್ರಸ್ತಾವ ನೀಡಿತ್ತು. ಇದನ್ನು ಮುಕುಲ್‌ ರೋಹಟಗಿ ತಿರಸ್ಕರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಹಿರಿಯ ವಕೀಲ (Senior Advocate) ಮುಕುಲ್ ರೋಹಟಗಿ ಅವರು ಭಾರತದ ಅಟಾರ್ನಿ ಜನರಲ್ ಆಗಿ ಮತ್ತೊಮ್ಮೆ ಅಧಿಕಾರ ವಹಿಸಿಕೊಳ್ಳಲು ನಿರಾಕರಿಸಿದ್ದಾರೆ. ಅಕ್ಟೋಬರ್ 1 ರಿಂದ ಅವರು ಅಟಾರ್ನಿ ಜನರಲ್ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ ಎಂದು ಈ ಹಿಂದಿನ ಕೆಲ ವರದಿಗಳು ಸೂಚಿಸಿದ್ದವು. ಈ ಹಿಂದೆ ಮುಕುಲ್‌ ರೋಹಟಗಿ ಅವರು ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ (NDA) ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜೂನ್ 2014 ರಿಂದ ಜೂನ್ 2017 ರವರೆಗೆ ದೇಶದ ಅಟಾರ್ನಿ ಜನರಲ್ ಆಗಿದ್ದರು. ಇನ್ನು, ಅಟಾರ್ನಿ ಜನರಲ್‌ ಹುದ್ದೆ ತಿರಸ್ಕರಿಸಲು ಯಾವುದೇ ನಿರ್ದಿಷ್ಟ ಕಾರಣವಿಲ್ಲ ಎಂದು ರೋಹಟಗಿ ಹೇಳಿದ್ದಾರೆ. ಆದರೆ ಅವರು ಈ ಪ್ರಸ್ತಾಪದ ಬಗ್ಗೆ ಮತ್ತೊಮ್ಮೆ ಯೋಚಿಸಿ ಮತ್ತು ನಿರಾಕರಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. 

ಇದನ್ನು ಓದಿ: ಮುಕುಲ್ ರೋಹಟಗಿ ಭಾರತದ ಮುಂದಿನ ಅಟಾರ್ನಿ ಜನರಲ್!

ಪ್ರಸ್ತುತ ಅಟಾರ್ನಿ ಜನರಲ್ ಆಗಿರುವ 91 ವರ್ಷದ ಕೆ.ಕೆ ವೇಣುಗೋಪಾಲ್ ಅವರು ಜೂನ್ 29 ರಂದು 3 ತಿಂಗಳ ಕಾಲ ದೇಶದ ಉನ್ನತ ಕಾನೂನು ಅಧಿಕಾರಿಯಾಗಿ ಮರು ನೇಮಕಗೊಂಡರು. ಅವರು "ವೈಯಕ್ತಿಕ ಕಾರಣಗಳಿಂದ" ಹುದ್ದೆಯಲ್ಲಿ ಮುಂದುವರಿಯಲು ಇಷ್ಟಪಡಲಿಲ್ಲ, ಆದರೂ ಕೇಂದ್ರ ಸರ್ಕಾರದ ಕೋರಿಕೆಗೆ ಸಮ್ಮತಿಸಿ ಸೆಪ್ಟೆಂಬರ್ 30 ರವರೆಗೆ ಅಟಾರ್ನಿ ಜನರಲ್‌ ಆಗಲು ಒಪ್ಪಿಕೊಂಡರು. ಮುಕುಲ್‌ ರೋಹಟಗಿ ಅವರ ಉತ್ತರಾಧಿಕಾರಿಯಾಗಿ ವೇಣುಗೋಪಾಲ್ ಅವರನ್ನು ಜುಲೈ 2017 ರಲ್ಲಿ ಅಟಾರ್ನಿ ಜನರಲ್ ಆಗಿ ನೇಮಿಸಲಾಗಿತ್ತು. ಅಟಾರ್ನಿ ಜನರಲ್ ಸಾಮಾನ್ಯವಾಗಿ ಮೂರು ವರ್ಷಗಳ ಅಧಿಕಾರಾವಧಿಯನ್ನು (Tenure) ಹೊಂದಿರುತ್ತಾರೆ.

ಹಿರಿಯ ವಕೀಲರಾದ ಮುಕುಲ್‌ ರೋಹಟಗಿ ಅವರು ಸುಪ್ರೀಂ ಕೋರ್ಟ್ ಮತ್ತು ದೇಶಾದ್ಯಂತ ಹೈಕೋರ್ಟ್‌ಗಳಲ್ಲಿ ಹಲವಾರು ಹೈ ಪ್ರೊಫೈಲ್ ಪ್ರಕರಣಗಳಲ್ಲಿ ಕಾಣಿಸಿಕೊಂಡಿದ್ದಾರೆ. 2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಝಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ತನಿಖಾ ತಂಡ (Special Investigation Team) (ಎಸ್‌ಐಟಿ) ಪರವಾಗಿ ಹಾಜರಾಗಿದ್ದರು. ನಾರ್ಕೋಟಿಕ್ಸ್ ಬ್ಯೂರೋ ಆಫ್ ಇಂಡಿಯಾದಿಂದ ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಅವರನ್ನು ಬಂಧಿಸಿದಾಗಲೂ ಇವರು ವಕೀಲರಾಗಿದ್ದರು. ಸುಪ್ರೀಂಕೋರ್ಟ್‌ನ ಐವರು ಪ್ರಮುಖ ವಕೀಲರಲ್ಲಿ ಇವರೂ ಒಬ್ಬರು ಆಗಿದ್ದಾರೆ. 

ಇದನ್ನೂ ಓದಿ: ಮುಕುಲ್ ರೋಹಟಗಿ-ಸತೀಶ್ ಮನೇಶಿಂದೆ: ಆರ್ಯನ್ ಖಾನ್ ಜಾಮೀನಿಗಾಗಿ ಹೋರಾಡುತ್ತಿರುವ ಲಾಯರ್ಸ್!

click me!